15 April 2015


ಚಂದ್ರಪೂಜಾರಿ ಎಂ 

ಕರ್ನಾಟಕ ಸರಕಾರ ನಡೆಸಲಿಚ್ಛಿಸಿರುವ ಜಾತಿ ಸಮೀಕ್ಷೆ ಪರ-ವಿರೋಧಗಳನ್ನು ಸೃಷ್ಟಿಸಿದೆ. ಜಾತಿ ಕುರಿತ ಕೆಲವು ಅಪಕಲ್ಪನೆಗಳು ಸಮೀಕ್ಷೆಯ ಪರ-ವಿರೋಧಗಳನ್ನು ರೂಪಿಸು ವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇವನ್ನು ವಿಶ್ಲೇಷಿಸುವ ಪ್ರಯ ತ್ನವೇ ಈ ಲೇಖನ. ಜಾತಿಯನ್ನು ನಕಾರಾತ್ಮಕವಾಗಿ ನೋಡು ವುದು ಇಂತಹ ಅಪಕಲ್ಪನೆಗಳ ಸಾಲಲ್ಲಿ ಬರುವ ಮೊದಲ ಅಂಶ. ಅಂದರೆ ಜಾತಿಯ ಇರುವಿಕೆಯನ್ನು ಒಪ್ಪಿಕೊಳ್ಳುವುದು, ಜಾತಿಯ ಮೂಲಕ ಗುರುತಿಸಿಕೊಳ್ಳುವುದು, ಜಾತಿಯ ಬಗ್ಗೆ ಚರ್ಚಿಸುವುದು ಇವೆಲ್ಲವೂ ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲವೆಂದು ನಂಬುವುದು. ಇದು ಸರಿಯಾದ ನಿಲು ವಲ್ಲ. ಏಕೆಂದರೆ ಜಾತಿ ಅದರಷ್ಟಕ್ಕೇ ಅದು ಕೆಟ್ಟದೂ ಅಲ್ಲ, ಒಳ್ಳೆಯದೂ ಅಲ್ಲ. ಜಾತಿಯನ್ನು ನಾವು ಕಟ್ಟಿಕೊಳ್ಳುವ ಪರಿ ಹಾಗೂ ಬಳಸುವ ವಿಧಾನ ಜಾತಿಗೆ ಕೆಟ್ಟ ಅಥವಾ ಒಳ್ಳೆಯ ಚಿತ್ರಣ ನೀಡುತ್ತವೆ.

ಎಲ್ಲ ಸಮಾಜಗಳಲ್ಲೂ ಜನರನ್ನು ಗುಂಪುಗಳಾಗಿ ವಿಂಗಡಿ ಸುವ ಮತ್ತು ವಿಂಗಡಿತ ಗುಂಪುಗಳನ್ನು ವಿವಿಧ ಹೆಸರುಗಳಿಂದ ಗುರುತಿಸುವ ಕ್ರಮವಿದೆ. ಇದೇ ರೀತಿ ನಮ್ಮ ಸಮಾಜದಲ್ಲಿ ವಿಂಗಡಿತ ಜನರ ಗುಂಪುಗಳನ್ನು ಗುರುತಿಸಲು 'ಜಾತಿ' ಎನ್ನುವ ಪದ (ಪರಿಭಾಷೆ) ಬಳಕೆಯಾಗುತ್ತಿದೆ. ಜನರು ಪರ ಸ್ಪರ ಅರ್ಥ ಮಾಡಿಕೊಳ್ಳಲು ಕೆಲವೊಂದು ಗುಣಲಕ್ಷಣ ಗಳನ್ನು (ಮಾನದಂಡಗಳನ್ನು) ಬಳಸಿಕೊಂಡು ಜನರನ್ನು ಗುಂಪು ಗಳಾಗಿ ವಿಂಗಡಿಸುವ ಕ್ರಮ ಬೆಳೆದಿದೆ. ಅವರ‌್ಯಾರು? (ಬಣ್ಣ, ಎತ್ತರ, ಚಹರೆ), ಅವರ ಭಾಷೆ ಏನು? ಉಡುಗೆ- ತೊಡುಗೆ ಏನು? ಊಟ-ಉಪಚಾರ ಹೇಗೆ? ಅವರು ದೇವರು ನಂಬುತ್ತಾರೋ? ನಂಬಿದರೆ ಯಾವ ದೇವರು? ಈ ಎಲ್ಲ ಪ್ರಶ್ನೆಗಳು ಜನರನ್ನು ಅರ್ಥಮಾಡಿಕೊಳ್ಳಲು ಸಹಕರಿಸು ತ್ತವೆ. ಈ ಪ್ರಶ್ನೆಗಳ ಉತ್ತರವೇ ಜನರನ್ನು ಗುಂಪುಗಳಾಗಿ ವಿಂಗಡಿಸಲು ಬಳಸುವ ಮಾನದಂಡಗಳು.

ಹೆಚ್ಚು ಕಡಿಮೆ ನಮ್ಮಲ್ಲೂ ಜನರನ್ನು ಗುಂಪುಗಳಾಗಿ (ಜಾತಿ ಳಾಗಿ) ವಿಂಗಡಿಸಲು ಇವೇ ಮಾನದಂಡಗಳನ್ನು (ಉಡುಗೆ- ತೊಡುಗೆ, ದೇವರು-ದಿಂಡರು, ಕಸುಬು, ಭಾಷೆ ಇತ್ಯಾದಿ ಗಳನ್ನು) ಬಳಸಿದ್ದಾರೆ. ವಿಂಗಡಿತ ಗುಂಪುಗಳನ್ನು ಸಮಾನಾಂತ ರವಾಗಿ ಜೋಡಿಸಿಲ್ಲ; ಪಿರಮಿಡ್ ರೂಪದಲ್ಲಿ ಜೋಡಿಸಿದ್ದಾರೆ. ಯಾವ ಗುಂಪಿನ (ಜಾತಿಯ) ದೇವರು, ಊಟ-ಉಪಚಾರ, ಕಸುಬು, ಉಡುಗೆ-ತೊಡುಗೆ ಶುದ್ಧವಾಗಿದೆಯೋ ಆ ಜಾತಿ ಏಣಿಯ ಮೇಲಿದ್ದರೆ ಶುದ್ಧತೆ ಕಡಿಮೆಯಾದಂತೆ ಜಾತಿ ಏಣಿಯ ಕೆಳಕೆಳಗೆ ಬರುತ್ತದೆ ಮತ್ತು ಅತ್ಯಂತ ಅಶುದ್ಧ ಜಾತಿ ಏಣಿಯ ಬುಡದಲ್ಲಿರುತ್ತದೆ ಎಂದು ತೀರ್ಮಾನಿಸಲಾಯಿತು. ಹೀಗೆ ಜಾತಿಯನ್ನು ಗುರುತಿಸಲು ಮತ್ತು ಶ್ರೇಣೀಕರಿಸಲು ಬಳಸಿದ ಮಾನದಂಡಗಳು ಸಮಸ್ಯೆಯ ಮೂಲವಾಗಿವೆ.

ಚಾರಿತ್ರಿಕವಾಗಿ ರೂಪುಗೊಂಡ ಗುಂಪುಗಳನ್ನು (ಜಾತಿ ಯನ್ನು) ಗುರುತಿಸಲು ದೇವರು, ಭಾಷೆ, ಉಡುಗೆ-ತೊಡುಗೆ, ಊಟ, ಕಸುಬುಗಳನ್ನು ಬಳಸಿರುವುದು ಮೊದಲ ಸಮಸ್ಯೆ. ಜಾತಿ ಚರ್ಚೆಯಲ್ಲಿ ಯಾರು ಯಾರಿಂದ ಆಹಾರ ಸ್ವೀಕರಿಸ ಬಹುದು? ಸಸ್ಯಾಹಾರಿಗಳೇ? ಮಾಂಸಾಹಾರಿಗಳೇ? ಬೇಯಿ ಸಿದ ಆಹಾರ ಸ್ವೀಕರಿಸಬಹುದೇ? ಎಡಗೈಯಲ್ಲಿ ತಿನ್ನಬೇಕೇ? ಬಲಗೈಯಲ್ಲಿ ತಿನ್ನಬೇಕೇ? ಇವೇ ದೊಡ್ಡ ಚರ್ಚೆಯ ವಿಷಯ ಗಳಾಗಿವೆ. ಆದರೆ ಇದೇ ಆಹಾರವನ್ನು ಯಾರು ಬೆಳೆದಿದ್ದಾರೆ? ಹೇಗೆ ಬೆಳೆದಿದ್ದಾರೆ? ಬೆಳೆದವರ ಒಡೆತನದಲ್ಲಿ ಭೂಮಿ ಇತ್ತೇ ಅಥವಾ ಮತ್ತೊಬ್ಬರ ಭೂಮಿಯಲ್ಲಿ ಲಾವಣಿಗೆ ಅಥವಾ ಕೂಲಿಗೆ ಬೆಳೆದಿದ್ದಾರೋ? ಬೆಳೆದವರ ಸಂಪನ್ಮೂಲಗಳ ಒಡೆತನ ಏನು? ಅವರ ಶಿಕ್ಷಣ, ಆರೋಗ್ಯಗಳ ಸ್ಥಿತಿ ಏನು? ಈ ಎಲ್ಲ ಪ್ರಶ್ನೆಗಳು ಜಾತಿ ಚರ್ಚೆಯೊಳಗೆ ಬರಲೇ ಇಲ್ಲ. ಇದೊಂದು ರೀತಿಯಲ್ಲಿ ನಮ್ಮ ಸಿನಿಮಾಗಳ ನಾಯಕ- ನಾಯಕಿಯರ ಬದುಕಿನಂತೆ. ಅವರು ದಿನವಿಡೀ ಪಾರ್ಕ್‌ ಗಳಲ್ಲಿ ಸುತ್ತಾಡುತ್ತಾರೆ, ಪ್ರೇಮಗೀತೆ ಹಾಡುತ್ತಾರೆ, ಕಾರಲ್ಲಿ ಓಡಾಡುತ್ತಾರೆ, ಐಷಾರಾಮಿ ಹೋಟೆಲುಗಳಲ್ಲಿ ತಿನ್ನುತ್ತಾರೆ. ಇವೆಲ್ಲವನ್ನೂ ಕೆಲವರು ಅನುಭವಿಸಬೇಕಾದರೆ ಮತ್ತೆ ಕೆಲವರು ಈ ಸಂಪನ್ಮೂಲಗಳನ್ನು ಉತ್ಪಾದಿಸಿಲು ದುಡಿದಿರಲೇಬೇಕು. ದುಡಿತದ ಬದುಕು ಸಿನಿಮಾದಲ್ಲೂ ಅವಕಾಶ ಪಡೆಯಲಿಲ್ಲ, ನಮ್ಮ ಜಾತಿ ವ್ಯಾಖ್ಯಾ ನದಲ್ಲೂ ಅವಕಾಶ ಪಡೆಯಲಿಲ್ಲ.

ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ, ರಾಜಕೀಯ ಅಂಶಗಳು ಸೇರದಿರುವುದು ಮಾತ್ರ ಸಮಸ್ಯೆಯಲ್ಲ; ಜಾತಿ ಶ್ರೇಣೀಕರಣಕ್ಕೆ ಬಳಸಿದ ಮಾನದಂಡ ಗಳೂ ಸಮಸ್ಯೆ ಸೃಷ್ಟಿಸಿವೆ. ಇದು ಕೆಲವರಿಗೆ ಅನುಕೂಲವಾಗಿ ಪರಿಣಮಿಸಿದರೆ ಹಲವರಿಗೆ ನಷ್ಟ ಮಾಡಿದೆ. ಶ್ರೇಣೀ ಕರಣದ ಬುಡದಲ್ಲಿ ರುವವರ ಕಸುಬು, ಊಟ, ದೇವರು, ಉಡುಗೆ- ತೊಡುಗೆ ಎಲ್ಲವೂ ಅಶುದ್ಧ. ಆದ್ದರಿಂದ ಇವು ಉಳಿದ ವರು ಸ್ವೀಕರಿಸಲು ಯೋಗ್ಯವಲ್ಲ. ಇದರಿಂದ ತಳಜಾತಿ ಗಳು ಸಾಕಷ್ಟು ಅನ್ಯಾಯ ಅನುಭವಿಸಿವೆ. ನಮ್ಮ ಚರಿತ್ರೆ, ಸಂಸ್ಕೃತಿ ಕಥನಗಳಲ್ಲಿ ಗುಡಿ-ಗೋಪುರಗಳು, ಮಠ- ಮಂದಿರಗಳು, ರಾಜ-ಮಹಾ ರಾಜರು, ಅವರ ಸೋಲು- ಗೆಲುವುಗಳು ತುಂಬಿ ತುಳು ಕುತ್ತಿವೆ. ಇದೇ ಗುಡಿ-ಗೋಪುರ ಗಳನ್ನು, ಅರಮನೆಗಳನ್ನು ಕಟ್ಟಿದವರು, ಅವರ ಬದುಕು- ಬವಣೆಗಳು ನಮ್ಮ ಸಂಸ್ಕೃತಿ ಕಥನಗಳಲ್ಲಿ ಅವಕಾಶ ಪಡೆಯಲೇ ಇಲ್ಲ. ಇತರರ ಸಮೀಪ ವಾಸ ಮಾಡುವುದು, ಭೂಮಿ ಹೊಂದುವುದು, ಶುಭ್ರ ಬಟ್ಟೆ ಧರಿಸುವುದು, ಚಪ್ಪಲಿ ಹಾಕುವುದು, ತಮ್ಮ ಮಕ್ಕಳಿಗೆ ಸುಂದರ ವಾದ ಹೆಸರಿಡುವುದು, ಇತರರಿಂದ ಗೌರವ ನಿರೀಕ್ಷಿಸುವುದು ಇವೆಲ್ಲವೂ ಇವರಿಗೆ ಗಗನ ಕುಸುಮ ಗಳಾಗಿದ್ದವು. ಸ್ವಾತಂತ್ರ್ಯದ ನಂತರವೂ ಈ ಸ್ಥಿತಿ ಹೆಚ್ಚು ಬದಲಾಗಿಲ್ಲ. ಇವರು ಹೋಟೆಲು, ಅಂಗಡಿ ತೆರೆದರೆ ಯಾರೂ ಬರುವುದಿಲ್ಲ; ಮನೆ ಬಾಡಿಗೆಗೆ ಕೊಡಲಿಚ್ಛಿಸಿದರೆ ಜನ ಬರುವುದಿಲ್ಲ; ಇವರ ದೇವರಿಗೆ ಊರವರೆಲ್ಲ ನಡೆದುಕೊಳ್ಳುವುದಿಲ್ಲ; ಇವರ ನಾಯಕರು ಊರ ನಾಯಕರಾಗುವು ದಿಲ್ಲ; ಇವರ ಹೆಸರುಗಳು ಬೀದಿ, ಪಾರ್ಕ್, ವಿಶ್ವವಿದ್ಯಾಲಯಗಳ ಹೆಸರುಗಳಾಗುವುದಿಲ್ಲ.

