ಮುಂಬಯಿಯಲ್ಲಿ ಈಚೆಗೆ ಸಮಾವೇಶಗೊಂಡ ‘ಭಾರತೀಯ ವಿಜ್ಞಾನ ಕಾಂಗ್ರೆಸ್’ನ ಕಿಕ್ಕಿರಿದ
ಸಭಾಂಗಣದಲ್ಲಿ ಕ್ಯಾಪ್ಟನ್ ಆನಂದ್ ಜೆ ಬೊಡಾಸ್ ಮಾತಿಗೆ ಇಡೀ ಸಭೆಯೇ ದಂಗಾಗಿಬಿಟ್ಟಿತು. ಪೈಲಟ್
ತರಬೇತಿ ಕೇಂದ್ರವೊಂದರಲ್ಲಿ ಪ್ರಾಂಶುಪಾಲರಾಗಿದ್ದ ಅವರ ಮಾತುಗಳು ಇಡೀ ಕಾರ್ಯಕ್ರಮದ ದಿಕ್ಕನ್ನೇ
ಬದಲಿಸಿಬಿಟ್ಟಿತು. ನೆರೆದಿದ್ದ ವಿಜ್ಞಾನಿಗಳು ಹೌಹಾರಿಬಿಟ್ಟರು. ವಿಜ್ಞಾನ ಕಾಂಗ್ರೆಸ್ ಸ್ಥಾಪನೆಯ
ಉದ್ದೇಶಕ್ಕೇ ಸವಾಲಿದು ಎಂದು ವಿಜ್ಞಾನಿಗಳು ಪ್ರತಿಕ್ರಿಯಿಸಿದರು.
ಬೊಡಾಸ್ ಹೇಳಿದ್ದು: ‘‘ಸುಮಾರು 7,000 ವರ್ಷಗಳ ಹಿಂದೆಯೇ ಭಾರತದಲ್ಲಿ ವಿಮಾನಗಳು
ಇದ್ದವು. ಅವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾಗೂ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ
ಹಾರಾಡುವಷ್ಟು ಶಕ್ತಿ ಹೊಂದಿದ್ದವು,’’ ಎಂದು.
ಇದನ್ನು ಪುಷ್ಟೀಕರಿಸಲು 97 ಕೃತಿಗಳನ್ನು ತಮ್ಮ ಉಪನ್ಯಾಸದಲ್ಲಿ ಉಲ್ಲೇಖಿಸಿದ
ಅವರು, ‘‘ವೇದಗಳ ಕಾಲದಲ್ಲಿ ಮಹರ್ಷಿ ಭಾರದ್ವಾಜ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ವಿಮಾನಗಳು
ಈಗಿನ ವಿಮಾನಗಳ ಹಾಗೆ ಬರಿ ಮುಂದೆ ಹೋಗುತ್ತಿರಲಿಲ್ಲ. ಹಿಂದೆ, ಆಚೆ, ಈಚೆ ಹೀಗೆ ಎಲ್ಲ
ದಿಕ್ಕುಗಳಲ್ಲೂ ಹಾರುತ್ತಿದ್ದವು. ವಿವಿಧ ಬಗೆಯ ಮಿಶ್ರಲೋಹಗಳನ್ನು ಬಳಸಿ (ಅಲಾಯ್) ಈ ವಿಮಾನ
ತಯಾರಿಸಲಾಗಿತ್ತು. ಈಗಿನ ತಲೆಮಾರಿನ ವಿಜ್ಞಾನಿಗಳು ಈ ಕೃತಿಯಲ್ಲಿ ಉಲ್ಲೇಖಿಸಿರುವ ಮಿಶ್ರ
ಲೋಹಗಳನ್ನು ಬಳಸಿ ಇಂಥ ವಿಮಾನ ತಯಾರಿಕೆಗೆ ಮುಂದಾಗಬೇಕು.
