15 February 2015

ಕೃಪೆ: ಉದಯವಾಣಿ

ಅರಕೆರೆ ಜಯರಾಮ್‌

ಸಂವಿಧಾನದ ಪೀಠಿಕಾಭಾಗದಿಂದ "ಜಾತ್ಯತೀತ' (ಸೆಕ್ಯುಲರ್‌) ಹಾಗೂ "ಸಮಾಜವಾದಿ' (ಸೋಶಲಿಸ್ಟ್‌) ಎಂಬ ಪದಗಳನ್ನು ತೆಗೆದುಹಾಕುವ ಅಗತ್ಯ ಕುರಿತಂತೆ ಕೇಂದ್ರದ ಎನ್‌ಡಿಎ ಸರಕಾರದ ಕೆಲ ಸಚಿವರು ಚರ್ಚೆಯೊಂದನ್ನು ಆರಂಭಿಸಲು ಮುಂದಾಗಿದ್ದು, ಈ ವಿದ್ಯಮಾನ 1970ರ ದಶಕದ ಆದಿಭಾಗದಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದ ತೀವ್ರ ಚರ್ಚೆಯೊಂದರ ನೆನಪನ್ನು ಮತ್ತೆ ಜೀವಂತಗೊಳಿಸಿದಂತಾಗಿದೆ. ಯಾವ ದೃಷ್ಟಿಯಿಂದ ನೋಡಿದರೂ ಇಂಥದೊಂದು ಚರ್ಚೆ ನಡೆಯಬೇಕಾದುದು ಅತ್ಯಂತ ಸ್ವಾಗತಾರ್ಹವೇ ಆಗಿದೆ. ನರಸಿಂಹರಾವ್‌ ಸರಕಾರ 1991ರಿಂದ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಉದಾರೀಕರಣ ಹಾಗೂ ಜಾಗತೀಕರಣಗಳನ್ನು ಅಳವಡಿಸಿಕೊಂಡು ಮುಂದುವರಿದುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಸಂಗತಿ, ಸಮಾಜವಾದದೊಂದಿಗೆ ಬಲವಂತದ ಮದುವೆ ಮಾಡಿಕೊಂಡಂತಿರುವ ನಮ್ಮ ಸಂವಿಧಾನವನ್ನು ಪ್ರತಿದಿನವೂ ಗೇಲಿ ಮಾಡುತ್ತಲೇ ಇದೆ.

ಇಲ್ಲೊಂದು ಕುತೂಹಲಕಾರಿ ಅಂಶವೊಂದನ್ನು ಗಮನಿಸಬೇಕು. "ಸಮಾಜವಾದಿ', "ಜಾತ್ಯತೀತ' ಹಾಗೂ "ಪ್ರಜಾಸತ್ತಾತ್ಮಕ' ಎಂಬ ಪದಗಳನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸುವ ಕೆಲಸ ನಡೆದಿರುವುದು 1976ರಲ್ಲಿ; 42ನೆಯ ತಿದ್ದುಪಡಿಯ ಮೂಲಕ. ಅಂದರೆ, ದೇಶದಲ್ಲಿ ಪ್ರಜಾಪ್ರಭುತ್ವವೆಂಬುದು ಸಂಪೂರ್ಣ ಗೈರುಹಾಜರಾಗಿದ್ದ ಕಾಲದಲ್ಲಿ! ಅವು ಇಂದಿರಾಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದ ದಿನಗಳು.