ಈ ಎಲ್ಲ ಕಾರಣಗಳಿಂದ ಚಾರಿತ್ರಿಕವಾಗಿ ರೂಪುಗೊಂಡ ಏಣಿ ಶ್ರೇಣಿಗಳು ಇಂದು ಕೂಡ ಮುಂದುವರಿಯುತ್ತಿವೆ. ನಮ್ಮಲ್ಲಿ ಸುಮಾರು 24 ಕೋಟಿ ಕಡುಬಡವರಿದ್ದಾರೆ. ಇವರು ಎಷ್ಟೊಂದು ಬಡವರೆಂದರೆ ಮೂರು ಹೊತ್ತಿನ ಊಟ, ವಸತಿ, ಶಿಕ್ಷಣ, ಆರೋಗ್ಯಗಳಿಗೆ ಪರದಾಡುವವರು. ಅತ್ಯಂತ ಬಡವ ರಲ್ಲಿ ಅರ್ಧದಷ್ಟು (ಶೇ.41) ದಲಿತ ಬುಡಕಟ್ಟು ಜನರಿದ್ದರೆ, ಮೂರನೇ ಒಂದು ಭಾಗದಷ್ಟು ಹಿಂದುಳಿದ ಜಾತಿಯ ಜನರಿ ದ್ದಾರೆ. ಶೇ.16ರಷ್ಟು ಮುಸ್ಲಿಮರು ಕೂಡ ಅತ್ಯಂತ ಬಡವರು. ಮೇಲ್ಜಾತಿಗಳಲ್ಲಿ ಅತ್ಯಲ್ಪ ಸಂಖ್ಯೆಯ (ಶೇ.9ರಷ್ಟು) ಜನರು ಅತ್ಯಂತ ಬಡವರಿದ್ದಾರೆ. ಇದೇ ಸಂದರ್ಭದಲ್ಲಿ ನಮ್ಮಲ್ಲಿ ಸುಮಾರು 4 ಕೋಟಿ ಶ್ರೀಮಂತರಿದ್ದಾರೆ. ಇವರು ಬಡತನ ರೇಖೆಗಿಂತ ಹಲವು ಪಟ್ಟು ಹೆಚ್ಚು ಆದಾಯ ಹೊಂದಿರುವ ವರು. ಅತ್ಯಂತ ಬಡವರಲ್ಲಿ ದಲಿತ ಬುಡಕಟ್ಟುಗಳು ಹೇಗೆ ಹೆಚ್ಚಿದ್ದಾರೋ ಅದೇ ರೀತಿಯಲ್ಲಿ 4 ಕೋಟಿ ಶ್ರೀಮಂತರಲ್ಲಿ ಅರ್ಧಕ್ಕಿಂತಲೂ ಹೆಚ್ಚು (ಶೇ.65) ಮೇಲ್ಜಾತಿಯ ಜನರಿದ್ದಾರೆ. ದಲಿತ ಬುಡಕಟ್ಟು ಮತ್ತು ಮುಸ್ಲಿಮರಲ್ಲಿ ಅತ್ಯಲ್ಪ ಜನರು (ಶೇ.7) ಶ್ರೀಮಂತರಿದ್ದಾರೆ. ಇವರಿಗೆ ಹೋಲಿಸಿದರೆ ಹಿಂದು ಳಿದ ಜಾತಿಗಳು ವಾಸಿ. ನಾಲ್ಕು ಕೋಟಿ ಶ್ರೀಮಂತರಲ್ಲಿ ಹಿಂದು ಳಿದ ಜಾತಿಗಳ ಶೇ.21 ಜನರಿದ್ದಾರೆ. ಹೀಗೆ ಆರು ದಶಕಗಳ ಅಭಿವೃದ್ಧಿಯ ನಂತರವೂ ಚಾರಿತ್ರಿಕ ಏಣಿಶ್ರೇಣಿಗಳು ಮುಂದು ವರಿಯುತ್ತಿವೆ. ಈ ಬಗೆಯ ಮುಂದುವರಿಕೆಗೆ ಒಂದು ಕಾರಣ ಜಾತಿಯನ್ನು ಸಾಮಾಜಿಕ, ಸಾಂಸ್ಕೃತಿಕ ಅಂಶ ಗಳ ಮೂಲಕ ಗುರುತಿಸುವುದು. ಈ ಲೋಪವನ್ನು ಕರ್ನಾಟಕ ಸರಕಾರ ನಡೆಸುವ ಜಾತಿ ಸಮೀಕ್ಷೆ ಸರಿಪಡಿಸಬಹುದು. ಈ ಸಮೀಕ್ಷೆಯಲ್ಲಿ ಜಾತಿಯನ್ನು ಗುರುತಿಸಲು ತಿನ್ನುವ ಆಹಾರಕ್ಕಿಂತ ಹೆಚ್ಚು ಶಿಕ್ಷಣ, ಆರೋಗ್ಯ, ಭೂಮಿ, ಸಂಪನ್ಮೂಲ ಗಳ ಒಡೆತನಗಳು ಮುಖ್ಯವೆಂದು ಪರಿಗಣಿಸಲ್ಪಡುತ್ತಿವೆ. ಎಲ್ಲ ಜಾತಿಗಳಲ್ಲಿರುವ ಭೂಮಿ ಇಲ್ಲದ, ಉನ್ನತ ಶಿಕ್ಷಣ ಪಡೆಯದ, ನಿಶ್ಚಿತ ಆದಾಯ ಇಲ್ಲದ, ಕೂಲಿನಾಲಿ ಮಾಡಿ ಬದುಕುವ ಕುಟುಂಬಗಳನ್ನು ಈ ಸಮೀಕ್ಷೆ ಗುರುತಿಸಬಹುದು.

ವಿವಿಧ ಜಾತಿಗಳ ಅರ್ಥಿಕ ರಾಜಕೀಯ ಸ್ಥಿತಿಗತಿ ಬಗ್ಗೆ ಅಂಕಿಅಂಶಗಳು ದೊರೆತ ಕೂಡಲೇ ವಿವಿಧ ಸಮುದಾಯಗಳ ನಡುವಿನ ಅಭಿವೃದ್ಧಿ ಅಂತರ ಕಡಿಮೆಯಾಗಬಹುದೆಂದು ನಂಬುವುದು ಕಷ್ಟ. ಏಕೆಂದರೆ ಈ ಅಂಕಿಅಂಶಗಳು ವಿವಿಧ ಸಮುದಾಯಗಳ ಅಭಿವೃದ್ಧಿ ಮೇಲೆ ಮಾಡುವ ಪರಿಣಾಮ ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ಈ ಅಂಕಿಅಂಶ ಗಳನ್ನು ಬಳಸಿಕೊಳ್ಳುವ ವಿಧಾನದ ಮೇಲೆ ನಿಂತಿದೆ. ಈ ಅಂಕಿ ಅಂಶಗಳನ್ನು ಪ್ರಗತಿಪರ ರಾಜಕೀಯಕ್ಕೆ ಬಳಸಲು ಸಾಧ್ಯವಾ ದಂತೆ ಉಪಜಾತಿ ರಾಜಕೀಯಕ್ಕೂ ಬಳಸಬಹುದು. ಪ್ರಗತಿಪರ ರಾಜಕೀಯಕ್ಕೆ ಬಳಸಿದರೆ ವಿವಿಧ ಜಾತಿಗಳ ನಡುವಿನ ಅಭಿ ವೃದ್ಧಿಯ ಅಂತರ ಕಡಿಮೆಯಾಗಬಹುದು. ಒಂದು ವೇಳೆ ಇವೇ ಅಂಕಿಅಂಶಗಳು ಉಪಜಾತಿಗಳ ಗುರುತಿನ ರಾಜಕೀ ಯಕ್ಕೆ ಬಳಕೆಯಾದರೆ ಇನ್ನೊಂದಿಷ್ಟು ಉಪಜಾತಿಗಳ ಬಲಾಢ್ಯರು ಸೃಷ್ಟಿಯಾಗಬಹುದು. ಇದೇ ರೀತಿಯಲ್ಲಿ ಬಡತನ ನಿವಾರಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಅಂಕಿಅಂಶಗಳು ಅನಿವಾರ್ಯವೆನ್ನುವ ಸರಕಾರದ ವಾದವನ್ನು ಮುಖಬೆಲೆಯಲ್ಲಿ ತೆಗೆದುಕೊಳ್ಳುವುದು ಕಷ್ಟ. ಏಕೆಂದರೆ ತೊಂಬತ್ತರದ ನಂತರ ಸರಕಾರಗಳು ಅನುಸರಿ ಸುತ್ತಿರುವ ಅಭಿವೃದ್ಧಿ ನೀತಿಗಳು ಬಡತನದ ಸೃಷ್ಟಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ಪ್ರತಿಪಾದಿಸುತ್ತಿವೆ. ಆದರೆ ವಾಸ್ತವದಲ್ಲಿ ಬಡತನದ ಸೃಷ್ಟಿಯಲ್ಲಿ ಒಟ್ಟು ಪರಿಸರದ ಪಾತ್ರ ದೊಡ್ಡದಿದೆ. ಲಿಂಗ, ಜಾತಿ, ಧರ್ಮ ತಾರತಮ್ಯಗಳ ಜೊತೆಗೆ ಕಾರ್ಮಿಕ ಕಾಯಿದೆಗಳು, ಅನಧಿಕೃತ ಉದ್ಯೋಗಳು, ಅಸಂಘಟಿತ ವಲಯ ಇವೆಲ್ಲವೂ ಬಡತ ನವನ್ನು ಸೃಷ್ಟಿಸುತ್ತಿವೆ. ಇವನ್ನು ಸುಧಾರಿಸದಿದ್ದರೆ ಬಡತನ ನಿವಾರಣೆ ಸಾಧ್ಯವಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷೆಯ ಪರ-ವಿರೋಧ ಚರ್ಚೆಗಳನ್ನು ಪರಿಶೀಲಿಸಿದರೆ ಎರಡರಲ್ಲೂ ವಿಶೇಷ ಶಕ್ತಿ ಇಲ್ಲ ಎನ್ನಬಹುದು.

ಸರ್ವರಿಗೂ ಸಮಪಾಲು, ಸಮ ಬಾಳು

 ಶ್ರೀ ವಿಶ್ವೇಶತೀರ್ಥ ಶ್ರೀಪಾದರು


ನಾವೆಲ್ಲರೂ ಸಮಾನರು, ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಬೆಳೆದು ಜಾತೀಯ ಭಾವನೆ ಕಡಿಮೆ ಆಗಬೇಕೆನ್ನುವುದು ಆದರ್ಶ, ಸಂವಿಧಾನದ ಆಶಯ. ಹಾಗೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ...ಇತ್ಯಾದಿ ಮೀಸಲು ವ್ಯವಸ್ಥೆಯನ್ನು ಈಗಿಂದೀಗಲೇ ನಿಲ್ಲಿಸಲಾಗದು.

ಮೀಸಲು ವ್ಯವಸ್ಥೆಯ ನೆಲೆಯಲ್ಲಿ ಎಲ್ಲಾ ಜಾತಿ, ಉಪ ಜಾತಿಗಳಿಗೂ ನ್ಯಾಯ, ಸಮಾನತೆ ಸಿಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದೊಳಗಿರುವ ಉಪ ಜಾತಿಗಳು (ಎಡಗೈ ಬಲಗೈ ಇತ್ಯಾದಿ) ಎಷ್ಟು ಎನ್ನುವ ಲೆಕ್ಕವೂ ಬೇಕು. ಒಂದೊಮ್ಮೆ ಮೀಸಲು ವ್ಯವಸ್ಥೆ ಇಲ್ಲದೇ ಇದ್ದಿದ್ದರೆ ಮುಂದುವರಿದವರಿಗೇ ಎಲ್ಲಾ ಲಾಭ ಹೋದೀತು, ಹಿಂದುಳಿದವರಿಗೆ ಏನೂ ಇಲ್ಲದಾದೀತು ಎನ್ನುವ ನೆಲೆಯಲ್ಲೇ ಮೀಸಲು ವ್ಯವಸ್ಥೆ ರೂಪಿಸಲಾಗಿದೆ. ಮೀಸಲಿನ ಲಾಭ ಪಡೆಯುತ್ತಿರುವವರ ಜಾತಿ, ಉಪ ಜಾತಿಯನ್ನು ಪರಿಗಣಿಸದಿದ್ದರೆ ಕಡಿಮೆ ಸಂಖ್ಯೆಯಲ್ಲಿರುವ ಜನರಿಗಂತೂ ಅನ್ಯಾಯವಾಗಲಿದೆ. ಮೀಸಲು ಸಹಿತ ವಿವಿಧ ಸೌಲಭ್ಯ ಜನಸಂಖ್ಯೆ ಆಧಾರಿತವಾಗದೆ, ಸಮಾನತೆಯ ಮುಖ್ಯವಾಹಿನಿಗೆ ಬಾರದಂತಹ ಪರಿಸ್ಥಿತಿಯೂ ತಲೆದೋರಲಿದೆ. ಹೀಗಾಗಿ ಜಾತಿ, ಉಪ ಜಾತಿ ಗಣತಿ/ಸಮೀಕ್ಷೆ ಮಾಡಬೇಕು. ಇದರ ನೈಜ ಫಲ ಸಮಾಜದ ಹಿಂದುಳಿದ, ಕಟ್ಟಕಡೆಯ ವ್ಯಕ್ತಿಗಳಿಗೂ ದೊರೆಯಬೇಕು.

