31 July 2013

* ಎಂ. ಉಷಾ

(ಮಾಧವ ಪೆರಾಜೆ ಅವರ ಲೇಖನಕ್ಕೆ ಪ್ರತಿಕ್ರಿಯೆ)


ಶ್ರೀಯುತ ಮಾಧವ ಪೆರಾಜೆ ’ಪ್ರಾಚೀನ ಕನ್ನಡ ಸಾಹಿತ್ಯ ಅನುವಾದವೇ? ಅಥವ ರೂಪಾಂತರವೇ?’ ಎನ್ನುವ ತಮ್ಮ ಲೇಖನದ ನೆರಳಚ್ಚು ಪ್ರತಿ ನೀಡಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದರು. ಕುತೂಹಲದಿಂದ ಓದಿ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಪೆರಾಜೆಯವರ ಲೇಖನಕ್ಕೆ ಈ ಪ್ರತಿಕ್ರಿಯೆ ದಾಖಲಿಸಲು ಮುಖ್ಯ ಕಾರಣ, ಭಾಷಾಂತರಕ್ಕೆ ಸಂಬಂಧಪಟ್ಟಂತೆ ಅವರ ಲೇಖನವು ಸೀಮಿತ ಆಕರವನ್ನು ಆಧರಿಸಿ ಅವಸರದ ತೀರ್ಮಾನಕ್ಕೆ ಬಂದಿದೆ ಎಂಬುದನ್ನು ವಿವರಿಸುವುದಾಗಿದೆ.

೧೯೫೦-೬೦ರ ದಶಕದಿಂದೀಚೆಗೆ ಭಾಷಾಂತರ ಅಧ್ಯಯನ ಎನ್ನುವ ಅಧ್ಯಯನ ಶಿಸ್ತೊಂದು(ಕ್ಷೇತ್ರವೊಂದು) ಮುಂಚೂಣಿಗೆ ಬಂದಿದ್ದು, ಈ ಕೇತ್ರದ ಬಗ್ಗೆ ಮಾನವಶಾಸ್ತ್ರದ ವಿದ್ವಾಂಸರಿಂದ ಹಿಡಿದು ಸ್ತ್ರೀವಾದಿಗಳವರೆಗೆ ಹಲವು ಕ್ಷೇತ್ರದ ಪರಿಣಿತರು ಆಸಕ್ತಿ ತೋರುತ್ತಿದ್ದಾರೆ.  ತಮ್ಮ ತಮ್ಮ ಕ್ಷೇತ್ರಗಳಿಗೆ ಭಾಷಾಂತರ ಪರಿಕಲ್ಪನೆಯನ್ನು ಅಳವಡಿಸುವ ಇಲ್ಲವೇ ತಮ್ಮ ಕ್ಷೇತ್ರಗಳ ನೆಲೆಯಿಂದ ಭಾಷಾಂತರವನ್ನು ವಿಮರ್ಶೆಗೆ ಒಡ್ಡುವ ಕೆಲಸದಲ್ಲಿ ತೊಡಗಿದ್ದಾರೆ.  ಈ ಅರ್ಥದಲ್ಲಿ ಭಾಷಾಂತರ ಒಂದು ವೇದಿಕೆಯಾಗಿ, ಪರಿಕರವಾಗಿ ಬೇರೆ ಬೇರೆ ಜ್ಞಾನಶಿಸ್ತುಗಳಿಗೆ ಒದಗಿ ಬರುತ್ತಿದೆ. ಬಾಲಗಂಗಾಧರ ಅವರು ಅಂತಹ ಒಂದು ಪರಿಕರವಾಗಿ ಭಾಷಾಂತರವನ್ನು ಬಳಸಿ ತಮ್ಮ ವಿಚಾರವನ್ನು ಮಂಡಿಸುತ್ತಿದ್ದಾರೆ.  ಅವರನ್ನು ಆಶ್ರಯಿಸಿ ಕನ್ನಡದಲ್ಲಿ ರಾಜಾರಾಂ ಹೆಗಡೆ, ಮಾಧವ ಪೆರಾಜೆಯವರು ಮುನ್ನಡೆದಿದ್ದಾರೆ.


ಒಂದು ಅಧ್ಯಯನ ಕ್ಷೇತ್ರ ತಲೆ ಎತ್ತಿದಾಗ ಸಹಜವಾಗಿಯೇ ಜ್ಞಾನಕ್ಷೇತ್ರದ ಒಳಗೆ ಒಂದು ಬಗೆಯ ಸಂಚಲನ ಉಂಟಾಗುತ್ತದೆ.  ಹೊಸ ದೃಷ್ಟಿಕೋನವು ಪ್ರವೇಶ ಪಡೆಯುತ್ತದೆ.  ಅಂತೆಯೇ ಭಾಷಾಂತರ ಎಂಬ ಕ್ಷೇತ್ರದ ಆಗಮನದೊಂದಿಗೆ ಹೊಸ ದೃಷ್ಟಿಕೋನವೊಂದು ಸಾಹಿತ್ಯ ಅಧ್ಯಯನದ ಸಂದರ್ಭದಲ್ಲಿಯೂ ಜಾಗತಿಕವಾಗಿಯೇ ಕಾಣಿಸಿದೆ. ಟೆಲ್‌ಅವಿವ್‌ನ ಇವನ್‌ಜೋಹರ್‌ನಂತಹವರು ಭಾಷಾಂತರವನ್ನು ಸಾಹಿತ್ಯ ಅಧ್ಯಯನಗಳು ಒಳಗೊಳ್ಳಬಹುದಾದ ಕ್ರಮದ ಬಗ್ಗೆ ನೀಡಿದ ಭಿನ್ನ ಆಲೋಚನೆ(ಪಾಲಿ ಸಿಸ್ಟಮ್ ಥಿಯರಿ) ಸಾಹಿತ್ಯ ಮತ್ತು ಭಾಷಾಂತರ ಸಾಹಿತ್ಯದ ಸಂಬಂಧದ ಸ್ವರೂಪವನ್ನು ಗ್ರಹಿಸುವ ಕ್ರಮದಲ್ಲಿ ಬದಲಾವಣೆಯೊಂದನ್ನು ತಂದಿದ್ದು, ಅದು ಕನ್ನಡದಲ್ಲಿ ಕೂಡ ಪ್ರತಿಫಲಿಸಿದೆ.

