15 January 2015


* ಎಚ್‌.ಎಸ್‌.ಮುಕುಂದ


ಏಳುಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಅಂತರಗ್ರಹ ವಿಮಾನದ ಬಳಕೆ ಇತ್ತು ಎಂಬ ವಾದವನ್ನು ವಿಜ್ಞಾನಿಗಳು ಅಲ್ಲಗಳೆದಿದ್ದು, ‘ಅದೇ ತಂತ್ರಜ್ಞಾನ ಬಳಸಿ ವಿಮಾನ ಹಾರಬಿಡಲಿ, ನೋಡೋಣ’ ಎಂದು ಸವಾಲೆಸೆದಿದ್ದಾರೆ. 40 ವರ್ಷಗಳ ಹಿಂದೆಯೇ ಈ ಕುರಿತು ಅಧ್ಯಯನ ನಡೆಸಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಇದೊಂದು ‘ಆಧಾರರಹಿತ’ ಎಂದು ತಳ್ಳಿಹಾಕಿದ್ದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ವೈಮಾನಿಕ ಎಂಜಿನಿಯರಿಂಗ್ ವಿಭಾಗದ ಐವರು ವಿಜ್ಞಾನಿಗಳಾದ ಎಚ್.ಎಸ್.ಮುಕುಂದ, ಎಸ್.ಎಂ.ದೇಶಪಾಂಡೆ, ಎಚ್.ಆರ್.ನಾಗೇಂದ್ರ (ಈಗ ಇವರು ಸ್ವಾಮಿ ವಿವೇಕಾನಂದ ಯೋಗ ವಿವಿಯ ಕುಲಪತಿಗಳು), ಎ.ಪ್ರಭು ಹಾಗೂ ಎಸ್.ಪಿ.ಗೋವಿಂದರಾಜು ಅವರು 1974ರಲ್ಲಿ ವೈಮಾನಿಕ ತಂತ್ರಜ್ಞಾನದ ಕುರಿತು ಉಲ್ಲೇಖ ಇರುವ ಬ್ರಹ್ಮಮುನಿ ಪರಿವ್ರಾಜಕ ರಚಿತ ಬೃಹದ್‌ವಿಮಾನ ಶಾಸ್ತ್ರ (1959) ಹಾಗೂ ಜಿ,ಆರ್,ಜೋಯ್ಸರ್ ವಿರಚಿತ ವೈಮಾನಿಕ ಶಾಸ್ತ್ರಗಳ (1973) ಕುರಿತು ಅಧ್ಯಯನ ನಡೆಸಿದ್ದರು. ಈ ಕೃತಿಗಳಲ್ಲಿ ಉಲ್ಲೇಖಿಸಲಾದ ವಿಮಾನ ಮಾದರಿಗಳ ತಂತ್ರಜ್ಞಾನ, ಸಿದ್ಧಾಂತ, ನಿಯಮ, ಬಳಸಲಾದ ವಸ್ತುಗಳ ಕುರಿತು ವಿಶ್ಲೇಷಣೆ ನಡೆಸಿದ್ದರು.

ಈಗ ನಿವೃತ್ತರಾಗಿರುವ ಐಐಎಸ್‌ಸಿ ವೈಮಾಂತರಿಕ್ಷ ಪ್ರೊಫೆಸರ್ ಎಚ್.ಎಸ್.ಮುಕುಂದ ಅವರು ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದ ಸಾರ ಇಲ್ಲಿದೆ.