ಮೀಸಲು ವ್ಯವಸ್ಥೆ ಇರುವ ತನಕ ಸಮಾಜದಲ್ಲಿ ಹಿಂದುಳಿದವರಿಗೆ ಸಮಪಾಲು, ಸಮ ಬಾಳು ಒದಗಿಸಲು ಜಾತಿ, ಉಪ ಜಾತಿಗಳ ಪರಿಗಣನೆಯೂ ಅನಿ ವಾರ್ಯ. 1931ರಲ್ಲಿ ನಡೆದಿದ್ದ ಜಾತಿ ಗಣತಿ/ಸಮೀಕ್ಷೆ ಬಳಿಕ ಕಲ್ಪಿತ ಅಂಕಿ ಅಂಶಗಳ ಆಧಾರದ ಬದಲು ನೈಜ ಜನಸಂಖ್ಯೆಯ ಆಧಾರದಲ್ಲಿ ಮೀಸಲು ಸಹಿತ ವಿವಿಧ ಸೌಲಭ್ಯ ಒದಗಿಸುವುದು ವೈಜ್ಞಾನಿಕ ಕ್ರಮ.

ಮೀಸಲು ಇಲ್ಲದ ಆದರ್ಶ: ಮೀಸಲು ವ್ಯವಸ್ಥೆ ಕಾಲಕ್ರಮೇಣ ನಿಲ್ಲಿಸುವುದು ಅಸ್ಪೃಶ್ಯತೆ ಮತ್ತು ಅಸಮಾನತೆ ನಿವಾರಣೆ, ಜಾತ್ಯತೀತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಒಳಿತು. ಬಡ, ಹಿಂದುಳಿದವರಿಗೆ ಆರ್ಥಿಕ ಮಾನದಂಡದ ಮೂಲಕ ನ್ಯಾಯ ಒದಗಿಸುವ ವಿಶ್ವಾಸ ಆಡಳಿತಾರೂಢರಿಗಿಲ್ಲ. ಹೀಗಾಗಿ ಜಾತಿ, ವರ್ಗ ಆಧಾರಿತ ಮೀಸಲು ವ್ಯವಸ್ಥೆ ಜಾರಿಗೆ ಬಂದಿದೆ. ಮೀಸಲು ಇಲ್ಲದಿರುವುದು ಆದರ್ಶ, ಆದರೆ ಇದನ್ನು ಜನರು, ಆಡಳಿತಾರೂಢರೇ ನಿರ್ಧರಿಸಿ ತೀರ್ಮಾನಿಸಬೇಕು .

ಒಳಿತು, ಕೆಡುಕು: ಮೀಸಲು ವ್ಯವಸ್ಥೆಯನ್ನು ನಾವು ಸಮರ್ಥಿಸುತ್ತಲೂ ಇಲ್ಲ, ವಿರೋಧಿಸುತ್ತಲೂ ಇಲ್ಲ. ಮೀಸಲು ವ್ಯವಸ್ಥೆ ಇಲ್ಲದಿದ್ದರೆ ಹಿಂದುಳಿದವರಿಗೆ ಅನ್ಯಾಯವಾಗುತ್ತದೆ, ಇದ್ದರೆ ಜಾತೀಯತೆ ಹೆಚ್ಚುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ಜಾರಿಗೆ ಬಂದಂದಿನಿಂದ 10 ವರ್ಷ ಕಾಲ ಮೀಸಲು ಇರಲಿ ಎಂದಿದ್ದರು. ಸ್ವಾತಂತ್ರ್ಯ ದೊರೆತು 6 ದಶಕಗಳು ಸಂದ ಬಳಿಕವೂ, ಭವಿಷ್ಯದಲ್ಲೂ ಮುಂದುವರಿಸುವಷ್ಟು ಜಾತೀಯ ವಾತಾವರಣ ಹೆಚ್ಚಿದೆ. ಹೀಗಾಗಿ ಮೀಸಲು ವ್ಯವಸ್ಥೆಯಲ್ಲಿ ಉಪಯೋಗ, ದೋಷ ಎರಡೂ ಇವೆ.

ಯಾರಿಗೂ ಅನ್ಯಾಯವಾಗದೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಒದಗಿಸುವುದು ಸರಕಾರದ ಕರ್ತವ್ಯ. ಸ್ವಾತಂತ್ರ್ಯ ದೊರೆತ ಆರಂಭದಲ್ಲಿ ಮೀಸಲು ವ್ಯವಸ್ಥೆಗೆ ವಿರೋಧವಿತ್ತು. ಆದರೆ ಈಗಂತೂ ಚುನಾವಣೆ ಸಂದರ್ಭ ಮೀಸಲು ವಿರುದ್ಧ ಮಾತನಾಡಿದರೆ ಓಟು ಸಿಗದೆ ಠೇವಣಿ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿಯಿದೆ. ಸುಪ್ರೀಂಕೋರ್ಟು ನೀಡಿದ ಶೇ. 50 ಮೀಸಲು, ಶೇ. 50 ಮೆರಿಟ್(ಪ್ರತಿಭೆ, ಬುದ್ಧಿವಂತಿಕೆ) ನ್ಯಾಯಯುತ ಸೂತ್ರ ಪರಿಪಾಲಿಸಬೇಕು. ಜಾತಿ ಪ್ರಜ್ಞೆ ಜೀವಂತವಾಗಿಡದೆ, ಜಾತಿ ಜಾತಿಗಳ ಮಧ್ಯೆ ವೈಷಮ್ಯವಿಲ್ಲದಂತೆ ಪ್ರಜ್ಞಾವಂತರು ರಾಷ್ಟ್ರ ಹಿತಕ್ಕಾಗಿ ಜನಜಾಗೃತಿ ಮಾಡಬೇಕು.

ಲಿಂಗಾಯಿತ/ವೀರಶೈವರು(ಶಿವನ ಆರಾಧಕರು) ಹಿಂದೂಗಳಲ್ಲ ಎನ್ನ್ನುವುದು ಸರಿಯಲ್ಲ. ಹಿಂದೂ ದೇವತೆಗಳನ್ನು ಪೂಜಿಸುವವರು ಹಿಂದೂಗಳು. ಜಾತಿ ವ್ಯವಸ್ಥೆಯನ್ನು ಒಪ್ಪದ ಬಸವಣ್ಣ, ಸ್ವಾಮಿ ನಾರಾಯಣ, ರಾಮಕೃಷ್ಣ ಆಶ್ರಮ, ಆರ್ಯ ಸಮಾಜ, ಚೈತನ್ಯ ಸಮಾಜವೆಲ್ಲವೂ ಹಿಂದೂ ದೇವರನ್ನು ಒಪ್ಪಿದ್ದಾರೆ.

ಕೃಷ್ಣ, ಮಧ್ವರು ಏನಂತಾರೆ?: ಗುರು ಮಧ್ವಾಚಾರ್ಯರ ಪ್ರಕಾರ ಆದರಃ ತತ್ರ ಕರ್ತವ್ಯಃ ಯತ್ರ ಭಕ್ತಿ ಹರೇಃ ವರ(ಯಾರಲ್ಲಿ ಪರಮಾತ್ಮನ ಭಕ್ತಿ ಹೆಚ್ಚಿದೆಯೋ ಅಲ್ಲಿ ಹೆಚ್ಚು ಗೌರವ/ಆದರ ಕೊಡಬೇಕೇ ಹೊರತು ಜಾತಿ, ಕುಲಗಳಿಗಲ್ಲ). ಶ್ರೀಕೃಷ್ಣ ನೀಡಿದ ಆತ್ಮೋಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋ ಅರ್ಜುನ! ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ (ಸುಖ, ದುಃಖಗಳಲ್ಲಿ ತನ್ನಂತೆ ಪರರನ್ನು ಯಾವನು ಕಾಣುತ್ತಾನೋ ಅವನೇ ಯೋಗಿ) ಸಂದೇಶ ಅತ್ಯಮೂಲ್ಯ. ಜಗತ್ತಿನಲ್ಲಿ ಜಾತಿ, ವರ್ಗಗಳ ಬದಲು ಸಜ್ಜನರು ಮತ್ತು ದುರ್ಜನರ ಎರಡೇ ವರ್ಗಗಳಿದ್ದು ಇವರಿಗೆ ಗೌರವ ಸಲ್ಲಬೇಕು.

ಜಾತಿ ಗಣತಿ/ಸಮೀಕ್ಷೆ ಸಂದರ್ಭ ಉಪ ಜಾತಿ ಗುರುತು ಹೇಳೋದು ಬಿಡೋದು ಅವರವರ ಇಷ್ಟ. ಮಂಡಲ ಆಂದೋಲನದ ಬಳಿಕ ಮೀಸಲು ಚಳವಳಿ ಪ್ರಬಲವಾಗಿದೆ. ಸಮಾಜ ಸುಧಾರಣೆ, ಅಭಿವೃದ್ಧಿ ಎಲ್ಲವೂ ಜನರ, ಆಡಳಿತಾರೂಢ ಸರಕಾರದ ಇಚ್ಛಾಶಕ್ತಿಯನ್ನು ಆಧರಿಸಿದೆ. 2009, 2014(ಲೋಕಸಭೆ), 2015(ದಿಲ್ಲಿ ವಿಧಾನಸಭೆ) ಚುನಾವಣೆ ಫಲಿತಾಂಶ ನೋಡಿದಾಗ ಜಾತೀಯತೆ ಮೀರಿ ಮತದಾರರು ಮತದಾನ ಮಾಡಿದ್ದಾರೆ ಎಂದೆನಿಸಿದರೂ ಚುನಾವಣೆಯಲ್ಲಂತೂ ಜಾತೀಯತೆ ಕೆಲಸ ಮಾಡುತ್ತಿದೆ. ಎಲ್ಲವನ್ನೂ ಜಾತಿ ದೃಷ್ಟಿಯಿಂದ ನೋಡದೆ, ಜಾತ್ಯತೀತ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಹೊಂದಬೇಕು.

ನಿತ್ಯ ಜೀವನದಲ್ಲಿ ಎಲ್ಲರನ್ನೂ ಸಮಾನ ಮನಸ್ಸು, ದೃಷ್ಟಿಯಿಂದ ನೋಡಬೇಕು. ಜಾತಿ, ವರ್ಗ, ಧರ್ಮ, ಬಡವ ಮತ್ತು ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ನಾವೆಲ್ಲರೂ ಹೃದಯದಿಂದ ಒಂದಾಗಲು

ಭಾರತೀಯತೆಯ ಚಳವಳಿ ಆಗಬೇಕು. ಇದರ ಹೊರತಾಗಿ ಒಂದೇ ಜಾತಿ, ಒಂದೇ ಕುಲ, ಸಾಮಾಜಿಕ ಸಮಾನತೆ ಜಾರಿಗೆ ಎಷ್ಟು ಕಾಲ ಬೇಕೋ ಆ ದೇವನೇ ಬಲ್ಲ!

-ಲೇಖಕರು: ಮಠಾಧೀಶರು, ಪೇಜಾವರ ಮಠ, ಉಡುಪಿ
ವಿವೇಕ್‌ ಧಾರೇಶ್ವರ್‌ 
ಕನ್ನಡಕ್ಕೆ : ಅಶ್ವಿ‌ನಿ. ಬಿ. ದೇಸಾಯಿ
 
ಜಾತಿ ಗಣತಿ ಮಾಡುತ್ತಿರುವ ಕರ್ನಾಟಕ ಸರಕಾರದ ಉದ್ದೇಶದ ಸ್ವರೂಪವೇನು? ಎಂಬುದು ನಮಗೆ ಅರ್ಥವಾಗದ ಸಂಗತಿ. ಈ ಗಣತಿಯು, ಗಂಭೀರವಾದ ಬೌದ್ಧಿಕ ಪ್ರಕ್ರಿಯೆಯೋ, ಯೋಜನೆಗಾಗಿ ಮಾಹಿತಿ ಸಂಗ್ರಹಣೆಯೊ ಅಥವಾ ರಾಜಕೀಯ ಪ್ರೇರಿತವಾದದ್ದೋ ಎಂಬುದು ತಿಳಿದಿಲ್ಲ, ಜಾತಿಗಣತಿ ಮಾಡುವವರು ಬಂದು ನಮ್ಮ ಮನೆ ಬಾಗಿಲು ಬಡಿದರೆ, ಜಾತಿವ್ಯವಸ್ಥೆ ಬಗ್ಗೆ ಅನುಮಾನವಿರುವ ನಮ್ಮಂಥವರು ಏನು ಹೇಳಬೇಕೆಂಬುದು ಒಂದು ದೊಡ್ದ ಪ್ರಶ್ನೆಯಾಗಿದೆ.

ಗಣಕಿಗೆ ನನ್ನ ಜಾತಿ 'ಕಂಪ್ಯೂಟರ್ ವಿಜ್ಞಾನಿ' ಅಥವಾ 'ಲಿಬರಲ್' ಅಥವಾ 'ಮಾರ್ಕ್ಸಿಸ್ಟ್' ಎಂದು ಹೇಳಿದರೆ ಏನಾಗಬಹುದು? 'ಬಡಗಿ', 'ಮಾಧ್ವ' ಮತ್ತು 'ಅಯ್ಯಂಗಾರ್' ಸರಿಯಾದ ಉತ್ತರಗಳಾದರೆ, ನನ್ನ ಉತ್ತರಗಳೇಕೆ ಸರಿಯಲ್ಲ? ಮೇಲೆ ಹೇಳಿದ ಇಂಗ್ಲಿಷ್ ಪದಗಳನ್ನು 'ಗಣಕಿ', 'ಉದಾರಿ', 'ಎಡಪಂಥಿ' ಎಂದು ಕನ್ನಡೀಕರಿಸಿ ಇವನ್ನು ಜಾತಿಗಣತಿಯ ಪಟ್ಟಿಗೆ ಸೇರಿಸಬಾರದೇಕೆ?