ಆಧುನಿಕ ಕನ್ನಡದ ಸಂದರ್ಭದಲ್ಲಿ ಭಾಷಾಂತರ ಮತ್ತು ಸಾಹಿತ್ಯದ ಸಂಬಂಧದ ಗ್ರಹಿಕೆಗೆ ತನ್ನದೇ ಆದ ’ಪುಟ್ಟ’ ಇತಿಹಾಸವೊಂದಿದೆ. ಆರ್. ನರಸಿಂಹಾಚಾರ್ ಅವರು ಕವಿರಾಜಮಾರ್ಗ, ಪಂಪಭಾರತ ಇತ್ಯಾದಿಗಳನ್ನು ಭಾಷಾಂತರವೆಂದು ಕರೆದಿಲ್ಲದಿದ್ದರೂ, ಇಂಗ್ಲಿಶ್ ವಿದ್ಯಾಭ್ಯಾಸ ಪರಿಚಯಿಸಿದ ’ಭಾಷಾಂತರ’ದ ಪರಿಕಲ್ಪನೆ ಅವರಿಗೆ ಗೊತ್ತಿದೆ. (ಅವರೇ ಬ್ರಿಟೀಶ್ ಸರ್ಕಾರದ ಅಧಿಕೃತ ಭಾಷಾಂತರಕಾರರಾಗಿದ್ದರು) ಆ ಪರಿಕಲ್ಪನೆಯ ಚೌಕಟ್ಟಿಗೆ ಒಗ್ಗುವ ಕೃತಿಗಳನ್ನು, ಲಭ್ಯ ಆಕರಗಳ ಹಿನ್ನೆಲೆಯಲ್ಲಿ ಅವರು ಭಾಷಾಂತರವೆಂದು ತಮ್ಮ ಕವಿಚರಿತೆಯಲ್ಲಿ ಸ್ಪಷ್ಟವಾಗಿ(ಶ್ರೇಣೀಕರಣವಿಲ್ಲದೆ) ಗುರುತಿಸಿದ್ದಾರೆ ಸಹ.  ಮುಂದೆ ಬಿಎಂಶ್ರೀ, ಎಸ್.ಜಿ.ನರಸಿಂಹಾಚಾರ್ಯರ ಭಾಷಾಂತರ ಕೃತಿ ’ಆರ್ಯಕ’ಗೆ  ಮುನ್ನುಡಿ ಬರೆಯುತ್ತ ’ಕನ್ನಡ ಸಾಹಿತ್ಯವೆಲ್ಲವೂ ಒಂದು ರೀತಿಯ ಸಂಸ್ಕೃತದ ಭಾಷಾಂತರವೇ ಎನ್ನಬಹುದು’ ಎಂದು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ.  ಈ ಮಾತುಗಳು ಅವರು ಭಾಷಾಂತರಕಾರರ ಕೆಲಸ ಕಡಿಮೆಯದಲ್ಲ ಎನ್ನುವ ಸಂಗತಿಗೆ ಪೂರಕವಾಗಿ ಆಡಿದ್ದಾಗಿದೆಯಷ್ಟೇ ಹೊರತು ಕನ್ನಡದಲ್ಲಿರುವುದೆಲ್ಲ ಭಾಷಾಂತರವೆಂದು ಸಾಧಿಸಲು ಅಲ್ಲ. ( ಹೆಚ್ಚೆಂದರೆ ಇದನ್ನು ನಾವು ಪಶ್ಚಿಮದ ’ಶ್ರೇಣೀಕೃತ’ ಭಾಷಾಂತರ ಚಿಂತನೆಯ ಮೊದಲ ಎದುರು ಮಾತು ಎಂದಷ್ಟೇ ಅರ್ಥೈಸಬಹುದು) ನಂತರದಲ್ಲಿ ಮುಗಳಿಯವರನ್ನೂ ಒಳಗೊಂಡಂತೆ ಎಲ್ಲ ಸಾಹಿತ್ಯ ಚರಿತ್ರೆಯ ಪ್ರಯತ್ನಗಳು ಒಂದಲ್ಲ ಒಂದು ಹಂತದಲ್ಲಿ ಭಾಷಾಂತರ ಮತ್ತು ’ಸ್ವತಂತ್ರ’ ಎನ್ನುವ ಶ್ರೇಣೀಕರಣದಲ್ಲಿಯೇ ಕನ್ನಡ ಸಾಹಿತ್ಯವನ್ನು ವಿವರಿಸುವ ಕೆಲಸ ಮಾಡಿವೆ.  ಅದರ ಪರಿಣಾಮವಾಗಿ ಹಂತಹಂತವಾಗಿ ಭಾಷಾಂತರ ಕೃತಿಗಳು ಸಾಹಿತ್ಯ ಚರಿತ್ರೆಯ ಹೊರಗುಳಿಯುತ್ತ ಹೋಗಿದೆ.  ಒಂದು ರೀತಿಯಲ್ಲಿ ವಸಾಹತುಶಾಹಿ ಸಂದರ್ಭದಲ್ಲಿ ಓರಿಯಂಟಲಿಸಂ, ರಾಷ್ಟ್ರೀಯತೆ ಮತ್ತು ಕನ್ನಡ ರಾಷ್ಟ್ರೀಯತೆ ಇತ್ಯಾದಿಗಳ ಪ್ರಭಾವದಿಂದಾಗಿ ಹುಟ್ಟಿಕೊಂಡ ’ಕನ್ನಡ ಸೋಪಜ್ಞತೆಯ’ ಸಂಕಥನವನ್ನು ಪೋಷಿಸುವುದು ಈ ಸಾಹಿತ್ಯ ಚರಿತ್ರೆಯಲ್ಲಿನ ’ಭಾಷಾಂತರದ ಕಣ್ಮರೆ’ಗೆ ಕಾರಣವಾಗಿದೆ ಎನ್ನಬಹುದು.  ಭಾಷಾಂತರವನ್ನು ಕುರಿತ ಪಶ್ಚಿಮದ  ಶ್ರೇಣೀಕರಣದ ತಿಳುವಳಿಕೆಯನ್ನು(ಭಾಷಾಂತರ ಎರಡನೆ ದರ್ಜೆಯದು ಎನ್ನುವ ನಂಬಿಕೆ) ಕನ್ನಡದ ಸಾಹಿತ್ಯ ಚರಿತ್ರೆಕಾರರು ಪ್ರಶ್ನಿಸದೆ ಸ್ವೀಕರಿಸಿದ್ದೂ ಇದಕ್ಕೆ ಕಾರಣವಾಗಿದೆ.

ಪೆರಾಜೆಯವರು ಪ್ರಸ್ತಾಪಿಸುವ ಮುಗಳಿಯವರ ಮಾತುಗಳು ಕೂಡ ಪ್ರಾಸಂಗಿಕವೇ; ಹೆಚ್ಚೆಂದರೆ ಪ್ರಭಾವ-ಪ್ರೇರಣೆ ಎನ್ನುವ ನೆಲೆಯಲ್ಲಿ ಭಾಷಾಂತರವನ್ನು ಕನ್ನಡ ಸಾಹಿತ್ಯ ಅಧ್ಯಯನವು ಸ್ವೀಕರಿಸಿದ/ಮಾನ್ಯ ಮಾಡಿದ ನೆಲೆ. ಅಂದರೆ ಕನ್ನಡ ಕೃತಿಗಳಿಗೆ ಸಂಸ್ಕೃತ ಆಕರಗಳನ್ನು ಹೆಕ್ಕಿ ತೋರಿಸುವ, ಕನ್ನಡ ಮತ್ತು ಸಂಸ್ಕೃತದ ಸಂಬಂಧದ ಸ್ವರೂಪವನ್ನು ವಿವರಿಸುವ ಕ್ರಮವಷ್ಟೇ ಹೊರತು ಕನ್ನಡ ಸಾಹಿತ್ಯವನ್ನೆಲ್ಲ ಭಾಷಾಂತರವೆಂದು ಸಾಧಿಸುವ ನೆಲೆಯಲ್ಲ.