* ಈಚೆಗೆ ಮುಂಬಯಿಯಲ್ಲಿ ಮುಕ್ತಾಯವಾದ ಸೈನ್ಸ್ ಕಾಂಗ್ರೆಸ್‌ನಲ್ಲಿ ಭಾರತೀಯ ವಿಮಾನ ಸಂಶೋಧನೆ ಕುರಿತು ವಿಷಯ ಮಂಡನೆಯಾಗಿದ್ದು, ವೈಜ್ಞಾನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ನೀವು ಏನು ಹೇಳುತ್ತೀರಿ?
-ಕಳೆದ 40 ವರ್ಷಗಳ ಹಿಂದೆಯೇ ‘ವೈಮಾನಿಕ ಶಾಸ್ತ್ರ’ದ ಕುರಿತು ಅಧ್ಯಯನ ನಡೆಸಿ ‘ಎ ಕ್ರಿಟಿಕಲ್ ಸ್ಟಡಿ ಆಫ್ ದಿ ವರ್ಕ್ ವೈಮಾನಿಕ ಶಾಸ್ತ್ರ’ ಎಂಬ ಪ್ರಬಂಧ ಮಂಡಿಸಿದ್ದೇವೆ. ಅದರಲ್ಲಿ ಮಹರ್ಷಿ ಭಾರದ್ವಾಜ ಅವರಿಂದ ರಚನೆಯಾಗಿದೆ ಎನ್ನಲಾದ ಕೃತಿಯಲ್ಲಿ ಪ್ರಸ್ತುತಪಡಿಸಲಾಗಿರುವ ವಿಮಾನಗಳ ವಿವಿಧ ಆಯಾಮಗಳ ಕುರಿತು ಚರ್ಚಿಸಲಾಗಿದೆ. ‘ಇದು ಸಾಧ್ಯವಾಗದ ಮಾತು’ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.

* ವೈಜ್ಞಾನಿಕವಾಗಿ ಇದು ಸಾಬೀತಾಗುವುದಿಲ್ಲ ಎಂದು ಖಚಿತವಾದ ಮೇಲೂ ಮತ್ತೆ ಸೈನ್ಸ್ ಕಾಂಗ್ರೆಸ್‌ನಲ್ಲಿ ಏಕೆ ಪ್ರಸ್ತಾಪವಾಗಿದೆ?
- ಅದನ್ನು ಮತ್ತೆ ಯಾಕೆ ಪ್ರಸ್ತಾಪಿಸಿದರೋ ತಿಳಿಯದು. ಒಂದು ವೇಳೆ ಈ ತಂತ್ರಜ್ಞಾನ ಬಳಸಿ ವಿಮಾನ ಹಾರಿಸಲು ಸಾಧ್ಯವಾದರೆ, ಈಗಲೂ ಪ್ರಯೋಗದ ಮೂಲಕ ಮಾಡಿ ತೋರಿಸಲಿ ನೋಡೋಣ. ಆಗ ತಿಳಿಯುತ್ತದೆ, ಇದು ಹಾರುವ ವಿಮಾನವೋ, ಬೀಳುವ ವಿಮಾನವೋ ಎಂದು.

* ನೀವು ಅಧ್ಯಯನವನ್ನು ಅನುಮಾನದಿಂದಲೇ ಆರಂಭಿಸಿದ್ದೀರಾ?
-ಇಲ್ಲ. ನಮಗೂ ಕುತೂಹಲ ಇತ್ತು. ಆದರೆ, ವಿಷಯದ ಒಳಹೊಕ್ಕು ನೋಡಿದಾಗ ಇದು ತರ್ಕವಿಲ್ಲದ, ವೈಜ್ಞಾನಿಕ ನೆಲೆಗಟ್ಟಿಲ್ಲದ ರಚನೆ ಎಂದು ತಿಳಿಯಿತು.

* ಕೃತಿಯಲ್ಲಿ ಉಲ್ಲೇಖಿಸಿದ ಚಿತ್ರಗಳನ್ನು ಆಧರಿಸಿ ಮಾಡೆಲ್‌ಗಳನ್ನು ತಯಾರಿಸಿದ್ದೀರಾ?
-ಅದರ ಅಗತ್ಯವೇ ಇಲ್ಲ. ಚಿತ್ರಗಳನ್ನು ನೋಡಿದರೆ ಯಾರಿಗೆ ಬೇಕಾದರೂ ತಿಳಿಯುತ್ತದೆ ಇದು ಅಸಂಭವ ಎಂದು. ವೈಮಾನಿಕ ತಂತ್ರಜ್ಞಾನ ಗೊತ್ತಿಲ್ಲದ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕರಕೊಂಡು ಬನ್ನಿ, ಅವರಿಗೂ ನಾನು ಈ ಕುರಿತು ವಿವರಿಸುವೆ.