ಸೆಕ್ಯುಲರ್‌ ಅಥವಾ ಜಾತ್ಯತೀತ ಎನ್ನುವ ಶಬ್ದ ಕೋಮುವಾದಿ ಧೋರಣೆಯ ಮನಸ್ಸುಗಳನ್ನು ಕೆದಕಿದಂತಾಗುವುದರಿಂದ ಅಥವಾ ಉದ್ರೇಕಿಸಿದಂತಾಗುವುದರಿಂದ ಈ ಪದವನ್ನು ಸಂವಿಧಾನದಿಂದ ತೆಗೆದುಹಾಕುವ ಪ್ರಶ್ನೆಯನ್ನು ಬದಿಗಿಡುವುದೇ ದೇಶದ ಪಾಲಿಗೆ ಕ್ಷೇಮಕರವೆಂಬುದು ನಿಜವಿರಬಹುದು. ಇದೇ ರೀತಿ, ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಅಲ್ಪಸಂಖ್ಯಾಕರ ಮನಸ್ಸಿನಲ್ಲಿ - ಅವರು ಸಹಜವಾಗಿ ಘಾಸಿಗೊಳ್ಳುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ - ಭೀತಿಗಳನ್ನು ತುಂಬುವ ಸಾಧ್ಯತೆಯೂ ಇದೆ. ಇದಲ್ಲದೆ, ಸುಪ್ರೀಂ ಕೋರ್ಟ್‌ ಕೂಡ ತನ್ನ ಹಲವು ತೀರ್ಪುಗಳಲ್ಲಿ ಜಾತ್ಯತೀತತೆ ಸಂವಿಧಾನದ ಮೂಲ ಸಂರಚನೆಯ ಭಾಗವೇ ಆಗಿದೆ ಎಂದು ಸ್ಪಷ್ಟ ಪಡಿಸಿದೆ. ಇಂಥ ತೀರ್ಪುಗಳಲ್ಲಿ ಮುಖ್ಯವಾದುದು ಕಾಸರಗೋಡಿನ ಎಡನೀರು ಮಠಾಧಿಪತಿ ಶ್ರೀ ಕೇಶವಾನಂದ ಭಾರತಿಯವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪು (1973 ಎಪ್ರಿಲ್‌). 1994 ರಲ್ಲಿ ಎಸ್‌.ಆರ್‌. ಬೊಮ್ಮಾಯಿ - ಕೇಂದ್ರ ಸರಕಾರದ ನಡುವಣ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಹೊರಡಿಸಿದ್ದ ತೀರ್ಪಿನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.

ಇದೀಗ ಕೇಂದ್ರದಲ್ಲಿನ ಬಿಜೆಪಿ ಸಚಿವರು ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದಾರಷ್ಟೆ? ಈ ಚರ್ಚೆ ಕೇವಲ ಸಂವಿಧಾನದಿಂದ ಸೋಶಲಿಸ್ಟ್‌ ಎಂಬ ಪದವನ್ನು ತೆಗೆದುಹಾಕುವುದಕ್ಕಷ್ಟೆ ಸೀಮಿತವಾಗಬಾರದು. 1978ರಲ್ಲಿ ಸಂವಿಧಾನದ 44 ನೆಯ ತಿದ್ದುಪಡಿ ಮೂಲಕ ತೆಗೆದುಹಾಕಲಾಗಿದ್ದ ಆಸ್ತಿ ಕುರಿತ ಮೂಲಭೂತ ಹಕ್ಕಿನ ಉಲ್ಲೇಖವನ್ನು ಸಂವಿಧಾನದಲ್ಲಿ ಮರುಸೇರ್ಪಡೆಗೊಳಿಸುವ ಬಗೆಗೂ ಚರ್ಚೆಯಾಗಬೇಕು. ಅಚ್ಚರಿ ಎಂದರೆ ನಾಗರಿಕರ ಆಸ್ತಿಹಕ್ಕನ್ನು ನಿರಸನಗೊಳಿಸುವ ತಿದ್ದುಪಡಿ ತಂದಾಗ ಕೇಂದ್ರದಲ್ಲಿದ್ದುದು ಜನಸಂಘ (ಇಂದಿನ ಬಿಜೆಪಿ) ಸರಕಾರ. ಈ ತಿದ್ದುಪಡಿಯ ಮೂಲಕ ಮೂಲ ಸಂವಿಧಾನದ 19 (1) ಎಫ್ ವಿಧಿಯನ್ನು (ಆಸ್ತಿ ಕುರಿತ ಮೂಲಭೂತ ಹಕ್ಕು) ಹಾಗೂ 31ನೆಯ ವಿಧಿಯನ್ನು (ಕಡ್ಡಾಯ ಆಸ್ತಿ ಸ್ವಾಧೀನ) ರದ್ದುಗೊಳಿಸಲಾಯಿತು. ಈ ಪೈಕಿ ಮೊದಲನೆಯ ವಿಧಿಯ ಬದಲಿಗೆ 300 ಎ ವಿಧಿಯನ್ನು (ಅಧಿಕಾರ ಅಥವಾ ಕಾಯ್ದೆಯ ಬಲದ ಹೊರತು ಯಾವನೇ ವ್ಯಕ್ತಿಯೂ ತನ್ನ ಆಸ್ತಿ ಮೇಲಿನ ಹಕ್ಕನ್ನು ಕಳೆದುಕೊಳ್ಳುವಂತಿಲ್ಲ ಎಂಬ ಷರತ್ತು) ಅಳವಡಿಸಿಕೊಳ್ಳಲಾಯಿತು. ಅರ್ಥಾತ್‌, ಆಸ್ತಿ ಮೇಲಿನ ಹಕ್ಕೆಂದರೆ ಅದು ಕೇವಲ ಸಾಂವಿಧಾನಿಕ ಅಥವಾ ಕಾನೂನುರೀತ್ಯಾ ಹಕ್ಕೇ ಹೊರತು, ಮೂಲಭೂತ ಹಕ್ಕಲ್ಲ ಎಂಬಂತಾಯಿತು. ಹೀಗೆ, ಆಸ್ತಿ ಹಕ್ಕು ಸಂವಿಧಾನದ ಮೂಲಸ್ವರೂಪದಲ್ಲೇ ಅಂತರ್ಗತವಾಗಿದೆಯೆಂಬ ಶ್ರೀ ಕೇಶವಾನಂದ ಭಾರತಿಯವರ ಪ್ರಕರಣದಲ್ಲಿನ ತೀರ್ಪನ್ನು ಗಣನೆಗೆ ತೆಗೆದುಕೊಳ್ಳದೆಯೇ ಈ ತಿದ್ದುಪಡಿ ಮಾಡಲಾಯಿತು. ಆದರೂ ಸಂವಿಧಾನದಲ್ಲಿ ಹೊಸದಾಗಿ ಸೇರಿಸಿದ (300 ಎ) ವಿಧಿಯಡಿಯಲ್ಲಿ ಆಸ್ತಿಹಕ್ಕಿಗೆ ಮತ್ತಷ್ಟು ಬಲ ಬಂದಿದೆ ಎಂದು ಕೆಲ ಕಾನೂನುತಜ್ಞರು ಅಭಿಪ್ರಾಯಪಟ್ಟಿರುವುದುಂಟು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯೋಚಿಸುವವರೂ ಇಲ್ಲದಿಲ್ಲ.

