06 February 2015

Constitution_of_India ಸಂವಿಧಾನದ ಪೀಠಿಕೆ ಭಾಗದಲ್ಲಿರುವ 'ಸೆಕ್ಯುಲರ್‌' ಮತ್ತು 'ಸೋಷಿಯಲಿಸ್ಟ್‌' ಪದವನ್ನು ತೆಗೆದುಹಾಕಲಾಗುವುದು ಎಂಬ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿಕೆ ಸೆಕ್ಯುಲರ್‌ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸೆಕ್ಯುಲರ್‌ ಕುರಿತ ಚರ್ಚೆ ದಶಕಗಳಷ್ಟು ಹಳೆಯದಾದರೂ ಹೊಸ ಹೊಸ ವ್ಯಾಖ್ಯಾನಗಳೊಂದಿಗೆ ಅದು ಇಂದಿಗೂ ಮುಂದುವರಿದಿದೆ. ಬಹುಷಃ ಸೆಕ್ಯುಲರ್‌ ಪರಿಕಲ್ಪನೆಯ ವಿಭಿನ್ನ ವ್ಯಾಖ್ಯಾನದಲ್ಲಿಯೇ ಭಾರತೀಯ ಬೌದ್ಧಿಕತೆ ರೂಪು ತಳೆದಿದೆ ಎಂದರೂ ತಪ್ಪಾಗುವುದಿಲ್ಲ. ಯಾಕೆಂದರೆ, ಕೋಮುವಾದದ ವ್ಯಾಖ್ಯಾನ, ವಿವರಣೆಯಿಲ್ಲದೆ ಸೆಕ್ಯುಲರ್‌ ಕಲ್ಪನೆಯ ವಿವರಣೆ ಸಾಧ್ಯವೇ ಇಲ್ಲ. ಈ ಎರಡೂ ಕಲ್ಪನೆಗಳು ಭಾರತೀಯ ಬೌದ್ದಿಕತೆಯ ಜೀವಾಳ. 'ಭಾರತೀಯ ಸಂವಿಧಾನದ ಮೂಲಾಧಾರ, ಪ್ರಜಾಪ್ರಭುತ್ವ ಆತ್ಮ' ಎಂದೇ ಭಾವಿಸಲಾದ ಸೆಕ್ಯಲರ್‌ ಪದವನ್ನು ಅದರ ಪೀಠಿಕಾ ಭಾಗದಿಂದ ತೆಗೆದು ಹಾಕುವ ಸರಕಾರದ ಪ್ರಸ್ತಾವನೆ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಬಹುತೇಕ ಚಿಂತಕರು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿರೋಧದ ಸ್ವರೂಪ ಅರಿತ ಕೇಂದ್ರ ಸರಕಾರ ಸಂವಿಧಾನದ ಪೀಠಿಕೆ ಭಾಗದಲ್ಲಿರುವ ಸೆಕ್ಯುಲರ್‌ ಪದವನ್ನು ತೆಗೆದುಹಾಕುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಕೆಲಸ ಮಾಡಿದೆಯಾದರೂ ಚರ್ಚೆ ಮಾತ್ರ ಮುಂದುವರಿದೇ ಇದೆ.
ಸೆಕ್ಯುಲರ್ ಎನ್ನುವುದು ಕೇವಲ ಪದವಲ್ಲ ಅಥವಾ ಬರಿಯ ಪರಿಕಲ್ಪನೆ ಮಾತ್ರವೂ ಅಲ್ಲ. ಇದು ಒಂದು ಚಿಂತನಾಕ್ರಮ. ಧಾರ್ಮಿಕತೆಯಲ್ಲಿ ಸರಕಾರವೊಂದು ತಾಳಬೇಕಾದ ಒಂದು ಕಡ್ಡಾಯ ನಿಲುವು. ಸರಳವಾಗಿ ಮತ್ತು ನೇರವಾಗಿ ಹೇಳುವುದಾದರೆ, ಸೆಕ್ಯುಲರ್‌ ಎನ್ನುವುದು ಜನರ ಧರ್ಮ (ರಿಲಿಜನ್‌ ಎನ್ನುವ ಅರ್ಥದಲ್ಲಿ) ಅನುಸರಣೆಯಲ್ಲಿ ಪಾಲಿಸಬೇಕಾದ ನಿರ್ಲಿಪ್ತತೆ. ಧರ್ಮದಿಂದ ಪ್ರಭುತ್ವವೊಂದು ದೂರ ಉಳಿಯಬೇಕು ಎನ್ನುವುದು ಸೆಕ್ಯುಲರ್‌ ಚಿಂತನೆಯ ಮೌಲ್ಯ. ಅದು ಪಶ್ಚಿಮದಿಂದ ಆಮದಾದ ಪರಿಕಲ್ಪನೆಯಾದರೂ ಭಾರತದಲ್ಲಿ ಅದರ ಮೂಲ ಅರ್ಥಕ್ಕಿಂತ ಭಿನ್ನವಾದ ನೆಲೆಗಳಲ್ಲಿ ಮರು ವ್ಯಾಖ್ಯಾನಗೊಂಡಿದೆ. ಸೆಕ್ಯುಲರ್‌ ಎಂಬ ಚಿಂತನೆಯ ಮೂಲ ಅರ್ಥ ಮತ್ತು ಅದರ ಸ್ವರೂಪವನ್ನು ಗ್ರಹಿಸದಿದ್ದರೆ ಭಾರತೀಯ ಬೌದ್ಧಿಕತೆ ಗ್ರಹಿಕೆಗೆ ದಕ್ಕುವುದೇ ಇಲ್ಲ. ಈ ನಿಟ್ಟಿನಲ್ಲಿ ಸೆಕ್ಯುಲರ್‌ ಕುರಿತ ಚರ್ಚೆ ಅತ್ಯಂತ ಮಹತ್ವದ್ದಾಗಿದ್ದು, ಈ ಕುರಿತು ವಿವಿಧೆಡೆ ಪ್ರಕಟಗೊಂಡ ಲೇಖನಗಳನ್ನು ಸ್ಕಾಲರ್‌ ಇಂಡಿಯಾ ಸಂಗ್ರಹಿಸಿ ಕೊಡುತ್ತಿದೆ. ಜತೆಗೆ, ಈ ವಾದಗಳ ಸ್ವರೂಪ, ಚೌಕಟ್ಟನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತಹ ಲೇಖನಗಳನ್ನೂ ಕೊಡಲಾಗಿದೆ.
-ಸಂಪಾದಕ

---------------------

ಸೆಕ್ಯುಲರ್‌ ಕುರಿತ ಚರ್ಚೆ ಆರಂಭವಾಗಲು ಕಾರಣವಾದ ಸುದ್ದಿ

ಭಾರತೀಯ ಚಿಂತಕರು ಸೆಕ್ಯುಲರ್‌ ಪರಿಕಲ್ಪನೆಯನ್ನು ಪರಿಭಾವಿಸಿದ ಪರಿ

ಸೆಕ್ಯುಲರ್‌ ಚಿಂತನೆಯ ಸ್ವರೂಪ, ಮೂಲಾರ್ಥ, ಭಾರತದಲ್ಲಿ ಅದರ ಬಳಕೆಯ ಪರಿಣಾಮಗಳ ಕುರಿತು ತಿಳಿಯಲು ಕೆಳಗಿನ ಲೇಖನಗಳನ್ನು ಓದಿ.

0 comments:

Post a Comment