ಕೃಪೆ: ವಿಜಯಕರ್ನಾಟಕ
ಶಿವರಾಮ್ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮಹಾತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರಕಾರ ಸ್ವಾತಂತ್ರ್ಯಾನಂತರ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿರುವ ಜಾತಿ ಗಣತಿಯನ್ನು ಏಪ್ರಿಲ್ 11ರಿಂದ 30ರವರೆಗೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ನಡೆಸಿದೆ.
ಇದನ್ನು ಜಾತಿ ಗಣತಿ ಅನ್ನುವುದಕ್ಕಿಂತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂದು ಆಯೋಗ ವ್ಯಾಖ್ಯಾನಿಸುತ್ತಿದೆ. ಜಾತಿ ಜನಗಣತಿ ಅದರಲ್ಲಿನ ಒಂದು ಅಂಶ ಎಂದು ಪ್ರತಿಪಾದಿಸುತ್ತಿದೆ. ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅರಿಯುವ ಮೂಲಕ ನೊಂದ ಹಾಗೂ ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಆ ವರ್ಗಗಳನ್ನು ತರುವುದು ಈ ಸಮೀಕ್ಷೆಯ ಹಿಂದಿನ ಉದ್ದೇಶ.
ಸಮೀಕ್ಷೆಯ ಅಗತ್ಯವೇನು?
ರಾಜ್ಯ ಸರಕಾರ ಸುಪ್ರೀಂಕೋರ್ಟ್ನ ಆದೇಶಕ್ಕೆ ಅನುಗುಣವಾಗಿ ಈ ಸಮೀಕ್ಷೆ ಕೈಗೆತ್ತಿಕೊಂಡಿದೆ. ಯಾವುದೇ ಜಾತಿ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಉದ್ಯೋಗ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕಾದರೆ ಅಂಕಿ-ಅಂಶಗಳು ಬಹಳ ಮುಖ್ಯ. ಉದಾಹರಣೆಗೆ ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಸರಕಾರ ಕಾಲ್ಪನಿಕ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡುತ್ತಿದೆ. ಇದರಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲು ಪ್ರಕಟಿಸುವ ಸಂದರ್ಭದಲ್ಲೆಲ್ಲಾ ಅನ್ಯಾಯವಾಗಿದೆ ಎಂದು ಆರೋಪಿಸಿ ಅನೇಕರು ನ್ಯಾಯಾಲಯದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇದಲ್ಲದೆ, ಜಾತಿವಾರು ಅಂಕಿ-ಅಂಶಗಳ ಮಾಹಿತಿ ಇಲ್ಲದೆ ಮೀಸಲು ಸೌಲಭ್ಯಗಳನ್ನು ಸರಕಾರ ಹೇಗೆ ಜಾರಿ ಮಾಡುತ್ತದೆ ಎಂದು ಕೋರ್ಟ್ಗಳು ಪ್ರಶ್ನಿಸುತ್ತಿವೆ.
