15 April 2015

ಕೃಪೆ: ವಿಜಯಕರ್ನಾಟಕ
ಮುಜಾಪ್ಫರ್‌ ಅಸ್ಸಾದಿ
 
ಆಧುನಿಕತೆಯ ಸಂದರ್ಭದಲ್ಲಿ, ಜಾತಿಯ ಜನಗಣತಿ ಅನಿವಾರ್ಯವೇ? ಎಂಬ ಪ್ರಶ್ನೆಯೊಂದಿಗೆ ಈ ಲೇಖನವನ್ನು ಆರಂಭಿಸುತ್ತೇನೆ. ಈ ಪ್ರಶ್ನೆ ಕೇಳಲು ಕಾರಣವಿದೆ. ಆಧುನಿಕತೆ ತನ್ನ ಬೆಳವಣಿಗೆಯ ಸಂದರ್ಭದಲ್ಲಿ ಅಡ್ಡ ಬರುವ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ಬೆಳೆಯುತ್ತದೆ. ಸಾಂಪ್ರದಾಯಿಕ ಸಾಮಾಜಿಕ ಚೌಕಟ್ಟುಗಳನ್ನು ನಾಶಮಾಡುತ್ತದೆ. ಅಲ್ಲದೇ ಅದು ಎಲ್ಲಾ ಕಡೆ ತನ್ನ ಯಜಮಾನಿಕೆ­ಯನ್ನು ಸ್ಥಾಪಿಸುತ್ತಾ ಹೋಗುತ್ತದೆ ಎಂಬಿತ್ಯಾದಿ ಪರಿಕಲ್ಪನೆಗಳು ಚಾಲ್ತಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ಆಧುನಿಕತೆಯ ಕುರಿತು ಮಾತನಾಡುವಾಗ ಥಟ್ಟೆಂದು ನೆನಪಾಗುವುದು ವಸಾಹತುಶಾಹಿ ಆಧುನಿಕತೆ. ಇದರರ್ಥ ನಾವು ಮುಖಾಮುಖಿಯಾದದ್ದು ಒಂದೇ ರೂಪದ ಆಧುನಿಕತೆ ಎಂದರ್ಥ­ವಲ್ಲ. ವಸಾಹತುಶಾಹಿ ಆಧುನಿಕತೆಗೆ ಮುಖಾಮುಖಿಯಾದದ್ದು ದೇಸಿಯ ಆಧುನಿಕತೆ ಕೂಡ ಹೌದು. ವಸಾಹತುಶಾಹಿ ಆಧುನಿಕತೆಯ ದುರಂತವೆಂದರೆ ಅದು ಜಾತಿಯನ್ನು ನಿರ್ನಾಮ ಮಾಡಲು ಸಾಧ್ಯ­ವಾಗಲಿಲ್ಲ; ಅದರೊಂದಿಗೆ ಅನುಸಂಧಾನ ಮಾಡುತ್ತಾ ಹೋಯಿತು. ಅಷ್ಟು ಮಾತ್ರವಲ್ಲದೇ ಅದು ನೂರಾರು ಜಾತಿಗಳ ಹುಟ್ಟುವಿಕೆಗೆ ಕಾರಣೀಭೂತವಾಯಿತು. ಇದಕ್ಕೆಲ್ಲಾ 1931ರ ಜಾತಿ ಜನಗಣತಿ ಅಷ್ಟೇ ಕಾರಣವಾಯಿತು. ಲಾಗಾಯಿತಿನಿಂದ ಚಾಲ್ತಿಯಲ್ಲಿದ್ದ ಜಾತಿಗಳ ಪಟ್ಟಿಗೆ ಹೊಸ ಜಾತಿಗಳು ಸೇರ್ಪಡೆಯಾದವು. ಅದರ ತಪ್ಪು ಅಕ್ಷರಗಳ ಪಟ್ಟಿಗಳಿಂದಾಗಿ ಹೊಸ ಹೊಸ ಜಾತಿಗಳನ್ನು