* ಹಾಗಿದ್ದರೆ, ಈ ಕೃತಿ ರಚನೆ ಕಲ್ಪನೆ ಮಾತ್ರವಷ್ಟೆಯೇ?
-ಹೌದು. ಇಲ್ಲಿ ವಿಮಾನ ಪರಿಕಲ್ಪನೆ ಬರೆದವರು ಯಾರೋ, ಅದಕ್ಕೆ ಚಿತ್ರ ಬಿಡಿಸಿದವರು ಇನ್ನಾರೋ. ಇದು ವೈಜ್ಞಾನಿಕವಾಗಿ ಸಾಬೀತಾಗುವ ತನಕ ಕಲ್ಪನೆಯಾಗಿಯೇ ಉಳಿದುಕೊಳ್ಳುತ್ತದೆ. ನಮ್ಮ ಹಿರಿಯರ ಜ್ಞಾನವನ್ನು ಬಳಸುವುದರಿಂದ ಅದಕ್ಕೆ ಬೆಲೆ ಸಿಗುತ್ತದೆ, ವೈಭವೀಕರಿಸುವುದರಿಂದ ಅಲ್ಲ.
**********************************




ಕರ್ನಾಟಕದ ಸಂಬಂಧ
ವಿಮಾನದ ಕತೆಗೂ ಕರ್ನಾಟಕಕ್ಕೂ ವಿಚಿತ್ರವಾದ ಸಂಬಂಧವಿದೆ. ಒಂದನೆಯದು ಈ ಕೃತಿಗಳ ಸಮನ್ವಯಕಾರರು ಕರ್ನಾಟಕದವರು ಮತ್ತು ಈ ಕೃತಿಯಲ್ಲಿರುವ ವಾದವನ್ನು ತುಂಡರಿಸಿದ್ದೂ ಸಹ ಕರ್ನಾಟಕದ ವಿಜ್ಞಾನಿಗಳು.

* ‘ವೈಮಾನಿಕ ಶಾಸ್ತ್ರ‘ ಕೃತಿಕಾರ ಜೋಯ್ಸರ್ ಹೇಳುವ ಪ್ರಕಾರ, ಆನೇಕಲ್‌ನ ಪಂಡಿತ್ ಸುಬ್ಬರಾಯ ಶಾಸ್ತ್ರಿ (1866- 1940) ಅವರು ಈ ಶ್ಲೋಕಗಳನ್ನು ಹೇಳಿದ್ದು, ಜಿ. ವೆಂಕಟಾಚಲ ಶರ್ಮ ಅವರು ಕೃತಿರೂಪಕ್ಕಿಳಿಸಿದ್ದರು. ಪಂಡಿತ್ ಶಾಸ್ತ್ರಿಗಳು ಮೂಲತಃ ತಮಿಳುನಾಡಿನ ಹೊಸೂರಿನವರಾಗಿದ್ದು, ಚಿಕ್ಕಂದಿನಿಂದಲೇ ಕುಟುಂಬ ಸಹಿತ ಕೋಲಾರ ಬಂದು ನೆಲೆಸಿದ್ದರು. ಅಲ್ಲಿ ಗುರು ಮಹಾರಾಜ್ ಎಂಬ ಸಂತರನ್ನು ಭೇಟಿ ಮಾಡಿದ್ದರು. ಆ ಸಂತರು ಇವರಿಗೆ ವಿಮಾನ ಶಾಸ್ತ್ರ, ಭೌತಿಕ್ ಕಲಾನಿಧಿ ಹಾಗೂ ಜಲತಂತ್ರ ಮುಂತಾದ ವಿದ್ಯೆಗಳನ್ನು ಧಾರೆ ಎರೆಯುತ್ತಾರೆ. ಅಕ್ಷರ ಜ್ಞಾನವೂ ಇಲ್ಲದಿದ್ದ ಶಾಸ್ತ್ರಿಗಳು ಈ ಸಂತರ ಮೂಲಕ ಕನ್ನಡ, ತೆಲುಗು ಅಕ್ಷರ ಕಲಿಯುತ್ತಾರೆ.

