29 March 2013

* ಡಾ.ಎಚ್‌.ಎಲ್‌ ಪುಷ್ಪ 

ಎಚ್.ಎಸ್. ಶಿವಪ್ರಕಾಶ್ ಅವರ `ವಚನ ಸಾಹಿತ್ಯ ಮತ್ತು ಜಾತಿ ವಿರೋಧ' ಲೇಖನ ಹಾಗೂ ಆ ಕುರಿತಾದ ಚರ್ಚೆಗಳನ್ನು ಗಮನಿಸಿರುತ್ತೇನೆ. 12ನೇ ಶತಮಾನದಲ್ಲಿ ಆಗಿಹೋದ, ಈಗಲೂ ತನ್ನ ಪ್ರಸ್ತುತತೆಯನ್ನು ಅಲಕ್ಷಿತ ಸಮುದಾಯಗಳಲ್ಲಿ ಉಳಿಸಿಕೊಂಡ ಈ ಚಳವಳಿ ಸಂವಿಧಾನಾತ್ಮಕ ಸ್ವರೂಪವುಳ್ಳದ್ದಾಗಿತ್ತು. ಅಂತ್ಯಜ ಮೊದಲಾಗಿ ವಿಪ್ರರನ್ನು, ಅಲಕ್ಷ್ಯಕ್ಕೆ ಒಳಗಾಗಿದ್ದ ಸ್ತ್ರೀಯರನ್ನು, ದೇವಭಾಷೆಯಾಗಿದ್ದ ಸಂಸ್ಕೃತ ಭಾಷೆಯ ಗರ್ವವನ್ನು, ಅಮಾನವೀಯ ಹಾಗೂ ಜೀವಪರವಲ್ಲದ ವೈದಿಕ ಧರ್ಮವನ್ನು ವಿರೋಧಿಸುವ ಹಾಗೂ ಪರ್ಯಾಯವೊಂದನ್ನು ಕಟ್ಟುವ ನೆಲೆಯನ್ನಾಗಿಯೇ ವಚನ ಚಳವಳಿಯನ್ನು ನೋಡಬೇಕಾದ ಅಗತ್ಯ ನಮಗಿದೆ. ಬಸವಣ್ಣನ ಶತಮಾನಗಳ ಮನ್ನೋಟವುಳ್ಳ ಈ ವ್ಯವಸ್ಥಿತ ಚಳವಳಿಯನ್ನು ಹಲವು ಕಾಲದಲ್ಲಿ ಹಲವು ರೀತಿಯ ಮುಸುಕುಗಳನ್ನು ಹೊದ್ದು ವೈದಿಕ ಧರ್ಮ ನಿರಂತರವಾಗಿ ಆಕ್ರಮಣ ನಡೆಸಿದೆ. ಅದರ ಕೈಯಲ್ಲಿರುವ ಅಸ್ತ್ರಗಳೆಂದರೆ ಗೋಮಾತೆ, ಮಡೆಸ್ನಾನ, ಅಂಬೇಡ್ಕರರ ಸಂವಿಧಾನ ರಚನೆಯನ್ನು ಕುರಿತು ಹರಡುವ ಊಹಾಪೋಹಗಳು ಇತ್ಯಾದಿಗಳು. ಕೆಲವು ಬಾರಿ ಬಸವಣ್ಣನನ್ನು ಬ್ರಾಹ್ಮಣನೆಂದು ಗುರುತಿಸಿಕೊಳ್ಳುವ ಅವಿವೇಕವನ್ನು ಸಹ ವೈದಿಕತೆ ಮಾಡಿದೆ.

ಮೂಲತಃ ಹಲವು ಜಾತಿಗಳನ್ನು ಒಂದೇ ವೈಚಾರಿಕ ನೆಲೆಗಟ್ಟಿನಡಿಯಲ್ಲಿ ಒಂದೇ ದೈವವನ್ನು ಒಪ್ಪಿಕೊಳ್ಳುವ ಮೂಲಕ ಸಂಘಟಿಸಲ್ಪಟ್ಟ ಈ ಚಳವಳಿ ಸಹಜವಾಗಿಯೇ ಜನರಿಂದ, ಜನರಿಗಾಗಿಯೇ ಎಂಬ ಮುಕ್ತತೆಯನ್ನು ಉಳ್ಳದ್ದು. ಸ್ವಾಭಾವಿಕವಾಗಿಯೇ ಈ ಚಳವಳಿಯ ಗಡಿರೇಖೆಗಳು ಜಡವಲ್ಲ, ಚಲನಶೀಲವಾಗಿವೆ. ಯಾರು ಬೇಕಾದರೂ ಬೇಲಿಯನ್ನು ಕಿತ್ತು ಒಳಬರುವ ಹಾಗೂ ಹೊರಹೋಗುವ ಮುಕ್ತ ವೈಚಾರಿಕಾ ಸ್ವಾತಂತ್ರ್ಯವುಳ್ಳದ್ದು. ಈ ಸಮುದಾಯದಲ್ಲಿ ತಾವಾಗಿಯೇ ಉತ್ಸಾಹದಿಂದ ಪ್ರವೇಶಿಸಿದ ಹಲವು ಕಾಯಕ ಜೀವಿಗಳು ತಮ್ಮ ಜಾತಿಗಳನ್ನು ಬದಿಗಿಟ್ಟು ಕಾಯಕಗಳನ್ನು ಉಳಿಸಿಕೊಂಡು ಸ್ವಾಭಿಮಾನದ ಮೇಲುಕೀಳಿಲ್ಲದ ಒಂದು ವಿಶಾಲ ಜನಜೀವನದಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡರು. ಹಲವು ದೈವ, ಹಲವು ಸಂಸ್ಕೃತಿಗಳು ಒಂದೆಡೆಯಾದರೆ ಮಾನವೀಯತೆಯನ್ನು ಮರೆತು ಶ್ರೇಷ್ಠತೆಯ ವ್ಯಸನಪೀಡಿತ ವೈದಿಕ ಧರ್ಮ ಜನಸಾಮಾನ್ಯರನ್ನು ಕಾಡಲಾರಂಭಿಸಿದಾಗ ತರತಮಗಳಿಲ್ಲದ ವಚನ ಚಳವಳಿಯ ತೆಕ್ಕೆಗೆ ತಾವಾಗಿಯೇ ತಮ್ಮನ್ನು ಅಲಕ್ಷಿತ ಸಮುದಾಯಗಳು ಅರ್ಪಿಸಿಕೊಂಡವು.

ಹೀಗಾಗಿ ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾಗಿದ್ದು ತಮ್ಮನ್ನು ಶತಮಾನಗಳಿಂದ ಉಸಿರುಗಟ್ಟಿಸಿದ್ದ ವರ್ಣವ್ಯವಸ್ಥೆಯಿಂದ ಹೊರಬಂದರು ಎಂಬುದಷ್ಟೇ ಮುಖ್ಯವಾಗುತ್ತದೆ. ತಮ್ಮ ತಮ್ಮ ವಚನಗಳಲ್ಲಿ ತಮ್ಮ ಮುಂದಿನ ನಡೆನುಡಿ ಹೇಗಿರಬೇಕೆಂಬುದು ಅವರ ಆಲೋಚನೆಯಾಗಿತ್ತೆ ವಿನಾ ಜಾತಿಯ ಪರವಾಗಿ ಅಥವಾ ಬ್ರಾಹ್ಮಣರ ವಿರೋಧವಾಗಿ ಇರಬೇಕೆಂಬುದರ ಕಡೆಗೆ ಅವರ ಗಮನವಿರಲಿಲ್ಲ. ಈ ವಿಚಾರಗಳನ್ನು ಕುರಿತು ಅವರು ಹೆಚ್ಚು ವಚನಗಳಲ್ಲಿ ಪ್ರತಿಕ್ರಿಯಿಸಿಲ್ಲ ಎಂಬ ಅಲಕ್ಷಿತ ವಿಚಾರವನ್ನೇ ಹಿಡಿದು ಚಳವಳಿಯೊಂದು ಜಾತಿ ವಿರೋಧಿಯಾಗಿರಲಿಲ್ಲ ಎಂಬ ಸಿದ್ಧಾಂತ ರೂಪಿಸ ಹೊರಟಿರುವುದು ಹಲವು ಹುನ್ನಾರಗಳನ್ನು ಎತ್ತಿ ಹಿಡಿಯುತ್ತದೆ. ಈ ಹುನ್ನಾರಿನ ಹಿಂದೆ ವೈದಿಕ ಧರ್ಮದ ಎದುರುನಿಂತ ಜೀವರಪರವಾದ ಸಂಘಟನಾ ರೂಪದ ಸಮಾಜವೊಂದನ್ನು ತುಳಿಯುವ ಅಥವಾ ಜೀವ ವಿರೋಧಿಯಾದ ಕೊಳೆತುಹೋದ ವ್ಯವಸ್ಥೆಯೊಂದನ್ನು ಮರುಸ್ಥಾಪಿಸುವ ಬಲವಾದ ವಿಚಾರಗಳು ಸ್ಪಷ್ಟವಾಗಿಯೇ ಕಂಡುಬರುತ್ತದೆ.