ಆರು ಮಂದಿ ನೊಬೆಲ್ ಪುರಸ್ಕೃತರು, ನಾಲ್ವರು ವಿವಿಧ ವೈಜ್ಞಾನಿಕ ಪ್ರಶಸ್ತಿಗೆ
ಭಾಜನರಾದ ವಿಜ್ಞಾನಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಬೊಡಾಸ್ ‘ಹಾರಿಬಿಟ್ಟ ವಿಮಾನ’
ಸಾಕಷ್ಟು ಅನುಮಾನ, ಟೀಕೆಗಳಿಗೆ ಗುರಿಯಾಯಿತು. ಸುಮಾರು 102 ವರ್ಷಗಳಿಂದ ಸತತವಾಗಿ ಮುಂಬೈ
ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಈ ಬಾರಿ ‘ಸಂಸ್ಕೃತದ ಮೂಲಕ ಪುರಾತನ
ವಿಜ್ಞಾನ’ ಎಂಬ ಅಧಿವೇಶನವನ್ನು ಅಳವಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಬೊಡಾಸ್ ಮಂಡಿಸಿದ
ವಿಚಾರಗಳು ವೈಜ್ಞಾನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಆದರೆ, ವಿಜ್ಞಾನಿಗಳು ಈ ವಾದವನ್ನು ಸುತಾರಾಂ ಒಪ್ಪುವುದಿಲ್ಲ. ಈ ಕುರಿತು ಈಗಾಗಲೇ
ನಾಸಾದ ಆಮ್ಸ್ ಸಂಶೋಧನಾ ಸಂಸ್ಥೆಯಲ್ಲಿರುವ ವಿಜ್ಞಾನಿಯಾಗಿರುವ ಭಾರತೀಯ ಮೂಲದ ಡಾ. ರಾಮ್ಪ್ರಸಾದ್
ಗಾಂಧಿರಾಮನ್ ಅವರು ಜಗತ್ತಿನಾದ್ಯಂತ ಆನ್ಲೈನ್ ಅಭಿಯಾನ ನಡೆಸಿದ್ದರು. ಭಾರತೀಯ ವಿಜ್ಞಾನ ಕಾಂಗ್ರೆಸ್ನಲ್ಲಿ
‘ಪುರಾತನ ಭಾರತೀಯ ವೈಮಾನಿಕ ತಂತ್ರಜ್ಞಾನ’ ಕುರಿತ ವಿಷಯ ಮಂಡನೆಗೆ ಅವಕಾಶ ನೀಡಬಾರದು ಎಂದು
ಪ್ರತಿಪಾದಿಸಿದ್ದರು. ವಿಜ್ಞಾನದ ಜತೆ ಪೌರಾಣಿಕ ನಂಬಿಕೆ, ಕತೆಗಳನ್ನು ಜೋಡಿಸಕೂಡದು ಎಂದು ಹೇಳುವ
ಅವರು, ಈ ಸಂಬಂಧ 1000ಕ್ಕೂ ಹೆಚ್ಚು ಪ್ರಮುಖ ವಿಜ್ಞಾನಿಗಳ ಅಭಿಪ್ರಾಯ ಸಂಗ್ರಹಿಸಿ ಸಂಘಟಕರಿಗೆ
ರವಾನಿಸಿದ್ದರು.
‘ಧಾರ್ಮಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ವೈಜ್ಞಾನಿಕ ಸಾಕ್ಷ್ಯಗಳನ್ನು
ತಿರುಚಬಾರದು ಎಂದು ಹೇಳುವ ಗಾಂಧಿರಾಮನ್, ಬೊಡಾಸ್ ಅವರು ತಾವು ನಂಬಿರುವ ವೈಜ್ಞಾನಿಕ
ಪ್ರತಿಪಾದನೆಯನ್ನು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿ ವಿಮರ್ಶೆಗೊಳಪಡಿಸಲಿ. ಇದುವೇ
ವಿಜ್ಞಾನವನ್ನು ನಂಬುವ ಸರಿಯಾದ ಕ್ರಮ,’’ ಎಂದು ಹೇಳುತ್ತಾರೆ.
ಬೋಡಾಸ್ ಹಾರಿಬಿಟ್ಟ ವಿಮಾನದ ಸುತ್ತ