ಹುಟ್ಟಿದ್ದೂ ದಿಟ. ಕೆಲವು ಕಡೆ ಅದು ಜಾತಿಗಳಲ್ಲಿ ಗೊಂದಲಗಳನ್ನು ಸೃಷ್ಟಿಸಿತ್ತು. ಬಹಳಷ್ಟು ಸಂದರ್ಭದಲ್ಲಿ ಕಸುಬುಗಳೇ ಜಾತಿಗಳಾದವು. ಅಲ್ಲದೇ ಅದು ಜಾತಿಗಳ ನಡುವೆ ಬೈನರಿ ವಿರೋಧಗಳನ್ನು ನಿರ್ಮಿಸಿದ್ದು ಕೂಡ ದಿಟ. ಕ್ರಿಮಿನಲ್‌ ವರ್ಸಸ್‌ ನೋಟಿಫೈಡ್‌, ಬಹುಸಂಖ್ಯಾತ ವರ್ಸಸ್‌ ಅಲ್ಪ ಸಂಖ್ಯಾತ, ಹಿಂದುಳಿದ ವರ್ಸಸ್‌ ಮುಂದುವರಿದ ಇತ್ಯಾದಿ ಬೈನರಿಗಳನ್ನು ನಿರ್ಮಿಸುತ್ತಾ ಹೋಯಿತು. ಉತ್ತರ ಭಾರತದಲ್ಲಿ ಗೋತ್ರಗಳೇ ಜಾತಿಗಳಾದದ್ದು ಕೂಡ ಅಷ್ಟೇ ಸತ್ಯ. ಇದು ಜಾತಿಗಳ ನಡುವೆ ಗೊಂದಲಗಳನ್ನು ಸೃಷ್ಟಿಸಿದ್ದು ಈ ಸಂದರ್ಭದಲ್ಲಿ ಗಮನಿಸಬೇಕು. ಆಧುನಿಕತೆಯ ಲಾಭ ಪಡೆದ ಜಾತಿಗಳು ಮೇಲ್ಜಾತಿಯ ಅಥವಾ ಹೊಸ ಜಾತಿಗಳಾಗಿ ಗುರುತಿಸಬಹುದೇ? ಅಥವಾ ಅವುಗಳಿಗೆ ಹೊಸ ಸಾಮಾಜಿಕ ಸ್ಥಾನಮಾನವನ್ನು ನೀಡಬೇಕೆ?ಎಂಬಿತ್ಯಾದಿ ಗೊಂದಲಗಳು ಹುಟ್ಟಿದವು. ಇದರ ನಡುವೆ ಇನ್ನೊಂದು ಗೊಂದಲವಿತ್ತು. ಅದೇನೆಂದರೆ ಜಾತಿಯ ಒಳಗಿರುವ ಉಪಪಂಗಡಗಳಿಗೆ ಹೊಸ ಅಥವಾ ಭಿನ್ನ ಜಾತಿಯ ಅಸ್ಮಿತೆ ನೀಡ­ಬಹುದೇ? ಉದಾಹರಣೆಗೆ ಜಾಟರಲ್ಲಿರುವ ನೂರಾರು ಉಪಪಂಗಡ­ಗಳನ್ನು ಭಿನ್ನ ಜಾತಿಗಳಾಗಿ ಪರಿಗಣಿಸಬಹುದೇ? ಒಂದು ವೇಳೆ ಅವುಗಳನ್ನು ಬರೇ ಉಪಪಂಗಡಗಳಾಗಿ ಪರಿಗಣಿಸಿದರೇ ಅವುಗಳನ್ನು ಪುನಃ ಅಂಚಿಗೆ ತಳ್ಳಲ್ಪಡುವುದಿಲ್ಲವೇ?
1931ರ ಸುಮಾರಿಗೆ ಆರಂಭಗೊಂಡ ಗೊಂದಲಗಳು ಈಗಲೂ ಮುಂದುವರಿದುಕೊಂಡು ಹೋಗುತ್ತಿವೆ. ಆದ ಕಾರಣವೇ ಜಾತಿಯ ಚರ್ಚೆಗಳು ಈಗಲೂ ನಡೆಯುತ್ತಿ¤ವೆ, ಮುಂದೆಯೂ ನಡೆಯುತ್ತಿರುತ್ತವೆ.ಇದು ಅಪೂರ್ಣಗೊಂಡ ಆಧುನಿಕತೆಯ ಭಾಗ.