ಒಂದು ಸುಳ್ಳನ್ನು ಹತ್ತು ಬಾರಿ ಹೇಳುತ್ತಲೇ ಹೋದರೆ ಅದು ಸತ್ಯವಾಗುವ ಸಾಧ್ಯತೆಗಳು ಇರುವುದರಿಂದ ಸುಳ್ಳನ್ನು ಅದರ ಮೊಳಕೆಯ ರೂಪದಲ್ಲಿ ನಿವಾರಿಸಬೇಕಾದ ಅಗತ್ಯವೂ ಈ ಹಿನ್ನೆಲೆಯಲ್ಲಿ ನಮಗಿದೆ.ಹನ್ನೆರಡನೇ ಶತಮಾನದ ವಚನಕಾರರು ಸಾಮಾಜಿಕ ವ್ಯವಸ್ಥೆಯ ಒಂದು ಲಕ್ಷಣವಾದ `ಜಾತಿ'ಯನ್ನು ಒಟ್ಟು ಮಾನವ ಕುಲ ಎಂಬ ವಿಸ್ತಾರವಾದ ಅರ್ಥದಲ್ಲಿ ಬಳಸಿದ್ದಾರೆ. ಮಾನವನ ವ್ಯಕ್ತಿತ್ವಕ್ಕೆ ಮಾರಕವಾಗುವ ಸೀಮಿತಾರ್ಥದ ಜಾತಿಗಿಂತ `ಶರಣಕುಲ'ವೊಂದೇ ಒಪ್ಪಿತವಾದದ್ದು ಎಂಬ ಅಭಿಪ್ರಾಯ ಬಹುತೇಕ ವಚನಕಾರರಲ್ಲಿ ಕಂಡುಬರುತ್ತದೆ. ಕುಲಕ್ಕಿಂತ ನಡೆನುಡಿ ಮುಖ್ಯವಾದುದು, ಕೆಳಕುಲದಲ್ಲಿ ಹುಟ್ಟಿಯೂ ಹಿರಿಮೆಯನ್ನು ಕಂಡ ಶರಣರನ್ನು ಹೇಗೆ ನೋಡಬೇಕು ಎನ್ನುವುದನ್ನು ಸಿದ್ಧರಾಮೇಶ್ವರ ತನ್ನ ಒಂದು ವಚನದಲ್ಲಿ ಸೂಚಿಸುತ್ತಾನೆ.

ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ;/ ಕುಲವೇ ಡೋಹರನ? ಕುಲವೇ ಮಾದಾರನ?/ ಕುಲವೇ ದೂರ್ವಾಸನ?ಕುಲವೇ ವ್ಯಾಸನ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?/ ಕುಲವ ನೋಳ್ಪಡೆ ಹುರುಳಿಲ್ಲ; ಅವರ ನಡೆಯ ನೋಳ್ಪಡೆ ಹುರುಳಿಲ್ಲ;/ ಅವರ ನಡೆಯ ನೋಳ್ಪಡೆ ನಡೆಯುವವರು ತ್ರಿಲೋಕದಲ್ಲಿಲ್ಲ/ಕಪಿಲಸಿದ್ಧಮಲ್ಲಿಕಾರ್ಜುನಾ. ನೋಡಾ,ಹೀಗೆ ಕನಿಷ್ಠತೆಯಲ್ಲಿ ಇರುವ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ, ಆ ಮೂಲಕ ಈಗಾಗಲೇ ಇರುವ ವ್ಯವಸ್ಥೆಯೊಂದಕ್ಕೆ ಪ್ರತಿಯಾಗಿ ಶ್ರಮಜೀವಿಗಳ ಹೊಸ ವರ್ಗವೊಂದನ್ನು ರೂಪಿಸುವ ಛಾಂಛೆ ಎಲ್ಲ ವಚನಕಾರರಲ್ಲೂ ಕಂಡುಬರುತ್ತದೆ. ಬಸವಣ್ಣನಂತಹ ಮೇಲ್ವರ್ಗದ ವಚನಕಾರರು ತಮ್ಮನ್ನು ಅಪವರ್ಗೀಕರಣಗೊಳಿಸುವ ಮೂಲಕ ಈ ಆಶಯಗಳನ್ನು ವ್ಯಕ್ತಪಡಿಸುತ್ತಾರೆ. ತಮ್ಮ ತಮ್ಮ ಆಹಾರ ಪದ್ಧತಿಗಳು, ಕಾಯಕಗಳ ಬಗ್ಗೆ ದಿಟ್ಟತನವಾಗಿಯೇ ಪ್ರಸ್ತಾಪಿಸುವ ಕೆಳವರ್ಗದ ವಚನಕಾರ/ಕಾರ್ತಿಯರ ಬಗ್ಗೆ ಎಲ್ಲೂ ಜಾತಿ ಪರವಾದ, ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡುಬರುವುದಿಲ್ಲ.

ಬಿಡಾಡಿ ಎಂಬ ಅಂಕಿತದಿಂದ ಕೆಲವೇ ವಚನಗಳನ್ನು ಬರೆದ ಬೊಂತಾದೇವಿ `ಬಯಲು' ಎಂಬುದನ್ನು ನಿರ್ವಾಣ ಎಂಬ ಅರ್ಥದಲ್ಲಿ ಬಳಸುತ್ತಾ `ಎಲ್ಲ ಲೌಕಿಕದ ಹಂಗಿನಿಂದ ಹೊರನಿಂತ ಬಯಲಿಗೆ ಜಾತಿಯ ಹಂಗುಂಟೆ' ಎಂದು ಪ್ರಶ್ನಿಸುತ್ತಾಳೆ. ಶ್ರೇಷ್ಠರಿಗೊಂದು, ಕನಿಷ್ಠರಿಗೊಂದು ಬಯಲಿನ ಕಲ್ಪನೆಯಿದೆಯೇ ಎಂಬ ತರ್ಕವನ್ನು ಆಕೆ ನಡೆಸುತ್ತಾಳೆ.ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?/ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ?/ಎಲ್ಲಿ ನೋಡಿದೆಡೆ ಬಯಲೊಂದೆ;......ಹೀಗೆ ಜಾತಿ ಕಾರಣದಿಂದಾಗಿಯೇ ಇರುವ `ಬ್ರಾಹ್ಮಣ'ನೆಂಬ ಮೇಲ್ಮೆಯನ್ನು ಧಿಕ್ಕರಿಸುತ್ತಾ, ಪಕ್ಕಕ್ಕೆ ಸರಿಸುತ್ತಾ ನಡೆದ ವಚನಕಾರರ ನಡೆಯಲ್ಲಿ ಹೊಸ ಸಮಾಜ ನಿರ್ಮಾಣದ ಕನಸಿದೆ, ಆ ಕನಸಿನೊಂದಿಗೆ ಒಟ್ಟಾಗಿ ನಡೆಯುವ ಛಲವಿದೆ.