ಇನ್ನು, ಪ್ರಾತಿನಿಧ್ಯ ಪಡೆಯಲು ಪ್ರಬಲ ಜಾತಿಗಳು ದುಪ್ಪಟ್ಟು ಜನಸಂಖ್ಯೆ ಲೆಕ್ಕ ತೋರಿಸುತ್ತಿದ್ದರೂ ಅದಕ್ಕೆ ನಿಖರ ದಾಖಲೆ ಅಥವಾ ಅಂಕಿ-ಅಂಶಗಳಿಲ್ಲ. ಇದುವರೆಗೆ ಮನೆ-ಮನೆಗೆ ತೆರಳಿ ಜಾತಿವಾರು ಮಾಹಿತಿ ಸಂಗ್ರಹಿಸುವ ಸಮೀಕ್ಷೆಯೇ ನಡೆದಿಲ್ಲ. ಈ ಉದ್ದೇಶದಿಂದ ರಾಜ್ಯ ಸರಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡುತ್ತಿದೆ. ಜಾತಿರಹಿತ ಸಮಾಜ ನಿರ್ಮಾಣವಾಗಬೇಕು ಎಂದು ದೇಶದ ಸರ್ವೋಚ್ಛ ನ್ಯಾಯಾಲಯವೇ ಪ್ರತಿಪಾದಿಸಿದೆ. ಆದರೆ, ವಾಸ್ತವವಾಗಿ ನಡೆಯುತ್ತಿರುವುದೇ ಬೇರೆ. ಸಮಾಜದಲ್ಲಿ ಎಲ್ಲವನ್ನೂ ಜಾತಿ ಆಧಾರದ ಮೇಲೆಯೇ ನಿರ್ಧರಿಸಲಾಗುತ್ತಿದೆ. ಬೇರೆ ಸ್ಥಿತಿಗತಿ ಇಲ್ಲಿ ಗೌಣವಾಗಿವೆ. ಕೆಲ ಪ್ರಬಲ ಜಾತಿಗಳೇ ಉಪ ಜಾತಿಗಳ ಲಾಭವನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಜಾತಿ-ಜಾತಿಗಳ ನಡುವಿನ ತಾರತಮ್ಯ ಹಾಗೇ ಮುಂದುವರಿದಿದೆ. ನೊಂದ, ವಂಚಿತ ಸಮುದಾಯಗಳ ಸ್ಥಿತಿ ಮೊದಲು ಹೇಗಿತ್ತೋ ಈಗಲೂ ಅದಕ್ಕಿಂತ ಭಿನ್ನವಾಗೇನಿಲ್ಲ. ಇದರಿಂದ ಎಲ್ಲ ಜಾತಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ದಾಖಲು ಮಾಡುವುದರ ಜತೆಗೆ, ಆ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿ ಅರಿಯುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶ ಎನ್ನುವುದು ಸರಕಾರದ ಸಮರ್ಥನೆ.
ಇಂದಿರಾ ಸಹಾನಿ ಪ್ರಕರಣ ಆಧರಿಸಿ 1992ರ ನವೆಂಬರ್ 16ಂದು ತೀರ್ಪು ನೀಡಿದ ಸುಪ್ರೀಂಕೋರ್ಟ್, ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆಗಳು ನಡೆಯಬೇಕು ಹಾಗೂ ಅದರಲ್ಲಿ ಜಾತಿ ಅಂಕಿ-ಅಂಶಗಳು ಅಡಕವಾಗಿರಬೇಕು ಎಂದು ಹೇಳಿತ್ತು. ಅಲ್ಲದೆ, ಹಿಂದುಳಿದವರನ್ನು ಗುರುತಿಸಲು ಜಾತಿ ಒಂದೇ ಅಂಶ ಅಲ್ಲ, ಅವರ ಸ್ಥಿತಿಗತಿಯನ್ನೂ ದಾಖಲು ಮಾಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುವುದನ್ನು ಆಯೋಗ ಉಲ್ಲೇಖಿಸುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ನಡೆದಿತ್ತು ಜಾತಿ ಗಣತಿ
ಬ್ರಿಟೀಷರ ಕಾಲದಲ್ಲಿ ಆಗಿನ ಜನಗಣತಿ ಆಯುಕ್ತ ಡಬ್ಲ್ಯು.ಸಿ. ಪೌಡೆನ್ ಜನಗಣತಿ ಸಂದರ್ಭದಲ್ಲಿ ಜಾತಿ ಸಮೀಕ್ಷೆ ನಡೆಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ 1881ರಿಂದ 1931ರವರೆಗೆ ಜನಗಣತಿ ಸಂದರ್ಭದಲ್ಲಿ ಜಾತಿ ಸಮೀಕ್ಷೆಯನ್ನೂ ನಡೆಸಲಾಗಿತ್ತು. ಆದರೆ, 1941ರಲ್ಲಿ ನಡೆದ ಗಣತಿ ಸಮಯದಲ್ಲಿ ಜಾತಿ ಕಾಲಂ ಕೈಬಿಡಲಾಯಿತು. ಅಲ್ಲಿಂದ ಇದುವರೆಗೆ ಜಾತಿ ಕುರಿತು ಸಮೀಕ್ಷೆಯೇ ನಡೆದಿಲ್ಲ. ಅಲ್ಲದೆ, ಯಾವುದೇ ಜಾತಿ ಜನಸಂಖ್ಯೆಗೆ ಸಂಬಂಧಿಸಿದ ನಿರ್ದಿಷ್ಟ ಅಂಕಿ-ಅಂಶಗಳು ದಾಖಲಾಗಿಲ್ಲ. ಹೀಗಾಗಿ, 1931ರಲ್ಲಿ ನಡೆದ ಜಾತಿ ಆಧಾರಿತ ಗಣತಿಯೇ ಕೊನೇ ಎನ್ನಬಹುದು.
