15 April 2015

 ಚಂದ್ರಪೂಜಾರಿ ಎಂ.


ಕರ್ನಾಟಕ ಸರಕಾರದ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಸರಕಾರದ ಪ್ರಕಾರ ಇದು ಸುಪ್ರೀಂಕೋರ್ಟ್ ಆದೇಶದ ಪಾಲನೆ. ಇದುವರೆಗೆ ಬಲಾಢ್ಯರು, ರಾಜಕೀಯ ಪ್ರಭಾವವುಳ್ಳವರು ಮಾತ್ರ ಸವಲತ್ತು, ಸ್ಥಾನಮಾನಗಳನ್ನು ಪಡೆಯುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಲು ಜಾತಿ ಸಮೀಕ್ಷೆ ಅನಿವಾರ‌್ಯ ಎನ್ನುವುದು ಸಮೀಕ್ಷೆಯನ್ನು ಬೆಂಬಲಿಸುವವರ ನಿಲುವು. ಸಮೀಕ್ಷೆಯನ್ನು ವಿರೋಧಿಸುವವರ ಪ್ರಕಾರ ಈ ಸಮೀಕ್ಷೆ ಜಾತಿ ಪ್ರಜ್ಞೆಯನ್ನು ಜೀವಂತ ಇರಿಸಬಹುದು. ಕೆಲವು ದಶಕಗಳ ಆಧುನೀಕರಣ ಪ್ರಕ್ರಿಯೆಂದಲೋ ಅಥವಾ ರಾಜಕೀಯದಿಂದಲೋ ಉಪಜಾತಿಗಳ ನಡುವೆ ಮತ್ತು ಜಾತಿಗಳ ನಡುವೆ ಹೊಂದಾಣಿಕೆ ಸಾಧ್ಯವಾಗಿದೆ. ಈ ಸಮೀಕ್ಷೆಯಿಂದ ಇಂತಹ ಹೊಂದಾಣಿಕೆ ಕಾಣೆಯಾಗಿ ಉಪಜಾತಿಗಳ ನಡುವೆ ಮತ್ತು ಜಾತಿ ಜಾತಿಗಳ ನಡುನ ಬಿರುಕು ಹೆಚ್ಚಾಗಬಹುದೆನ್ನುವುದು ವಿರೋಧಿಸುವವರ ವಾದ. ಈ ಪರ ವಿರೋಧಗಳನ್ನು ಮುಖಬೆಲೆಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಇಂದಿನ ಅಭಿವೃದ್ಧಿ ರಾಜಕೀಯಗಳ ಹಿನ್ನೆಲೆಯಲ್ಲಿ ಈ ವಾದಗಳನ್ನು ವಿಶ್ಲೇಷಿಸಬೇಕಾಗಿದೆ.

ಮೊದಲಿಗೆ ವಿವಿರೋಧಿಸುವವರ ವಾದವನ್ನು ಪರಿಶೀಲಿಸುವ. ಅವರ ಪ್ರಕಾರ ಜಾತಿ ಸಮೀಕ್ಷೆ ಜಾತಿಗಳ ಮತ್ತು ಉಪಜಾತಿಗಳ ನಡುವೆ ಒಡಕನ್ನುಂಟುಮಾಡಬಹುದು. ಜಾತಿ ಸಮೀಕ್ಷೆಯನ್ನು ವಿರೋಧಿಸುವವರ ಈ ವಾದ ಮಹಿಳೆಯರ ಅತ್ಯಾಚಾರಕ್ಕೆ ಅವರ ಉಡುಗೆತೊಡುಗೆಗಳೇ ಕಾರಣ ಎನ್ನುವಷ್ಟು ಬಾಲಿಶವಾಗಿದೆ. ಎರಡೂ ಕಡೆ - ಮಹಿಳಾ ಅತ್ಯಾಚಾರ ಹಾಗು ಜಾತಿ (ಧರ್ಮ)ಗಳ ನಡುವೆ ಒಡಕ್ಕನ್ನು ಸೃಷ್ಟಿಸುವವರಲ್ಲಿ ಬಲಾಢ್ಯರ ಪಾತ್ರವೇ ಹೆಚ್ಚಿದೆ. ಅಧಿಕಾರ ಹಾಗು ಸಂಪನ್ಮೂಲಗಳ ಒಡೆತನ ಇವರಿಗೆ ಇಂತಹ ಕ್ರಿಮಿನಲ್ ಕೆಲಸಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕೊಡುತ್ತಿವೆ. ಇಂತಹ ಬಲಾಢ್ಯರ ರಾಜಕೀಯದ ಮೇಲೆ ಜಾತಿ ಸಮೀಕ್ಷೆ ಅದರಲ್ಲೂ ಉಪಜಾತಿಗಳ ಅಂಕಿಅಂಶಗಳು ಯಾವ ಪರಿಣಾಮ ಬೀರಬಹುದೆಂದು ಈಗಲೇ ಹೇಳುವುದು ಕಷ್ಟ. ಇಂದು ಪ್ರತಿ ಜಾತಿ ಹಾಗೂ ಉಪಜಾತಿಗಳಲ್ಲಿರುವ ಬಡವರು, ಮಧ್ಯಮ ವರ್ಗ ಹಾಗು ಶ್ರೀಮಂತರ ಬಗ್ಗೆ ಮಾಹಿತಿ ಇಲ್ಲ. ವಿವಿಧ ಜಾತಿ, ಉಪಜಾತಿಯ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ನಿರ್ದಿಷ್ಟ ಜಾತಿಗೆ ಸೇರಿದ ನಾವೆಲ್ಲ ಒಂದೇ ಎಂದು ಒಪ್ಪಿಸುವುದು ಆಯಾಯ ಜಾತಿ ನಾಯಕರಿಗೆ ಸುಲಭವಾಗಿದೆ. ಮಾಹಿತಿ ಕೊರತೆಯಿಂದ ಸಾಧ್ಯವಾದ ಈ ಒಗ್ಗಟ್ಟಿನ ಲಾಭವನ್ನು ಆಯಾಯ ಜಾತಿಯ ಅನುಕೂಲಸ್ಥರು ಪಡೆಯುತ್ತಿದ್ದಾರೆ.