ಆಧುನಿಕತೆಯ ಕ್ರಿಯಾರೂಪಗಳು
ಇದೇ ಸಂದರ್ಭದಲ್ಲಿ ಆಧುನಿಕತೆಯ ಇನ್ನೊಂದು ಮುಖವನ್ನು ನೋಡಬೇಕು. ವಾಸ್ತವವಾಗಿ ವಸಾಹತುಶಾಹಿ ಆಧುನಿಕತೆ ಎಲ್ಲಾ ಜಾತಿಗಳನ್ನು ಒಳಗೊಳ್ಳಲು ಸಾಧ್ಯವಾಗಲೇ ಇಲ್ಲವೆಂದು ಹೇಳಬೇಕು. ಕೆಲವು ಜಾತಿಗಳನ್ನು ಮಾತ್ರ ಅದು ಮುಟ್ಟಲು ಅಸಾಧ್ಯವಾಯಿತು ಎಂದು ಹೇಳಬಹುದು. ವಾಸ್ತವವಾಗಿ ಭಾರತದಲ್ಲಿ ಆಧುನಿಕತೆ ಎಲ್ಲರಿಗೂ ಏಕಕಾಲದಲ್ಲಿ ತಲುಪುವ ಹಾಗೂ ವಿವೊàಚನೆಗೊಳಿಸುವ ಯೋಜನೆಯಾಗಿ ಪರಿವರ್ತಿತವಾಗಲಿಲ್ಲ. ಆಧುನಿಕತೆ ಗಟ್ಟಿಯಾಗಿ ನೆಲೆಯೂರಬೇಕಾದರೆ ವಿವಿಧ ಸಾಮಾಜಿಕ ಅಸ್ಮಿತೆಗಳನ್ನು ನಷ್ಟಗೊಳಿಸಬೇಕಾಗಿದ್ದು ಅನಿವಾರ್ಯವಾಗಿತ್ತು. ಆದರೆ ಅದು ಆ ರೀತಿ ಮಾಡಲೇ ಇಲ್ಲ. ಭಾರತ ಸಂದರ್ಭದ ಚಿತ್ರವೆಂದರೆ ಆಧುನಿಕತೆ ಜಾತಿಗಳೊಂದಿಗೆ ಅನುಸಂಧಾನ ಮಾಡುತ್ತಾ ಅದನ್ನು ಅಸ್ಮಿತೆಯ ಕುರುಹುವನ್ನಾಗಿ ಮಾಡಿತ್ತು. ಆದಕಾರಣ ಜಾತಿ ಆಧುನಿಕತೆಯ ಸಂದರ್ಭದಲ್ಲಿ ಅಸ್ಮಿತೆಯ ಕುರುಹುವಾಗಿ ಉಳಿಯಿತು. ಜಾತಿ ಭಾರತದ ವಾಸ್ತವಾಯಿತು.