ಈ ಕಾರಣದಿಂದಲೇ ಜಾತಿ ಆಧಾರಿತ ಮೀಸಲು ಹಾಗೂ ಜಾತಿ ಪಟ್ಟಿಗಳು ಅವೈಜ್ಞಾನಿಕ ಎಂದು ಮಾನವ ಶಾಸ್ತ್ರಜ್ಞರು ವಾದಿಸಿದರೆ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಯಾವುದೇ ಮೊಕದ್ದಮೆಗಳು ವಿಚಾರಣೆಗೆ ಬಂದ ಸಮಯದಲ್ಲೆಲ್ಲಾ ಸುಪ್ರೀಂಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ಗಳು ತೀವ್ರ ತಕರಾರು ತೆಗೆಯುತ್ತಿವೆ. ಹಿಂದುಳಿದ ವರ್ಗಗಳ ಗಣತಿಯನ್ನು ಸಮರ್ಥಿಸಿಕೊಳ್ಳಲು ಸರಕಾರಗಳು ಇದುವರೆಗೆ ಕೋರ್ಟ್ಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಿಲ್ಲ.
ಇದನ್ನು ಮನಗಂಡ ಕೇಂದ್ರ ಯುಪಿಎ ಮೈತ್ರಿಕೂಟ ಸರಕಾರ 2005ರಲ್ಲಿ ಜಾತಿವಾರು ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಿತು. ಪ್ರಾಯೋಗಿಕವಾಗಿ ಕರ್ನಾಟಕ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿತು. ಈ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ 21.05 ಕೋಟಿ ರೂ. ಹಣ ಬಿಡುಗಡೆ ಮಾಡಿತು. ಅಂದಿನ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಯೋಗಕ್ಕೆ ಒಂದು ಕೋಟಿ ರೂ. ಒದಗಿಸಿದ್ದರು. ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೇ ಮತ್ತೆ 170ರಿಂದ 175 ಕೋಟಿ ರೂ. ಅನುದಾನ ಒದಗಿಸಿ ಜಾತಿ ಗಣತಿ ನಡೆಸಲು ಚಾಲನೆ ನೀಡಿದ್ದಾರೆ.
ಕರ್ನಾಟಕವೇ ಏಕೆ ಆಯ್ಕೆ?
ಜಾತಿವಾರು ಸಮೀಕ್ಷೆಯನ್ನು ಮೊದಲು ಕರ್ನಾಟಕದಲ್ಲೇ ಏಕೆ ಪ್ರಾರಂಭಿಸಲು ಕೇಂದ್ರದ ಯುಪಿಎ ಸರಕಾರ ತೀರ್ಮಾನ ಮಾಡಿತು ಎಂದು ಅನೇಕರು ಮುಂದಿಡುವ ಪ್ರಶ್ನೆ. ಆದರೆ, ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಚಿಸಿದಷ್ಟು ಆಯೋಗಗಳನ್ನು ಬೇರೆ ಯಾವುದೇ ರಾಜ್ಯ ಸರಕಾರಗಳು ರಚಿಸಿದಂತಿಲ್ಲ. ಮೈಸೂರು ಮಹಾರಾಜರ ಕಾಲದಿಂದ ಹಿಡಿದು ಈಗಿನ ಸರಕಾರದವರೆಗೂ ಅನೇಕ ಆಯೋಗಗಳು ರಚನೆಯಾಗುತ್ತಲೇ ಇವೆ. ಈಗಾಗಲೇ ನ್ಯಾ.ಎಲ್.ಸಿ. ಮುಲ್ಲರ್ ಸಮಿತಿ, ಡಾ.ಆರ್. ನಾಗನಗೌಡ ಸಮಿತಿ, ನ್ಯಾ. ಎಲ್.ಜಿ. ಹಾವನೂರು ಆಯೋಗ, ಟಿ. ವೆಂಕಟಸ್ವಾಮಿ ಆಯೋಗ ಹಾಗೂ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದವರ ಮೀಸಲಾತಿಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸಿವೆ. ಈ ಕಾರಣದಿಂದಲೇ ಕೇಂದ್ರ ಸರಕಾರ ಕರ್ನಾಟಕವನ್ನು ಜಾತಿ ಗಣತಿಗೆ ಆಯ್ಕೆ ಮಾಡಿಕೊಂಡಿತು. ಇಲ್ಲಿ ನಡೆಯುವ ಜಾತಿ ಗಣತಿಯ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ, ನಂತರ ದೇಶದ ಇತರೆಡೆ ಜಾತಿ ಗಣತಿ ನಡೆಸಲು ಕೇಂದ್ರ ಸರಕಾರ ಉದ್ದೇಶಿಸಿದೆ.