* ಆ ನಂತರ ಶಾಸ್ತ್ರಿ ಅವರು ಆನೇಕಲ್‌ಗೆ ಬಂದು ನೆಲೆಸುತ್ತಾರೆ. ತಮ್ಮೊಳಗಿನ ಆಧ್ಯಾತ್ಮಿಕ ಶಕ್ತಿಯ ಮೂಲಕ ಜನರನ್ನು ಸಮ್ಮೋಹಿನಗೊಳಿಸುತ್ತಾರೆ. ಅದೇ ಸಂದರ್ಭದಲ್ಲಿ ವಿಮಾನಶಾಸ್ತ್ರ ಕೃತಿಯ ಶ್ಲೋಕಗಳನ್ನು ಬರೆಯಿಸುತ್ತಾರೆ.

* ಈ ಕೃತಿಗೆ 1900-1919ರ ಅವಧಿಯಲ್ಲಿ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ಎಲ್ಲಪ್ಪ ಎಂಬವರು ಇದಕ್ಕೆ ಪೂರಕವಾದ ಚಿತ್ರ ಬಿಡಿಸುತ್ತಾರೆ.

* ಆದರೆ ಕೃತಿಯಲ್ಲಿ ಎಲ್ಲಿಯೂ ಸುಬ್ಬರಾಯ ಶಾಸ್ತ್ರಿ ಹೆಸರು ಪ್ರಸ್ತಾಪವಿಲ್ಲ. ಬದಲಾಗಿ, ಮಹರ್ಷಿ ಭಾರದ್ವಾಜ ಅವರೇ ರಚನೆಕಾರರು ಎಂದು ಉಲ್ಲೇಖಿಸಲಾಗಿದೆ ಎಂದು ಜೋಯ್ಸರ್ ಬರೆದಿದ್ದಾರೆ.

* ಮುಂಬೈನ ತೋಲ್ಪಡೆ ಎಂಬವರು ಈ ಕೃತಿಯನ್ನು ಆಧರಿಸಿ ವಿಮಾನದ ಪ್ರತಿರೂಪ ತಯಾರಿಸಲು ಮುಂದಾಗುತ್ತಾರೆ. ಅದು ಹಾರುವುದಿಲ್ಲ.

* 1974ರಲ್ಲಿ ಈ ಕೃತಿಯನ್ನು ಪರಾಮರ್ಶೆಗೊಳಪಡಿಸಿ ‘ಇದು ಸಾಧ್ಯವಾಗದ ಮಾತು’ ಎಂದು ಸ್ಪಷ್ಟಪಡಿಸಿದವರು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ಐವರು ವಿಜ್ಞಾನಿಗಳು