ಹಾಗಿದ್ದರೆ ಮುಂದಿನ ಪ್ರಶ್ನೆ ಕುರ್ತಕೋಟಿಯವರು ಕನ್ನಡ ಸಾಹಿತ್ಯವೆಲ್ಲ ಭಾಷಾಂತರ ಎನ್ನುವುದನ್ನು ಸಾಬೀತುಪಡಿಸಲು ಹೊರಟವರೆ? ಎನ್ನುವುದು. ಕುರ್ತಕೋಟಿ ನಮ್ಮ ನಡುವೆ ಇದ್ದ ಇಂಗ್ಲಿಶ್ ಮತ್ತು ಸಂಸ್ಕೃತಗಳೆರಡನ್ನೂ ಬಲ್ಲವರಷ್ಟೇ ಅಲ್ಲ, ಕನ್ನಡವನ್ನು ಅವುಗಳ ಎದುರು ಅನುಸಂಧಾನಕ್ಕೆ ಒಡ್ಡುವ ಕ್ರಮ ಯಾವುದು ಎನ್ನುವ ಹುಟುಕಾಟವನ್ನೂ ನಡೆಸಿದ ಅಪರೂಪದ ಚಿಂತಕರು. ಈ ಅನುಸಂಧಾನದಲ್ಲಿ ಅವರು ಮಂಡಿಸುವ ಪ್ರಮೇಯ ಕನ್ನಡ ಸಾಹಿತ್ಯವನ್ನು ’ಒಂದು ನೆಲೆಯಲ್ಲಿ’ ಭಾಷಾಂತರ ಸಾಹಿತ್ಯ ಎನ್ನಬಹುದಾದರೂ ಅದು ಪಶ್ಚಿಮದ ರೀತಿಯದಲ್ಲ ಎನ್ನುವುದನ್ನು ಸಾಧಿಸಿತೋರಿಸುವುದೇ ಆಗಿದೆ. ’ಮೌಲಿಕತೆಯ ಬಗ್ಗೆ ಪೂರ್ವಾಗ್ರಹವಿದ್ದರೆ ಇಂಥ ಕೃತಿಗಳನ್ನು ನೋಡಿ ಉಪಯೋಗವಿಲ್ಲ ಅಥವಾ ಸಂಸ್ಕೃತದಲ್ಲಿದ್ದ ಮಹಾಭಾರತ ಕನ್ನಡಿಗರಿಗೂ ತಿಳಿಯಲಿ ಎಂಬ ಸದುದ್ದೇಶದಿಂದ ಪಂಪನಂಥವರು ಮಹಾಭಾರತವನ್ನು ಕನ್ನಡಿಸಿದರು ಎಂದು ತಿಳಿದರೆ ಏನೋ ಒಂದು ಸಮರ್ಥನೆಯನ್ನು ಹೇಳಿದಂತಾಗುತ್ತದೆ..(ಪುಟ ೧೦)’ ಎನ್ನುವ ಮಾತುಗಳು, ಪಶ್ಚಿಮದ ಭಾಷಾಂತರದ ಪರಿಕಲ್ಪನೆಯ ನಿರಾಕರಣೆಯ ಮಾತುಗಳೇ ಆಗಿವೆ.  ಪಂಪ, ರನ್ನ, ಕುಮಾರವ್ಯಾಸ ಮುಂತಾದವರ ಕನ್ನಡದ ಕೃತಿಗಳು ಮೂಲ ಆಕರವನ್ನು ಹೊಂದಿವೆ ಎಂದ ಮಾತ್ರಕ್ಕೆ ಅವುಗಳನ್ನು ಪಶ್ಚಿಮದ ’ಭಾಷಾಂತರ’ ಪರಿಕಲ್ಪನೆಯ ಅಡಿಯಲ್ಲಿ ಓದುವ ಕ್ರಮ ವ್ಯರ್ಥ ಎನ್ನುವುದೇ ಅವರ ವಾದವಾಗಿದೆ.

ಮುಂದಿನ ಅಧ್ಯಯನಕಾರರಾದರೂ ಇದನ್ನೇ ಎತ್ತಿ ಹಿಡಿಯುವವರು.  ಅಂದರೆ ಆಧುನಿಕಪೂರ್ವ ಕನ್ನಡ ಸಾಹಿತ್ಯದಲ್ಲಿ ಆಧುನಿಕಾರ್ಥದ ಅಂದರೆ ಪಶ್ಚಿಮ ಪ್ರಣೀತವಾದ ಭಾಷಾಂತರ ಪರಿಕಲ್ಪನೆ ಇರಲಿಲ್ಲ ಎಂಬುದೇ ಇವರ ವಾದವೂ ಆಗಿದೆ.  ’ಲಾಗಾಯ್ತಿನಿಂದ ಕನ್ನಡ ಕವಿಗಳು ಅನುವಾದದ ಪ್ರಕ್ರಿಯೆಯಲ್ಲಿ ಇರುವವರೇ ಆಗಿದ್ದಾರೆ.  ಆದರೆ ಈ ಅನುವಾದ ನಾವು ಈಗ ತಿಳಿದಿರುವ ಅನುವಾದದ ಮಾದರಿಯದ್ದಲ್ಲ’ ಎನ್ನುವ ಕೆ. ವಿ. ನಾರಾಯಣ ಅವರ ಮಾತುಗಳು ಸ್ಪಷ್ಟವಾಗಿಯೇ ಇದನ್ನು ಸೂಚಿಸುತ್ತದೆ.  ಇಲ್ಲಿ ’ಈಗ ನಾವು ತಿಳಿದಿರುವ’ ಎಂದರೆ ಇಂಗ್ಲಿಶಿನ ವಿದ್ಯಾಭ್ಯಾಸದ ಭಾಗವಾಗಿ ನಾವು ಕಲಿತಿರುವ ’ಭಾಷಾಂತರ’ ಪರಿಕಲ್ಪನೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.  ಓ ಎಲ್ ನಾಗಭೂಷಣ ಸ್ವಾಮಿಯವರ ಲೇಖನವಾದರೋ ’ಇಂದು ಪರಿಚಿತವಾಗಿರುವ ಅರ್ಥದ(ಅಂದರೆ ಪಶ್ಚಿಮದ) ಭಾಷಾಂತರವನ್ನು ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ನಾವು ಕಾಣಲಾರೆವು’  ಎನ್ನುವುದರಿಂದ ಆರಂಭಗೊಂಡು, ಹಳಗನ್ನಡ ಕವಿಗಳು ತಮ್ಮ ಆಕರ ಕಥೆಗಳನ್ನು ಕೇವಲ ಒಂದು ಮಾಧ್ಯಮವಾಗಿ ಸ್ವೀಕರಿಸಿದ್ದಾರೆಯೇ ಹೊರತು ಮೂಲವೊಂದಿದೆ, ಅದಕ್ಕೆ ನಿಷ್ಠವಾಗಿ ಅನುವಾದ ಮಾಡಬೇಕು ಎಂಬ ಧೋರಣೆಯೇನೂ ಕಾಣುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.  ಈ ಮಾತುಗಳೊಂದಿಗೆ ’ಈ ಪ್ರಕ್ರಿಯೆಯನ್ನು ಪ್ರಾಚೀನ ಕನ್ನಡ ಕವಿಗಳು ನಿರ್ವಚಿಸಿದ ರೀತಿಯು ಈಗ ಪಾಶ್ಚಾತ್ಯರು ಹೇಳುವ ಹಾಗಿಲ್ಲ.’ ’ಕನ್ನಡ ಕವಿಗಳು ತಮ್ಮ ಕಾವ್ಯಕ್ಕೆ ಆಕರ ಇರುವುದನ್ನು ನಿರಾಕರಿಸಿಲ್ಲ.  ಆದರೆ ಪಂಪನಂತಹವರು ಅದನ್ನು ಸಮುದ್ರ ಅಂತಲೂ ತಾನು ಈಜುಗಾರನೆಂತಲೂ ವಿವರಿಸುತ್ತಾರೆ.. .. ಮೊದಲಾದ ಕಾವ್ಯಗಳನ್ನು ಪಾಶ್ಚಾತ್ಯ ದೃಷ್ಟಿಕೋನದಿಂದ ಅನುವಾದವೆಂದೋ, ಭಾಷಾಂತರವೆಂದೋ ರೂಪಾಂತರವೆಂದೋ ಪರಿಗಣಿಸುವ ಮನಸ್ಸುಗಳಿಗೆ ಈ ತಂದೆ-ಮಕ್ಕಳ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ.’ ಎನ್ನುವ ಪೆರಾಜೆಯವರ ಮಾತುಗಳನ್ನು ಹೋಲಿಸುವುದಾದರೆ ಇಲ್ಲಿ ’ಪರಪಕ್ಷ’ವೆಲ್ಲಿ ಬಂದೀತು?  ಅಂದರೆ ಯಾವುದನ್ನು ಪೆರಾಜೆಯವರು ಪರಪಕ್ಷವೆಂದು ಹೇಳುತ್ತಿದ್ದಾರೋ ಆ ಅಂಗಳದಲ್ಲಿಯೇ ಅವರೂ ನಿಂತಿದ್ದಾರೆ.