ಜಾತಿ ಗಣತಿ ಪ್ರಕ್ರಿಯೆ ಹೇಗೆ?
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಟ್ಟು 55 ಪ್ರಶ್ನೆಗಳನ್ನು ಜನರ ಮುಂದಿಡಲಾಗುತ್ತದೆ. ಜನರು ತಮ್ಮ ಧರ್ಮ, ಜಾತಿ, ಉಪ ಜಾತಿಗಳನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. 2011ರ ಜನಗಣತಿ ಪ್ರಕಾರ, ರಾಜ್ಯದ ಜನಸಂಖ್ಯೆ 6.11 ಕೋಟಿಯಷ್ಟಿತ್ತು. ಪ್ರಸ್ತುತ ಈ ಪ್ರಮಾಣ 6.35ರಿಂದ 6.40 ಕೋಟಿಗೆ ಏರಿರಬಹುದು ಎಂದು ಅಂದಾಜಿಸಲಾಗಿದೆ. ಪ್ರತಿಯೊಂದು ಮನೆ-ಮನೆ ಸಮೀಕ್ಷೆ ನಡೆಸುವ ಮೂಲಕ ಅಂಕಿ-ಅಂಶಗಳನ್ನು ದಾಖಲಿಸಲಾಗುತ್ತದೆ. ಇದೇ ಪ್ರಥಮ ಬಾರಿಗೆ ಮನೆ ಇಲ್ಲದ ಅಲೆಮಾರಿಗಳು ಹಾಗೂ ಅರೆ ಅಲೆಮಾರಿಗಳ ಸಮೀಕ್ಷೆ ಕೂಡ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಗಂಡು ಹಾಗೂ ಹೆಣ್ಣಿನ ಜತೆಗೆ, ತೃತೀಯ ಲಿಂಗ ಕಾಲಂ ಅನ್ನು ಹೊಸದಾಗಿ ಸೇರಿಸಲಾಗಿದೆ.
1.25 ಕೋಟಿ ಮನೆಗಳು, 1.26 ಲಕ್ಷ ಗಣತಿದಾರರು
ರಾಜ್ಯದಲ್ಲಿ 1.25 ಕೋಟಿ ಮನೆಗಳಿವೆ. ಒಂದು ಮನೆಗೆ ಐವರು ಸದಸ್ಯರಿರಬಹುದೆಂದು ಅಂದಾಜಿಸಿರುವ ಆಯೋಗ, ಸಮೀಕ್ಷೆಗಾಗಿ 1.26 ಲಕ್ಷ ಗಣತಿದಾರರನ್ನು ಬಳಸಿಕೊಳ್ಳುತ್ತಿದೆ. ಉತ್ತದಾಯಿತ್ವದ ಉದ್ದೇಶದಿಂದ ಸಮೀಕ್ಷೆಗೆ ಸರಕಾರಿ ನೌಕರರನ್ನೇ ಬಳಸಿಕೊಳ್ಳಲು ಆಯೋಗ ನಿರ್ಧರಿಸಿದೆ. ಯಾವುದೇ ಲೋಪದೋಷ ಅಥವಾ ತಪ್ಪುಗಳಾದಲ್ಲಿ ಸರಕಾರಿ ನೌಕರರನ್ನು ಸರಕಾರ ಹೊಣೆ ಮಾಡಬಹುದು ಎಂಬುದು ಆಯೋಗ ಉದ್ದೇಶ. ಪ್ರತಿ ಜಾತಿಗೂ ಒಂದೊಂದು 'ಕೋಡ್' ನೀಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದ ಗಣತಿದಾರರು ಪಟ್ಟಿಯಲ್ಲಿ ಜಾತಿ ಹೆಸರನ್ನು ಬರೆಯುವ ಬದಲು ಕೋಡ್ ಸಂಖ್ಯೆ ನಮೂದಿಸಿದರೆ ಸಾಕು. ಇದರಿಂದ ಜಾತಿ ನಮೂದಿಸುವಾಗ ಅಪಭ್ರಂಶವಾಗುವುದನ್ನು ತಪ್ಪಿಸಬಹುದು ಎನ್ನುವುದು ಆಯೋಗ ವಿವರಣೆ.