ನಮ್ಮಲ್ಲಿ ಅನೇಕರಿಗೆ ನಿಮ್ಮ ರಿಲಿಜನ್ ಯಾವುದು ಎಂದಾಗ, ಹಿಂದೂ ಎಂದು ಹೇಳುವುದು ಅಸಹಜವೆನಿಸುತ್ತದೆ. ಇಂತಹ ಪ್ರತಿಕ್ರಿಯೆ ಜಾತಿ ಎಂಬ ಪ್ರಭೇದಕ್ಕೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಚರ್ಚೆ ಮಾಡುವಾಗ ತಾವು ಯಾವ ಮತದವರು? ಅಥವಾ ಯಾವ ಸಂಪ್ರದಾಯದವರು? ಎಂಬ ಪ್ರಶ್ನೆ ಎದುರಾಗುವುದು ಸರ್ವೇಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಪಶ್ಚಿಮದಲ್ಲಿರುವುದು ''ಎತ್ನಿಕ್'' ಎಂಬ ಉತ್ತರ ಮಾತ್ರ. ಅದನ್ನು ವಿವರಿಸಲು ನಮ್ಮ ಬಳಿ ಶಬ್ದಗಳಿಲ್ಲ. ಜಾತಿ ಮತ್ತು ಮತ (ರಿಲಿಜನ್) ಈ ಅರ್ಥಕೊಡುವ ಶಬ್ದಗಳಾಗಿ ಮಾರ್ಪಟ್ಟಿವೆ. ಕಾರಣ, ಎತ್ನಿಕ್‌ಗೆ ಹೊಂದುವ ಶಬ್ದಗಳು ಇಲ್ಲಿಲ್ಲ.

ಬಡಗಿಗೂ ಮಾಧ್ವನಿನೂ ಯಾವ ರೀತಿಯ ಸಂಬಂಧವಿದೆ? ಹೆಚ್ಚೆಂದರೆ ಬಡಗಿಯೊಬ್ಬ ಮಾಧ್ವನೊಬ್ಬನಿಗೆ ಕುಳಿತುಕೊಳ್ಳಲು ಕುರ್ಚಿಯನ್ನು ಮಾಡಿಕೊಡಬಹುದಷ್ಟೆ. ಇಷ್ಟನ್ನು ಬಿಟ್ಟು ಅವರಿಬ್ಬರ ನಡುವಿನ ಸಂಬಂಧಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಹಾಗಾದರೂ ಬಡಗಿ, ಮಾಧ್ವ, ಅಯ್ಯಂಗಾರ್, ಬೌದ್ಧ, ಜೈನ ಇವುಗಳನ್ನು ಒಂದೇ ವ್ಯವಸ್ಥೆಯಲ್ಲಿ ಯಾಕೆ ತರಬೇಕು? ಈ ಹೋಲಿಕೆಗಳನ್ನು ಅವರ ವ್ಯವಹಾರಕ್ಕೆ ಅನುಗುಣವಾಗಿ ಮಾಡಬಹುದು. ಹೀಗಾದರೂ ಅದು ಅವರ ನಡುವಿನಲ್ಲಿ ಯಾವ ರೀತಿಯ ಹೋಲಿಕೆ ಅಥವಾ ವ್ಯತ್ಯಾಸವನ್ನು ತೋರ್ಪಡಿಸುತ್ತದೆ ಎಂಬುದು ಅರ್ಥವಾಗುವುದಿಲ್ಲ. ಬಡಗಿ ಮತ್ತು ಶೆಟ್ಟಿ ಎಂಬುದು ಅವರವರ ವತ್ತಿ ಎಂದು ತೋರಿಬರುತ್ತದೆ ಎಂದೂ ಉಳಿದೆಲ್ಲವೂ ಸಂಪ್ರದಾಯಗಳು ಎಂದೂ ಹೇಳಬಹುದು. ಒಂದಕ್ಕೊಂದು ಸಂಬಂಧ ಇರದ ವಿಭಿನ್ನ ಗುಂಪುಗಳನ್ನು ಒಟ್ಟುಗೂಡಿಸಿ, 'ಜಾತಿವ್ಯವಸ್ಥೆ' ಎಂದು ಹೇಗೆ ಕರೆದರು? ಇದಕ್ಕೂ ಮಿಗಿಲಾಗಿ, ಜೈನಿಸಮ್ ಹಾಗೂ ಬುದ್ಧಿಸಂ ರಿಲಿಜನ್ ಹೇಗಾದವು? 'ಮಾಧ್ವ' 'ಐಯ್ಯಂಗಾರ್' ಜಾತಿಗಳು ಹೇಗಾದವು? ಹಾಗಾದರೆೆ, ಜಾತಿ ಎಂದರೇನು? ರಿಲಿಜನ್ ಎಂದರೇನು? ಈ ರೀತಿ ಅತ್ಯಂತ ವಿಭಿನ್ನವಾದ ಗುಂಪುಗಳನ್ನು ಜಾತಿ ವ್ಯವಸ್ಥೆಯ ಒಂದು ಘಟಕವಾಗಿ ಯಾಕೆ ವಿವರಿಸಬೇಕು? ಎಂಬ ಪ್ರಶ್ನೆಗಳು ಬಗೆಹರಿಯದೆ ಉಳಿದುಬಿಡುತ್ತವೆ.

ವಸಾಹತುಕಾಲದಿಂದ ಇಂದಿನವರೆಗೆ ನಮಗೆ ದೊರೆಯುವ ವಿವರಣೆಗಳು ಜ್ಞಾನದ ಪ್ರಸರಣೆಯ ನೆಪದಲ್ಲಿ ಶ್ರೇಣೀಕತ ಸಾಮಾಜಿಕ ವ್ಯವಸ್ಥೆ ಕುರಿತ ಅಥವಾ ಸಂಸ್ಕೃತೀಕರಣ ಕುರಿತ ವರ್ಣನೆಗಳೇ ಹೊರತು ಈ ಪ್ರಭೇದಗಳ ಬಗೆಗೆ ಯಾವುದೇ ಜ್ಞಾನವನ್ನಾಗಲಿ, ಸಿದ್ಧಾಂತವನ್ನಾಗಲಿ ನೀಡುವುದಿಲ್ಲ. ಯುರೋಪಿಯನ್ನರ ಅನುಭವವಾದ ಸಾಮಾಜಿಕ ವ್ಯವಸ್ಥೆ ಮತ್ತದರ ಮಧ್ಯಕಾಲೀನ ಥಿಯಾಲಜಿಯಲ್ಲಿ (ಧರ್ಮಶಾಸ್ತ್ರ) ಮಾತ್ರ ಶ್ರೇಣೀಕರಣ ಮೂಲತತ್ವವಾಗಿದೆಯೇ ಹೊರತು ಭಾರತದಲ್ಲಿ ಇದು ಎಲ್ಲಿಯೂ ಕಾಣಸಿಗುವುದಿಲ್ಲ ಎಂಬುದನ್ನು ಯಾವ ವಿದ್ವಾಂಸರೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಇತ್ತೀಚಿನ ಕೆಲ ವಿದ್ವಾಂಸರು 'ಕ್ವಾರ್ಕ್ಸ್' ಮತ್ತು 'ಕ್ಷಿಯರ್ಸ್‌' ನಂತಹ ಪರಿಕಲ್ಪನೆಗಳನ್ನು ಹೇಗೆ ಅರ್ಥ ವಿನ್ಯಾಸ ಮಾಡುತ್ತಾರೋ ಹಾಗೆಯೇ ಈ ಜಾತಿ ಅಥವಾ ಮತವನ್ನು (ರಿಲಿಜನ್) ಅರ್ಥ ಮಾಡಿಕೊಳ್ಳಬಹುದು ಎಂದುಕೊಂಡಿದ್ದಾರೆ. ಹಾಗಾಗಿ ನಿಮಗೆ ಹೇಗೆ ಬೇಕೋ, ಏನು ಬೇಕೋ ಹಾಗೆ ಜಾತಿಯನ್ನು ಅರ್ಥೈಸಿಕೊಳ್ಳಬಹುದು ಎಂದೇ ತಿಳಿದುಕೊಂಡಿದ್ದಾರೆ (18 ನೇ ಶತಮಾನದ ಮೊದಲು ಇರದಿದ್ದ ಹಿಂದುಯಿಸಂ ಈಗ ರಿಲಿಜನ್ ಆಗಿಬಿಟ್ಟಿದೆ). ಮತ್ತೆ ಕೆಲವರಿಗೆ 'ಬ್ರಾಹ್ಮಿನಿಸಂ' (ಹಾಗೆಂದರೇನು ಎಂದು ಅರ್ಥವಾಗದಿದ್ದರೂ) ಎಂಬುದು ಜಾತಿ ವ್ಯವಸ್ಥೆಯಾಗಿದೆ.

ವಿಷಾದದ ಸಂಗತಿ ಎಂದರೆ ಈ ಎಲ ್ಲಪರಿಕಲ್ಪನೆಗಳು, ಶತಮಾನಗಳಿಂದ ಬುದ್ಧ, ಅಲ್ಲಮರಿಂದ ಹಿಡಿದು ಇತ್ತೀಚಿನ ಮಿಶನರಿಗಳು, ಉದಾರವಾದಿಗಳು ಹಾಗೂ ಮಾರ್ಕ್ಸ್ ವಾದಿಗಳವರೆಗೆ ಎಲ್ಲರೂ ಈ ಜಾತಿ ಮತಗಳ ವಿರುದ್ಧ ಹೋರಾಡುತ್ತಲೆೇ ಬಂದಿದ್ದಾರೆ ಎಂಬಂತೆ ವಾದ ಮಾಡುತ್ತಾರೆ. ಬುದ್ಧಿಜೀವಿಗಳ ಪ್ರಕಾರ ಬುದ್ಧ, ಅಲ್ಲಮರಂತಹ ಮೇರು ವ್ಯಕ್ತಿಗಳಿಗೇ ಈ ಜಾತಿವ್ಯವಸ್ಥೆಯನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಅಂದಿನಿಂದ ಈಗಿನವರೆಗಿನ ಎಲ್ಲ ವಿದ್ವಾಂಸರಿಗೆ ಇದು ಸವಾಲಾಗಿದ್ದರೂ ಇದೇನು ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಈಗಿನ ಅಕಡೆಮಿಕ್ ವಲಯದ ವಾದ. ಈ ಎಲ್ಲಾ ವಿಫಲ ಯತ್ನಗಳೂ ರಾಜ್ಯ, ರಾಜಕಾರಣಿಗಳ, ಬೌದ್ಧಿಕ ವರ್ಗದ ಜಾತಿ ನಿರ್ಮೂಲನೆಯ ಆಶಯವನ್ನು ಮತ್ತೂ ಗಟ್ಟಿಗೊಳಿಸಿದೆ.

ಇದರಲ್ಲೊಂದು ಸಣ್ಣ ತೊಡಕಿದೆ. ನಮ್ಮ ವಸಾಹತು ಪ್ರಭುಗಳಿಗೆ ಜಾತಿಗಣತಿ ನಮ್ಮ ಸಾಮಾಜಿಕ ಜಗತ್ತಿನ ವಿವರಣೆ ಕೊಡುವ ಪ್ರಕ್ರಿಯೆಯಾಗಿರಲಿಲ್ಲ್ಲ, ಬದಲಿಗೆ ಅದು, ಭಾರತದ ವಿವಿಧತೆಯನ್ನು ಅರ್ಥಮಾಡಿಕೊಳ್ಳಲು, ಆಡಳಿತಕ್ಕೆ ಅನುಕೂಲ ಮಾಡಿಕೊಡುವ ಕ್ರಿಯೆಯಾಗಿತ್ತು. ವಸಾಹತುಕಾಲದ ಆಡಳಿತಗಾರರು ಹಾಗೂ ಮಿಷನರಿಗಳ ಅನುಭವವನ್ನು ಭಾರತೀಯ ಸಾಮಾಜಿಕ ವಿವರಣೆಗಳಾಗಿ ನೋಡುವುದು ದೋಷ ಪೂರಿತ ತಿಳಿವಳಿಕೆಯಾಗುತ್ತದೆ. ಬದಲಾಗಿ ಅವನ್ನು ಭಾರತದಂತಹ ಸಮಾಜದಲ್ಲಿ ಆಡಳಿತ ನಡೆಸಲು, ವ್ಯವಹರಿಸಲು ಬೇಕಾದಂತಹ ಕ್ರಿಯಾಶೀಲ ಕ್ರಿಯೆಗಳನ್ನಾಗಿ ನೋಡುವುದು ಸದ್ಯದ ತುರ್ತಾಗಿದೆ. ಈಗಿನ ಜಾತಿಗಣತಿ ಅಂಥ ಕ್ರಿಯೆಗಳ ಪುನಾರಾವರ್ತನೆಯಾಗಿದೆ. ಆದರೆ ಈ ಬಗೆಯ ಯಥಾವತ್ತಾದ ಪುನರಾವರ್ತನೆ ನಮ್ಮ ಆಡಳಿತಾತ್ಮಕ ವಿಚಾರಗಳ ದೊಡ್ಡ ದುರಂತವಲ್ಲದೇ ಮತ್ತೇನು?