ಎರಡನೆ ಭಾಗದಲ್ಲಿ ಪೆರಾಜೆಯವರು ಭಾಷಾಂತರಕ್ಕೂ ಬೈಬಲಿಗೂ ಇರುವ ’ನಿಕಟ’ ಸಂಬಂಧವನ್ನು ’ಏಕೈಕ’ ಸಂಬಂಧ ಎನ್ನುವಂತೆ ವಿವರಿಸಿದ್ದಾರೆ.  ಹಾಗು ಇದು ಉಳಿದ ವಿದ್ವಾಂಸರಿಗೆ ತಿಳಿದಿಲ್ಲ ಎಂದು ಆರೋಪಿಸುತ್ತಾರೆ.  ಅವರು ಗಮನಿಸಬೇಕಾದ ಸಂಗತಿ ಓ ಎಲ್ ನಾಗಭೂಷಣಸ್ವಾಮಿಯವರ ’ಭಾಷಾಂತರ’ ಕೃತಿ ಆರಂಭಗೊಳ್ಳುವುದೇ ಬೈಬಲ್ ಟವರಿನ ಕಥೆಯೊಂದಿಗೆ ಎಂಬುದು. ಭಾಷಾಂತರ ಚಿಂತನೆಗಳಿಗೆ ೨೦೦೦ಕ್ಕೂ ಮಿಕ್ಕ ಇತಿಹಾಸವಿದೆ.  ಈ ಅವಧಿಯುದ್ದಕ್ಕೂ ಭಾಷಾಂತರ ಅಧ್ಯಯನದ ನದಿಯಲ್ಲಿ ಎಷ್ಟೋ ನೀರು ಹರಿದಿದೆ.  ಈ ನದಿಯ ನೀರಿನ ಸ್ವಾದಕ್ಕೆ  ಬೈಬಲ್ ಮತ್ತು ಬೆಂಜಮಿನರೆಂಬ ತೊರೆಗಳು ಪ್ರಭಾವ ಬೀರಿವೆ. ಹಾಗೆಂದ ಮಾತ್ರಕ್ಕೆ ಬೈಬಲ್ ಮತ್ತು ಬೆಂಜಮಿನ್ ಭಾಷಾಂತರ ಕ್ಷೇತ್ರಕ್ಕೆ ಆದಿಯೂ ಅಲ್ಲ ಅಂತ್ಯವೂ ಅಲ್ಲ.  ಈ ಎರಡು ’ಬಿ’ಗಳ ಆಚೆಗೂ ಬೇಕಾದಷ್ಟು ನೀರು ಹರಿದಿದೆ; ಹರಿಯುತ್ತಲೇ ಇದೆ. ಇದರ ಪರಿಣಾಮವಾಗಿ ಕಳೆದ ೪೦-೫೦ ವರ್ಷಗಳಿಂದೀಚೆಗೆ ಕೆಲವು ಸಂಗತಿಗಳು  ಚರ್ಚೆಯ ಕಣಕ್ಕೆ ಬರುತ್ತಿವೆ.  ಅವುಗಳಲ್ಲಿ ಒಂದು ಭಾಷಾಂತರವನ್ನು ಪಶ್ಚಿಮಕ್ಕೆ ಮಾತ್ರ ತಳುಕು ಹಾಕುವುದು ಎಷ್ಟು ಸೂಕ್ತ ಎಂಬುದು.

ಭಾಷಾಂತರದ ವಿಚಾರದಲ್ಲಿ ಪಶ್ಚಿಮದಷ್ಟೇ, ಬೈಬಲಿನಷ್ಟೇ ಮುಖ್ಯವಾದುದು ಚೀನಾದ ಬೌದ್ಧಭಾಷಾಂತರ ಪರಂಪರೆ. ಬೌದ್ಧ ಸಾಹಿತ್ಯ ಮೂಲತಃ ಭಾರತೀಯ ಸಾಹಿತ್ಯವಾದುದರಿಂದ ಇದು ಇನ್ನೊಂದು ರೀತಿಯಲ್ಲಿ ಭಾರತೀಯ ಭಾಷಾಂತರ ಪರಂಪರೆಯನ್ನು ಪ್ರತಿನಿಧಿಸುವ ಮಾತೂ ಆಗುತ್ತದೆ. ಚೀನಾ ಕ್ರಿಪೂ೧೧ನೇ ಶತಮಾನದಲ್ಲಿಯೇ ಭಾಷಾಂತರವನ್ನು ಆಡಳಿತಾತ್ಮಕ ಚಟುವಟಿಕೆಯ ಭಾಗವಾಗಿ ಬಳಸುತ್ತಿತ್ತು. ಬೌದ್ಧಧರ್ಮದ ಭಾಷಾಂತರದೊಂದಿಗೆ ಅದು ಭಾಷಾಂತರ ಚರ್ಚೆಯನ್ನು ವ್ಯವಸ್ತಿತವಾಗಿ ಆರಂಬಿಸಿತ್ತು. ಇದರ ಅತ್ಯಂತ ಹಳೆಯ ದಾಖಲೆಯೊಂದು ಜ್ಯು(Zhou) ಮನೆತನದ ಕಾಲದ್ದಾಗಿದ್ದು, ಅದರಲ್ಲಿ ಭಾಷಾಂತರವನ್ನು ’ಅರ್ಥದಲ್ಲಿ ಬದಲಾವಣೆ ಉಂಟಾಗದ ರೀತಿಯಲ್ಲಿ ಪರಸ್ಪರರ ತಿಳುವಳಿಕೆಗಾಗಿ ಒಂದು ಲಿಖಿತ ಭಾಷೆಯನ್ನು ಇನ್ನೊಂದರಿಂದ ಸ್ಥಳಾಂತರಿಸುವುದೇ ಭಾಷಾಂತರ’ ಎಂದು ವ್ಯಾಖ್ಯಾನಿಸಲಾಗಿದೆ. ಚೀನಾದಲ್ಲಿ ಕ್ರಿಪೂ ೪-೩ನೇ ಶತಮಾನದ ವೇಳೆಗೆ ಭಾಷಾಂತರದ ಸ್ಕೂಲ್ ಒಂದು ಅಧಿಕೃತವಾಗಿ ಕೆಲಸ ಮಾಡುತ್ತಿತ್ತು.  ಇಲ್ಲಿ ಮೂಲನಿಷ್ಠ ನೇರಭಾಷಾಂತರ, ಉದ್ದಿಷ್ಠ ನಿಷ್ಠ ಮುಕ್ತ ಭಾಷಾಂತರಗಳೆರಡರ ಪ್ರತಿಪಾದಕರೂ ಹಾಗು ಈ ಎರಡರ ಸಮನ್ವಯಕಾರರೂ ಇದ್ದರು.  ಭಾರತದ ಕಾಶ್ಮೀರದಿಂದ ಬೌದ್ಧ ಭಾಷಾಂತರಕ್ಕಾಗಿ ಕರೆಸಿಕೊಂಡಿದ್ದ ಕುಮಾರ ಜೀವ ಇಲ್ಲಿದ್ದವನೇ ಅಗಿದ್ದ ಮತ್ತು ಈತ ಮೂನಿಷ್ಠ ನೇರಭಾಷಾಂತರದ ಪ್ರತಿಪಾದಕನಾಗಿದ್ದ.

