ಕೃಪೆ: ವಿಜಯಕರ್ನಾಟಕ
ಡಾ. ಟಿ ಎಲ್ ಪ್ರವೀಣಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾಗಿ ಅರವತ್ತಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೆ ಐರೋಪ್ಯರ ಆಳ್ವಿಕೆಯಿಂದ ಸ್ವತಂತ್ರವಾದರೂ ಅವರ ಚಿಂತನೆಯ ದಾಸ್ಯದಿಂದ ನಾವಿನ್ನೂ ಸ್ವತಂತ್ರರಾಗಿಲ್ಲ. ವಸಾಹತು ಪ್ರಜ್ಞೆಯು ನಮ್ಮೆಲ್ಲರನ್ನೂ ಈಗಲೂ ಐರೋಪ್ಯರ ದಾಸ್ಯದಲ್ಲಿಯೇ ಬಂಧಿಸಿಟ್ಟಿದೆ ಎಂದು ಈ ಕೃತಿಯು ಪ್ರತಿಪಾದಿಸುತ್ತದೆ. ನಾವು ತೀರಾ ಸಹಜವೆಂಬಂತೆ ಒಪ್ಪಿರುವ "ಸತ್ಯ" ಗಳನ್ನು ಪ್ರಶ್ನಿಸಿ ಆ ಬೌದ್ಧಿಕ ದಾಸ್ಯದ ಸ್ವರೂಪ ಹೇಗಿದೆ? ಅದು ನಮ್ಮ ದಿನನಿತ್ಯದ ಸಮಸ್ಯೆಗಳಾಗಿ ವಿಭಿನ್ನ ರೂಪಗಳಲ್ಲಿ ಹೇಗೆ ಪ್ರವೇಶ ಪಡೆಯುತ್ತದೆ? ಅದರಿಂದಾಗುತ್ತಿರುವ ಅನಾಹುತಗಳೇನು? ಎಂಬುದನ್ನು ಕೃತಿಯಲ್ಲಿನ ಒಂದೊಂದು ಲೇಖನವೂ ವಿಭಿನ್ನ ಸಮಸ್ಯೆಯನ್ನು ಎತ್ತಿಕೊಂಡು ಎಳೆಎಳೆಯಾಗಿ ಬಿಡಿಸಿಡುತ್ತವೆ. ಇದು ಕೃತಿಯ ನಾಲ್ಕು ಹಂತಗಳಲ್ಲಿ ನಡೆಯುತ್ತದೆ.
ಎರಡನೆಯ ಭಾಗದಲ್ಲಿ, ಐರೋಪ್ಯ ವಸಾಹತುಶಾಹಿಯ ಸಂದರ್ಭದಲ್ಲಿ ಭಾರತದಲ್ಲಿ ಹಿಂದೂಯಿಸಂನ ಹುಡುಕಾಟ ನಡೆದ ಪರಿಯನ್ನು ಹೀಗೆ ತಿಳಿಸುತ್ತಾರೆ. "ಜಗತ್ತಿನ ಎಲ್ಲೆಡೆಯಲ್ಲೂ ರಿಲಿಜನ್ನುಗಳನ್ನು ಹುಡುಕುವ ಕಸರತ್ತಿನ ಪರಿಣಾಮವಾಗಿ ರಿಲಿಜನ್ನೆಂದರೆ ಏನೆಂಬುದೇ ಪಾಶ್ಚಾತ್ಯ ವಿದ್ವಾಂಸರಿಗೆ ಒಗಟಾಗಿ ಹೋಗಿತ್ತು. ಈ ವೈಚಾರಿಕ ಗೊಂದಲಗಳನ್ನು ರಿಲಿಜನ್ನಿನ ಅಧ್ಯಯನಗಳು ಭಾರತೀಯರಿಗೆ ದಾಟಿಸಿರುವುದರಿಂದ ಹಿಂದೂಯಿಸಂ ಎಂಬ ರಿಲಿಜನ್ ಇಲ್ಲ ಎಂಬ ಸರಳ ಸತ್ಯವೂ ಇಂದು ನಮಗೆ ಕಾಣದಂತಾಗಿದೆ".