ವಾರದ ಮೊದಲೇ ಪ್ರಚಾರ
ಯಾವುದೇ ಊರು/ ವಾರ್ಡ್ನಲ್ಲಿ ಸಮೀಕ್ಷೆ ಕೈಗೊಳ್ಳುವ ವಾರದ ಮುನ್ನವೇ ಅಲ್ಲಿ ಪ್ರಚಾರ ನಡೆಸಲಾಗುತ್ತದೆ. ಇದರಿಂದ ಉದ್ಯೋಗ ಅಥವಾ ಅನ್ಯ ಕಾರ್ಯಗಳ ನಿಮಿತ್ತ ಹೊರಗಿರುವವರು ಊರಿಗೆ ವಾಪಸು ಬಂದು ಮಾಹಿತಿ ನೀಡಲು ಅನುಕೂಲವಾಗಲಿದೆ. ಸಮೀಕ್ಷೆಗೂ ಮುನ್ನ ವಿದ್ಯುನ್ಮಾನ, ಮುದ್ರಣ, ಸಿನಿಮಾ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಲು ಆಯೋಗ ಉದ್ದೇಶಿಸಿದೆ. ಅಲ್ಲದೆ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ನಡೆಸುವುದರ ಜತೆಗೆ, ಬ್ಯಾನರ್, ಹೋರ್ಡಿಂಗ್ಸ್ಗಳ ಮೂಲಕವೂ ಪ್ರಚಾರ ನೀಡಲಿದೆ. ಇದಲ್ಲದೆ, ಸಂಘ- ಸಂಸ್ಥೆಗಳು, ಜಾತಿ ಸಂಘಟನೆಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ. ಪ್ರತಿ ಊರಿಗೆ ಪ್ರಚಾರದ ವಾಹನಗಳು ಕೂಡ ತೆರಳಲಿವೆ.
1357 ಜಾತಿಗಳ ಪಟ್ಟಿ
ಹಿಂದುಳಿದ ವರ್ಗಗಳ ಆಯೋಗ 1,357 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಪರಿಶಿಷ್ಟ ಜಾತಿಯ 101 ಹಾಗೂ ಪರಿಶಿಷ್ಟ ಪಂಗಡಗಳ 50 ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿದೆ. ಕೇಂದ್ರ ಸರಕಾರದ ಆದೇಶದನ್ವಯ ಎಸ್ಸಿ-ಎಸ್ಟಿ ಪಟ್ಟಿಯನ್ನು ಬದಲಿಸದೆ ಯಥಾಸ್ಥಿತಿ ಹಾಗೇ ಮುಂದುವರಿಸಲಾಗಿದೆ.
ಸಮೀಕ್ಷೆಗೆ ಖರ್ಚೆಷ್ಟು?
ರಾಜ್ಯ ಸರಕಾರ ಪ್ರಾರಂಭದಲ್ಲಿ ಜಾತಿ ಗಣತಿಗೆ 117 ಕೋಟಿ ರೂ. ಖರ್ಚಾಗಬಹುದೆಂದು ಭಾವಿಸಿತ್ತು. ಆದರೆ, ಅಷ್ಟು ಹಣ ಸಾಕಾಗುವುದಿಲ್ಲ ಎಂಬುದನ್ನು ಅರಿತು ಇದೀಗ ಮೊತ್ತವನ್ನು ಪರಿಷ್ಕರಿಸಿ, 170ರಿಂದ 175 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದೆ.
ಸರ್ವ ಸಮುದಾಯದ ಪ್ರಾತಿನಿಧ್ಯಕ್ಕಾಗಿ ಸರ್ವೆ