ಭಾರತ ಆಧುನಿಕಪೂರ್ವದಲ್ಲಿ ನಾವು ಭಾವಿಸಿಷ್ಟು ಪ್ರತ್ಯೇಕ(ಐಸೊಲೆಟ್) ಅಥವಾ ಮಡಿವಂತಿಕೆ ಸಂಸ್ಕೃತಿಯೇನಲ್ಲ ಎಂಬುದನ್ನು ಭಾಷಾಂತರದ ಚರಿತ್ರೆ ವಿವರಿಸುತ್ತದೆ. ಚೀನಾವಲ್ಲದೆಯೂ ಮಧ್ಯಕಾಲೀನ ಜ್ಞಾನಕೇಂದ್ರವಾಗಿದ್ದ ಬಗ್ದಾದ್‌ನಲ್ಲಿ ಭಾಷಾಂತರವೊಂದು ಮುಖ್ಯ ಚಟುವಟಿಕೆಯಾಗಿತ್ತು.  ಇಲ್ಲಿ ಗ್ರೀಕ್, ಚೀನಾ ಇತ್ಯಾದಿ ಜ್ಞಾನಪರಂಪರೆಯೊಂದಿಗೆ ಭಾರತೀಯ ಜ್ಞಾನಪಠ್ಯಗಳೂ ಅರಬ್ಬಿ ಭಾಷೆಗೆ ಭಾಷಾಂತರಗೊಂಡವು ಹಾಗು ಈ ಭಾಷಾಂತರ ಚಟುವಟಿಕೆಯಲ್ಲಿ ಭಾರತೀಯ ವಿದ್ವಾಂಸರೂ ಆಹ್ವಾನಿತರಾಗಿ ಭಾಗವಹಿಸುತ್ತಿದ್ದರು.  ಮಧ್ಯ ಏಷ್ಯಾದ ಅರಬಿಕ್ ಮತ್ತು ಪರ್ಶಿಯನ್ ಭಾಷೆಗಳು ಮಧ್ಯಕಾಲೀನ ದಿನಮಾನಗಳಿಂದಲೂ ಪೂರ್ವ ಮತ್ತು ಪಶ್ಚಿಮದ ಜ್ಞಾನಗಳ ನಡುವಿನ ಕೊಂಡಿಯಾಗಿ ಕೆಲಸ ನಿರ್ವಹಿಸಿವೆ. ಈ ಕೊಂಡಿಯ ಸಹಾಯದಿಂದಲೇ ಭಾರತಕ್ಕೆ ಬಂದ ಬ್ರಿಟೀಷರು ತಮ್ಮ ಮೊದಲ ದಿನಗಳಲ್ಲಿ ಪರ್ಶಿಯನ್ ಭಾಷೆಯನ್ನು ಮಧ್ಯವರ್ತಿ ಭಾಷೆಯಾಗಿ ಬಳಸಿಕೊಂಡು ಸಂವಾದ ಮಾಡಿದ್ದಾರೆ. ಈ ಎಲ್ಲ ಸಂಗತಿಗಳು ಭಾರತೀಯರಿಗೆ ಪಾಶ್ಚಾತ್ಯ ಭಾಷಾಂತರ ಪರಿಕಲ್ಪನೆಗಳ ಪರಿಚಯವಿದ್ದುದನ್ನು ತೋರಿಸುತ್ತವೆ. ವಸ್ತುಸ್ಥಿತಿ ಹೀಗಿರುವಾಗ ಭಾಷಾಂತರ ಪರಿಕಲ್ಪನೆಯನ್ನು ಪಶ್ಚಿಮಕ್ಕೆ, ಬೈಬಲಿಗೆ ’ಪಿತ್ರಾರ್ಜಿತ ಆಸ್ತಿ’ಯಾಗಿ ಬರೆದುಕೊಡುವ ಅಗತ್ಯವಿಲ್ಲ.

ವಸಾಹತುಶಾಹಿ ಆಳ್ವಿಕೆಯ ಕಾರಣವಾಗಿ ಪಾಶ್ಚಾತ್ಯ ಚಿಂತನೆಗಳ ಪ್ರಭಾವ ಭಾರತದಂತಹ ದೇಶದ ಬೌದ್ಧಿಕತೆಯನ್ನು ಆಳುತ್ತಿದೆ ಎಂಬುದು ಹಾಗು ಪಾಶ್ಚಾತ್ಯ ಚಿಂತನೆಯ ಮೇಲೆ ಬೈಬಲಿನ ಪ್ರಭಾವ ದೊಡ್ಡದು   ಎನ್ನುವುದರಲ್ಲಿ ಎರಡು ಮಾತಿಲ್ಲ.  ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಮೇಲಿನ ಸಿದ್ಧವಿಚಾರವೂ ಅಂದರೆ ಪಾಶ್ಚಾತ್ಯ ಮತ್ತು ಬೈಬಲಿನ ಪ್ರಾಬಲ್ಯದ ಸಂಕಥನವು ಹೇಗೆ ನಮ್ಮ ಕಣ್ಣನ್ನು ಕಟ್ಟುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು.  ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ಭಾಷಾಂತರವು ಹೇಗೆ ಒದಗಿ ಬರುತ್ತಿದೆ ಎಂಬುದು.

ಸಧ್ಯಕ್ಕೆ ಭಾಷಾಂತರ ಅಧ್ಯಯನವು ಮೂರು ಮುಖ್ಯ ಸಂಗತಿಗಳನ್ನು ಅಡಿಗಲ್ಲಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ ೧, ಒಂದು ಕೃತಿ ಅಥವಾ ವಿದ್ವತ್‌ಪರಂಪರೆ ಹೇಗೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ಪಡೆಯುತ್ತದೆ? ೨. ಹೇಗೆ ಚಿಂತನೆಗಳು ಮತ್ತು ಸಿದ್ಧಾಂತಗಳು(ಜ್ಞಾನಪರಂಪರೆಗಳು) ಜಾಗತಿಕ ಚಲನೆಯನ್ನು ಪಡೆದುಕೊಳ್ಳುತ್ತವೆ? ೩. ಭಿನ್ನ ನಂಬಿಕೆ ಮತ್ತು ಆಚರಣೆಗಳನ್ನು ಹೊಂದಿರುವ ಸಮುದಾಯಗಳು ಪರಸ್ಪರ ಅರಿವನ್ನು ಹೊಂದುವುದು ಹೇಗೆ?