ಅದರರ್ಥ ಜಾತಿ ತನ್ನ ಗಟ್ಟಿತನವನ್ನು ಉಳಿಸುತ್ತೆ ಎಂದರ್ಥವಲ್ಲ. ಎಷ್ಟೋ ಜಾತಿಗಳು ಆಧುನಿಕತೆಯ ಸಂದರ್ಭದಲ್ಲಿ ತಮ್ಮ ಜಾತಿಯ ಮೂಲ ಸ್ವರೂಪಗಳನ್ನು ಕಳೆದುಕೊಂಡದ್ದು ದಿಟ. ಆಧುನಿಕತೆಯ ಪ್ರತೀಕವಾದ ಪಾರ್ಲಿಮೆಂಟರಿ ಚೌಕಟ್ಟು,ಕೇಂದ್ರೀಕರಣ, ಕೈಗಾರಿಕೀ­ಕರಣ, ಇತ್ಯಾದಿ ಇದಕ್ಕೆ ಕಾರಣವಾಗಿರಬಹುದು. ಜಾತಿಗಳು ಪಾರ್ಲಿ­ಮೆಂಟರಿ ಚೌಕಟ್ಟಿನೊಂದಿಗೆ ಮುಖಾಮುಖಿಯಾದಾಗ ತಮ್ಮ ಮೂಲ ಸ್ವರೂಪಗಳನ್ನು ಕಳೆದುಕೊಳ್ಳವುದು ಅನಿವಾರ್ಯ­ವಾಗುತ್ತದೆ. ಪಾರ್ಲಿಮೆಂಟರಿ ಚೌಕಟ್ಟಿನಲ್ಲಿ ಜಾತಿಗಳು ಸಾಂಪ್ರ­ದಾಯಿಕ ಜಾತಿಗಳಂತೆ ವ್ಯವಹರಿಸಲು ಮತ್ತು ಪ್ರತಿಬಿಂಬಿಸಲು ಸಾಧ್ಯವಿಲ್ಲ. ಈ ಬದಲಾವಣೆ ಅನಿವಾರ್ಯವೂ ಹೌದು ಅವಶ್ಯಕವೂ ಹೌದು. ಪಾರ್ಲಿಮೆಂಟರಿ ಚೌಕಟ್ಟಿನಲ್ಲಿ ಸಾಂಪ್ರದಾಯಿಕ ಜಾತಿ ಸ್ವರೂಪ ಮತ್ತು ಚೌಕಟ್ಟಿನೊಂದಿಗೆ ರಾಜಕಾರಣ ಮಾಡಲು ಸಾಧ್ಯವಿಲ್ಲ. ಮಾಡಿದರೆ ಅವುಗಳು ಶಕ್ತಿ ರಾಜಕಾರಣದ ಭಾಗವಾಗಲು ಸಾಧ್ಯವಿಲ್ಲ. ಶಕ್ತಿ ರಾಜಕಾರಣದಲ್ಲಿ ಜಾತಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸುವುದು ಬೇರೆ ಬೇರೆ ಕಾಲದಲ್ಲಿ ಮತ್ತು ಬೇರೆ ಬೇರೆ ರೂಪದಲ್ಲಿ: ಚುನಾವಣೆ ಕಾಲದಲ್ಲಿ ಜಾತಿವಾರು ಟಿಕೆಟ್‌ಗಳನ್ನು ಕೇಳುವುದರೊಂದಿಗೆ ಆರಂಭವಾಗುವ ಈ ರಾಜಕಾರಣ ಅಧಿಕಾರದ ಹಂಚುವಿಕೆ ಹಾಗೂ ಆಧಿಕಾರದ ಭಾಗವಾಗುವ ತನಕ ಸಾಗುತ್ತದೆ. ಅಲ್ಲದೇ ಅದು ನಿತ್ಯದ ಅನುಸಂಧಾನದಲ್ಲಿ ಸಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ಸಾರ್ವಜನಿಕ ನೀತಿಗಳ ಅನುಷ್ಟಾನದಲ್ಲಿ, ನಿರೂಪಣೆಗಳಲ್ಲಿ, ಅವುಗಳ ಬೇಡಿಕೆಗಳಲ್ಲಿ ನೋಡಬಹುದು.