ವೈಮಾನಿಕ ಶಾಸ್ತ್ರದಲ್ಲಿ ಏನಿದೆ?
ವೇದಕಾಲದ ಸಂಸ್ಕೃತ ಶ್ಲೋಕಗಳಲ್ಲಿ ವೈಮಾಂತರಿಕ್ಷ ವಾಹನಗಳ ಕುರಿತು ಉಲ್ಲೇಖ ಇದ್ದು, ಇದನ್ನು ಮಹರ್ಷಿ ಭಾರದ್ವಾಜ ಶ್ಲೋಕದ ಮೂಲಕ ಉದ್ಧರಿಸಿದ್ದಾರೆ. ಆದರೆ, ಈ ಕೃತಿಯನ್ನು ಪಂಡಿತ್ ಸುಬ್ಬರಾಯ ಶಾಸ್ತ್ರಿಗಳು 1918-1923ರ ಅವಧಿಯಲ್ಲಿ ಕೃತಿರೂಪಕ್ಕಿಳಿಸಿದ್ದಾರೆ ಎಂದು ಈ ಕುರಿತು 1952ರಲ್ಲಿ ಅಧ್ಯಯನ ನಡೆಸಿದ ಜಿಆರ್ ಜೋಯ್ಸರ್ ಹೇಳಿದ್ದಾರೆ. ಇದರಲ್ಲಿ ಎಂಟು ಅಧ್ಯಾಯಗಳಿದ್ದು, 3000 ಶ್ಲೋಕಗಳಿವೆ.

ಈ ಕೃತಿಯಲ್ಲಿ ವಿಮಾನ, ಪೈಲಟ್, ವಾಯುಮಾರ್ಗ, ಚಾಲಕನ ಆಹಾರ, ಬಟ್ಟೆ, ವಿಮಾನಕ್ಕೆ ಬಳಸಿದ ಲೋಹ, ಇತ್ಯಾದಿ ಉಲ್ಲೇಖಗಳಿವೆ. ವಿಮಾನಕ್ಕೆ ಬಳಸಲಾಗುತ್ತದೆ ಎನ್ನಲಾಗುವ ವಿವಿಧ ಯಂತ್ರಗಳಾದ ಮಾಂತ್ರಿಕ್, ತಾಂತ್ರಿಕ್ ಹಾಗೂ ಕೃತಕ್ ಎಂಬ ಉಲ್ಲೇಖವಿದೆ, ಕೃತಕ್ ವಿಭಾಗದಲ್ಲಿ ಶಕುನ, ಸುಂದರ, ರುಕ್ಮಾ ಹಾಗೂ ತ್ರಿಪುರ ಎಂಬ ವಿಮಾನಗಳ ಬಗ್ಗೆ ಪ್ರಸ್ತಾಪವಿದೆ.

ಶಕುನ ವಿಮಾನ ಹೆಸರೇ ಹೇಳುವಂತೆ ಪಕ್ಷಿಯ ಆಕಾರವನ್ನು ಹೋಲುತ್ತದೆ. ಇದರಲ್ಲಿ ಪೀಠ, ಮೂರು ಚಕ್ರದಾಕಾರದ ರಚನೆ, ನಾಲ್ಕು ಹೀಟರ್‌ಗಳು, ವಾಯುಹೀರುವ ಯಂತ್ರ, ಇಂಧನ ಡಬ್ಬಿ, ವಾಟರ್ ಜಾಕೆಟ್, ಎರಡು ರೆಕ್ಕೆ, ಬಾಲದಂಥ ರಚನೆ ಇದೆ. ಸುಂದರ ವಿಮಾನವು ಕತ್ತೆಯ ಮೂತ್ರ ಸಹಿತ ವಿವಿಧ ಸಾಮಗ್ರಿಗಳ ಮೂಲಕ ತಯಾರಿಸಲಾಗುವ ಇಂಧನದ ಮೂಲಕ ಚಾಲಿಸುವಂಥದ್ದಾಗಿದೆ. ರುಕ್ಮಾ ಎಂಬ ವಿಮಾನವು ಐದು ಹಂತಗಳ ರಚನೆಯನ್ನು ಹೊಂದಿದ್ದು, ಮೂರನೇ ಹಂತದಲ್ಲಿ ಪ್ರಯಾಣಿಕರು ಕ್ಯಾಬಿನ್ ಇರುತ್ತದೆ. ಮೇಲ್ಬದಿ ಅಳವಡಿಸಲಾಗಿರುವ ಫ್ಯಾನ್ ಮೂಲಕ ಗಾಳಿ ಹೀರಿ ಕೆಳಗೆ ವಿಸರ್ಜಿಸಲಾಗುತ್ತದೆ. ಆ ಮೂಲಕ ಉಂಟಾಗುವ ಒತ್ತಡದಲ್ಲಿ ವಿಮಾನ ಮೇಲಕ್ಕೇರುತ್ತದೆ ಎನ್ನಲಾಗಿದೆ.