-ಲೇಖಕರು, ಪ್ರಾಧ್ಯಾಪಕರು, ಸೃಷ್ಟಿ ಸ್ಕೂಲ್‌ ಆಫ್‌ ಆರ್ಟ್‌, ಡಿಸೈನ್‌ ಅಂಡ್‌ ಟೆಕ್ನಾಲಜಿ
ಕೃಪೆ: ವಿಜಯಕರ್ನಾಟಕ
ಮುಜಾಪ್ಫರ್‌ ಅಸ್ಸಾದಿ
 
ಆಧುನಿಕತೆಯ ಸಂದರ್ಭದಲ್ಲಿ, ಜಾತಿಯ ಜನಗಣತಿ ಅನಿವಾರ್ಯವೇ? ಎಂಬ ಪ್ರಶ್ನೆಯೊಂದಿಗೆ ಈ ಲೇಖನವನ್ನು ಆರಂಭಿಸುತ್ತೇನೆ. ಈ ಪ್ರಶ್ನೆ ಕೇಳಲು ಕಾರಣವಿದೆ. ಆಧುನಿಕತೆ ತನ್ನ ಬೆಳವಣಿಗೆಯ ಸಂದರ್ಭದಲ್ಲಿ ಅಡ್ಡ ಬರುವ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ಬೆಳೆಯುತ್ತದೆ. ಸಾಂಪ್ರದಾಯಿಕ ಸಾಮಾಜಿಕ ಚೌಕಟ್ಟುಗಳನ್ನು ನಾಶಮಾಡುತ್ತದೆ. ಅಲ್ಲದೇ ಅದು ಎಲ್ಲಾ ಕಡೆ ತನ್ನ ಯಜಮಾನಿಕೆ­ಯನ್ನು ಸ್ಥಾಪಿಸುತ್ತಾ ಹೋಗುತ್ತದೆ ಎಂಬಿತ್ಯಾದಿ ಪರಿಕಲ್ಪನೆಗಳು ಚಾಲ್ತಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ಆಧುನಿಕತೆಯ ಕುರಿತು ಮಾತನಾಡುವಾಗ ಥಟ್ಟೆಂದು ನೆನಪಾಗುವುದು ವಸಾಹತುಶಾಹಿ ಆಧುನಿಕತೆ. ಇದರರ್ಥ ನಾವು ಮುಖಾಮುಖಿಯಾದದ್ದು ಒಂದೇ ರೂಪದ ಆಧುನಿಕತೆ ಎಂದರ್ಥ­ವಲ್ಲ. ವಸಾಹತುಶಾಹಿ ಆಧುನಿಕತೆಗೆ ಮುಖಾಮುಖಿಯಾದದ್ದು ದೇಸಿಯ ಆಧುನಿಕತೆ ಕೂಡ ಹೌದು. ವಸಾಹತುಶಾಹಿ ಆಧುನಿಕತೆಯ ದುರಂತವೆಂದರೆ ಅದು ಜಾತಿಯನ್ನು ನಿರ್ನಾಮ ಮಾಡಲು ಸಾಧ್ಯ­ವಾಗಲಿಲ್ಲ; ಅದರೊಂದಿಗೆ ಅನುಸಂಧಾನ ಮಾಡುತ್ತಾ ಹೋಯಿತು. ಅಷ್ಟು ಮಾತ್ರವಲ್ಲದೇ ಅದು ನೂರಾರು ಜಾತಿಗಳ ಹುಟ್ಟುವಿಕೆಗೆ ಕಾರಣೀಭೂತವಾಯಿತು. ಇದಕ್ಕೆಲ್ಲಾ 1931ರ ಜಾತಿ ಜನಗಣತಿ ಅಷ್ಟೇ ಕಾರಣವಾಯಿತು. ಲಾಗಾಯಿತಿನಿಂದ ಚಾಲ್ತಿಯಲ್ಲಿದ್ದ ಜಾತಿಗಳ ಪಟ್ಟಿಗೆ ಹೊಸ ಜಾತಿಗಳು ಸೇರ್ಪಡೆಯಾದವು. ಅದರ ತಪ್ಪು ಅಕ್ಷರಗಳ ಪಟ್ಟಿಗಳಿಂದಾಗಿ ಹೊಸ ಹೊಸ ಜಾತಿಗಳನ್ನು ಹುಟ್ಟಿದ್ದೂ ದಿಟ. ಕೆಲವು ಕಡೆ ಅದು ಜಾತಿಗಳಲ್ಲಿ ಗೊಂದಲಗಳನ್ನು ಸೃಷ್ಟಿಸಿತ್ತು. ಬಹಳಷ್ಟು ಸಂದರ್ಭದಲ್ಲಿ ಕಸುಬುಗಳೇ ಜಾತಿಗಳಾದವು. ಅಲ್ಲದೇ ಅದು ಜಾತಿಗಳ ನಡುವೆ ಬೈನರಿ ವಿರೋಧಗಳನ್ನು ನಿರ್ಮಿಸಿದ್ದು ಕೂಡ ದಿಟ. ಕ್ರಿಮಿನಲ್‌ ವರ್ಸಸ್‌ ನೋಟಿಫೈಡ್‌, ಬಹುಸಂಖ್ಯಾತ ವರ್ಸಸ್‌ ಅಲ್ಪ ಸಂಖ್ಯಾತ, ಹಿಂದುಳಿದ ವರ್ಸಸ್‌ ಮುಂದುವರಿದ ಇತ್ಯಾದಿ ಬೈನರಿಗಳನ್ನು ನಿರ್ಮಿಸುತ್ತಾ ಹೋಯಿತು. ಉತ್ತರ ಭಾರತದಲ್ಲಿ ಗೋತ್ರಗಳೇ ಜಾತಿಗಳಾದದ್ದು ಕೂಡ ಅಷ್ಟೇ ಸತ್ಯ. ಇದು ಜಾತಿಗಳ ನಡುವೆ ಗೊಂದಲಗಳನ್ನು ಸೃಷ್ಟಿಸಿದ್ದು ಈ ಸಂದರ್ಭದಲ್ಲಿ ಗಮನಿಸಬೇಕು. ಆಧುನಿಕತೆಯ ಲಾಭ ಪಡೆದ ಜಾತಿಗಳು ಮೇಲ್ಜಾತಿಯ ಅಥವಾ ಹೊಸ ಜಾತಿಗಳಾಗಿ ಗುರುತಿಸಬಹುದೇ? ಅಥವಾ ಅವುಗಳಿಗೆ ಹೊಸ ಸಾಮಾಜಿಕ ಸ್ಥಾನಮಾನವನ್ನು ನೀಡಬೇಕೆ?ಎಂಬಿತ್ಯಾದಿ ಗೊಂದಲಗಳು ಹುಟ್ಟಿದವು. ಇದರ ನಡುವೆ ಇನ್ನೊಂದು ಗೊಂದಲವಿತ್ತು. ಅದೇನೆಂದರೆ ಜಾತಿಯ ಒಳಗಿರುವ ಉಪಪಂಗಡಗಳಿಗೆ ಹೊಸ ಅಥವಾ ಭಿನ್ನ ಜಾತಿಯ ಅಸ್ಮಿತೆ ನೀಡ­ಬಹುದೇ? ಉದಾಹರಣೆಗೆ ಜಾಟರಲ್ಲಿರುವ ನೂರಾರು ಉಪಪಂಗಡ­ಗಳನ್ನು ಭಿನ್ನ ಜಾತಿಗಳಾಗಿ ಪರಿಗಣಿಸಬಹುದೇ? ಒಂದು ವೇಳೆ ಅವುಗಳನ್ನು ಬರೇ ಉಪಪಂಗಡಗಳಾಗಿ ಪರಿಗಣಿಸಿದರೇ ಅವುಗಳನ್ನು ಪುನಃ ಅಂಚಿಗೆ ತಳ್ಳಲ್ಪಡುವುದಿಲ್ಲವೇ?
1931ರ ಸುಮಾರಿಗೆ ಆರಂಭಗೊಂಡ ಗೊಂದಲಗಳು ಈಗಲೂ ಮುಂದುವರಿದುಕೊಂಡು ಹೋಗುತ್ತಿವೆ. ಆದ ಕಾರಣವೇ ಜಾತಿಯ ಚರ್ಚೆಗಳು ಈಗಲೂ ನಡೆಯುತ್ತಿ¤ವೆ, ಮುಂದೆಯೂ ನಡೆಯುತ್ತಿರುತ್ತವೆ.ಇದು ಅಪೂರ್ಣಗೊಂಡ ಆಧುನಿಕತೆಯ ಭಾಗ.

ಆಧುನಿಕತೆಯ ಕ್ರಿಯಾರೂಪಗಳು
ಇದೇ ಸಂದರ್ಭದಲ್ಲಿ ಆಧುನಿಕತೆಯ ಇನ್ನೊಂದು ಮುಖವನ್ನು ನೋಡಬೇಕು. ವಾಸ್ತವವಾಗಿ ವಸಾಹತುಶಾಹಿ ಆಧುನಿಕತೆ ಎಲ್ಲಾ ಜಾತಿಗಳನ್ನು ಒಳಗೊಳ್ಳಲು ಸಾಧ್ಯವಾಗಲೇ ಇಲ್ಲವೆಂದು ಹೇಳಬೇಕು. ಕೆಲವು ಜಾತಿಗಳನ್ನು ಮಾತ್ರ ಅದು ಮುಟ್ಟಲು ಅಸಾಧ್ಯವಾಯಿತು ಎಂದು ಹೇಳಬಹುದು. ವಾಸ್ತವವಾಗಿ ಭಾರತದಲ್ಲಿ ಆಧುನಿಕತೆ ಎಲ್ಲರಿಗೂ ಏಕಕಾಲದಲ್ಲಿ ತಲುಪುವ ಹಾಗೂ ವಿವೊàಚನೆಗೊಳಿಸುವ ಯೋಜನೆಯಾಗಿ ಪರಿವರ್ತಿತವಾಗಲಿಲ್ಲ. ಆಧುನಿಕತೆ ಗಟ್ಟಿಯಾಗಿ ನೆಲೆಯೂರಬೇಕಾದರೆ ವಿವಿಧ ಸಾಮಾಜಿಕ ಅಸ್ಮಿತೆಗಳನ್ನು ನಷ್ಟಗೊಳಿಸಬೇಕಾಗಿದ್ದು ಅನಿವಾರ್ಯವಾಗಿತ್ತು. ಆದರೆ ಅದು ಆ ರೀತಿ ಮಾಡಲೇ ಇಲ್ಲ. ಭಾರತ ಸಂದರ್ಭದ ಚಿತ್ರವೆಂದರೆ ಆಧುನಿಕತೆ ಜಾತಿಗಳೊಂದಿಗೆ ಅನುಸಂಧಾನ ಮಾಡುತ್ತಾ ಅದನ್ನು ಅಸ್ಮಿತೆಯ ಕುರುಹುವನ್ನಾಗಿ ಮಾಡಿತ್ತು. ಆದಕಾರಣ ಜಾತಿ ಆಧುನಿಕತೆಯ ಸಂದರ್ಭದಲ್ಲಿ ಅಸ್ಮಿತೆಯ ಕುರುಹುವಾಗಿ ಉಳಿಯಿತು. ಜಾತಿ ಭಾರತದ ವಾಸ್ತವಾಯಿತು.

ಅದರರ್ಥ ಜಾತಿ ತನ್ನ ಗಟ್ಟಿತನವನ್ನು ಉಳಿಸುತ್ತೆ ಎಂದರ್ಥವಲ್ಲ. ಎಷ್ಟೋ ಜಾತಿಗಳು ಆಧುನಿಕತೆಯ ಸಂದರ್ಭದಲ್ಲಿ ತಮ್ಮ ಜಾತಿಯ ಮೂಲ ಸ್ವರೂಪಗಳನ್ನು ಕಳೆದುಕೊಂಡದ್ದು ದಿಟ. ಆಧುನಿಕತೆಯ ಪ್ರತೀಕವಾದ ಪಾರ್ಲಿಮೆಂಟರಿ ಚೌಕಟ್ಟು,ಕೇಂದ್ರೀಕರಣ, ಕೈಗಾರಿಕೀ­ಕರಣ, ಇತ್ಯಾದಿ ಇದಕ್ಕೆ ಕಾರಣವಾಗಿರಬಹುದು. ಜಾತಿಗಳು ಪಾರ್ಲಿ­ಮೆಂಟರಿ ಚೌಕಟ್ಟಿನೊಂದಿಗೆ ಮುಖಾಮುಖಿಯಾದಾಗ ತಮ್ಮ ಮೂಲ ಸ್ವರೂಪಗಳನ್ನು ಕಳೆದುಕೊಳ್ಳವುದು ಅನಿವಾರ್ಯ­ವಾಗುತ್ತದೆ. ಪಾರ್ಲಿಮೆಂಟರಿ ಚೌಕಟ್ಟಿನಲ್ಲಿ ಜಾತಿಗಳು ಸಾಂಪ್ರ­ದಾಯಿಕ ಜಾತಿಗಳಂತೆ ವ್ಯವಹರಿಸಲು ಮತ್ತು ಪ್ರತಿಬಿಂಬಿಸಲು ಸಾಧ್ಯವಿಲ್ಲ. ಈ ಬದಲಾವಣೆ ಅನಿವಾರ್ಯವೂ ಹೌದು ಅವಶ್ಯಕವೂ ಹೌದು. ಪಾರ್ಲಿಮೆಂಟರಿ ಚೌಕಟ್ಟಿನಲ್ಲಿ ಸಾಂಪ್ರದಾಯಿಕ ಜಾತಿ ಸ್ವರೂಪ ಮತ್ತು ಚೌಕಟ್ಟಿನೊಂದಿಗೆ ರಾಜಕಾರಣ ಮಾಡಲು ಸಾಧ್ಯವಿಲ್ಲ. ಮಾಡಿದರೆ ಅವುಗಳು ಶಕ್ತಿ ರಾಜಕಾರಣದ ಭಾಗವಾಗಲು ಸಾಧ್ಯವಿಲ್ಲ. ಶಕ್ತಿ ರಾಜಕಾರಣದಲ್ಲಿ ಜಾತಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸುವುದು ಬೇರೆ ಬೇರೆ ಕಾಲದಲ್ಲಿ ಮತ್ತು ಬೇರೆ ಬೇರೆ ರೂಪದಲ್ಲಿ: ಚುನಾವಣೆ ಕಾಲದಲ್ಲಿ ಜಾತಿವಾರು ಟಿಕೆಟ್‌ಗಳನ್ನು ಕೇಳುವುದರೊಂದಿಗೆ ಆರಂಭವಾಗುವ ಈ ರಾಜಕಾರಣ ಅಧಿಕಾರದ ಹಂಚುವಿಕೆ ಹಾಗೂ ಆಧಿಕಾರದ ಭಾಗವಾಗುವ ತನಕ ಸಾಗುತ್ತದೆ. ಅಲ್ಲದೇ ಅದು ನಿತ್ಯದ ಅನುಸಂಧಾನದಲ್ಲಿ ಸಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಬೇರೆ ಬೇರೆ ಸಾರ್ವಜನಿಕ ನೀತಿಗಳ ಅನುಷ್ಟಾನದಲ್ಲಿ, ನಿರೂಪಣೆಗಳಲ್ಲಿ, ಅವುಗಳ ಬೇಡಿಕೆಗಳಲ್ಲಿ ನೋಡಬಹುದು.