ಶಕ್ತಿ ರಾಜಕಾರಣದ ಕಾರ್ಯವ್ಯೂಹ
ಶಕ್ತಿ ರಾಜಕಾರಣದಲ್ಲಿ ಬಹುಮುಖ್ಯವೆನಿಸುವುದು ಎರಡು ಅಂಶಗಳು: ಒಂದು, ಜಾತಿಯ ಸಂಖ್ಯೆ ಹಾಗೂ ಎರಡನೇದಾಗಿ ಜಾತಿಯ ಹಿಡಿತ. ಇದು ಅಸ್ಮಿತೆ ರಾಜಕಾರಣದ ಭಾಗವೂ ಹೌದು. ಸಂಖ್ಯಾ ಬಲದ ಮೇಲೆ ಜಾತಿಗಳು ಬಲಶಾಲಿ, ವಂಚಿತ, ದುರ್ಬಲ ಇತ್ಯಾದಿ ಬೈನರಿ (ವಿರೋಧ)ಗಳನ್ನು ನಿರ್ಮಿಸಿ ತಮ್ಮನ್ನು ತಾವೇ ವಿಶ್ಲೇಷಿಸುತ್ತವೆ. ಸಂಖ್ಯಾ ದೃಷ್ಟಿಯಿಂದ ಜಾತಿಯ ಸಂಖ್ಯೆ ಕಡಿಮೆ ಇದ್ದಾಗ ಅದಕ್ಕೆ ಶಕ್ತಿ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ಶಕ್ತಿ ರಾಜಕಾರಣದ ಅತ್ಯಂತ ಕನಿಷ್ಟ ಚೌಕಟ್ಟು ಆದ ಗ್ರಾಮ ಪಂಚಾಯತ್‌ನ ಚುನಾವಣೆಗೂ ನಿಲ್ಲಲು ಸಾಧ್ಯವಾಗುವುದಿಲ್ಲ. ನಿಂತರೂ ಗೆಲ್ಲಲು ಸಾಧ್ಯವಾಗುವುದೇ ಇಲ್ಲ. ಅವು ನಿರಂತರವಾಗಿ ಸೋತುಹೋಗುತ್ತಾ ಹೋಗುತ್ತವೆ. ಪುನಃ ಪುನಃ ತಳ ಸಮುದಾಯಗಳಾಗಿ ಪರಿವರ್ತಿತ­ವಾಗುತ್ತಾ ಹೋಗುತ್ತದೆ. ದುರಂತವೆಂದರೆ ಇಂತಹ ಸಮುದಾಯ­ಗಳು ನಮ್ಮಲ್ಲಿ ಅಸಂಖ್ಯಾತ ಇವೆ. ಇವುಗಳನ್ನು ಹೊಸತಾಗಿ ಲೆಕ್ಕ ಹಾಕುವುದು ಅನಿವಾರ್ಯವಾಗುತ್ತದೆ.

ಆಧುನಿಕತೆಯ ಇನ್ನೊಂದು ದೊಡ್ಡ ದುರಂತವೆಂದರೆ ಅದು ಸಿಮೆಟಿಕ್‌ ಧರ್ಮಗಳ ಒಳಗೆ ಇರುವ ಜಾತಿಗಳನ್ನು ಲೆಕ್ಕ ಹಾಕುವುದೇ ಇಲ್ಲ. ಸಿಮೆಟಿಕ್‌ ಧರ್ಮಗಳು ಭಾರತದಲ್ಲಿ ಹುಟ್ಟದಿದ್ದ ಕಾರಣ ಅವುಗಳಲ್ಲಿ ಜಾತಿಗಳಿಲ್ಲ ಎಂಬ ಪೂರ್ವನಿರ್ಧಾರಿತ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಆದ ಕಾರಣ ಮುಸ್ಲಿಂರಲ್ಲಿರುವ ವಿವಿಧ ಜಾತಿ­ಗಳನ್ನಾಗಲೀ, ಕ್ರಿಶ್ಚಿಯನ್ನಲ್ಲಿರುವ ಜಾತಿಗಳನ್ನಾಗಲೀ ಅದು ಪರಿಗಣಿಸು­ವುದೇ ಇಲ್ಲ. ಆದರೆ ಸಿಖ್ಖರಲ್ಲಿ,ಬೌದ್ಧರಲ್ಲಿ ಜಾತಿಗಳನ್ನು ಗುರುತಿಸುವಾಗ ಅದಕ್ಕೆ ಕಷ್ಟವೆನಿಸುವುದಿಲ್ಲ.

ಆಧುನಿಕತೆಯ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕಾದರೆ ಹೊಸ ಜಾತಿಯ ಪಟ್ಟಿ ಅನಿವಾರ್ಯ. ಇಲ್ಲದಿದ್ದರೆ ದುರ್ಬಲ ಜಾತಿಗಳು ಇನ್ನೂ ದುರ್ಬಲವಾಗುತ್ತಾ ಇತಿಹಾಸದ ಭಾಗಗಳಾ­ಗುತ್ತವೆ.ಇದು ಭಾರತದ ದುರಂತವೆಂದರೆ ತಪ್ಪೇನಲ್ಲ.

 -ಲೇಖಕರು, ಮೈಸೂರು ವಿವಿಯ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಅಧ್ಯಕ್ಷರು

0 comments:

Post a Comment