"ಹಿಂದೂಯಿಸಂ" ಎಂಬ ರಿಲಿಜನ್ ಭಾರತದಲ್ಲಿ ಅಸ್ತಿತ್ವದಲ್ಲಿ ಇಲ್ಲ, ಆ ರೀತಿಯ ವಿವರಣೆ ವಸಾಹತುಶಾಹಿಯ ಬಳುವಳಿಯಾಗಿದ್ದರೂ ಹಿಂದೂಯಿಸಂ ಎಂಬ ಭ್ರಷ್ಟ ರಿಲಿಜನ್ನಿದೆ, ಅದರ ಉಪಉತ್ಪನ್ನವಾದ ಜಾತಿವ್ಯವಸ್ಥೆಯು ಅಸ್ತಿತ್ವದಲ್ಲಿದೆ. ಬ್ರಾಹ್ಮಣ ಪುರೋಹಿತಶಾಹಿಗಳ ಕುತಂತ್ರವೇ ಹಿಂದೂ ರಿಲಿಜನ್ನಿನ ಭ್ರಷ್ಟತೆಗೂ, ಜಾತಿವ್ಯವಸ್ಥೆಯ ಸೃಷ್ಟಿಗೂ ಕಾರಣ ಎಂಬ ತಿಳಿವಳಿಕೆಯೇ ಪ್ರಬಲವಾಗಿದೆ. ಆ ಹಿನ್ನೆಲೆಯಲ್ಲಿಯೇ ಸಮಾಜದ ಹಲವಾರು ಸಂಗತಿಗಳನ್ನು ವಿವರಿಸಲಾಗುತ್ತಿದೆ. ಈ ಐರೋಪ್ಯ ವಿವರಣೆಗಳ ಭಾಗವಾಗುವ ಮೂಲಕ ಬೌದ್ಧಿಕ ದಾಸ್ಯಕ್ಕೆ ಭಾರತೀಯರು ಒಳಗಾಗುತ್ತಿರುವ ರೀತಿಯನ್ನು ಸ್ಪಷ್ಟಗೊಳಿಸುತ್ತಾರೆ. ಅಷ್ಟು ಮಾತ್ರವಲ್ಲ , ಇಂತಹ ಬೌದ್ಧಿಕ ದಾಸ್ಯದಿಂದ ಹೊರಬರುವ ಬಗೆಯನ್ನು ಸರಳವಾಗಿ ವಿವರಿಸುವ ಪರಿ ಅತ್ಯುತ್ತಮವಾಗಿದೆ.
ನಾಲ್ಕನೆಯ ಭಾಗದಲ್ಲಿ, ಇಂದು ಸರ್ವೇಸಾಮಾನ್ಯವಾಗಿ ನಾಗರಿಕತೆಯ ಸಂಕೇತವೆಂಬಂತೆ ಒಪ್ಪಿಕೊಂಡಿರುವ ಸೆಕ್ಯುಲರ್ ತತ್ವದ ಅರ್ಥ ನಿರೂಪಣೆಗಳಲ್ಲಿನ ಎಡವಟ್ಟುಗಳನ್ನು, ಐರೋಪ್ಯ ಸಾಂಸ್ಕೃತಿಕ ಅಗತ್ಯತೆಯಲ್ಲಿ ಜನಿಸಿದ ಸೆಕ್ಯುಲರಿಸಂ ಭಾರತದಲ್ಲಿ ಸೃಷ್ಟಿಸಿರುವ ಅನಾಹುತಗಳನ್ನು ನಿದರ್ಶಿಸಲಾಗಿದೆ. ಸೆಕ್ಯುಲರ್ ಚಿಂತಕರು ಹೇಗೆ ರಿಲಿಜನ್ನಿನ ಚೌಕಟ್ಟಿನಲ್ಲಿಯೇ ಇದ್ದಾರೆ, ಸೆಕ್ಯುಲರ್ ಆಗುವುದೆದಂರೆ ರಿಲಿಜನ್ನಿನದೇ ಮತ್ತೊಂದು ರೂಪ ಧರಿಸುವುದು. ಕೋಮು ಸಂಘರ್ಷಗಳಿಗೆ ಪರಿಹಾರವೆಂಬಂತೆ ಸೆಕ್ಯುಲರಿಸಂ ಮಂತ್ರ ಜಪಿಸುವುದು ಸಾಮಾನ್ಯವಾಗಿದೆ. ಆದರೆ, ಸೆಕ್ಯುಲರಿಸಂನ ಅಳವಡಿಕೆಯ ನಂತರವೇ ಅಂತಹ ಸಂಘರ್ಷಗಳು ಸೃಷ್ಟಿಯಾದವು ಎಂಬುದನ್ನು ಪ್ರಸ್ತುತ ಕೃತಿಯು ತೋರಿಸುವುದು ಬೆರಗುಗೊಳಿಸಿದರೂ ಕಟು ವಾಸ್ತವ. ಇಲ್ಲಿನ ಕೋಮು ಸಮಸ್ಯೆಗಳಿಗೆ "ಸರ್ವಧರ್ಮ ಸಮಭಾವ" ಅಥವಾ "ಸೆಕ್ಯುಲರಿಸಂ" ಪರಿಹಾರವಾಗುವುದಿಲ್ಲ. ಬದಲಾಗಿ ಅದು ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಮತ್ತು ಪ್ರಭುತ್ವವೂ ಕೂಡ ಪಕ್ಷಪಾತಿಯಾಗಬೇಕಾಗುತ್ತದೆ. ಈ ಸಮಸ್ಯೆಯನ್ನು ಗುರುತಿಸುವ ಹಾಗೂ ಸಾಂಸ್ಕೃತಿಕ ವಿಭಿನ್ನತೆಯನ್ನು ಕುರಿತ ಗಂಭೀರ ಸಂಶೋಧನೆಯಲ್ಲಿ ತೊಡಗಿಕೊಳ್ಳದ ಹೊರತು ಸಮಸ್ಯೆಯು ಪರಿವಾಗುವುದಿಲ್ಲ ಎನ್ನುವ ಬೌದ್ಧಿಕ ಸವಾಲನ್ನು ಕೃತಿಯು ಎತ್ತುತ್ತದೆ.