ಮಾನವ ನಾಗರೀಕತೆಗೆ ಸಂಬಂಧಪಟ್ಟ ಈ ಮೂರು ಮುಖ್ಯ ಪ್ರಶ್ನೆಗಳನ್ನು ಬಿಡಿಸಲು, ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಭಾಷಾಂತರ ಅಗತ್ಯವಾಗಿದೆ ಎಂಬ ತಿಳುವಳಿಕೆ ವಿದ್ವತ್ ಲೋಕದಲ್ಲಿ ದಟ್ಟವಾಗುತ್ತಿದೆ. ಭಾಷಾಂತರ ಇತಿಹಾಸವಿಲ್ಲದೆ ಪ್ರಪಂಚದ ಇತಿಹಾಸವೇ ಇಲ್ಲ ಎನ್ನುವ ಕೆಲ್ಲಿಯ ಮಾತುಗಳು ಈ ಅಭಿಪ್ರಾಯಗಳ ಸಾರಸಂಗ್ರಹವಾಗಿದೆ. ಆಧುನಿಕಪೂರ್ವ ಸಮಾಜಗಳ ನಡುವಿನ ಈ ಜ್ಞಾನದ ಚಲನೆಯನ್ನು ಭಾಷಾಂತರವು ಸಮರ್ಥವಾಗಿ ವಿವರಿಸಬಲ್ಲದು ಎಂಬ ಕಾರಣಕ್ಕೆ ಈ ಅಧ್ಯಯನಗಳ ಬಗ್ಗೆ ವಿದ್ವಾಂಸರು ಹೆಚ್ಚು ಕುತೂಹಲಿಗಳಾಗಿದ್ದಾರೆ. ಹಾಗೆ ನೋಡಿದರೆ ಭಾಷಾಂತರ ಅಧ್ಯಯನ ಕ್ಷೇತ್ರದ ಈ ಬಗೆಯ ಅಧ್ಯಯನಗಳೇ ಈ ಹೊತ್ತು ಶಿಸ್ತೀಯ ಚೌಕಟ್ಟನ್ನು ಮುರಿದು ಭಾಷಾಂತರ ಅಧ್ಯಯನದತ್ತ ವಿದ್ವಾಂಸರನ್ನು ಆಕರ್ಷಿಸುತ್ತಿರುವುದು.

ಪಶ್ಚಿಮದ ಸಂದರ್ಭದಲ್ಲಿಯಾದರೂ ಬೆಂಜಮಿನ್‌ಗೆ ಪೂರ್ವದಲ್ಲಿಯೇ ಭಾಷಾಂತರವನ್ನು, ಬೈಬಲ್ ಭಾಷಾಂತರವನ್ನು ವಿವರಿಸುವ ಹಲವು ಪ್ರಯತ್ನಗಳು ನಡೆದಿವೆ.  ೨೦ನೇ ಶತಮಾನದ ಬೆಂಜಮಿನ್ ತನ್ನ ಹಿಂದಿನ ೨೦೦೦ ವರ್ಷಗಳಿಗೆ ಮಿಕ್ಕಿದ ಪಶ್ಚಿಮದ ಭಾಷಾಂತರ ಪ್ರಕ್ರಿಯೆಯನ್ನು ಬೈಬಲಿನ ನೆಲೆಯಿಂದ ವಿವರಿಸುವ ಒಂದು ಪ್ರಯತ್ನ ಮಾಡಿದ್ದಾನೆ ಅಷ್ಟೆ.  ಆದರೆ ಬೈಬಲಿನ ಭಾಷಾಂತರ ಪರಿಕಲ್ಪನೆಯನ್ನು ಮೀರುವ ಪ್ರಕ್ರಿಯೆಯೊಂದು ಬೈಬಲಿನ ಭಾಷಾಂತರದ ಸಂದರ್ಭದಲ್ಲಿಯೇ ನಡೆದಿದೆ. ಮೂಲದ ಪವಿತ್ರತೆಯ ನಂಬಕೆಯೊಂದಿಗೆ ಕ್ಯಾಥೊಲಿಕರು ಬೈಬಲ್ ಭಾಷಾಂತರದಿಂದ ಹಿಂದೆ ಸರಿದರೆ, ಪ್ರಾಟಸ್ಟೆಂಟರು ಭಾಷಾಂತರವನ್ನು ಮೂಲದೆಡೆಗಿನ ಚಲನೆಯಾಗಿ ಭಾವಿಸಿ ಭಾಷಾಂತರ ಕೈಗೊಂಡಿದ್ದಾರೆ.  ಕ್ರಿ.ಪೂ ೩ರ ಸುಮಾರಿಗೆ ಹಳೆಯ ಒಡಂಬಡಿಕೆಯ ಮೊದಲ ಭಾಷಾಂತರ ಸೆಪ್ಟುಗಿಂಟ್(Septuagint) ಕಂಡುಬರುತ್ತದೆ.  ಇದನ್ನು ಭಾಷಾಂತರ ಮಾಡುವ ಅದನ್ನೊಂದು ಕಾನೂನು ಕೃತಿಯಾಗಿ ಪರಿಭಾವಿಸಲಾಗಿದೆ.   ಭಿನ್ನ ಬುಡಕಟ್ಟುಗಳಿಗೆ ಸೇರಿದ ೭೦(೭೨ ಎನ್ನುವ ವಿವರಣೆಯೂ ಇದೆ)ಜನ ವಿದ್ವಾಂಸರ ಚರ್ಚೆ ಮತ್ತು ಪರಿಶೀಲನೆಯೊಂದಿಗೆ ಒಂದು ಸಮೂಹ ಪ್ರಕ್ರಿಯೆಯಾಗಿ ಈ ಕೆಲಸ ನಡೆದಿದೆ. ನಂತರದ ಎರಡು ಶತಮಾನಗಳ ಅಂತರದಲ್ಲಿ ಸಿಸಿರೋ ಎಂಬ ಭಾಷಣಕಲೆಯ ವಿದ್ವಾಂಸ ಮುಕ್ತಭಾಷಾಂತರವನ್ನು ಪ್ರತಿಪಾದಿಸುತ್ತಾನೆ. ಕ್ರಿಶ ೩ನೇ ಶತಮಾನದಲ್ಲಿ ಕೂಡ ಜೆರೋಮ್ ಹೊಸ ಒಡಂಬಡಿಕೆಯನ್ನು ಸಿಸಿರೋನನ್ನು ಅನುಸರಿಸಿ ಮುಕ್ತಭಾಷಾಂತರ ಮಾಡಿದ್ದೇನೆ ಎನ್ನುತ್ತಾನೆ.  ಅಂದರೆ ಬೈಬಲಿನ ಭಾಷಾಂತರದ ಸಂದರ್ದಲ್ಲಿ ಕೂಡ ಮೂಲನಿಷ್ಠತೆಯ ಪರಿಕಲ್ಪನೆ ನಂತರದಲ್ಲಿ ಅಂದರೆ ಕ್ರೈಸ್ತಮತದ ಪ್ರಾಬಲ್ಯದೊಂದಿಗೆ ಬೆಳೆದ ವಿದ್ಯಮಾನ.  ಒಟ್ಟಾರೆ ಹೇಳುವುದಾದರೆ. ಅಗತ್ಯಾನುಸಾರಿಯಾಗಿ ಪಶ್ಚಿಮದಲ್ಲಿ ಬೈಬಲ್ ಪ್ರಣೀತವಾದ ಮೂಲನಿಷ್ಠತೆಯನ್ನು ಒಪ್ಪುವ ಬಿಡುವ ಎರಡೂ ಪ್ರಕ್ರಿಯೆಗಳೂ ನಡೆದಿವೆ. ಇದನ್ನು ಇಂಗ್ಲಿಶ್ ವಿದ್ಯಾಭ್ಯಾಸದ ಭಾಗವಾಗಿ ನಾವು ಸ್ವೀಕರಿಸಿದ್ದೇವೆ. ನಮ್ಮ ಅಗತ್ಯಾನುಸಾರಿಯಾಗಿ ಎರಡನ್ನೂ ಬಳಸಿಕೊಂಡಿದ್ದೇವೆ.  ಆದರೆ ಕ್ರಿ.ಪೂ,ದಿಂದಲೂ ರೋಮನ್ ವಿಧ್ಯಾಭ್ಯಾಸದ ಭಾಗವಾಗಿದ್ದ, ಭಾಷಣಕಲೆ(ಸಂವಹನ), ವ್ಯಾಕರಣ ಶಿಸ್ತುಗಳ ಚರ್ಚೆಗಳು ಭಾಷಾಂತರ ಪರಿಕಲ್ಪನೆಯ ಮೂಲನಿಷ್ಟತೆ ಮತ್ತು ಮುಕ್ತಭಾಷಾಂತರಗಳೆರಡನ್ನೂ ಒಳಗೊಂಡಂತೆಯೇ ನಡೆದಿದೆ.  ಬೈಬಲಿನ ಮೂಲನಿಷ್ಠತೆಯ ಪರಿಕಲ್ಪನೆ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅದನ್ನು ಮೀರಿ ಮುಕ್ತತೆಯ ಪ್ರತಿಪಾದನೆಯು ಕಂಡು ಬರುತ್ತದೆ.