ಶಕ್ತಿ ರಾಜಕಾರಣದ ಕಾರ್ಯವ್ಯೂಹ
ಶಕ್ತಿ ರಾಜಕಾರಣದಲ್ಲಿ ಬಹುಮುಖ್ಯವೆನಿಸುವುದು ಎರಡು ಅಂಶಗಳು: ಒಂದು, ಜಾತಿಯ ಸಂಖ್ಯೆ ಹಾಗೂ ಎರಡನೇದಾಗಿ ಜಾತಿಯ ಹಿಡಿತ. ಇದು ಅಸ್ಮಿತೆ ರಾಜಕಾರಣದ ಭಾಗವೂ ಹೌದು. ಸಂಖ್ಯಾ ಬಲದ ಮೇಲೆ ಜಾತಿಗಳು ಬಲಶಾಲಿ, ವಂಚಿತ, ದುರ್ಬಲ ಇತ್ಯಾದಿ ಬೈನರಿ (ವಿರೋಧ)ಗಳನ್ನು ನಿರ್ಮಿಸಿ ತಮ್ಮನ್ನು ತಾವೇ ವಿಶ್ಲೇಷಿಸುತ್ತವೆ. ಸಂಖ್ಯಾ ದೃಷ್ಟಿಯಿಂದ ಜಾತಿಯ ಸಂಖ್ಯೆ ಕಡಿಮೆ ಇದ್ದಾಗ ಅದಕ್ಕೆ ಶಕ್ತಿ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ಶಕ್ತಿ ರಾಜಕಾರಣದ ಅತ್ಯಂತ ಕನಿಷ್ಟ ಚೌಕಟ್ಟು ಆದ ಗ್ರಾಮ ಪಂಚಾಯತ್‌ನ ಚುನಾವಣೆಗೂ ನಿಲ್ಲಲು ಸಾಧ್ಯವಾಗುವುದಿಲ್ಲ. ನಿಂತರೂ ಗೆಲ್ಲಲು ಸಾಧ್ಯವಾಗುವುದೇ ಇಲ್ಲ. ಅವು ನಿರಂತರವಾಗಿ ಸೋತುಹೋಗುತ್ತಾ ಹೋಗುತ್ತವೆ. ಪುನಃ ಪುನಃ ತಳ ಸಮುದಾಯಗಳಾಗಿ ಪರಿವರ್ತಿತ­ವಾಗುತ್ತಾ ಹೋಗುತ್ತದೆ. ದುರಂತವೆಂದರೆ ಇಂತಹ ಸಮುದಾಯ­ಗಳು ನಮ್ಮಲ್ಲಿ ಅಸಂಖ್ಯಾತ ಇವೆ. ಇವುಗಳನ್ನು ಹೊಸತಾಗಿ ಲೆಕ್ಕ ಹಾಕುವುದು ಅನಿವಾರ್ಯವಾಗುತ್ತದೆ.

ಆಧುನಿಕತೆಯ ಇನ್ನೊಂದು ದೊಡ್ಡ ದುರಂತವೆಂದರೆ ಅದು ಸಿಮೆಟಿಕ್‌ ಧರ್ಮಗಳ ಒಳಗೆ ಇರುವ ಜಾತಿಗಳನ್ನು ಲೆಕ್ಕ ಹಾಕುವುದೇ ಇಲ್ಲ. ಸಿಮೆಟಿಕ್‌ ಧರ್ಮಗಳು ಭಾರತದಲ್ಲಿ ಹುಟ್ಟದಿದ್ದ ಕಾರಣ ಅವುಗಳಲ್ಲಿ ಜಾತಿಗಳಿಲ್ಲ ಎಂಬ ಪೂರ್ವನಿರ್ಧಾರಿತ ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಆದ ಕಾರಣ ಮುಸ್ಲಿಂರಲ್ಲಿರುವ ವಿವಿಧ ಜಾತಿ­ಗಳನ್ನಾಗಲೀ, ಕ್ರಿಶ್ಚಿಯನ್ನಲ್ಲಿರುವ ಜಾತಿಗಳನ್ನಾಗಲೀ ಅದು ಪರಿಗಣಿಸು­ವುದೇ ಇಲ್ಲ. ಆದರೆ ಸಿಖ್ಖರಲ್ಲಿ,ಬೌದ್ಧರಲ್ಲಿ ಜಾತಿಗಳನ್ನು ಗುರುತಿಸುವಾಗ ಅದಕ್ಕೆ ಕಷ್ಟವೆನಿಸುವುದಿಲ್ಲ.

ಆಧುನಿಕತೆಯ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕಾದರೆ ಹೊಸ ಜಾತಿಯ ಪಟ್ಟಿ ಅನಿವಾರ್ಯ. ಇಲ್ಲದಿದ್ದರೆ ದುರ್ಬಲ ಜಾತಿಗಳು ಇನ್ನೂ ದುರ್ಬಲವಾಗುತ್ತಾ ಇತಿಹಾಸದ ಭಾಗಗಳಾ­ಗುತ್ತವೆ.ಇದು ಭಾರತದ ದುರಂತವೆಂದರೆ ತಪ್ಪೇನಲ್ಲ.

 -ಲೇಖಕರು, ಮೈಸೂರು ವಿವಿಯ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಅಧ್ಯಕ್ಷರು

ಜಿ. ಸಿವರಾಮಕೃಷ್ಣನ್



ಕರ್ನಾಟಕ ಸರ್ಕಾರ ಏಪ್ರಿಲ್‌ನಿಂದ ಜಾತಿ ಜನಗಣತಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಕೇವಲ ಜಾತಿಗಣತಿ ಮಾತ್ರವಲ್ಲದೆ ಆರ್ಥಿಕ, ಸಾಮಾಜಿಕ ಸನ್ನಿವೇಶಗಳ ಸಮೀಕ್ಷೆಯೂ ಆಗಿದೆ. ಅಲ್ಲದೆ, ವಾಸ್ತವಿಕತೆಯನ್ನು ಅರಿತು ಸಾಮಾಜಿಕ ನ್ಯಾಯದ ಕಡೆಗೆ ಚಲಿಸಲು ಇದು ಸಹಕಾರಿ ಎಂದು ಜಾತಿಗಣತಿಯ ಪರ ಇರುವವರು ವಾದಿಸುತ್ತಿದ್ದಾರೆ. ಈ ಆಶಯ ಈಡೇರಿದರೆ ಒಳಿತು.ಆದರೆ, ಇಂತಹ ಸಮೀಕ್ಷೆಗಳಿಂದ ನೈಜ ಮಾಹಿತಿ ದೊರಕಲು ಸಾಧ್ಯವೆ ಎನ್ನುವ ಅನುಮಾನ ಮೂಡುತ್ತಿದೆ. ಈ ಅನುಮಾನಕ್ಕೆ ಕಾರಣ ಇಲ್ಲದೇ ಇಲ್ಲ. ಹಾಗೆಂದು ಈ ಅನುಮಾನದಿಂದ ಗಣತಿ ನಿಲ್ಲಬೇಕೆಂದೇನೂ ಅಲ್ಲ. ಬದಲಾಗಿ ಸಮೀಕ್ಷೆಗೆ ಮೊದಲು ಮತ್ತು ನಂತರ ವಹಿಸಬೇಕಾದ ಎಚ್ಚರದ ಕಡೆಗೆ ನಾನಿಲ್ಲಿ ಗಮನ ಸೆಳೆಯಬಯಸುತ್ತೇನೆ. ಇದಕ್ಕೆ ಇದುವರೆಗೂ ಆದ ಗಣತಿಗಳ ಪರಿಣಾಮಗಳನ್ನೇ ಆಧಾರವಾಗಿ ಬಳಸಿಕೊಳ್ಳುತ್ತೇನೆ.

ಬ್ರಿಟಿಷ್ ಪ್ರಭುತ್ವ, 1850ರಿಂದ 1875ರವರೆಗೆ ಹಲವು ರೀತಿಯ ಸಣ್ಣ ಪುಟ್ಟ ಸಮೀಕ್ಷೆಗಳನ್ನು ತನ್ನ ಅಧೀನದಲ್ಲಿದ್ದ ಪ್ರಾಂತ್ಯಗಳಲ್ಲಿ ಮಾಡಿ ತನ್ನ ಪಾರ್ಲಿಮೆಂಟ್‌ಎದುರಿಗೆ 60 ಪುಟಗಳ ವರದಿಯೊಂದನ್ನು ಮಂಡಿಸಿತ್ತು. ಆ ವರದಿಯಲ್ಲಿ, ಬ್ರಿಟಿಷ್ ಭಾರತದ ಒಟ್ಟು ಜನಸಂಖ್ಯೆಯಲ್ಲಿ 19, 0363048 ಹಿಂದೂಗಳ ಜನಸಂಖ್ಯೆ 14.5 ಕೋಟಿ (71.%) ಇದ್ದರೆ, ಇದರಲ್ಲಿ 'ಬಹಿಷ್ಕೃತರು' ಎಂದು ಗುರುತಿಸುವ ಜಾತಿಗಳ ಜನಸಂಖ್ಯೆ 87,12 998(4.5%) ಎಂದು ನಮೂದಿಸಿತ್ತು. ಈ ವರದಿಯ ನಂತರ ನಡೆದ ಗಣತಿಗಳಲ್ಲಿ ಹಿಂದೂಗಳ ಒಟ್ಟು ಜನಸಂಖ್ಯೆಯಲ್ಲಿ 'ಬಹಿಷ್ಕೃತರ' ಜನಸಂಖ್ಯೆಯನ್ನು ಪ್ರತಿ ಜನಗಣತಿಯಲ್ಲಿ ಹೆಚ್ಚಿಸುತ್ತಾ ಹೋಗಿ ಅಂತಿಮ ಜಾತಿ ಗಣತಿಯಲ್ಲಿ ಅಂದರೆ 1931ರ ವರದಿಯಲ್ಲಿ 'ಬಹಿಷ್ಕೃತರ' ಸಂಖ್ಯೆ ಶೇ.21.5 ರಷ್ಟು ಇದೆಯೆಂದು ನಮೂದಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇವಲ ಐದೇ ದಶಕಗಳಲ್ಲಿ ಹಿಂದೂಗಳ ಒಟ್ಟು ಸಂಖ್ಯೆಯಲ್ಲಿ ಬಹಿಷ್ಕೃತರ ಸಂಖ್ಯೆಯು ಶೇಕಡಾವಾರು 4.5ರಿಂದ 21.2ಕ್ಕೆ ಹೆಚ್ಚಾಗಿರುವುದು! ಇದು ಹೇಗೆ ಸಾಧ್ಯ? 1875ರಲ್ಲಿ 4.5%ರಷ್ಟಿದ್ದ ಜಾತಿಗಳ ಜನರಲ್ಲೇ ಈ ಸಂಖ್ಯೆ ಹೆಚ್ಚಿಲ್ಲ. ಬದಲಾಗಿ 1875ರ ನಂತರದಿಂದ 1893ರವರಗೆ ನಡೆದ ಪ್ರತಿಜನಗಣತಿಯವರಗೆ ಕ್ರಮೇಣ ಒಟ್ಟು ಹಿಂದೂ ಜಾತಿಗಳಲ್ಲಿದ್ದ ಬೇರೆ ಬೇರೆ ಜಾತಿಗಳನ್ನು ಬಹಿಷ್ಕೃತರು (ಈ ಹಿಂದೆ ಹೀಗೆ ಗುರುತಿಸಿರಲಿಲ್ಲ) ಎಂದು ಗುರುತಿಸಿ ಶೇಕಡ 8, 5, 15 ಹೀಗೆ ಹೆಚ್ಚಿಸುತ್ತಲೇ ಹೋಗಿ 1931ರ ವೇಳೆ ಶೇ. 21.5 ಎಂದು ಗುರುತಿಸಲಾಯಿತು. ಅಂದರೆ ಪ್ರತಿ ಗಣತಿಯಲ್ಲಿಯೂ ಆಯಾ ಜನ ಗಣತಿಯ ಅಧ್ಯಕ್ಷ್ಯರು ತಮ್ಮದೇ ಆದ ಮಾನದಂಡಗಳನ್ನು ಅನುಸರಿಸಿ ಹಿಂದೂಗಳಲ್ಲಿ ಅನೇಕ ಜಾತಿಗಳನ್ನು ಬಹಿಷ್ಕೃತರ ಪಟ್ಟಿಗೆ ಸೇರಿಸುತ್ತಲೇ ಹೋದದ್ದರಿಂದಲೇ ಈ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗಿದೆ. ಇದರ ಜತೆಗೆ 1890ರ ಜನಗಣತಿಯ ಕಮಿಶನರ್ ಆಗಿದ್ದ ರಿಸ್ಲೆಯಂತ ಅಧಿಕಾರಿಗಳು ತಮ್ಮದೇ ಆದ ಅಖಿಲ ಭಾರತೀಯ ಜಾತಿ ಶ್ರೇಣಿಕರಣದ ಒಂದು ಪಟ್ಟಿ ತಯಾರಿಸಿ ಭಾರತದ ವಿವಿಧ ಜಾತಿಗಳ ಈ ಪಟ್ಟಿಯಲ್ಲಿ ಜೋಡಿಸುತ್ತಾನೆ. ಇದರ ಪರಿಣಾಮದಿಂದಲೇ ಅನೇಕ ಜಾತಿ ಸಂಘಟನೆಗಳು ದೇಶದ್ಯಾಂತ ಉದ್ಭವಿಸಿದವು. ತಮ್ಮ ಸ್ಥಾನವನ್ನು ಶ್ರೇಣಿಯ ಯಾವ ಸ್ಥಾನದಲ್ಲಿ ಇರಿಸಬೇಕು ಎನ್ನುವುದರ ಕುರಿತಾಗಿ ಅಧಿಕಾರಿಗಳು ತೆಗೆದುಕೊಂಡ ತೀರ್ಮಾನಗಳನ್ನು ಪ್ರಶ್ನಿಸಿ, ಮನವಿ ಸಲ್ಲಿಸುವುದು, ಹೋರಾಟ ಮಾಡುವ ಕೆಲಸಗಳನ್ನು ಮಾಡಿದ್ದಾರೆ. ಉದಾಹರಣೆಗೆ ತಮಿಳುನಾಡಿನ ನಾಡರು ತಮ್ಮನ್ನು ರಿಸ್ಲೆಯು ಗುರುತಿಸಿದ ಶ್ರೇಣಿಗಿಂತ ಮೇಲೆ ಇರಿಸಬೇಕು, ತಮ್ಮನ್ನು ಕ್ಷತ್ರಿಯ ನಾಡರು ಎಂದು ಗುರುತಿಸಬೇಕು ಎಂದು ಹೋರಾಟ ಮಾಡಿದರು. ಮಾತ್ರವಲ್ಲ, ತಮ್ಮ ಜಾತಿ ಜನರಿಗೆ ತಮ್ಮ ಹೆಸರನ್ನು 'ಕ್ಷತ್ರಿಯ ನಾಡರು' ಎಂದು ಹೇಳಬೇಕೆಂದು ಕರೆ ಕೊಡಲಾರಂಭಿಸಿದರು. ಹಾಗೆಯೇ ಪಳ್ಳಿ ಎನ್ನುವ ಜಾತಿ (ಇಂದಿನ ವಹ್ನಿಯರು) ತಾವು ಕ್ಷತ್ರಿಯರು ಎನ್ನುವುದಕ್ಕೆ ಹಲವು ಆಧಾರಗಳೊಂದಿಗೆ ಹೋಗಿ ತಮ್ಮನ್ನು ವಹ್ನಿಯ ಕುಲ ಕ್ಷತ್ರಿಯರು ಎಂದು ಗುರುತಿಸುವಂತೆ ಹೋರಾಟ ಮಾಡಿದರು. ಇದರ ಪರಿಣಾಮ 1931ರಗಣತಿ ವೇಳೆಗೆ ಪಳ್ಳಿ ಎನ್ನುವ ಜಾತಿ ಹೆಸರನ್ನು ತೆಗೆದು ವಹ್ನಿಕುಲ ಕ್ಷತ್ರಿಯರು ಎಂದೇ ನಮೂದಿಸುವಂತಾಯಿತು.