ಮುಂದೆ ದಾಸಪರಂಪರೆಯಲ್ಲಿ ಬಂದ ಕನಕದಾಸನ `ರಾಮಧಾನ್ಯ ಚರಿತೆ' ಅಕ್ಕಿ ರಾಗಿಗಳ ವಾಗ್ವಾದದಂತೆ ತೋರಿದರೂ ಅದು ಮೇಲ್ವರ್ಗದ ನಿಸ್ಸಾರತೆ, ನಿರ್ದಯತೆಯನ್ನು ಸಾರುತ್ತಾ ಕೆಳವರ್ಗದವರ ಸರ್ವಶಕ್ತತೆಯನ್ನು ಎತ್ತಿಹಿಡಿದ ಕಾವ್ಯ. ಹೀಗೆ ತಮ್ಮ ತಮ್ಮ ಕಾವ್ಯಗಳಲ್ಲಿ ಕವಿಗಳು ತಾವು ಯಾವ ಯುಗಕ್ಕೇ ಸೇರಿರಲಿ ಭ್ರಷ್ಟವಾದ ಜಾತಿವ್ಯವಸ್ಥೆಯನ್ನು ಖಂಡಿಸುತ್ತಾ ಬಂದಿದ್ದಾರೆ. ನೇರವಾಗಿ ಖಂಡಿಸುವ ಧೈರ್ಯ ತೋರಿದವರು ಚಳವಳಿಯ ಚೌಕಟ್ಟಿನಲ್ಲಿ ನಿಂತ ವಚನಕಾರರು. ವಚನಗುಮ್ಮಟವೆಂದೇ ಕರೆಸಿಕೊಂಡ ಫ.ಗು. ಹಳಕಟ್ಟಿಯವರು ವಚನಗಳ ಸಂಪಾದನಾ ಕಾರ್ಯದಲ್ಲಿ ಪ್ರಕಟಣೆಗಾಗಿ ಆಂಗ್ಲ ಸರ್ಕಾರವನ್ನು ಕೋರಿದಾಗ ತಮ್ಮ ಧರ್ಮದಲ್ಲೂ, ವಚನಕಾರರಲ್ಲೂ ಇರುವ ಏಕದೇವತಾ ಉಪಾಸನಾ ಕಾರಣಕ್ಕಾಗಿಯೇ ನಿರಾಕರಿಸಲ್ಪಡುತ್ತಾರೆ.

ವೀರಶೈವ ಧರ್ಮವನ್ನು ತಮ್ಮ ಧರ್ಮಕ್ಕೆ ಪ್ರತಿಸ್ಪರ್ಧಿ ಎಂದು ಪ್ರಕಟಣೆಯ ನೆರವನ್ನು ನಿರಾಕರಿಸುತ್ತಾರೆ. ಚರಿತ್ರೆಯೇ ಒಪ್ಪಿಕೊಂಡಂತೆ, ಅಲಕ್ಷಿತ ಬಹುಸಮುದಾಯಗಳು ಒಪ್ಪಿಕೊಂಡಂತೆ ವಚನ ಚಳವಳಿ ಮಾನವತೆಗೆ ಕೊಡಲಿ ಪೆಟ್ಟಿನಂತಿದ್ದ ವೈದಿಕ ಧರ್ಮವನ್ನು ನಿರಾಕರಿಸಿಯೇ ತನ್ನ ನಡೆಯನ್ನು ಕಂಡುಕೊಂಡಿದೆ. ಈಗ ವಿವಿಧ ಕಾರ್ಯಕ್ಕೆ ಸೇರಿದ ಜನಾಂಗಗಳು ತಮ್ಮ ತಮ್ಮ ಕುಲದ ಅಭಿಮಾನಗಳಂತೆ ಆ ಚಳವಳಿಯಲ್ಲಿ ಸೇರಿಹೋದವರ ವಚನಗಳನ್ನು ಅಭ್ಯಸಿಸುವ ಕ್ರಮವೂ ಚಾಲ್ತಿಯಲ್ಲಿದೆ. ಈ ನಿಲುವು ವಸಾಹತುಶಾಹಿ ಒತ್ತಡಗಳ ಸಂದರ್ಭದಲ್ಲಿ ವೀರಶೈವರು ತಮ್ಮ ಜಾತಿಯ ಮೇಲ್ಮೆಯನ್ನು ಎತ್ತಿಹಿಡಿದರು ಎನ್ನುವುದಕ್ಕಿಂತ ಕೆಳವರ್ಗಕ್ಕೆ ಸೇರಿದವರು ಚರಿತ್ರೆಯಲ್ಲಿ ತಮ್ಮ ಸ್ಥಾನ ಗುರುತಿಸಿಕೊಳ್ಳಲು ಮಾಡಿದ ಹುಡುಕಾಟವೆನ್ನುವುದು ಸೂಕ್ತವಾದೀತು.

ಕೆಳವರ್ಗದ ವಚನಕಾರರನ್ನು ಕುರಿತಂತೆ ನಡೆದಿರುವ ಸಂಶೋಧನೆಗಳು, ರಚಿತವಾದ ನಾಟಕಗಳು ಹಾಗೂ ಕವಿತೆಗಳು ಈ ಅಭಿಪ್ರಾಯವನ್ನು ದೃಢಪಡಿಸುತ್ತವೆ. ಹೀಗಾಗಿ ಝಳಕಿ ಹಾಗೂ ಬಾಲಗಂಗಾಧರ ಅವರ ವಚನಕಾರರು ಹಾಗೂ ಜಾತಿ ಕುರಿತಾದ ಅಭಿಪ್ರಾಯಗಳು ಒಂದು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಕಟ್ಟಲ್ಪಟ್ಟ ವಾದಗಳಾಗಿವೆ. ಚರಿತ್ರೆಯಲ್ಲಿ ಮುಂಬಾಗಿಲಿನಿಂದ ತಳ್ಳಲ್ಪಟ್ಟು ಬಹು ಸಮುದಾಯದಿಂದ ದೂರಾದವರು ಹಿಂಬಾಗಿಲಿನಿಂದ ಪ್ರವೇಶಿಸಲು ಕೈಯಲ್ಲಿ ಹಿಡಿದ ಅಸ್ತ್ರಗಳಾಗಿಯೇ ಈ ವಾದಗಳು ತೋರುತ್ತವೆ.

28 March 2013

ಕಣ್ಣ ಗಾಯವನು ಅರಿಯಲುಬಾರದು

* ಡಾ.ಕೆ.ವೈ ನಾರಾಯಣಸ್ವಾಮಿ 

ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಅವರು ವಚನ ಚಳವಳಿ ಕುರಿತು ಬರೆದಿರುವ ಸಂಶೋಧನೆಯ ಫಲಿತಗಳನ್ನು ಶಿವಪ್ರಕಾಶ್ ಅವರು,  `ಪ್ರಜಾವಾಣಿ' ಅಂಕಣದಲ್ಲಿ ಪ್ರಶ್ನಿಸಿ ಬರೆದರು. (ಚಳವಳಿ ಎನ್ನುವ ಪದ ಸಾವಿರಾರು ವಚನಗಳಲ್ಲಿ ಒಮ್ಮೆಯೂ ಪ್ರಸ್ತಾಪ ಆಗಿಲ್ಲದಿರುವುದರಿಂದ ವಚನಗಳ ಕಾಲವನ್ನು ಚಳವಳಿ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲವೆಂದು ಈ ಸದರಿ ಸಮಾಜ ವಿಜ್ಞಾನಿಗಳು ಹೇಳಿಯಾರು) ಬಾಲಗಂಗಾಧರ ಅವರು ಜಾತಿ ಪದ್ಧತಿ ಭಾರತೀಯ ಸಮಾಜದ ಲಕ್ಷಣವಲ್ಲ. ಇದು ವಸಾಹತು ಕಣ್ಕಟ್ಟು ಎಂಬ ತಮ್ಮ ಕ್ರಾಂತಿಕಾರಕ ಸಂಶೋಧನೆಯನ್ನು ಹೆಗ್ಗೋಡಿನ ನೀನಾಸಂನಲ್ಲಿ ಮಂಡಿಸಿ ಕನ್ನಡದ ಮೇಲ್ವರ್ಗದ ವಿದ್ವಾಂಸರನ್ನು ಬೆಚ್ಚಿ ಬೀಳಿಸಿದ್ದರು.  ಹಾಗೂ ತಮ್ಮ ಸಂಶೋಧನೆಯನ್ನು ಸಮರ್ಥಿಸಿಕೊಳ್ಳಲು ಕನ್ನಡದ ವಚನಗಳಲ್ಲಿ ಜಾತಿ ವಿರೋಧದ ನೆಲೆ ಇಲ್ಲವೆಂದು ಸಾರಿದರು. ಆ ದಿನಗಳಿಂದಲೂ ಬಾಲಗಂಗಾಧರ ಅವರು ನಮ್ಮನ್ನು ಜಾತಿಯ ಅಂಧತ್ವದಿಂದ ಬಿಡಿಸಲು ಹೋರಾಡುತ್ತಿದ್ದಾರೆ.