ಇನ್ನು ಪೆರಾಜೆಯವರ ಲೇಖನದ ಮೂರನೇ ಭಾಗಕ್ಕೆ ಬಂದರೆ, ಅದು ಬಾಲಗಂಗಾಧರ ಅವರ ರಿಲಿಜನ್ ಮತ್ತು ಧರ್ಮ ಎಂಬ ಪರಿಕಲ್ಪನೆಗಳ ಕುರಿತಾದ ವಾದದ ನೆರಳು. ನಾನು ಅರ್ಥಮಾಡಿಕೊಂಡಿರುವಂತೆ(ಪೆರಾಜೆಯವರು ಇದನ್ನೇ ಸಾರಾಂಶಿಸಿದ್ದಾರೆ) ಬಾಲಗಂಗಾಧರ ಅವರ ಮುಖ್ಯ ಪ್ರಮೇಯ ’ರಿಲೀಜನ್’ಗೆ ಧರ್ಮ ಸಂವಾದಿ ಪದವಲ್ಲ.  ಅದನ್ನು ಸಂವಾದಿ ಪದವಾಗಿ ಸ್ವೀಕರಿಸಿದ್ದರಿಂದ ಅಥವಾ ರಿಲೀಜನ್ ಪದವನ್ನು ಧರ್ಮವೆಂದು ಭಾಷಾಂತರಿಸಿಕೊಂಡದ್ದರಿಂದ ಭಾರತೀಯ ಸಮಾಜವನ್ನು ಗ್ರಹಿಸುವುದರಲ್ಲಿಯೇ ಮೂಲಭೂತವಾದ ತಪ್ಪಾಗಿದೆ.  ಈ ತಪ್ಪಿನ ಅಥವಾ ಇಂತಹ ತಪ್ಪಿನ ಆಧಾರದ ಮೇಲೆ ರೂಪುಗೊಳ್ಳುತ್ತಿರುವ ಬೌದ್ಧಿಕತೆ ಈ ಬೌದ್ಧಿಕತೆಯನ್ನು ಆಧರಿಸಿದ ರಾಜಕೀಯ ನಿಲುವುಗಳು ಭಾರತದ ಈ ಹೊತ್ತಿನ ಸಮಸ್ಯೆಗಳಿಗೆ ಮೂಲಕಾರಣ.

ಇದನ್ನು ಅನುಸರಿಸುವ ಪೆರಾಜೆಯವರ ಪ್ರಕಾರ ಕನ್ನಡದಲ್ಲಿ ಟ್ರಾನ್ಸಲೇಷನ್‌ಗೆ ಸಂವಾದಿಯಾದ ಪದ  ಇಲ್ಲ. ಆದ್ದರಿಂದ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಭಾಷಾಂತರ ಸಾಹಿತ್ಯ ಇತ್ತೇ ಎನ್ನುವ ಪ್ರಶ್ನೆಯೇ ತಪ್ಪಾದುದು.  ಈ ಚರ್ಚೆಯನ್ನು ಭಾಷಾಂತರದ ದಿಕ್ಕಿನಿಂದಲೇ ಮುಂದುವರಿಸುವುದಾದರೆ, ಅದಕ್ಕೆ ಎರಡು ನೆಲೆಗಳಿವೆ.  ಒಂದು ಟ್ರಾನ್ಸ್‌ಲೇಷನ್ ಎನ್ನುವುದಕ್ಕೆ ಸಂವಾದಿ ಪದ ಇದೆಯೇ ಇಲ್ಲವೇ ಎನ್ನುವುದು.  ಎರಡು, ಟ್ರಾನ್ಸ್‌ಲೇಷನ್ ಪ್ರಕ್ರಿಯೆಗೆ ಸಂವಾದಿ ಪ್ರಕ್ರಿಯೆ ಇದೆಯೇ ಇಲ್ಲವೇ ಎನ್ನುವುದು.

ಕನ್ನಡದಲ್ಲಿ ಟ್ರಾನ್ಸ್‌ಲೇಷನ್‌ಗೆ ಸಂವಾದಿ(ಸಮಾನಾರ್ಥಕವಲ್ಲ) ಪದವಾಗಿ ಭಾಷಾಂತರ ಮತ್ತು ಅನುವಾದ ಎರಡನ್ನೂ ಬಳಸಲಾಗುತ್ತದೆ. ಹಾಗೆ ನೋಡಿದರೆ ಜಗತ್ತಿನ ಯಾವೊಂದು ಭಾಷೆಯ ಯಾವ ಪದಕ್ಕೂ ಸಂವಾದಿ ಪದ ಇರಲು ಸಾಧ್ಯವಿಲ್ಲ ಎನ್ನುವ ಚಿಂತನೆಯನ್ನೂ ಭಾಷಾವಿಜ್ಞಾನಿಗಳು ಮಂಡಿಸುತ್ತಾರೆ.  ಈ ಚಿಂತನೆಯ ನೆಲೆಗಟ್ಟಿನ ಮೇಲೆ ಭಾಷಾಂತರವೆನ್ನುವುದು ಇಲ್ಲವೇ ಇಲ್ಲ, ಇರುವುದೆಲ್ಲವೂ ’ಮೂಲ’ವೇ ಎನ್ನುವ ವಾದವನ್ನೂ ಆಧುನಿಕೋತ್ತರ ಚಿಂತನೆ ಮಂಡಿಸುತ್ತದೆ.(ಇದಕ್ಕೆ ವಿರುದ್ಧವಾಗಿ ಇರುವುದೆಲ್ಲವೂ ಭಾಷಾಂತರವೇ ಎನ್ನುವ ಚಿಂತನೆಯೂ ಇಲ್ಲದೆ) ಈ ಹಂತದಲ್ಲಿ ಸ್ವತಃ ಭಾಷಾಂತರವೇ ಭಾಷಾಂತರವನ್ನು ನಿರಾಕರಿಸುತ್ತದೆ. ’ನಾನು’ ಇಲ್ಲ ಎನ್ನುತ್ತಲೇ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವ ಶಿಸ್ತೀಯ ರಾಜಕಾರಣ ಇದು.(ಬಹುಶಃ ಕನ್ನಡದಲ್ಲಿ ಇರುವುದೆಲ್ಲವೂ ಭಾಷಾಂತರ ಎನ್ನುವ ಹೊಸಸಿದ್ಧಾಂತವೊಂದು ನಿಧಾನಕ್ಕೆ ಕಣ್ಬಿಡುತ್ತಿದೆ ಎಂಬ ಪೆರಾಜೆಯವರ ಆತಂಕ ಇಲ್ಲಿ ಕೊಂಚ ಕಮ್ಮಿಯಾಗಬಹುದು)