ಒಟ್ಟಾರೆ, ಸಮಕಾಲೀನ ಸಂದರ್ಭದ ಹಲವಾರು ವಿವಾದ, ಚರ್ಚೆಗಳ ಕುರಿತು ಬೆಳಕು ಚೆಲ್ಲುವ ಮಹತ್ತರ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. ಭಗವದ್ಗೀತೆ ಕುರಿತ ವಿವಾದ, ಮೂರ್ತಿ ಪೂಜೆ, ಮತಾಂತರದ ಗೊಂದಲ, ಮೂಢನಂಬಿಕೆಗಳ ಕುರಿತ ವಿವಾದ, ಸೆಕ್ಯುಲರಿಸಂನ ಬಗ್ಗೆ ಇಂದು ನಡೆಯುತ್ತಿರುವ ಚರ್ಚೆಗಳು ವಸಾಹತುಶಾಹಿ ಚೌಕಟ್ಟನ್ನೇ ಹಂಚಿಕೊಂಡಿವೆ ಎಂದು ತೋರಿಸುತ್ತದೆ. ಆ ಮೂಲಕ ಭಾರತ ಇನ್ನೂ ಹೇಗೆ ಬೌದ್ಧಿಕ ದಾಸ್ಯದಲ್ಲಿದೆ ಎಂಬುದು ತನ್ನಷ್ಟಕ್ಕೆ ತಾನೇ ವೇದ್ಯವಾಗುತ್ತದೆ. ಕೃತಿಯು ಇಷ್ಟಕ್ಕೆ ಮಾತ್ರ ಸೀಮಿತವಾಗದೆ ಅಂತಹ ಬೌದ್ಧಿಕ ದಾಸ್ಯದ ಪೊರೆಯನ್ನು ಕಳಚುವ ಹೊಸ ದಾರಿಗಳನ್ನು, ಸಾಧ್ಯತೆಗಳನ್ನು ತೆರೆಯುತ್ತದೆ. ಜೊತೆಗೆ ನಮ್ಮ ಸಮಾಜ ಮತ್ತು ಸಂಸ್ಕೃತಿ ಕುರಿತಾಗಿ ಜನಸಾಮಾನ್ಯರ ಸಹಜಜ್ಞಾನವನ್ನು ಒಳಗೊಳ್ಳುವುದರಲ್ಲೇ ಕೃತಿಯ ಯಶಸ್ಸು ಅಡಗಿದೆ. ಆ ಮಟ್ಟಿಗೆ ಸಮಾಜ ವಿಜ್ಞಾನಕ್ಕೆ ಇದೊಂದು ಉತ್ತಮ ಕೊಡುಗೆಯಾವುದರಲ್ಲಿ ಸಂದೇಹವಿಲ್ಲ. ಶತಾಯಗತಾಯ ಸಾಮಾಜಿಕ ಸಮಸ್ಯೆಗಳನ್ನು ತೊಲಗಿಸಲು ಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಅವುಗಳನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳ ಬೇಕಾದುದು ಅತ್ಯಗತ್ಯ. ಹಾಗಾಗಿ ಐಡಿಯಾಲಜಿಯ ಹಣೆಪಟ್ಟಿಯನ್ನು ಬದಿಗಿಡುವ ತೆರದ ಮನಸ್ಸಿನ ಓದು ಮುಖ್ಯ.
ಒಪ್ಪಿತ ಸತ್ಯಗಳನ್ನು ಪ್ರಶ್ನಿಸುವ ಕೃತಿ