ಅಧ್ಯಕ್ಷ ಮರ್ಜಿಗೆ ತಕ್ಕಂತೆ ಮಾನದಂಡಗಳು ಬದಲು ಆಯಾ ಜನಗಣತಿಯ ಅಧ್ಯಕ್ಷರೂ ಅವರದ್ದೇ ತರ್ಕಗಳನ್ನು ಅನುಸರಿಸಿ ಈ ಪಟ್ಟಿಗಳನ್ನು ಮಾಡಿದ್ದಾರೆ. ಆದರೆ ಈ ತರ್ಕಗಳಿಗೆ ಬಳಸಿದ ಆಧಾರಗಳ ಸಾಚಾತನದ ಬಗೆಗೆ ಇದುವರೆಗೂ ಚರ್ಚೆಯಾಗಿಲ್ಲ. ಉದಾಹರಣೆಗೆ 1891ರ ಜನಗಣತಿಯಲ್ಲಿ ಪಂಜಾಬ್‌ನಲ್ಲಿ 1 ಲಕ್ಷ ಜಾತಿಗಳಿವೆ ಎಂದು ಗುರುತಿಸಿ, 1911ರ ವೇಳೆಗೆ ಅದನ್ನು 50 ಸಾವಿರಕ್ಕೆ ಪರಿಷ್ಕರಿಸಿ ಇಳಿಸಲಾಯಿತು. ಇಂಥ ಏರಿಕೆ ಮತ್ತು ಇಳಿಕೆಗಳ ಪರಿಷ್ಕರಣೆಗೆ ಹಲವು ಉದಾಹರಣೆಗಳನ್ನು ಕೊಡಬಹುದು. ಆದರೆ ಇಂತಹ ಪರಿಷ್ಕರಣೆಯ, ಗುರುತಿಸುವಿಕೆಯ 'ಆಟ'ಕ್ಕೆ ಇರುವ ಮಾನದಂಡಗಳ ಬಗೆಗೆ ಚರ್ಚೆಗಳು ಏರ್ಪಡಬೇಕು. ಯಾವುದೋ ಮಾನದಂಡ ಜನಗಣತಿಯ ಆಯೋಗಕ್ಕೆ ಇರಬಹುದಾದರೂ ಅದು ವಸ್ತುಸ್ಥಿತಿಯನ್ನು ವ್ಯಕ್ತಪಡಿಸುವುಕ್ಕೆ ಸಹಾಯಕವೇ? ಎನ್ನುವುದು ಸದ್ಯ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

ಪ್ರವರ್ಗಗಳ ಸಮಸ್ಯೆ
ಇದರ ಜತೆಗೆ ಹಲವು ಜಾತಿಗಳು ತಮ್ಮದೇ ಪ್ರವರ್ಗಗಳನ್ನು ಸೃಷ್ಟಿಸಿಕೊಂಡು, ಅದರಲ್ಲಿ ತಮ್ಮನ್ನು ಗುರುತಿಸಬೇಕು ಎಂದು ಬೇಡಿಕೆ ಇಟ್ಟು, ಅದು ಜಾರಿಯಾಗುವಂತೆ ಮಾಡಿದರು. ಅಂತಹ ಪ್ರವರ್ಗಗಳಲ್ಲಿ ಆದಿ ಅಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮುಖ್ಯವಾದವು. ಯಾರಾದರೂ ಈ ಪ್ರವರ್ಗಗಳನ್ನು ನಮೂದಿಸಿ ಎಂದು ಹೇಳಿದರೆ, ತೀರ ಕಷ್ಟವಾಗುತ್ತದೆ. ಏಕೆಂದರೆ ಇದು ಜಾತಿಗಳನ್ನು ಮರೆ ಮಾಚಿ, ಪ್ರವರ್ಗಗಳನ್ನು ನಮೂದಿಸುತ್ತವೆ. ಈ ಪ್ರವರ್ಗಗಳನ್ನು ಯಾರು ಬೇಕಾದರೂ ಅಳವಡಿಸಿಕೊಂಡು ಬಿಡಬಹುದು. ಇದರಿಂದಾಗಿ ನಿಜವಾಗಿ ತಾರತಮ್ಯ ಅನುಸರಿಸುತ್ತಿರುವ ಜಾತಿ ಯಾವುದು ಎಂದು ಗುರುತಿಸುವುದು ಕಷ್ಟವಾಗುತ್ತದೆ.

ಕರ್ನಾಟಕ ಸರ್ಕಾರ ನೇಮಿಸಿದ ಹಿಂದುಳಿದ ವರ್ಗಗಳ ಆಯೋಗವೊಂದರ ಮುಂದೆ ಸಮಾಜ ಶಾಸ್ತ್ರಜ್ಞರ ಗುಂಪೊಂದು, ಜಾತಿ ಗುರುತಿಸುವಿಕೆಯ ಸಮಸ್ಯೆಗಳನ್ನು ಇಟ್ಟಾಗ, ಅವರು ಹೇಳಿದ ಮಾತು ಹೀಗಿತ್ತು: ''ಸದ್ಯಕ್ಕೆ ಬೌದ್ಧಿಕವಾಗಿ ಏನೂ ಹೇಳುವುದು ಬೇಡ, ಈಗ ಯಾರನ್ನು ಹೇಗೆ ಗುರುತಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಒಂದು ಮಾನಂದಂಡ ಸಿದ್ಧವಾಗಿದೆ. ಅದಕ್ಕೆ ತಕ್ಕಂತೆ ವರದಿ ತಯಾರಿಸಲಾಗುವುದು,'' ಇಂತಹ ಉತ್ತರಗಳು ವಾಸ್ತವದ ಬಗೆಗಿನ ಕಾಳಜಿಗಿಂತ ಇರುವ ಮಾನದಂಡಕ್ಕೆ ವಾಸ್ತವವನ್ನು ಹೊಂದಿಸುವ ಪ್ರಯತ್ನವನ್ನೇ ತೋರಿಸುತ್ತವೆ. ಇದರಿಂದಾಗುವ ಪ್ರಯೋಜನವೂ ಅಷ್ಟಕ್ಕಷ್ಟೆ. ಏಕೆಂದರೆ ಜಾತಿ ಎನ್ನುವುದು ಒಂದು ನಿರ್ದಿಷ್ಟವಾದ ಜನ ಸಮುದಾಯವನ್ನು ಸೂಚಿಸುವ ಪರಿಕಲ್ಪನೆಯೇ? ಎನ್ನುವುದು ಇನ್ನೂ ಸಷ್ಟವಾಗಿಲ್ಲ. ಕೇಳುವ ಪ್ರಶ್ನೆ, ಸಂದರ್ಭಗಳನ್ನು ಅನುಸರಿಸಿಯೇ, ಜಾತಿ ಯಾವುದು ಎನ್ನುವ ಉತ್ತರ ಜನರಿಂದ ದೊರಕುತ್ತದೆ. ಇದಕ್ಕೆ ಅನೇಕ ಸಮಾಜಶಾಸ್ತ್ರೀಯ ಅಧ್ಯಯನಗಳನ್ನು ಸಾಕ್ಷಿಯಾಗಿ ಕೊಡಬಹುದು.

ಸದ್ಯ ಮೀಸಲಾತಿ, ರಾಜಕಾರಣದಿಂದ ದೊರಕುವ ಲಾಭಗಳು ಜನರು ನೀಡುವ ಉತ್ತರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ. ಈ ಎಲ್ಲಾ ಕಾರಣದಿಂದ ಯಾವ ರೀತಿಯ ಪ್ರಶ್ನೆಗಳ ಮೂಲಕ ಜನರಿಂದ ಮಾಹಿತಿಗಳನ್ನು ಪಡೆಯಲಾಗುತ್ತದೆ. ಅನಂತರ ಆ ಮಾಹಿತಿಯ ವರ್ಗೀಕರಣಕ್ಕೆ ಯಾವ ವಿಧಾನ ಅನುಸರಿಸಲಾಗುತ್ತದೆ ಎನ್ನುವುದರ ಬಗೆಗೆ ಸಾರ್ವಜನಿಕವಾದ ಚರ್ಚೆಗಳು ಏರ್ಪಡಬೇಕಾಗಿದೆ. ಇಲ್ಲದಿದ್ದರೆ ಜಾತಿಗಣತಿಯಿಂದ ನೈಜವಾದ ಮಾಹಿತಿಯ ಸಂಗ್ರಹಣೆ ಅನುಮಾನ ಎಂದೇ ಹೇಳಬೇಕು.
ಮಾತ್ರವಲ್ಲದೆ ಆರ್ಥಿಕ, ಸಾಮಾಜಿಕ ಸನ್ನಿವೇಶಗಳ ಸಮೀಕ್ಷೆಯೂ ಆಗಿದೆ. ಅಲ್ಲದೆ, ವಾಸ್ತವಿಕತೆಯನ್ನು ಅರಿತು ಸಾಮಾಜಿಕ ನ್ಯಾಯದ ಕಡೆಗೆ ಚಲಿಸಲು ಇದು ಸಹಕಾರಿ ಎಂದು ಜಾತಿಗಣತಿಯ ಪರ ಇರುವವರು ವಾದಿಸುತ್ತಿದ್ದಾರೆ. ಈ ಆಶಯ ಈಡೇರಿದರೆ ಒಳಿತು.ಆದರೆ, ಇಂತಹ ಸಮೀಕ್ಷೆಗಳಿಂದ ನೈಜ ಮಾಹಿತಿ ದೊರಕಲು ಸಾಧ್ಯವೆ ಎನ್ನುವ ಅನುಮಾನ ಮೂಡುತ್ತಿದೆ. ಈ ಅನುಮಾನಕ್ಕೆ ಕಾರಣ ಇಲ್ಲದೇ ಇಲ್ಲ. ಹಾಗೆಂದು ಈ ಅನುಮಾನದಿಂದ ಗಣತಿ ನಿಲ್ಲಬೇಕೆಂದೇನೂ ಅಲ್ಲ. ಬದಲಾಗಿ ಸಮೀಕ್ಷೆಗೆ ಮೊದಲು ಮತ್ತು ನಂತರ ವಹಿಸಬೇಕಾದ ಎಚ್ಚರದ ಕಡೆಗೆ ನಾನಿಲ್ಲಿ ಗಮನ ಸೆಳೆಯಬಯಸುತ್ತೇನೆ. ಇದಕ್ಕೆ ಇದುವರೆಗೂ ಆದ ಗಣತಿಗಳ ಪರಿಣಾಮಗಳನ್ನೇ ಆಧಾರವಾಗಿ ಬಳಸಿಕೊಳ್ಳುತ್ತೇನೆ.

-ಲೇಖಕರು ಸಮಾಜ ಶಾಸ್ತ್ರಜ್ಞ
 ಚಂದ್ರಪೂಜಾರಿ ಎಂ.