ಬಾಲಗಂಗಾಧರ ಅವರು ಹೇಳುವಂತೆ ಈಗಿನ ನಮಗಿರುವ ಜಾತಿ ಮತ್ತು ಜಾತಿ ಪದ್ಧತಿಯ ತಿಳಿವು, ಬ್ರಿಟಿಷ್ ವಸಾಹತು ನಮಗೆ ರೂಪಿಸಿಕೊಟ್ಟ ತಪ್ಪು ಕಲ್ಪನೆ. ಈ ಹುಸಿಯನ್ನು ನೆಚ್ಚಿದ ನಮ್ಮ ತಿಳಿವಳಿಕೆಯಿಂದಾಗಿಯೇ ನಾವು  ವಚನಗಳನ್ನು ಜಾತಿ ವಿರೋಧಿ ಪಠ್ಯಗಳೆಂದು ತಪ್ಪಾಗಿ ಓದುತ್ತಿದ್ದೇವೆ. ಆದರೆ ಅದು ಸತ್ಯವಲ್ಲವೆಂಬುದು ಬಾಲಗಂಗಾಧರ ಅವರ ವಾದ. ಈ ಕ್ರಿಯೆ-ಪ್ರತಿಕ್ರಿಯೆಗಳ ಬೌದ್ಧಿಕ ಉತ್ಸಾಹವನ್ನು ಗಮನಿಸಿದರೆ ಎರಡು ನಡೆಗಳು ನಿಚ್ಚಳವಾಗಿ ಕಾಣುತ್ತಿವೆ. ವಚನಕಾರರನ್ನು ಆಪಾದಿತರೆಂದು ಕರೆದಿರುವ ಬಾಲಗಂಗಾಧರ ಒಂದು ದಂಡೆಯಾದರೆ, ವಚನಕಾರರನ್ನು ದೋಷಮುಕ್ತರೆನ್ನಲು ಸಾಕ್ಷ್ಯಗಳನ್ನು ಸಾದರಪಡಿಸುತ್ತಿರುವ ಪ್ರತಿವಾದಿ ವಕೀಲರಂತೆ ನಮ್ಮ ಹಿರಿಯ ವಿದ್ವಾಂಸರು ಇನ್ನೊಂದು ದಂಡೆಯಲ್ಲಿದ್ದಾರೆ. ವಚನಗಳನ್ನು ಸಮರ್ಥಿಸುತ್ತಿರುವ ವಿದ್ವಾಂಸರು ಬಾಲಗಂಗಾಧರರ ಟ್ರಾಪ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಾಲಗಂಗಾಧರ ಅವರ ಸಂಶೋಧನಾ ವಿಧಾನದ ದೋಷವನ್ನು ಎತ್ತಿ ತೋರಿಸದೆ ಅವರ ಫಲಿತವನ್ನು ವಿರೋಧಿಸುವುದಕ್ಕೆ ಈ ಪ್ರತಿಕ್ರಿಯೆಗಳು ಸೀಮಿತವಾಗುತ್ತಿವೆ. ಸಂಶೋಧನೆಯ ಗುರಿಯ ಹುಳುಕನ್ನು ಅರಿಯುವುದು ಅಗತ್ಯವಾಗಿದೆ.

ಬಾಲಗಂಗಾಧರ ಅವರು ಮಂಡಿಸಿರುವ ಈ ಅಧ್ಯಯನವು ಭಾರತದಲ್ಲಿ ಹಿಂದುತ್ವದ ರಾಜಕಾರಣ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರ್ಥೈಸುವುದು ಮುಖ್ಯವೆಂದು ತೋರುತ್ತಿದೆ. ಸರಿಯಾಗಿ ಹೇಳಬೇಕೆಂದರೆ ಬಾಬರಿ ಮಸೀದಿಯ ಧ್ವಂಸದ ನಂತರದಲ್ಲಿ ಕನ್ನಡದಲ್ಲಿ ಮಾತ್ರವಲ್ಲದೆ ಭಾರತದ ಬೇರೆ ಭಾಷೆಗಳಲ್ಲೂ ಜಾತಿ ಮತ್ತು ಸನಾತನ ಮೌಲ್ಯಗಳನ್ನು ಸಮರ್ಥಿಸುವ ಆಲೋಚನಾ ಕ್ರಮಗಳು ಸಮಾಜಶಾಸ್ತ್ರಗಳ ಮೂಲಕ ಆರಂಭಗೊಂಡಿರುವುದನ್ನು ಗಮನಿಸಬೇಕು. ಅಲ್ಲದೆ ಯಾವ ಪಠ್ಯಗಳು ಆಕರಗಳು ಸ್ಥಳಗಳು ಸರ್ವ ಸಮಾನತೆಯನ್ನು ಪ್ರತಿಪಾದಿಸುತ್ತಿದ್ದವೋ ಅಂತಹ ನೆಲೆಗಳನ್ನು ಭಗ್ನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಕರ್ನಾಟಕದ ಬಾಬಾಬುಡನ್‌ಗಿರಿಯ ವಿವಾದ ಮತ್ತು ಕನ್ನಡ ಆದಿ ಕವಿ ಪಂಪ ಸಾರಿ ಹೇಳಿರುವ `ಮಾನವಕುಲಂ ತಾನೊಂದೇ ವಲಂ' ಎಂಬ ಹೇಳಿಕೆಯೂ ಜಾತಿ ವಿರೋಧವಾಗಿ ಹೇಳಿದ್ದಲ್ಲ ಎನ್ನುವ ಪ್ರಯತ್ನವು ಸಂಶೋಧನೆಯ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆಯಿತು. ಇವುಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಈ ಪ್ರಯತ್ನಗಳು ಭಾರತ ಸಮಾಜ ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಅಂತಹ ಮಹಾ ಮಾನವತಾವಾದಿಗಳ ನಿರಂತರ ಹೋರಾಟಗಳಿಂದ ರೂಪುಗೊಂಡಿದ್ದ ಸಮಾನತೆಯ ಕನಸನ್ನು ಹಾಗೂ ಸಮಾಜದಲ್ಲಿ ಬಲಗೊಳ್ಳುತ್ತಿರುವ ತಾಳಿಕೆಯ ಗುಣವನ್ನು ಮುರಿಯುವ ಹುನ್ನಾರದಂತೆ ಕಾಣುತ್ತವೆ. ನಮ್ಮ ವರ್ತಮಾನವನ್ನು ಮಾನವೀಯಗೊಳಿಸುವ ಸುಂದರಗೊಳಿಸುವ ಆಲೋಚನೆಗಳನ್ನು `ಸತ್ಯ'  ಎನ್ನುವ ಹೆಸರಿನಲ್ಲಿ ಕೆಡಿಸಲು ಪ್ರಯತ್ನ ನಡೆಸಿರುವುದನ್ನು ಅರಿಯುವ ಅಗತ್ಯವಿದೆ. ಈಗ ವಚನಗಳ ಸರದಿ.

ಈ ಹಿನ್ನೆಲೆಯಲ್ಲಿ ಡಂಕಿನ್ ಅವರ ಸಂಶೋಧನೆಯನ್ನು ಗಮನಿಸಿದರೆ ಅದು ಗುರಿಯಾಗಿಸಿಕೊಂಡಿರುವುದು ಏನು? ಕಳೆದ ಎಂಟೊಂಬತ್ತು ಶತಮಾನಗಳಿಂದ ಯಾವ ಸಮಾಜ ವಿಜ್ಞಾನಿಯ ಶಿಫಾರಸು ಇಲ್ಲದೆ ಕನ್ನಡ ಸಮಾಜಗಳು ವಚನ ಪಠ್ಯಗಳನ್ನು ತಮ್ಮ ಜೀವಭಿತ್ತಿಯಾಗಿ ಕಾಪಾಡಿಕೊಂಡು ಬಂದಿವೆ. ವಚನಗಳ ಲೋಕ ತಲ್ಲಣದ ಲೋಕವಾಗಿರುವುದೇ ಅವು ಸಾಮಾಜಿಕ ಧಾರ್ಮಿಕ ಆರ್ಥಿಕ ಅಸಮಾನತೆಗಳನ್ನು ಕುರಿತು ಚಿಂತಿಸುವ ಕಾರಣಕ್ಕೆ. ಭಾರತೀಯ ಸಮಾಜದಲ್ಲಿ ಅಸಮಾನತೆಗಳನ್ನು ಹುಟ್ಟು ಹಾಕಿ ಪೋಷಿಸುತ್ತಿರುವ ಬಲಿಷ್ಠ ಸಾಮಾಜಿಕ ಸಂಸ್ಥೆ ಎಂದರೆ ಜಾತಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದಕಾರಣ ವಚನದಲ್ಲಿ ಜಾತಿ ಕುಲದ ಪದಗಳು ಪ್ರಸ್ತಾಪವಾಗದೆಯೂ ಅದರ ಅಸ್ತಿತ್ವವನ್ನು ಓದುಗರ ಅರಿವಿಗೆ ಬರುವುದನ್ನು ಕಾಣಬಹುದು.