ಮೂಲ ಸಂವಿಧಾನದ ಬೇರೆ ಯಾವುದೇ ವಿಧಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿವಾದ ಸೃಷ್ಟಿಸಿದ್ದಿಲ್ಲ, ಸರ್ಕಾರ, ನ್ಯಾಯಾಂಗದ ನಡುವೆ ದೊಡ್ಡ ರೀತಿಯಲ್ಲಿ ಘರ್ಷಣೆಗೆ ಕಾರಣವಾದುದೂ ಇಲ್ಲ. 19 (1) ಎಫ್ ವಿಧಿಯನ್ನು ಕಿತ್ತುಹಾಕುವವರೆಗಿನ ಕಾಲಾವಧಿಯಲ್ಲಿ ಸುಪ್ರೀಂ ಕೋರ್ಟ್‌ ಈ ವಿಧಿಗೆ ಸಂಬಂಧಿಸಿದಂತೆ 275 ತೀರ್ಪುಗಳನ್ನು ನೀಡಿ ದಾಖಲೆಯನ್ನೇ ಸೃಷ್ಟಿಸಿದೆ! ಅಲ್ಲದೇ 2010ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌, ಆಸ್ತಿಹಕ್ಕನ್ನು ಮೂಲಭೂತ ಹಕ್ಕೆಂದು ಸಂವಿಧಾನದಲ್ಲಿ ಮರಳಿ ದಾಖಲಿಸಬೇಕೆಂದು ಹಾಗೂ ಸಮಾಜವಾದಿ ಎಂಬ ಪದವನ್ನು ಸಂವಿಧಾನದಿಂದ ತೆಗೆದುಹಾಕಬೇಕೆಂದು ಕೋರಿಕೊಳ್ಳಲಾಗಿದ್ದ ದೂರೊಂದನ್ನು ವಜಾಗೊಳಿಸಿತ್ತು.