ತ್ರಿಪುರ ಎಂಬ ವಿಮಾನ ಗಾಳಿಯಲ್ಲಿ ಹಾರಬಲ್ಲುದು, ನೀರಿನಲ್ಲಿ ತೇಲಬಲ್ಲುದು ಹಾಗೂ ಭೂಮಿಯಲ್ಲಿ ಓಡಬಲ್ಲುದು ಎಂದು ಈ ಕೃತಿಯಲ್ಲಿ ಹೇಳಲಾಗಿದೆ. ಸೂರ‌್ಯನ ಬೆಳಕು ಮತ್ತು ಸ್ಪಷ್ಟಪಡಿದ ಕೆಲವು ಆಮ್ಲಗಳ ಮೂಲಕ ಇದರ ಚಾಲನೆಯಾಗುತ್ತದೆ ಎನ್ನಲಾಗಿದೆ.

ಅಮೆರಿಕದಲ್ಲೂ ಪೊಳ್ಳು ವಿಜ್ಞಾನ
ವಿಜ್ಞಾನ ಮತ್ತು ಪುರಾಣಗಳ ನಡುವಿನ ಘರ್ಷಣೆ ಭಾರತಕ್ಕೆ ಮಾತ್ರ ಸೀಮಿತವಲ್ಲ. ಹಿಂದೆ ಅಮೆರಿಕದಲ್ಲೂ ಇಂಥ ಸಂಘರ್ಷ ನಡೆದಿತ್ತು. ಅಲ್ಲಿಯೂ ಕೆಲವು ಧರ್ಮಾಧಾರಿತ ಗುಂಪು ವಿಜ್ಞಾನಿಗಳ ಮೇಲೆ ಒತ್ತಡ ಹೇರಲಾರಂಭಿಸಿತ್ತು. ಆಗ ಕಾರ್ಲ್ ಸಗಾನ್‌ನಂಥ ವಿಜ್ಞಾನಿಗಳು ಮಧ್ಯಪ್ರವೇಶಿಸಿ ವೈಜ್ಞಾನಿಕ ಸಮೂಹದ ಪರ ನಿಂತರು. ‘ ವಿಜ್ಞಾನದ ಅನುಕೂಲ ಜನರಿಗೆ ತಲುಪುವುದನ್ನು ಅಡ್ಡಿಪಡಿಸಲು ಪೊಳ್ಳು ವಿಜ್ಞಾನ (ಸೂಡೋ ಸೈನ್ಸ್) ಮತ್ತು ಮೂಢನಂಬಿಕೆ ಸದಾ ಅಡ್ಡಿ ಬರುತ್ತದೆ.