ಇದನ್ನು ಹೀಗೂ ಹೇಳಬಹುದು. ವಚನದ ಎಲ್ಲಾ ಅವಯವಗಳು ಜಾತಿ ವಿರೋಧಿಯಾಗಿಯೇ ಪಿಸು ನುಡಿಯುವುದನ್ನು ಕೇಳಬಹುದು. ಆದ ಕಾರಣದಿಂದಲೇ ಪ್ರಾಥಮಿಕ ಶಾಲೆಯ ಪಠ್ಯಗಳಿಂದ ಮೊದಲ್ಗೊಂಡು ಶಿಕ್ಷಣದ ಎಲ್ಲಾ ಹಂತಗಳಲ್ಲಿ ವಚನಗಳನ್ನು ಓದಲು ಸಿಕ್ಕ ಅವಕಾಶವು, ಸ್ವಾತಂತ್ರ್ಯಾ ನಂತರದ ಗ್ರಾಮ ಸಮಾಜಗಳ ಯುವಜನರಲ್ಲಿ ತಮ್ಮ ತಮ್ಮ ಜಾತಿಗಳನ್ನು ಮೀರುವ ಹಾಗೂ ಧಾರ್ಮಿಕ ಮೌಢ್ಯಗಳನ್ನು ಪ್ರಶ್ನಿಸುವ ಮನೋಭೂಮಿಕೆಯನ್ನು ನಿರ್ಮಾಣ ಮಾಡಿದೆ. ಮೇಲ್ಜಾತಿಯವರಲ್ಲಿ ಜಾತಿ ತಿರಸ್ಕಾರ ಕಾಣಿಸಿಕೊಂಡರೆ ಕೆಳ ಜಾತಿಗಳಲ್ಲಿ ಅಪಮಾನಗಳನ್ನು ದಾಟುವ ಆತ್ಮವಿಶ್ವಾಸಕ್ಕೆ ಕಾರಣವಾಗಿವೆ. ವಚನಗಳ ಓದಿನಿಂದಾಗಿ ನಮ್ಮ ವರ್ತಮಾನ ಪಡೆದುಕೊಳ್ಳುತ್ತಿರುವ ಈ ಜಾತಿವಿರೋಧದ ಚೈತನ್ಯವನ್ನು ಹತ್ತಿಕ್ಕುವುದು ಈ ಸಂಶೋಧನೆಯ ಮೊದಲನೆಯ ಅಂತಸ್ಥ ಗುರಿಯಾಗಿದೆ.

ಇನ್ನು ಎರಡನೆಯ ಗುರಿ ವಚನಗಳ ಓದು ಕೆಳ ಜಾತಿ ಮತ್ತು ಕೆಳ ವರ್ಗಗಳ ಬದುಕಿನ ಸಾಂಸ್ಕೃತಿಕ ವಾಸ್ತವವನ್ನು ನಮ್ಮ ಮುಂದಿಡುವುದರಿಂದ ಆ ಸಮುದಾಯಗಳ ಸಾಮಾಜಿಕ ಅನ್ಯಾಯವನ್ನು ಮೀಸಲಾತಿಯಿಂದ ಸರಿ ಪಡಿಸಬಹುದು ಎನ್ನುವ ನಂಬಿಕೆಯನ್ನು ಹಾಗೂ ಮೀಸಲಾತಿಯನ್ನು ಒಪ್ಪುವ ಮನಃಸ್ಥಿತಿಯನ್ನು ವಚನಗಳ ಓದು ಉಂಟುಮಾಡುತ್ತಿತ್ತು. ಈ ಪ್ರಕ್ರಿಯೆಯನ್ನು ಭಗ್ನಗೊಳಿಸುವುದು ಈ ಸಂಶೋಧನೆಯ ಮತ್ತೊಂದು ಮಜಲು. ಇಂದಿನ ಭಾರತ ಸಮಾಜದ ಹಿನ್ನಡೆಗೆ, ಭ್ರಷ್ಟಾಚಾರಕ್ಕೆ, ಮೀಸಲಾತಿ ನೀತಿಯೇ ಕಾರಣವೆಂದು ಬಾಲಗಂಗಾಧರ ಮತ್ತು ಅವರಂತಹ ಅನೇಕ ಮೇಲ್ವರ್ಗದ ವಿದ್ವಾಂಸರು ಸಂಶೋಧಿಸಿ ಹೇಳುತ್ತಿದ್ದಾರೆ ಮತ್ತು ಅನೇಕ ಕಾರ್ಪೊರೇಟ್ ಕಂಪೆನಿಯ ಮಾಲಿಕರು ಈ ವಾದಕ್ಕೆ ಧ್ವನಿಗೂಡಿಸುತ್ತಿದ್ದಾರೆ. ಸಂಶೋಧನೆಗಳಿಗೆ ಹಣ ನೀಡುತ್ತಿದ್ದಾರೆ. ಇದೇನು ಗುಟ್ಟಿನ ಸಂಗತಿಯಲ್ಲ. ಈಚಿಗೆ ನಡೆದ ಆಶೀಶ್ ನಂದಿ ಮತ್ತು ಕಾಂಚ ಐಲಯ್ಯ ಅವರ ವಾಗ್ವಾದವನ್ನು ನೆನಪಿಗೆ ತಂದುಕೊಳ್ಳಬಹುದು.

ಇನ್ನು ಮೂರನೆಯ ಆಯಾಮವು ಸ್ವಲ್ಪ ದೂರಗಾಮಿ ದೃಷ್ಟಿಯನ್ನು ಒಳಗೊಂಡಿದೆ. ವಚನಗಳಲ್ಲಿ ಜಾತಿ ವಿರೋಧವಿಲ್ಲವೆಂದ ಮೇಲೆ ಸಮಾಜದಲ್ಲಿ ಜಾತಿಪದ್ಧತಿಯೂ ಇಲ್ಲವೆಂದೇ ಅರ್ಥ. ಪ್ರಜಾಪ್ರಭುತ್ವ ಸರ್ಕಾರಗಳು ಜಾರಿಗೆ ತರುತ್ತಿರುವ ಜನ ಕಲ್ಯಾಣ ಯೋಜನೆಗಳು ಕೆಳ ತಳ ಜಾತಿಯ ಸಮುದಾಯಗಳಿಗೆ ದಕ್ಕುವುದರಿಂದ ಮೇಲ್ಜಾತಿಗೆ ಸೇರಿದ ಬಡವರಾಗಿರುವವರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ. ಬ್ರಾಹ್ಮಣರಲ್ಲಿ ಬಡವರಿಲ್ಲವೆ? ಎಂದು ಪ್ರಶ್ನಿಸುವವರು ಎಲ್ಲಾ ಕಡೆ ಕಾಣಸಿಗುತ್ತಾರೆ. ಆದ್ದರಿಂದ ಜಾತಿಪದ್ಧತಿ ಇಲ್ಲವೆಂದು ಸಂಶೋಧನೆಗಳ ಮೂಲಕ ಸಾಧಿಸಿದರೆ ಸಾಮಾಜಿಕ ಏಣಿ ಶ್ರೇಣಿಯ ಮಾನದಂಡ ಕುಸಿದು ಹೋಗುವುದು. ಆಗ ಎಲ್ಲಾ ಜಾತಿಯ ಬಡವರು ಒಂದೇ ಆಗುತ್ತಾರೆ. ಆಗ ಬ್ರಾಹ್ಮಣರಿಗೂ ರಾಷ್ಟ್ರೀಯ ಸಂಪನ್ಮೂಲದಲ್ಲಿ ಫಲ ಸಿಗುತ್ತದೆ ಎನ್ನುವ ಗುಪ್ತ ಕಾರ್ಯಯೋಜನೆಯನ್ನೂ ಇದು ಒಳಗೊಂಡಿದೆ.