44ನೆಯ ಸಂವಿಧಾನ ತಿದ್ದುಪಡಿಯಾದ 29 ವರ್ಷಗಳ ಬಳಿಕ, ಅಂದರೆ 2007ರಲ್ಲಿ ಈ ಎರಡೂ ವಿಷಯಗಳನ್ನು ಪ್ರಶ್ನಿಸಲಾಯಿತು. ದೂರನ್ನು ಸುಪ್ರೀಂಕೋರ್ಟಿನಲ್ಲಿ ದಾಖಲಿಸಿದ್ದು, ಗುಡ್‌ ಗವರ್ನೆನ್ಸ್‌ ಇಂಡಿಯಾ ಪೌಂಡೇಶನ್‌ ಎಂಬ ಕೋಲ್ಕತಾ ಮೂಲದ ಸಂಘಟನೆ. ಭಾರತದ ಶ್ರೇಷ್ಠ ನ್ಯಾಯಾಧೀಶರಾಗಿದ್ದ ಎಸ್‌.ಎಚ್‌. ಕಪಾಡಿಯಾ ನೇತೃತ್ವದ ಹಾಗೂ ನ್ಯಾ| ಕೆ.ಎಸ್‌. ರಾಧಾಕೃಷ್ಣನ್‌ ಮತ್ತು ನ್ಯಾ| ಸ್ವತಂತ್ರ ಕುಮಾರ್‌ ಸದಸ್ಯತ್ವದ ನ್ಯಾಯಪೀಠವೊಂದು ಈ ಅರ್ಜಿಯನ್ನು ತಿರಸ್ಕರಿಸಿ "ನಿಮ್ಮ ವಾದವನ್ನು ಒಪ್ಪಿಕೊಂಡರೆ ನಾವು ಆಸ್ತಿಹಕ್ಕು ಕುರಿತ ಈ ಹಿಂದಿನ ಪ್ರಕರಣಗಳಲ್ಲಿನ ತೀಪು‌ìಗಳನ್ನು ಅಲ್ಲಗಳೆದಂತಾಗುತ್ತದೆ; ಇತ್ತೀಚೆಗಷ್ಟೇ ಇಂಥದೇ ಅರ್ಜಿಯನ್ನು ತಿರಸ್ಕರಿಸಿಯಾಗಿದೆ. ಪುನಃ ಈ ವಿಷಯ ಶುರುಮಾಡುವುದು ಸಾಧ್ಯವಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿತು.

ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌ ) ಗಳ ಸ್ಥಾಪನೆಗಾಗಿ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ದೂರಿನ ಪ್ರಕರಣ ಇದಾಗಿತ್ತು. ಏನಿದ್ದರೂ ಇಂದಿರಾಗಾಂಧಿ ಸರಕಾರ 1971ರಲ್ಲಿ ಸಂವಿಧಾನದ 25ನೆಯ ತಿದ್ದುಪಡಿಯ ಮೂಲಕ ಆಸ್ತಿ ಹಕ್ಕನ್ನು ದುರ್ಬಲಗೊಳಿಸಿಯಾಗಿತ್ತು! ಈ ತಿದ್ದುಪಡಿಯ ಮೂಲಕ ಸರಕಾರ, 1970ರಲ್ಲಿ ಬ್ಯಾಂಕ್‌ ರಾಷ್ಟ್ರೀಕರಣ ಕುರಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, "ಯಾವುದಾದರೂ ಆಸ್ತಿಯನ್ನು ಸರಕಾರ ಕಡ್ಡಾಯವಾಗಿ ಸ್ವಾಧೀನಪಡಿಸಿಕೊಂಡಲ್ಲಿ ಸೂಕ್ತ ಪರಿಹಾರ ಪಾವತಿಸಲು ಅದು (ಸರಕಾರ) ಬದ್ಧವಾಗಿರುತ್ತದೆ' ಎಂದು ಹೇಳಿತ್ತು.