ಅಮೆರಿಕದಲ್ಲಿ ರಾಜಕಾರಣಿಗಳು ವಿಜ್ಞಾನಿಗಳ ವಿರುದ್ಧ ನಿಂತಾಗ, ನೊಬೆಲ್ ಪುರಸ್ಕೃತ ವಿಜ್ಞಾನಿ ಪಾಲ್ ನರ್ಸ್ ಅವರು ನ್ಯೂ ಸೈಂಟಿಸ್ಟ್‌ನಲ್ಲಿ ಬರೆದ ಲೇಖನ ಇಲ್ಲಿ ಉಲ್ಲೇಖನೀಯ: ‘‘ಟೊಳ್ಳನ್ನು ಬಹಿರಂಗವಾಗಿ ಹೇಳುವ ಛಾತಿಯನ್ನು ವಿಜ್ಞಾನಿಗಳು ಬೆಳೆಸಿಕೊಳ್ಳಬೇಕು. ವಿಜ್ಞಾನದ ಬಗ್ಗೆ ರಾಜಕೀಯ ನೇತಾರರ ನಿಲುವಿನ ಕುರಿತು ನಾವು ಎಚ್ಚರಿಕೆಯಿಂದ ಇರಬೇಕು. ಯಾವ ಕಾರಣಕ್ಕೂ ವಿಜ್ಞಾನವು ಚುನಾವಣಾ ಅಜೆಂಡಾ ಆಗಲು, ರಾಜಕೀಯ ಅಸ್ತ್ರ ಆಗಲು ಬಿಡಬಾರದು’’ ಎಂದು.
************
ವೈಮಾನಿಕ ತಂತ್ರಜ್ಞಾನದ ಬಗ್ಗೆ ಸಂಸ್ಕೃತ ವಿದ್ವಾಂಸರು ಮಾತನಾಡುತ್ತಿದ್ದರೆ, ಇಷ್ಟೊಂದು ಮನ್ನಣೆ ಸಿಗುತ್ತಿರಲಿಲ್ಲ. ಕ್ಯಾಪ್ಟನ್ ಬೊಡಾಸ್ ಅವರು ಸ್ವತಃ ಪೈಲಟ್.
-ಗೌರಿ ಮಹುಲೀಕರ್, ಮುಂಬೈ ವಿವಿ ಸಂಸ್ಕೃತ ವಿಭಾಗದ ಮುಖ್ಯಸ್ಥರು (ಚಿತ್ರ ಇಲ್ಲ)

ವಿಜ್ಞಾನ ವಲಯದಲ್ಲಿ ಮಿಥ್ಯಾ ವಿಜ್ಞಾನ ಅತಿಕ್ರಮಣ ಮಾಡುತ್ತಿರುವ ಆತಂಕಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಾವು ವಿಜ್ಞಾನಿಗಳು ಸುಮ್ಮನೆ ಕೂತರೆ ವಿಜ್ಞಾನಕ್ಕೆ ಮಾತ್ರ ಅಲ್ಲ, ಮುಂದಿನ ಪೀಳಿಗೆಗೂ ನಾವು ಮೋಸ ಮಾಡಿದ ಹಾಗೆ
-ಡಾ. ರಾಮ್‌ಪ್ರಸಾದ್ ಗಾಂಧಿರಾಮನ್, ನಾಸಾ ವಿಜ್ಞಾನಿ (ಚಿತ್ರ ಇದೆ)

ಮನುಷ್ಯ ಹಕ್ಕಿಯಂತೆ ಹಾರಬಲ್ಲ ಎಂದು ಕಲ್ಪಿಸಿಕೊಂಡು ರಚಿಸಿದ ಕೃತಿಯಷ್ಟೇ. ಇದು ಬರಿ ಕಲ್ಪನೆ. ವಿಜ್ಞಾನದಲ್ಲಿ ಮೌಢ್ಯ ಬಿತ್ತುವ ಕೆಲಸ ಸರಿಯಲ್ಲ
-ಯು.ಆರ್.ರಾವ್, ಹಿರಿಯ ವಿಜ್ಞಾನಿ

ವೈಮಾನಿಕ ಶಾಸ್ತ್ರ ಕುರಿತು ಈಗಾಗಲೇ ದೀರ್ಘವಾದ ಅಧ್ಯಯನ ನಡೆದಿದ್ದು, ಇದರಲ್ಲಿ ಪ್ರಸ್ತಾಪವಾಗಿರುವ ಅಂಶಗಳು ವೈಜ್ಞಾನಿಕವಾಗಿ ಸಮರ್ಪಕವಾಗಿಲ್ಲ ಎಂದು ವಿಜ್ಞಾನಿಗಳ ವಲಯ ಈಗಾಗಲೇ ಒಪ್ಪಿಕೊಂಡಿದೆ.
-ರೊದ್ದಂ ನರಸಿಂಹ, ಹಿರಿಯ ವಿಜ್ಞಾನಿ

0 comments:

Post a Comment