ಇಲ್ಲಿ ಪರಿಶೀಲಿಸಬೇಕಾದ ಮುಖ್ಯ ಸಂಗತಿ ಎಂದರೆ, ಭಾಷಾಂತರ ಎನ್ನುವುದಕ್ಕೆ ಸಂವಾದಿಯಾದ ಪದ ಕನ್ನಡದಲ್ಲಿ ಇರಲಿಲ್ಲವೇ ಅಥವಾ ಭಾಷಾಂತರದ ಸಂವಾದಿ ಪರಿಕಲ್ಪನೆ ಇರಲಿಲ್ಲವೇ ಎನ್ನುವುದು. ಪೆರಾಜೆಯವರು ಆದಿಪುರಾಣದ ಪದ್ಯವನ್ನು ಉಲ್ಲೇಖಿಸುತ್ತ, " 'ಅನುವದ’ದ ಅರ್ಥ ಉಚ್ಛರಿಸುವುದು ಎಂದಾಗುತ್ತದೆ. ಗಿಳಿ ಹೇಳಿದ ಹಾಗೆ ಎಂಬರ್ಥ" ಎನ್ನುತ್ತಾರೆ.  ಕನ್ನಡದ ಸಂದರ್ಭದಲ್ಲಿ ಗಿಳಿಯ ಮಾತು ಎನ್ನುವುದು ’ಅನುಕರಣೆ’ಯನ್ನೇ ಸೂಚಿಸುತ್ತದೆ.  ಅನುವದಿಸು ಪದಕ್ಕೆ ಅನುಕರಿಸು ಎನ್ನುವ ಅರ್ಥವೇ ಸರಿಯಾದುದು ಎಂದೆನಿಸುತ್ತದೆ ಎಂಬ ಮಾತನ್ನು ಅವರೇ ಹೇಳಿದ್ದಾರೆ. ಪಶ್ಚಿಮದ ಮೂಲನಿಷ್ಠೆಯ ಪರಿಕಲ್ಪನೆ ರೂಪುಗೊಂಡಿರುವುದು-ಬೈಬಲ್ಲಿನ ಸಂದರ್ಭದಲ್ಲಿ ಕೂಡ- ಭಾಷಾಂತರ ಮೂಲದ ಅನುಕರಣೆ ಎನ್ನುವ ಅರ್ಥದಲ್ಲಿಯೇ.  ಅರ್ಥಾತ್ ಕನ್ನಡದಲ್ಲಿನ ಅನುವದ ಎಂಬ ಪದ  ಭಾಷಾಂತರಕ್ಕೆ ಸಂವಾದಿ ಎಂದಾಯಿತು.

ಈ ಪರಿಕಲ್ಪನೆಯ ವಿಚಾರಕ್ಕೆ ಬರುವುದಾದರೆ, ಭಾರತದಲ್ಲಿ ಭಾಷಾಂತರದ ಕ್ರಿಯೆಯನ್ನು ಈಡೇರಿಸಿಕೊಡುವ ಅಂದರೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪಠ್ಯವನ್ನು/ಜ್ಞಾನವನ್ನು/ಮಾಹಿತಿಯನ್ನು ಭಾಷಾಂತರಿಸುವ ಕೆಲಸವನ್ನು ಹಲವು ವಿಧಗಳಲ್ಲಿ ಮಾಡಲಾಗುತ್ತಿತ್ತು.  ಅದನ್ನು ಹಲವು ಹೆಸರುಗಳಲ್ಲಿ ಗುರುತಿಸಲಾಗುತ್ತಿತ್ತು.  ಅವು ವ್ಯಾಖ್ಯಾನ, ಭಾಷ್ಯ, ಟೀಕು, ಮರುಬರವಣಿಗೆ, ಕನ್ನಡಿಸುವಿಕೆ ಇವುಗಳೇ ಆಗಿವೆ.  ಭಾಷಾಂತರ ಕ್ರಿಯೆಯೊಂದು ಕನ್ನಡದಲ್ಲಿ ಘಟಿಸಿಯೇ ಇರಲಿಲ್ಲ ಎಂದರೆ ಇಲ್ಲಿ ಸಂವಹನವೇ ಇರಲಿಲ್ಲ ಎಂದಾಗಬೇಕಾಗುತ್ತದೆ.  ಅದು ಸಾಧ್ಯವೇ?

ಕೊನೆಯದಾಗಿ, ಭಾಷಾಂತರ ಪರಿಕಲ್ಪನೆ(ಪಶ್ಚಿಮದ ರೀತಿಯ ಮೂಲನಿಷ್ಠ ಪದಶಃ ಪರಿಕಲ್ಪನೆ) ಕನ್ನಡದಲ್ಲಿ ಇರಲಿಲ್ಲವೇ ಎಂಬುದರ ಹುಡುಕಾಟಕ್ಕೆ ನಾಂದಿಯಾಗಲೆಂದು ಹಾರೈಸುತ್ತ ೧೦ನೇ ಶತಮಾನದ ಶಾಸನ ಪದ್ಯವೊಂದನ್ನು ಓದುಗರ ಮುಂದಿಡುತ್ತೇನೆ. ನನ್ನ ಪ್ರಕಾರ ಪದಶಃ ಭಾಷಾಂತರದ ಕನ್ನಡದ ಹಳೆಯ ಮತ್ತು ಉತ್ತಮ ಭಾಷಾಂತರ ಪಠ್ಯವಿದು. ನಮಸ್ಕಾರ.

ಸ್ವದತ್ತಂ ತನ್ನಿತ್ತುದಕ್ಕೆ ಪರದತ್ತಂ ವಾ ಪೆ
ರರಿತ್ತುದಕ್ಕೆ ಓ ಹರೇತು ಅರಿವೋ ವಸುನ್ಧ
ರಿ ಭೂಮಿ ಷಷ್ಟಿವರ್ಷಸಹಸ್ರಾಣಿ ಅ
ರವತ್ತು ಸಾಸಿರವರ್ಷ ವಿಷ್ಟಾಯಾಂ ಜಾಯ
ತೆ ಕ್ರಿಮಿ ಪೇಲವಪುಳುವಾಗಿ ಪುಟ್ಟುಗೆ
(ನೋಡಿ; ಪಿಗ್ರಾಫಿಯಾ ಕರ್ನಾಟಕ ಸಂಪುಟ.೩(ಮೈಸೂರು ಜಿಲ್ಲೆ) ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿವಿ ೧೯೭೨(ಪುಟ.೩೧೭)

( ಲೇಖಕರು: ಪ್ರಾಧ್ಯಾಪಕರು, ಭಾಷಾಂತರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ-ಹಂಪಿ)

(ಈ ಲೇಖನ "ಚಿಂತನ ಬಯಲು" ಪತ್ರಿಕೆಯಲ್ಲಿ ಪ್ರಕಟವಾಗಿದೆ.

0 comments:

Post a Comment