ಆಸ್ತಿ ಹಕ್ಕು ಹಾಗೂ ಸೋಶಲಿಸ್ಟ್‌ ಪದ ಕೈಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪನ್ನು ಒಂದು ಶಾಸನದ ಮೂಲಕ ತಳ್ಳಿಹಾಕುವ ಹಕ್ಕು ಸರಕಾರಕ್ಕಿದೆ! ಇತ್ತೀಚೆಗೆ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕೊಲಿಜಿಯಂ (ನೇಮಕ ಸಮಿತಿ ) ವ್ಯವಸ್ಥೆಯನ್ನು ಅದು ರದ್ದು ಪಡಿಸಿದ್ದೂ ಇದೇ ವಿಧಾನದಿಂದ. ನ್ಯಾಯಾಧೀಶರುಗಳ ನೇಮಕಾತಿಯ ನಿರ್ವಹಣೆಗಾಗಿ ಈಗ "ನ್ಯಾಯಾಂಗೀಯ ನೇಮಕಾತಿ ಆಯೋಗ' ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಈ ನೇಮಕಾತಿಗಳ ವಿಷಯದಲ್ಲಿ ನ್ಯಾಯಾಂಗ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಂತಾಗಿದೆ.

ಸಂವಿಧಾನದಲ್ಲಿ "ಸಮಾಜವಾದಿ' ಎಂಬ ಪದ ರಾರಾಜಿಸುತ್ತಿದ್ದರೂ ಅದು ನಮ್ಮ ದೇಶವನ್ನು ಒಂದೇ ಒಂದು ಅಂಚಿನಷ್ಟೂ ಮುಂದೆ ಒಯ್ದಿಲ್ಲವೆಂಬ ಸತ್ಯ ಎಂಥ ಹೆಡ್ಡನಿಗೂ ಅರ್ಥವಾಗುವಂಥದೇ. ವಾಸ್ತವವಾಗಿ ನಾವು ಈ ಆದರ್ಶದಿಂದ ತುಂಬಾ ದೂರ ಸರಿದಿದ್ದೇವೆ, ಸರಿಯುತ್ತಿದ್ದೇವೆ. ನಮ್ಮ ರಾಷ್ಟ್ರ ಈಗ ತೀರಾ ಬಂಡವಾಳಶಾಹಿಯಾಗಿ ಬೆಳೆದುನಿಂತಿದೆ. ಆದಾಯದಲ್ಲಿನ ಅಸಮಾನತೆ ಬೆಳೆಯುತ್ತಲೇ ಇದೆ. ಸಂಪತ್ತಿನ ಶೇಖರಣೆಗೆ ಕಡಿವಾಣ, ಸರ್ವಜನ ಕಲ್ಯಾಣ ಇತ್ಯಾದಿಗಳನ್ನು ಒತ್ತಿಹೇಳುತ್ತಿರುವ ರಾಷ್ಟ್ರೀಯ ನೀತಿಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳು (39ನೆಯ ವಿಧಿಯಲ್ಲಿ ಹೇಳಿರುವಂಥವು) ಇಂದು ಅರ್ಥವಿಲ್ಲದ ಪದಗಳಾಗಿ ಬಿಟ್ಟಿವೆ. ತಾತ್ಪರ್ಯ ಇಷ್ಟೇ - ನಮ್ಮ ಸಂವಿಧಾನವನ್ನು ಹಾಗೂ ಆಡಳಿತ ವ್ಯವಸ್ಥೆಯನ್ನು ಯಾವುದೇ ಸಿದ್ಧಾಂತದ ಸೆರೆಯಾಳನ್ನಾಗಿಸಕೂಡದು. ನಾವೀಗ ಸಮಾಜವಾದಿ ಎಂಬ ಪದಕ್ಕೆ ವಿದಾಯ ಹೇಳಲು ಇದೇ ಅತ್ಯಂತ ಸೂಕ್ತ ಸಮಯ. ಉಳ್ಳವರು ಇನ್ನಷ್ಟು ಶ್ರೀಮಂತರಾಗುತ್ತ ಹೋಗುವ, ಬಡವರು ಮತ್ತೂ ಬಡವರಾಗುತ್ತ ಹೋಗುವ ವಿದ್ಯಮಾನದಿಂದ ಉದ್ಭವಿಸುವ ನಾನಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಈ ಪದ ನಿಜಕ್ಕೂ ವಿಫ‌ಲವಾಗಿದೆ.

0 comments:

Post a Comment