ಈ ಮೂರು ಸಾಮಾಜಿಕ ಆಯಾಮಗಳ ಜೊತೆಗೆ ಕನ್ನಡ ಬದುಕಿನ ಪ್ರಧಾನ ಗುಣ ವೈದಿಕ ವಿರೋಧವಾಗಿದೆ. ಪಂಪನಾದಿಯಾಗಿ ಅಲ್ಲಮ ಸಂತರು ಕುವೆಂಪು ಮಹಾದೇವರವರೆಗೂ ಕನ್ನಡದ ಮಹತ್ವದ ಲೇಖಕರು ಅಂದಂದಿಗೆ ತಮ್ಮ  ಸೃಜನಶೀಲ ಕೃತಿಗಳಲ್ಲಿ ಪುರೋಹಿತಶಾಹಿಯನ್ನು ಖಂಡಿಸಿಯೇ ಮೇರು ಕೃತಿಗಳನ್ನು ಕಟ್ಟಿದ್ದಾರೆ. ಕನ್ನಡ ಜಾನಪದ ಪುರಾಣಗಳು ತಾರತಮ್ಯಗಳ ಸಾಂಸ್ಕೃತಿಕ ರಾಜಕಾರಣವನ್ನು ಈಡಾಡಿವೆ. ಇಂಗ್ಲಿಷ್ ವಿದ್ಯಾಭ್ಯಾಸದ ಕೊಡುಗೆಯೂ ಇದೆ. ಹೀಗೆ ರೂಪುಗೊಂಡಿರುವ ಕನ್ನಡದ ವೈಚಾರಿಕ ಪ್ರಜ್ಞೆಯನ್ನು ಒಡೆಯುವ ಹುನ್ನಾರದಿಂದ ಬಾಲಗಂಗಾಧರ ಮತ್ತು ಅವರ  ಮಿತ್ರರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಎಲ್ಲಾ ಬೌದ್ಧಿಕ ಮೇಲಾಟಗಳು ಶತಮಾನಗಳಿಂದ ತುಳಿತಕ್ಕೆ ಒಳಗಾದ ಸಮುದಾಯಗಳ ಸಾಮಾಜಿಕ ಮೇಲ್ಚಲನೆಯನ್ನು ತಡೆಯುವ ಅಸಹನೆಯ ಸನಾತನ ಪ್ರಯತ್ನವಾಗಿದೆ.

25 March 2013

* ಮೊಗಳ್ಳಿ ಗಣೇಶ್‌

ನಿಸ್ಸಂದೇಹವಾಗಿ ವಚನ ಸಾಹಿತ್ಯ ಚಳವಳಿಯು ಜಾತ್ಯತೀತವಾದ  ಅವೈದಿಕ ಸಮುದಾಯಗಳ ನಾಡಿ ಬಡಿತದ ಸಂವೇದನೆ. ಬಸವಣ್ಣನವರ ವಚನಗಳಂತೂ ಇಡೀ ಜಾತಿ ವ್ಯವಸ್ಥೆಯ ವಿನಾಶದ ಕಹಳೆಯನ್ನು ಆತ್ಯಂತಿಕವಾಗಿ ಆರ್ದ್ರವಾಗಿ ಮಾರ್ದನಿಸುತ್ತವೆ. ಬ್ರಾಹ್ಮಣ್ಯದ ಮನು ಪ್ರಣೀತವಾದ ಜಾತಿ ನೆಲೆಯ ಆಚಾರ ವಿಚಾರಗಳನ್ನು ವಚನಕಾರರು ಒಕ್ಕೊರಲಲ್ಲಿ  ಸಮಗ್ರವಾಗಿ ನಿರಾಕರಿಸುತ್ತಾರೆ.  ವೈದಿಕ ಜಾತಿ ವ್ಯವಸ್ಥೆಯ ಪ್ರತಿರೋಧವನ್ನು ವಿರಾಟ್ ಪ್ರಮಾಣದಲ್ಲಿ ವಚನಕಾರರು ಅಭಿವ್ಯಕ್ತಿಸಿರುವುದು ಅಸಾಮಾನ್ಯ ಚಾರಿತ್ರಿಕವಾದುದು. ಜಾತಿ ಕೂಪದಿಂದ ಪಾರಾಗಲು ಅಧ್ಯಾತ್ಮದ ಬೆಳಗಿಗಾಗಿ  ಇಡೀ ವಚನ ಪರಂಪರೆ ಉತ್ಕಟವಾಗಿ ಪರಿತಪಿಸುತ್ತದೆ.

ವಚನ ಚಳವಳಿ ಮೂಲತಃ ದಲಿತರದು. ಮಾದರ ಚನ್ನಯ್ಯ ಹೊಲೆಯರ ಹೊನ್ನಯ್ಯರಂತವರು ತಮ್ಮ ಹಟ್ಟಿಗಳಲ್ಲಿ, ಕೇರಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜಾತ್ಯತೀತ ಅಧ್ಯಾತ್ಮದ ಹದವನ್ನು ಆ ವೇಳೆಗಾಗಲೇ ಕಂಡುಕೊಂಡು; ಜಾತಿ ವಿನಾಶದ ವಿರುದ್ಧದ ದಂಗೆಯನ್ನು ವ್ಯಾಪಕವಾಗಿ ಮೊಳಗಿಸಲು  `ಕುಲ ಹದಿನೆಂಟು ಜಾತಿ'ಗಳ ಮುಂದೆ ವಿನಂತಿಸುತ್ತಾ ನಿಂದಿದ್ದಾಗ ಇದ್ದಕ್ಕಿದ್ದಂತೆ ಬಸವಣ್ಣ ನಾಯಕನಾಗಿ ಮುಂದೆ ಒಂದು ಜಾತ್ಯತೀತವಾದ ಕನಸನ್ನು ವ್ಯಾಪಕವಾಗಿ ಎಲ್ಲ ತಬ್ಬಲಿ ಜಾತಿಗಳ ಮುಂದೆ ಅರ್ಥಪೂರ್ಣವಾಗಿ, ಪ್ರಾಮಾಣಿಕವಾಗಿ ಆರ್ದ್ರವಾಗಿ ಆದೇಶಿಸಿದ.

ಬಸವಣ್ಣನ ಅಂತರಂಗದಲ್ಲಿದ್ದ ಮುಕ್ತಿಯ ದನಿಯು ದಲಿತರದು. ಜಾತಿಯನ್ನು ಹುಟ್ಟುಹಾಕಿದ ವ್ಯವಸ್ಥೆಯ ವಿರುದ್ಧ ಬಂಡೇಳಲು ಬಸವಣ್ಣ ಜಾತಿ ವ್ಯವಸ್ಥೆಯ ತಳದಲ್ಲಿದ್ದ ಹೊಲೆ ಮಾದಿಗರನ್ನೇ ತನ್ನವರು ಎಂದು ಗುರುತಿಸಿಕೊಂಡು ಹೋರಾಟಕ್ಕೆ ಇಳಿಯಬೇಕಾಗಿತ್ತು. ಯಾಕೆಂದರೆ ಜಾತಿ ವ್ಯವಸ್ಥೆಯ ಅಪಾರ ಒತ್ತಡ, ಹೊರೆ, ಹಿಂಸೆ, ಅನ್ಯಾಯ ದಲಿತರ ತಲೆ ಮೇಲೆಯೇ ಬಿದ್ದಿತ್ತು. ಆ ಹೊರೆಯ ಹಿಂಸೆಯನ್ನು ಭಾವನಾತ್ಮಕವಾದ ಮಾತಿನಿಂದಾದರೂ (ವಚನದಿಂದ) ಒಂದಿಷ್ಟು ಇಳಿಸಲು ಬಸವಣ್ಣ ತಾನು `ಇಂತವರ ಸಂಗದಿಂದ ಹುಟ್ಟಿದವನು'ಎಂದು ಹೇಳಿಕೊಳ್ಳುವ ಮೂಲಕ ಜಾತಿಯ ಹಿಂಸೆಯ ಕಣ್ಣು ತೆರೆಸಲು ಯತ್ನಿಸುವನು. ದುರ್ದೈವ ಎಂದರೆ ಬಸವಣ್ಣನ ಈ ಪರಿಯ ಕಣ್ಣು ತೆರೆಸುವ ಯತ್ನವೇ ಹಲವರಿಗೆ ಕುತ್ತಾಗಿ ಪರಿಣಮಿಸಿದೆ. ಬಸವಣ್ಣನ ಜಾತ್ಯತೀತ ತತ್ವವನ್ನೇ ಇಡೀ ವಚನಕಾರರು ಅನುಸರಿಸಿದ್ದಾರೆ.