ಕರ್ನಾಟಕ ಸರಕಾರದ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಸರಕಾರದ ಪ್ರಕಾರ ಇದು ಸುಪ್ರೀಂಕೋರ್ಟ್ ಆದೇಶದ ಪಾಲನೆ. ಇದುವರೆಗೆ ಬಲಾಢ್ಯರು, ರಾಜಕೀಯ ಪ್ರಭಾವವುಳ್ಳವರು ಮಾತ್ರ ಸವಲತ್ತು, ಸ್ಥಾನಮಾನಗಳನ್ನು ಪಡೆಯುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಲು ಜಾತಿ ಸಮೀಕ್ಷೆ ಅನಿವಾರ‌್ಯ ಎನ್ನುವುದು ಸಮೀಕ್ಷೆಯನ್ನು ಬೆಂಬಲಿಸುವವರ ನಿಲುವು. ಸಮೀಕ್ಷೆಯನ್ನು ವಿರೋಧಿಸುವವರ ಪ್ರಕಾರ ಈ ಸಮೀಕ್ಷೆ ಜಾತಿ ಪ್ರಜ್ಞೆಯನ್ನು ಜೀವಂತ ಇರಿಸಬಹುದು. ಕೆಲವು ದಶಕಗಳ ಆಧುನೀಕರಣ ಪ್ರಕ್ರಿಯೆಂದಲೋ ಅಥವಾ ರಾಜಕೀಯದಿಂದಲೋ ಉಪಜಾತಿಗಳ ನಡುವೆ ಮತ್ತು ಜಾತಿಗಳ ನಡುವೆ ಹೊಂದಾಣಿಕೆ ಸಾಧ್ಯವಾಗಿದೆ. ಈ ಸಮೀಕ್ಷೆಯಿಂದ ಇಂತಹ ಹೊಂದಾಣಿಕೆ ಕಾಣೆಯಾಗಿ ಉಪಜಾತಿಗಳ ನಡುವೆ ಮತ್ತು ಜಾತಿ ಜಾತಿಗಳ ನಡುನ ಬಿರುಕು ಹೆಚ್ಚಾಗಬಹುದೆನ್ನುವುದು ವಿರೋಧಿಸುವವರ ವಾದ. ಈ ಪರ ವಿರೋಧಗಳನ್ನು ಮುಖಬೆಲೆಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಇಂದಿನ ಅಭಿವೃದ್ಧಿ ರಾಜಕೀಯಗಳ ಹಿನ್ನೆಲೆಯಲ್ಲಿ ಈ ವಾದಗಳನ್ನು ವಿಶ್ಲೇಷಿಸಬೇಕಾಗಿದೆ.

ಮೊದಲಿಗೆ ವಿವಿರೋಧಿಸುವವರ ವಾದವನ್ನು ಪರಿಶೀಲಿಸುವ. ಅವರ ಪ್ರಕಾರ ಜಾತಿ ಸಮೀಕ್ಷೆ ಜಾತಿಗಳ ಮತ್ತು ಉಪಜಾತಿಗಳ ನಡುವೆ ಒಡಕನ್ನುಂಟುಮಾಡಬಹುದು. ಜಾತಿ ಸಮೀಕ್ಷೆಯನ್ನು ವಿರೋಧಿಸುವವರ ಈ ವಾದ ಮಹಿಳೆಯರ ಅತ್ಯಾಚಾರಕ್ಕೆ ಅವರ ಉಡುಗೆತೊಡುಗೆಗಳೇ ಕಾರಣ ಎನ್ನುವಷ್ಟು ಬಾಲಿಶವಾಗಿದೆ. ಎರಡೂ ಕಡೆ - ಮಹಿಳಾ ಅತ್ಯಾಚಾರ ಹಾಗು ಜಾತಿ (ಧರ್ಮ)ಗಳ ನಡುವೆ ಒಡಕ್ಕನ್ನು ಸೃಷ್ಟಿಸುವವರಲ್ಲಿ ಬಲಾಢ್ಯರ ಪಾತ್ರವೇ ಹೆಚ್ಚಿದೆ. ಅಧಿಕಾರ ಹಾಗು ಸಂಪನ್ಮೂಲಗಳ ಒಡೆತನ ಇವರಿಗೆ ಇಂತಹ ಕ್ರಿಮಿನಲ್ ಕೆಲಸಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕೊಡುತ್ತಿವೆ. ಇಂತಹ ಬಲಾಢ್ಯರ ರಾಜಕೀಯದ ಮೇಲೆ ಜಾತಿ ಸಮೀಕ್ಷೆ ಅದರಲ್ಲೂ ಉಪಜಾತಿಗಳ ಅಂಕಿಅಂಶಗಳು ಯಾವ ಪರಿಣಾಮ ಬೀರಬಹುದೆಂದು ಈಗಲೇ ಹೇಳುವುದು ಕಷ್ಟ. ಇಂದು ಪ್ರತಿ ಜಾತಿ ಹಾಗೂ ಉಪಜಾತಿಗಳಲ್ಲಿರುವ ಬಡವರು, ಮಧ್ಯಮ ವರ್ಗ ಹಾಗು ಶ್ರೀಮಂತರ ಬಗ್ಗೆ ಮಾಹಿತಿ ಇಲ್ಲ. ವಿವಿಧ ಜಾತಿ, ಉಪಜಾತಿಯ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ನಿರ್ದಿಷ್ಟ ಜಾತಿಗೆ ಸೇರಿದ ನಾವೆಲ್ಲ ಒಂದೇ ಎಂದು ಒಪ್ಪಿಸುವುದು ಆಯಾಯ ಜಾತಿ ನಾಯಕರಿಗೆ ಸುಲಭವಾಗಿದೆ. ಮಾಹಿತಿ ಕೊರತೆಯಿಂದ ಸಾಧ್ಯವಾದ ಈ ಒಗ್ಗಟ್ಟಿನ ಲಾಭವನ್ನು ಆಯಾಯ ಜಾತಿಯ ಅನುಕೂಲಸ್ಥರು ಪಡೆಯುತ್ತಿದ್ದಾರೆ.

ಈ ಸಮೀಕ್ಷೆ ವಿವಿಧ ಜಾತಿ ಉಪಜಾತಿಗಳಲ್ಲಿರುವ ಕುಟುಂಬಗಳ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಅಂಕಿಅಂಶಗಳನ್ನು ಸೃಷ್ಟಿಸುತ್ತದೆ. ಇವನ್ನು ಬಳಸಿಕೊಂಡು ಪ್ರತಿ ಜಾತಿಯಲ್ಲಿರುವ ಬಡ, ಮಧ್ಯಮ ಹಾಗು ಶ್ರೀಮಂತ ಕುಟುಂಬಗಳನ್ನು ಗುರುತಿಸಬಹುದು. ಈ ಅಂಕಿಅಂಶಗಳನ್ನು ಪ್ರಗತಿಪರ ರಾಜಕೀಯಕ್ಕು ಬಳಸಬಹುದು ಅಥವಾ ಇಂದು ಚಾಲ್ತಿಯಲ್ಲಿರುವ ಗುರುತಿನ (ಐಡೆಂಟಿಟಿ) ರಾಜಕೀಯವನ್ನು ಮುಂದುವರಿಸಲೂ ಬಳಸಬಹುದು. ಸಮೀಕ್ಷೆ ಸೃಷ್ಟಿಸುವ ಅಂಕಿಅಂಶಗಳನ್ನು ಬಳಸಿಕೊಂಡು ಎಲ್ಲ ಜಾತಿಗಳಲ್ಲಿರುವ ಬಡವರ ಸಮಸ್ಯೆಗಳು ಒಂದೇ ಮತ್ತು ಇದರ ಪರಿಹಾರಕ್ಕೆ ಇವರೆಲ್ಲ ಸಂಘಟಿತರಾಗಿ ವ್ಯವಹರಿಸುವುದು ಬಿಟ್ಟರೆ ಬೇರೆ ದಾರಿ ಎಲ್ಲ ಎನ್ನುವ ಪ್ರಜ್ಞೆ ಮೂಡಿಸಲು ಸಾಧ್ಯವಾದರೆ ಈ ಸಮೀಕ್ಷೆ ಪ್ರಗತಿಪರ ರಾಜಕೀಯಕ್ಕೆ ಎಡೆಮಾಡಿಕೊಡಬಹುದು. ಇಲ್ಲವಾದರೆ ಈಗ ಚಾಲ್ತಿಯಲ್ಲಿರುವ ಗುರುತಿನ ರಾಜಕೀಯ ಇನ್ನೂ ವಿಸ್ತೃತ ರೂಪದಲ್ಲಿ ಮುಂದವರಿಯಬಹುದು. ಅಂದರೆ ಉಪಜಾತಿಗಳ ಬಲಾಢ್ಯರು ಪ್ರತ್ಯೇಕ ಸ್ಥಾನಮಾನ, ಸವಲತ್ತುಗಳನ್ನು ಕೇಳಬಹುದು.

ಬಡತನ ನಿವಾರಣೆ ನೀತಿ ಪಲ್ಲಟವಾಗುವುದೇ?
ಜಾತಿ ಸಮೀಕ್ಷೆಯ ಫಲಿತ ಬಂದ ನಂತರ ಬಡಜನರ ಬದುಕು ಗುಣಾತ್ಮಕವಾಗಿ ಬದಲಾಗಬಹುದೆನ್ನುವ ನಂಬಿಕೆಯನ್ನು ಸರಕಾರ ಸೃಷ್ಟಿಸುತ್ತಿದೆ. ಆದರೆ ತೊಂಬತ್ತರದ ನಂತರ ಸರಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಈ ನಂಬಿಕೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ದೊಡ್ಡ ತೊಡಕಾಗಿವೆ. ಬಡತನದ ಸೃಷ್ಟಿಯಲ್ಲಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ತೊಂಬತ್ತರ ನಂತರದ ಅಭಿವೃದ್ಧಿ ನೀತಿಗಳು ಬಿಂಬಿಸುತ್ತಿವೆ. ಅಂದರೆ ಕಷ್ಟಪಟ್ಟು ದುಡಿಯದಿರುವುದು, ದುಡಿದು ಗಳಿಸಿದ್ದನ್ನು ನಾಳೆಗೆ ಉಳಿಸದಿರುವುದು, ದುಂದು ವೆಚ್ಚ, ದುಶ್ಚಟಗಳು ಇವೆಲ್ಲ ಬಡತನಕ್ಕೆ ಕಾರಣವೆಂದು ಗ್ರಹಿಸಲಾಗಿದೆ. ಆದುದರಿಂದ ಇಂದಿನ ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಉಚಿತ ಶಿಕ್ಷಣ, ಆರೋಗ್ಯ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಿಲ್ಲ. ಇವುಗಳ ಜಾಗದಲ್ಲಿ ಇಂದು ಕಡಿಮೆ ಬೆಲೆಗೆ ಅಕ್ಕಿ ನೀಡುವುದು, ಅಕ್ಕಿ ಬೇಯಿಸಲು ಗ್ಯಾಸ್ ನೀಡುವುದು, ಕನಿಷ್ಠ ಕೆಲವು ದಿನಗಳ ಉದ್ಯೋಗ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮುಂತಾದ ಕಾರ್ಯಕ್ರಮಗಳು ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಡಬಹುದು.

ವಾಸ್ತವದಲ್ಲಿ ಬಡತನಕ್ಕೆ ಒಟ್ಟು ಪರಿಸರದ (ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗು ಸಾಂಸ್ಕೃತಿಕ ಪರಿಸರಗಳ) ಪಾತ್ರ ದೊಡ್ಡದಿದೆ. ಕಾರ್ಮಿಕ ಕಾನೂನಿಗೆ ತಿದ್ದುಪಡಿ ತಂದು ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡಲು ಸಾಧ್ಯವಿಲ್ಲದ ಸ್ಥಿತಿಯನ್ನು ಸರಕಾರಗಳು ನಿರ್ಮಿಸುತ್ತಿವೆ. ಬಡವರಿಂದಲೂ ದೊಡ್ಡ ಮೊತ್ತದ ಸಂಪನ್ಮೂಲವನ್ನು ಸಂಗ್ರಸುವ ತೆರಿಗೆ ನೀತಿಯನ್ನು ಸರಕಾರವೇ ತರುತ್ತಿದೆ. ಇಂತಹ ಸರಕಾರಗಳನ್ನು ಮತ್ತು ಜನಪ್ರತಿನಿಧಿಗಳನ್ನು ಬಡಜನರೇ ಚುನಾಯಿಸುತ್ತಾರೆ.

ಇಡೀ ಚುನಾವಣಾ ರಾಜಕೀಯ ಜಾತಿ, ಧರ್ಮ, ದುಡ್ಡು, ಬಡತನವನ್ನು ಉಂಟುಮಾಡುವ ಅಭಿವೃದ್ಧಿ ಮುಂತಾದವುಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಮೂರು ಹೊತ್ತಿನ ಊಟಕ್ಕೆ ಪರದಾಡುವವರಿಗೆ ಐದು ಹತ್ತು ವರ್ಷಗಳ ನಂತರ ಸಿಗುವ ಒಂದರೆಡು ಎಕರೆ ಭೂಮಿ ಅಥವಾ ಬಂಡವಾಳ ಅಥವಾ ಉಚಿತ ಶಿಕ್ಷಣ, ಆರೋಗ್ಯಗಳ ಭರವಸೆಗಳಿಗಿಂತ ಇಂದು ಸಿಗುವ ಕೆಲವು ಸಾವಿರ ರೂಪಾಯಿಗಳು, ಕಡಿಮೆ ಬೆಲೆ ಅಕ್ಕಿ, ಗ್ಯಾಸ್, ಸೈಕಲ್ ಮುಂತಾದವುಗಳು ಮುಖ್ಯವಾಗುತ್ತವೆ.

ಈ ಬಗೆಯ ಅಭಿವೃದ್ಧಿ ರಾಜಕೀಯ ಚಾರಿತ್ರಿಕವಾಗಿ ನಮ್ಮೊಂದಿಗಿರುವ ಅಸಮಾನತೆಗಳನ್ನು ಅಲ್ಪಸ್ವಲ್ಪ ಬದಲಾಣೆಯೊಂದಿಗೆ ಮುಂದುವರಿಸುತ್ತಿದೆ. ಇಂತಹ ರಾಜಕೀಯದಿಂದ ಹುಟ್ಟುವ ಸರಕಾರಗಳು ಜಾತಿ ಸಮೀಕ್ಷೆಯಿಂದ ಬರುವ ಅಂಕಿಅಂಶಗಳನ್ನು ಹೇಗೆ ಬಳಸಿಕೊಳ್ಳಬಹುದೆನ್ನುವುದು ಓದುಗರ ಊಹೆಗೆ ಬಿಟ್ಟ ವಿಚಾರ.