15 April 2015

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಸಂದರ್ಶನ


* ರಾಜ್ಯದಲ್ಲಿ ಜಾತಿ ಗಣತಿ ನಡೆಸುವ ಅಗತ್ಯವಿತ್ತೇ?
ಸಮಾಜದಲ್ಲಿ ಮೇಲು-ಕೀಳು ಹಾಗೂ ತಾರತಮ್ಯ ಭಾವನೆ ಹೋಗಲಾಡಿಸಬೇಕಾದರೆ ಜಾತಿ ಗಣತಿ ತೀರಾ ಅತ್ಯಗತ್ಯ. ತುಳಿತಕ್ಕೊಳಗಾದ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಜಾತಿ ಸಮೀಕ್ಷೆ ಹೊರತುಪಡಿಸಿದರೆ ಅನ್ಯ ಮಾರ್ಗವೇ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸರಕಾರ ಯೋಜನೆ ರೂಪಿಸಲು ಕೂಡ ಜಾತಿ ಜನಸಂಖ್ಯೆಯ ಅಂಕಿ-ಅಂಶಗಳು ಬೇಕೇ ಬೇಕು.

* ಆಯೋಗ ಸಿದ್ಧಪಡಿಸಿರುವ ಜಾತಿಗಳ ಪಟ್ಟಿ ಬಗ್ಗೆ ಗೊಂದಲ ಏರ್ಪಟ್ಟಿದೆಯಲ್ಲಾ?
ಎಸ್‌ಸಿ/ಎಸ್‌ಟಿ ಹೊರತುಪಡಿಸಿದರೆ, ಆಯೋಗದ ಗಮನಕ್ಕೆ ಬಂದಿರುವ ಮಾಹಿತಿಯಂತೆ ಇತರ 1357 ಜಾತಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಆಯೋಗ ಸ್ವಯಂಪ್ರೇರಿತವಾಗಿ ಒಂದೇ ಒಂದು ಜಾತಿಯ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿಲ್ಲ. ಈ ಪಟ್ಟಿಯೇ ಅಂತಿಮ ಅಲ್ಲ. ಒಂದು ವೇಳೆ ಯಾವುದೇ ಜಾತಿಯ ಹೆಸರು ಪಟ್ಟಿಯಲ್ಲಿಲ್ಲದಿದ್ದರೆ ಗಣತಿದಾರರು ಮನೆ-ಮನೆ ಸಮೀಕ್ಷೆಗೆ ಆಗಮಿಸುವ ಸಂದರ್ಭದಲ್ಲಿ ಬಿಟ್ಟು ಹೋಗಿರುವ ಜಾತಿಗಳನ್ನು ನಮೂದಿಸಬಹುದು. ಈ ಬಗ್ಗೆ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಸಮೀಕ್ಷೆ ಪೂರ್ಣಗೊಂಡ ನಂತರವೇ ಜಾತಿಗಳ ಪಟ್ಟಿ ಬಗ್ಗೆ ಖಾತ್ರಿ ನೀಡಲು ಸಾಧ್ಯ.

* ಸಮೀಕ್ಷೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ಕೊಟ್ಟರೆ?
ಒಂದು ವೇಳೆ ಯಾರಾದರೂ ಸುಳ್ಳು ಮಾಹಿತಿ ಕೊಟ್ಟರೆ ಶಿಕ್ಷೆಗೆ ಅರ್ಹರು. ಜಾತಿಯನ್ನು ಸೇರಿಸುವುದಕ್ಕೆ ಯಾರಾದರೂ ಅಡ್ಡಿಪಡಿಸುವುದು ಅಥವಾ ಪ್ರಭಾವ ಬೀರುವುದು ಕೂಡ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಆಯೋಗ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ.

* ಜಾತಿ ಗಣತಿ ನಂತರ ಆಯೋಗದ ಮುಂದಿನ ಪ್ರಕ್ರಿಯೆ?
ಜಾತಿ ಗಣತಿ ನಡೆಸುವುದರಿಂದಷ್ಟೇ ಆಯೋಗದ ಕೆಲಸ ಪರಿಪೂರ್ಣವಾಗುವುದಿಲ್ಲ. ಈ ಬಗ್ಗೆ ಆಯೋಗ ತನಿಖೆ ಪ್ರಕ್ರಿಯೆ ನಡೆಸಲಿದೆ. ಒಂದು ವೇಳೆ ಯಾರಾದರೂ ಸುಳ್ಳು ಮಾಹಿತಿ ನೀಡಿದ್ದರೆ ಅಗತ್ಯ ಬಿದ್ದರೆ ಸ್ಥಳ ಪರಿಶೀಲನೆ ನಡೆಸಲಿದೆ. ಸುಳ್ಳು ಮಾಹಿತಿ ನೀಡಿದವರ ಬಗ್ಗೆ ಸಂಘ- ಸಂಸ್ಥೆಗಳು ಕೂಡ ದೂರು ಸಲ್ಲಿಸಬಹುದು. ಆಯೋಗ ತನ್ನ ಪರಮಾಧಿಕಾರ ಬಳಸಿ ತನಿಖೆಗೆ ಆದೇಶಿಸಲು ಹಿಂದೆ-ಮುಂದು ನೋಡುವುದಿಲ್ಲ. ಖಾತ್ರಿಪಡಿಸದೆ ತಹಸೀಲ್ದಾರ್ ಕೂಡ ಪ್ರಮಾಣ ಪತ್ರ ನೀಡುವುದಿಲ್ಲ.

* ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ಜಾತಿ ಗಣತಿ ನಡೆಸಲು ಸರಕಾರ ಮುತುವರ್ಜಿ ವಹಿಸಿರುವ ಬಗ್ಗೆ ಏನಂತೀರಿ?
ಇದು ಸರಕಾರದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಎತ್ತಿ ತೋರುತ್ತದೆ. ನಮ್ಮ ಜಾತಿ ಗಣತಿಯನ್ನು ಮಾದರಿಯಾಗಿಟ್ಟುಕೊಂಡು ಸಮೀಕ್ಷೆ ನಡೆಸಲು ಇತರ ರಾಜ್ಯಗಳು ಕೂಡ ಕಾಯುತ್ತಿವೆ. ತೆಲಂಗಾಣದಲ್ಲಿ ಒಂದು ದಿನದ ಮಟ್ಟಿಗೆ ನಡೆದ ಗಣತಿ ಸಂದರ್ಭದಲ್ಲಿ ಜಾತಿಯನ್ನೂ ಸೇರಿಸಲಾಗಿದೆ. ಆದರೆ, ಇಷ್ಟೊಂದು ವಿಸ್ತೃತ ಪ್ರಮಾಣದ ಸಮೀಕ್ಷೆ ಎಲ್ಲೂ ನಡೆದಿಲ್ಲ.

0 comments:

Post a Comment