ದಲಿತ ವಚನಕಾರರು ಜಾತಿ ವ್ಯವಸ್ಥೆಯ ಬಗ್ಗೆ ವ್ಯಕ್ತಪಡಿಸಿರುವ ಸಂಗತಿಗಳು ಎಲ್ಲರಿಗೂ ತಿಳಿದಿವೆ. ಇದನ್ನು ಮತ್ತೆ ಉಲ್ಲೇಖಿಸುವುದಿಲ್ಲ. ಆದರೆ ಅವತ್ತಿನ ಮಧ್ಯಕಾಲೀನ ವಚನಕಾರರಂತೆ, ತತ್ವಪದಕಾರರಂತೆ, ಭಕ್ತಿಪಂಥದ ಕವಿಗಳಂತೆ, ಹಳ್ಳಿಗಾಡಿನ ನಾಥ ಪಂಥದ ಅಲಕ್ಷಿತ ಅವಧೂತರಂತೆ ಇದ್ದ ನನ್ನ ಕಾಲದ ಬಾಲ್ಯ ಕಾಲದ ದಲಿತ ಕೇರಿಯ ನನ್ನ ಸಂಬಂಧಿಕರು ವಚನಕಾರರ ಮುಂದುವರಿದ ಭಾಗದಂತೆಯೇ ಮಂಟೇಸ್ವಾಮಿ, ಮಾದೇಶ್ವರರಂಥಹ ಅನೇಕರ ಕುರಿತು ಕಾವ್ಯ ನಿರೂಪಿಸುತ್ತ ಜಾತಿ ವ್ಯವಸ್ಥೆಯ ಬಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದನ್ನು ಇಲ್ಲಿ ನೆನಪಿಸಬೇಕಾದುದಿದೆ.

ದಲಿತರ ಕಾವ್ಯಗಳಾದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳು ಸ್ವತಃ ವಚನಕಾರರ ಕಾಲದ ಕೊನೆಗಳಿಗೆಯಲ್ಲಿ ಲಿಂಗಾಯತ ಜಾತಿಯು ತಲೆ ಎತ್ತುತ್ತಿದ್ದುದರ ಬಗ್ಗೆ ತೀವ್ರವಾಗಿ ಆಕ್ಷೇಪಿಸುತ್ತವೆ. ಯಾರು ನಿಜವಾದ ಶೈವರು, ಲಿಂಗವಂತರು ಎಂದು  ಅಲಕ್ಷಿತ ಜಾತಿಗಳ ವಚನಕಾರರು ಪ್ರಶ್ನಿಸುತ್ತಾರೆ. ಅಂತಹ ಅಂಚಿನ ದನಿಯ ವಚನಕಾರರ ಅಳಿದುಳಿದ ಪಳೆಯುಳಿಕೆಯಂತಿದ್ದ ಎಷ್ಟೋ ತತ್ವ ಪದಕಾರರು, ಕಲಾವಿದರು, ಜನಪದ ಅಧ್ಯಾತ್ಮವಾದಿಗಳು ಜಾತ್ಯತೀತತೆಯನ್ನು ಸಾರಿದ ಬಸವಣ್ಣನ ಯತ್ನದಲ್ಲೂ ಹುಳುಕು ಹುಡುಕುವರು.

ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ; ಅಂತಹ ಜಾತ್ಯತೀತ ವಚನ ಚಳವಳಿಯೂ ಹೊಸ ಜಾತಿವಾದದತ್ತ ಹೊರಳಿದ ದುರಂತವನ್ನು ನೆನಪಿಸಲು. ಪಂಚಾಚಾರ್ಯರು ಅರ್ಥಾತ್ ಉತ್ತರದಿಂದ ಬಂದ ವೈದಿಕ ನೆಲೆಯ ಶೈವರು ಬಸವಣ್ಣನ ಜಾತ್ಯತೀತ ನೆಲೆಯ ಸಮಾಜವನ್ನು ಜಾತಿ ಸಮಾಜಗಳಾಗಿ ವಿಂಗಡಿಸಲು ಬೇಕಾದ ಧಾರ್ಮಿಕ ರಾಜಕಾರಣವನ್ನು ಮಾಡಿದ್ದಾರೆ. ಈ ಬಗ್ಗೆ ಗಾಢವಾಗಿ ಬಲ್ಲವರಾದ ಎಂ.ಎಂ. ಕಲಬುರ್ಗಿ ಅವರೂ, ಚಿದಾನಂದಮೂರ್ತಿ ಅವರೂ ತಿಳಿ ಹೇಳಬೇಕಾದುದಿದೆ. ಜಾತ್ಯತೀತ ಚಳವಳಿಗೆ ಜಾತಿಯ ಪೆಟ್ಟು ಬಿದ್ದ ಮೇಲೆ ಅಲ್ಲಿದ್ದ ಅಸಂಖ್ಯ ದಲಿತರು ಮರಳಿ ತಮ್ಮ ಜಾತಿಗಳ ಒಡಲಿಗೆ ಬಂದು ಜಾತ್ಯತೀತವಾದ ಅಭಿವ್ಯಕ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಕಂಡುಕೊಂಡಿದ್ದಾರೆ.

ಆದರೆ ಆ ಹೊತ್ತಿಗಾಗಲೇ ಜಾತಿ ವ್ಯವಸ್ಥೆಯು ಅಪರೋಕ್ಷ ಪುರೋಹಿತ ಹಾಗೂ ಬ್ರಾಹ್ಮಣಶಾಹಿಯ ಮೂಲಕ ಎಲ್ಲ ಬಗೆಯ ಅವೈದಿಕ ನೆಲೆಗಳಿಗೂ ನುಗ್ಗಿ ದಾಳಿ ಮಾಡಿ ಜಾತಿಯ ಆಚಾರ ವಿಚಾರಗಳನ್ನು ಒಪ್ಪಿಸಿ ಬೇರೊಂದು ಬಗೆಯಲ್ಲಿ ವರ್ಣಾಶ್ರಮ ಜಾತಿ ವ್ಯವಸ್ಥೆಯನ್ನು ಕುಲಗಳ ಮೂಲಕ, ಮತ ಭೇದಗಳ ಮೂಲಕ ವಿಚ್ಛಿದ್ರಕಾರಿಯಾಗಿ ವಿಂಗಡಿಸಿ ಅಸಂಖ್ಯವಾದ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ಹಬ್ಬಿಸಿದೆ. ಇದರಿಂದಲೇ ಕೇವಲ ನಾಲ್ಕೇ ನಾಲ್ಕು ವರ್ಣಗಳಿದ್ದ ಶ್ರೇಣಿಯು ಒಡೆದು ಸಾವಿರಾರು ಜಾತಿ, ಒಳಜಾತಿಗಳು ಹುಟ್ಟಿಕೊಳ್ಳಲು ಸಾಧ್ಯವಾದದ್ದು.

ಅಂದರೆ ವಚನ ಚಳವಳಿಯು ಜಾತ್ಯತೀತತೆಯನ್ನು ಬಿತ್ತಲು ಮುಂದಾದಂತೆಯೇ, ಆ ಜಾತ್ಯತೀತ ದರ್ಶನವನ್ನೇ ನಾಶಪಡಿಸಿ ಮರಳಿ ಜಾತಿ ವ್ಯವಸ್ಥೆಯ ಸೂತ್ರವನ್ನು ಊಳಿಗಮಾನ್ಯ ಜಾತಿಗಳ ಯಜಮಾನರ ಮೂಲಕ ವಿಕೃತವಾಗಿ ವ್ಯಾಪಿಸಿದ್ದುದು ಜಾತಿವಾದದ ದಿಗ್ವಿಜಯದ ಪರಿಸ್ಥಿತಿಯನ್ನು ಹೇಳುತ್ತಿದೆ ಹಾಗೂ ಯಾವತ್ತೂ ಕೂಡ ಮೇಲ್ಜಾತಿಗಳು ಯಾವ ಕಾರಣಕ್ಕೂ ತಮ್ಮ ಸ್ಥಾನಮಾನಗಳನ್ನು ಬಿಟ್ಟುಕೊಡಲು ಸಿದ್ಧವಿರುವುದಿಲ್ಲ ಎಂಬ ವಾಸ್ತವವನ್ನು ನೆನಪಿಸುತ್ತಿದೆ. ವಚನ ಚಳವಳಿಯ ಕಾಲದ ಜಾತಿ ವ್ಯವಸ್ಥೆಯ ಒತ್ತಡಗಳ ಮೂಲವನ್ನು ಅರಿಯದೆಯೇ ಅಲ್ಲಿನ ಜಾತಿ ಸೂಚಕ ವಿವರಗಳನ್ನು ಪಟ್ಟಿ ಮಾಡಬಾರದು. ಆಗಿನ್ನೂ ಊಳಿಗಮಾನ್ಯ ಜಾತಿ ವ್ಯವಸ್ಥೆಯು ಚಲಾವಣೆಯಲ್ಲಿತ್ತು. ಕೆಲವು ಭೂಪರು ಊಳಿಗಮಾನ್ಯ ವ್ಯವಸ್ಥೆ ಎಂಬುದೇ ಕರ್ನಾಟಕದಲ್ಲಿ ಇರಲಿಲ್ಲ ಎಂದು ಹೇಳುವುದಿದೆ. ಸಂಪತ್ತಿನ ಮೇಲಿನ ಅಧಿಕಾರ ಹಿಡಿದಿದ್ದ ಭೂಮಾಲೀಕ ಜಾತಿಗಳ ನೀತಿಯೇ ಊಳಿಗಮಾನ್ಯ ವ್ಯವಸ್ಥೆ.