ಈ ಸಮೀಕ್ಷೆ ವಿವಿಧ ಜಾತಿ ಉಪಜಾತಿಗಳಲ್ಲಿರುವ ಕುಟುಂಬಗಳ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಅಂಕಿಅಂಶಗಳನ್ನು ಸೃಷ್ಟಿಸುತ್ತದೆ. ಇವನ್ನು ಬಳಸಿಕೊಂಡು ಪ್ರತಿ ಜಾತಿಯಲ್ಲಿರುವ ಬಡ, ಮಧ್ಯಮ ಹಾಗು ಶ್ರೀಮಂತ ಕುಟುಂಬಗಳನ್ನು ಗುರುತಿಸಬಹುದು. ಈ ಅಂಕಿಅಂಶಗಳನ್ನು ಪ್ರಗತಿಪರ ರಾಜಕೀಯಕ್ಕು ಬಳಸಬಹುದು ಅಥವಾ ಇಂದು ಚಾಲ್ತಿಯಲ್ಲಿರುವ ಗುರುತಿನ (ಐಡೆಂಟಿಟಿ) ರಾಜಕೀಯವನ್ನು ಮುಂದುವರಿಸಲೂ ಬಳಸಬಹುದು. ಸಮೀಕ್ಷೆ ಸೃಷ್ಟಿಸುವ ಅಂಕಿಅಂಶಗಳನ್ನು ಬಳಸಿಕೊಂಡು ಎಲ್ಲ ಜಾತಿಗಳಲ್ಲಿರುವ ಬಡವರ ಸಮಸ್ಯೆಗಳು ಒಂದೇ ಮತ್ತು ಇದರ ಪರಿಹಾರಕ್ಕೆ ಇವರೆಲ್ಲ ಸಂಘಟಿತರಾಗಿ ವ್ಯವಹರಿಸುವುದು ಬಿಟ್ಟರೆ ಬೇರೆ ದಾರಿ ಎಲ್ಲ ಎನ್ನುವ ಪ್ರಜ್ಞೆ ಮೂಡಿಸಲು ಸಾಧ್ಯವಾದರೆ ಈ ಸಮೀಕ್ಷೆ ಪ್ರಗತಿಪರ ರಾಜಕೀಯಕ್ಕೆ ಎಡೆಮಾಡಿಕೊಡಬಹುದು. ಇಲ್ಲವಾದರೆ ಈಗ ಚಾಲ್ತಿಯಲ್ಲಿರುವ ಗುರುತಿನ ರಾಜಕೀಯ ಇನ್ನೂ ವಿಸ್ತೃತ ರೂಪದಲ್ಲಿ ಮುಂದವರಿಯಬಹುದು. ಅಂದರೆ ಉಪಜಾತಿಗಳ ಬಲಾಢ್ಯರು ಪ್ರತ್ಯೇಕ ಸ್ಥಾನಮಾನ, ಸವಲತ್ತುಗಳನ್ನು ಕೇಳಬಹುದು.

