ಕೃಪೆ: ವಿಜಯಕರ್ನಾಟಕ
ಡಾ.ಸಿ.ಎಸ್. ದ್ವಾರಕನಾಥ್ಸಮಾಜದಲ್ಲಿ ಅತ್ಯಂತ ತುಳಿತಕ್ಕೊಳಗಾದ, ನೊಂದ ಹಾಗೂ ಪ್ರಾತಿನಿಧ್ಯ ವಂಚಿತ ಸಮಾಜಗಳಿಗೆ ಜಾತಿ ಸಮೀಕ್ಷೆಯಿಂದ ಅನುಕೂಲವಾಗಲಿದೆ. ಹೀಗಾಗಿ, ಸಮಾಜದ ಎಲ್ಲ ಧರ್ಮ- ಜಾತಿ, ಉಪ ಜಾತಿಗಳನ್ನು ಗುರುತಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ಸರಕಾರಿ ವಲಯದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಕಾರ್ಪೊರೇಟ್ ವಲಯದಲ್ಲೂ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ನೀಡುವ ಅಗತ್ಯವಿದೆ. ಹೀಗಾಗಿ, ಸಾಫ್ಟ್ವೇರ್ ಕಂಪೆನಿಗಳು ಕೂಡ ಉದ್ಯೋಗದಲ್ಲಿ ಯಾವ ಯಾವ ಜಾತಿಗಳಿಗೆ ಎಷ್ಟು ಮೀಸಲಾತಿ ನೀಡಲಾಗಿದೆ ಎಂಬುದರ ಬಗ್ಗೆ ದ್ವಿತೀಯ ಮೂಲ ಮಾಹಿತಿ ನೀಡುವುದು ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಅವು ಸಂವಿಧಾನಕ್ಕೆ ಕೊಡುವ ಗೌರವವಾದರೂ ಏನು? ಇದಕ್ಕೆ ಪೂರಕವಾಗಿ ಜಾತಿವಾರು ಮಾಹಿತಿ ಇಲ್ಲದಿದ್ದರೆ ಪ್ರಾತಿನಿಧ್ಯ ಕಲ್ಪಿಸಲು ಸಾಧ್ಯವೇ ಇಲ್ಲ.
ಪ್ರಸ್ತುತ ಕಾರ್ಪೊರೇಟ್ ಕಂಪನಿಗಳಲ್ಲಿ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗಾವಕಾಶ ನೀಡುತ್ತಿಲ್ಲ. ಆದರೆ, ಅದೇ ಕಂಪನಿಯ ನೌಕರರ ವಿವಾಹ ಸಂದರ್ಭದಲ್ಲಿ ಪಾರಂಪರಿಕ ಕುಲ ವೃತ್ತಿಗಳನ್ನೆಲ್ಲಾ ನಮೂದಿಸಲಾಗುತ್ತದೆ. ಹೀಗಾಗಿ, ಹಿಂದುಳಿವಿಕೆಯನ್ನು ಗುರುತಿಸಲು ದ್ವಿತೀಯ ಮೂಲದ ಮಾಹಿತಿಯನ್ನು ಸಂಗ್ರಹಿಸಲು ಕೂಡ ಪ್ರಯತ್ನಿಸಬೇಕಾಗಿದೆ. ಇದು ಸರಕಾರದ ಮುಂದಿರುವ ಬಹುದೊಡ್ಡ ಸವಾಲು. ಜಾತಿವಾರು ಸಮೀಕ್ಷೆಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಸ್ಪಷ್ಟ ಚಿತ್ರಣ ಸಿಕ್ಕರೆ ನಿಜವಾಗಿಯೂ ಅರ್ಹ ಹಾಗೂ ಕಟ್ಟ ಕಡೆಯ ಮನುಷ್ಯನಿಗೂ ಸರಕಾರದ ಸವಲತ್ತುಗಳನ್ನು ತಲುಪಿಸಲು ಸಾಧ್ಯವಾಗಲಿದೆ.
ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಮೀಸಲಾತಿ ಪಡೆಯಲು ಸಮುದಾಯಗಳು ಜನಸಂಖ್ಯೆ ಆಧಾರದಲ್ಲಿ ಬೇಡಿಕೆ ಮುಂದಿಡುತ್ತಿವೆ. ಸಣ್ಣ ಪುಟ್ಟ ಸಮುದಾಯಗಳು ಕೂಡ ಕೋಟಿ ಕೋಟಿ ಅಂದಾಜು ಜನಸಂಖ್ಯೆ ಪ್ರಮಾಣವನ್ನು ಪ್ರಸ್ತಾಪಿಸುತ್ತಿವೆ. ಆದರೆ, ನಿರ್ದಿಷ್ಟವಾಗಿ ಆ ಸಮುದಾಯಗಳ ಬಳಿ ಸಮರ್ಥಿಸಿಕೊಳ್ಳುವ ಯಾವುದೇ ಅಂಕಿ-ಅಂಶಗಳಿಲ್ಲ. ಈ ಲೆಕ್ಕಾಚಾರದಲ್ಲಿ ನಾವು ನಮ್ಮ ರಾಜ್ಯದ ಜನಸಂಖ್ಯೆಯನ್ನು ಅಂದಾಜಿಸಿದರೆ ಬಹುಶಃ ಅದು 50 ಕೋಟಿ ದಾಟಬಹುದು. ಅದು ಎಲ್ಲಾದರೂ ಸಾಧ್ಯವೇ?
-ಲೇಖಕರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ
ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅರಿಯಲು ಸಮೀಕ್ಷೆ