ಬಡತನ ನಿವಾರಣೆ ನೀತಿ ಪಲ್ಲಟವಾಗುವುದೇ?
ಜಾತಿ ಸಮೀಕ್ಷೆಯ ಫಲಿತ ಬಂದ ನಂತರ ಬಡಜನರ ಬದುಕು ಗುಣಾತ್ಮಕವಾಗಿ ಬದಲಾಗಬಹುದೆನ್ನುವ ನಂಬಿಕೆಯನ್ನು ಸರಕಾರ ಸೃಷ್ಟಿಸುತ್ತಿದೆ. ಆದರೆ ತೊಂಬತ್ತರದ ನಂತರ ಸರಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಈ ನಂಬಿಕೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ದೊಡ್ಡ ತೊಡಕಾಗಿವೆ. ಬಡತನದ ಸೃಷ್ಟಿಯಲ್ಲಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ತೊಂಬತ್ತರ ನಂತರದ ಅಭಿವೃದ್ಧಿ ನೀತಿಗಳು ಬಿಂಬಿಸುತ್ತಿವೆ. ಅಂದರೆ ಕಷ್ಟಪಟ್ಟು ದುಡಿಯದಿರುವುದು, ದುಡಿದು ಗಳಿಸಿದ್ದನ್ನು ನಾಳೆಗೆ ಉಳಿಸದಿರುವುದು, ದುಂದು ವೆಚ್ಚ, ದುಶ್ಚಟಗಳು ಇವೆಲ್ಲ ಬಡತನಕ್ಕೆ ಕಾರಣವೆಂದು ಗ್ರಹಿಸಲಾಗಿದೆ. ಆದುದರಿಂದ ಇಂದಿನ ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಉಚಿತ ಶಿಕ್ಷಣ, ಆರೋಗ್ಯ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಿಲ್ಲ. ಇವುಗಳ ಜಾಗದಲ್ಲಿ ಇಂದು ಕಡಿಮೆ ಬೆಲೆಗೆ ಅಕ್ಕಿ ನೀಡುವುದು, ಅಕ್ಕಿ ಬೇಯಿಸಲು ಗ್ಯಾಸ್ ನೀಡುವುದು, ಕನಿಷ್ಠ ಕೆಲವು ದಿನಗಳ ಉದ್ಯೋಗ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮುಂತಾದ ಕಾರ್ಯಕ್ರಮಗಳು ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಡಬಹುದು.

ವಾಸ್ತವದಲ್ಲಿ ಬಡತನಕ್ಕೆ ಒಟ್ಟು ಪರಿಸರದ (ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗು ಸಾಂಸ್ಕೃತಿಕ ಪರಿಸರಗಳ) ಪಾತ್ರ ದೊಡ್ಡದಿದೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ ತಂದು ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡಲು ಸಾಧ್ಯವಿಲ್ಲದ ಸ್ಥಿತಿಯನ್ನು ಸರಕಾರಗಳು ನಿರ್ಮಿಸುತ್ತಿವೆ. ಬಡವರಿಂದಲೂ ದೊಡ್ಡ ಮೊತ್ತದ ಸಂಪನ್ಮೂಲವನ್ನು ಸಂಗ್ರಸುವ ತೆರಿಗೆ ನೀತಿಯನ್ನು ಸರಕಾರವೇ ತರುತ್ತಿದೆ. ಇಂತಹ ಸರಕಾರಗಳನ್ನು ಮತ್ತು ಜನಪ್ರತಿನಿಧಿಗಳನ್ನು ಬಡಜನರೇ ಚುನಾಯಿಸುತ್ತಾರೆ.

ಇಡೀ ಚುನಾವಣಾ ರಾಜಕೀಯ ಜಾತಿ, ಧರ್ಮ, ದುಡ್ಡು, ಬಡತನವನ್ನು ಉಂಟುಮಾಡುವ ಅಭಿವೃದ್ಧಿ ಮುಂತಾದವುಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಮೂರು ಹೊತ್ತಿನ ಊಟಕ್ಕೆ ಪರದಾಡುವವರಿಗೆ ಐದು ಹತ್ತು ವರ್ಷಗಳ ನಂತರ ಸಿಗುವ ಒಂದರೆಡು ಎಕರೆ ಭೂಮಿ ಅಥವಾ ಬಂಡವಾಳ ಅಥವಾ ಉಚಿತ ಶಿಕ್ಷಣ, ಆರೋಗ್ಯಗಳ ಭರವಸೆಗಳಿಗಿಂತ ಇಂದು ಸಿಗುವ ಕೆಲವು ಸಾವಿರ ರೂಪಾಯಿಗಳು, ಕಡಿಮೆ ಬೆಲೆ ಅಕ್ಕಿ, ಗ್ಯಾಸ್, ಸೈಕಲ್ ಮುಂತಾದವುಗಳು ಮುಖ್ಯವಾಗುತ್ತವೆ.

ಈ ಬಗೆಯ ಅಭಿವೃದ್ಧಿ ರಾಜಕೀಯ ಚಾರಿತ್ರಿಕವಾಗಿ ನಮ್ಮೊಂದಿಗಿರುವ ಅಸಮಾನತೆಗಳನ್ನು ಅಲ್ಪಸ್ವಲ್ಪ ಬದಲಾಣೆಯೊಂದಿಗೆ ಮುಂದುವರಿಸುತ್ತಿದೆ. ಇಂತಹ ರಾಜಕೀಯದಿಂದ ಹುಟ್ಟುವ ಸರಕಾರಗಳು ಜಾತಿ ಸಮೀಕ್ಷೆಯಿಂದ ಬರುವ ಅಂಕಿಅಂಶಗಳನ್ನು ಹೇಗೆ ಬಳಸಿಕೊಳ್ಳಬಹುದೆನ್ನುವುದು ಓದುಗರ ಊಹೆಗೆ ಬಿಟ್ಟ ವಿಚಾರ.

0 comments:

Post a Comment