ಇಂತಹ ಅಧಿಕಾರದ ನಡುವೆ ಬಸವಣ್ಣ ಜಾತ್ಯತೀತ ಕಾಯಕ ಹೇಳಿದ. ಕುಲಕಸುಬುಗಳು ಇದರಿಂದ ಜಾತಿ ಕೂಪವಾಗುವುದು ತಪ್ಪುತ್ತಿತ್ತು. ಆದರೆ ಊಳಿಗಮಾನ್ಯ ಜಾತಿಗಳು ಪುರೋಹಿತಶಾಹಿ ಬ್ರಾಹ್ಮಣ್ಯದ ಜಾತಿ ನೀತಿಯ ಚಿಲ್ಲರೆ ಆಕರ್ಷಣೆಗಳಿಗೆ ಒಳಗಾಗಿ ಜಾತ್ಯತೀತತೆಯನ್ನು ನಿರಾಕರಿಸಿತು. ಇದರಿಂದಲೇ ವಚನಕಾರರ ಜಾತ್ಯತೀತ ಕನಸುಗಳು ಭಗ್ನವಾದುದು. ವಚನಕಾರರು ತಮ್ಮ ಕಾಲದಲ್ಲೆೀ ಈ ಬಗೆಯ ವಿಕೋಪಗಳನ್ನು ತೀವ್ರವಾಗಿ ಪ್ರಶ್ನಿಸುವರು. ಬಸವಣ್ಣನ ಜಾತ್ಯತೀತ ನಡತೆಯು ಜಾತಿನಿಷ್ಠವಾಗಿದ್ದ ಮೇಲ್ಜಾತಿಗಳಿಗೆ ಅಪಥ್ಯವಾಗಿತ್ತು. ಅದರಿಂದಲೇ ಅವರೆಲ್ಲ ಬ್ರಾಹ್ಮಣ್ಯದ ಕುಟಿಲತೆಯ ಜೊತೆಗೂಡಿ ಜಾತ್ಯತೀತ ಕ್ರಾಂತಿಯ ಅಧ್ಯಾತ್ಮ ದಂಗೆಯ ನಡತೆಯನ್ನು ಹದಗೆಡಿಸಿದ್ದುದು.

ವಚನ ಚಳವಳಿಯ ನಂತರದ ಕರ್ನಾಟಕದಲ್ಲಿ ನೂರಾರು ಒಳ ಜಾತಿಗಳು ಹುಟ್ಟಿಕೊಂಡದ್ದನ್ನು ಜಾತಿ ವ್ಯವಸ್ಥೆಯ ಹುನ್ನಾರದ ಭಾಗವಾಗಿಯೇ ಗ್ರಹಿಸಬೇಕು. ಈ ಕಾಲಮಾನದಲ್ಲೇ ಹೊಸ ಬಗೆಯ ಅನೇಕ ಜಾತಿಗಳು, ಜಾತಿಯ ತಾರತಮ್ಯಗಳು, ಅಸ್ಪೃಶ್ಯತೆಯ ವಿವಿಧ ಒಳ ಬಗೆಗಳು ಕುಲಮೂಲ ಸಂಬಂಧಗಳಲ್ಲೂ ಉಂಟಾದುದು. ಇದನ್ನೆಲ್ಲ ವಚನಗಳ ಜಾತ್ಯತೀತತೆಯ ಹಂಬಲದ  ಭಾಗವಾಗಿ ಗಮನಿಸಬೇಕು.  `ಕುಲವೆರಡಲ್ಲದೆ ಹಲವಿಲ್ಲ, ದಿನವೆರಡಲ್ಲದೆ ಸಪ್ತ ದಿನವಿಲ್ಲ.  ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ . ಜಾತಿ ಜಾತಿಯ ಕೊಂದು ನಿಹಿತ, ಅನಿಹಿತವ ಕೆಡಿಸಿ, ಜಾತ ಅಜಾತನ ಕಂಡು ನಿಹಿತವಾಗಿರಿ ,  ಹೊಲೆ ಹದಿನೆಂಟು ಜಾತಿಯೆಂಬ ಕುಲವಿಲ್ಲ'  ಎಂದು ಸಾರುವ ವಚನಕಾರರು ಅಖಂಡವಾಗಿ ಜಾತಿ ವಿರೋಧಿ ಆಂದೋಲನವನ್ನು ಸಾಮಾಜಿಕ ನ್ಯಾಯದ ಭಾಗವಾಗಿ ನ್ಯಾಯ ನೀತಿಯ ಅಧ್ಯಾತ್ಮವನ್ನು ಬಾಳಿ ಬದುಕಿ ಬಿತ್ತರಿಸಿದರು.

`ಜಾತಿವಿಡಿದು ಸೂತಕವನರಸುವೆ, ಜ್ಯೋತಿವಿಡಿದು ಕತ್ತಲೆಯನರಸುವೆ, ಇದೇಕೊ ಮರಳು ಮಾನವ' ಎಂದು ಕೇಳುವ ವಚನಗಳ ಈ ದನಿ ಜಾತಿಯ ಬೇರನ್ನು ಕಿತ್ತುಕೊಳ್ಳಿ ಎಂಬುದರ ಹಂಬಲವಲ್ಲವೇ...  `ಕುಲಗೋತ್ರ ಜಾತಿ ಸೂತಕದಿಂದ ಕೆಟ್ಟವರೊಂದು ಕೋಟ್ಯಾನು ಕೋಟಿ'  ಎಂದು ವಿಷಾದಿಸುವುದರ ಹಿಂದೆ ಜಾತ್ಯತೀತತೆಯ ಆರ್ದ್ರತೆ ಅಖಂಡ ಮಾನವತ್ವದ ಪರವಾಗಿ ಇಲ್ಲವೇ ಇಲ್ಲವೇ... ಇದೆಲ್ಲ ಜಾತಿ ವಿರೋಧಿ ಅಭಿವ್ಯಕ್ತಿಗಳಲ್ಲವೇ... ಈ ಜಾತಿ ವಿರೋಧಿ ವಚನಾಂದೋಲನದ ನಂತರ ಸ್ವತಃ ದಲಿತರು ಜನಪದ ಮಹಾಕಾವ್ಯಗಳ ಮೂಲಕ ಮತ್ತೊಮ್ಮೆ ವಿವಿಧ ಬಗೆಯಲ್ಲಿ ಜಾತಿವ್ಯವಸ್ಥೆಯ ವಿರುದ್ಧ ದಂಗೆ ಏಳುವರು. ದಲಿತರ ಆ ಬಗೆಯ ಅಪರೋಕ್ಷ ದಂಗೆಯನ್ನು ಮನಗಾಣಲು ಭಾಗಶಃ ಬಲು ಬುದ್ಧಿ ಜೀವಿಗಳಿಗೆ ಬೇರೆಯದೇ ಆದ ಪಂಚೇಂದ್ರಿಯಗಳು ಬೇಕೇನೊ.

ನಮ್ಮ ಸಂವಿಧಾನದ ಆರಂಭದಲ್ಲಿ ಜಾತ್ಯತೀತ  ಗಣರಾಜ್ಯದ ಮುಖ್ಯವಾದ ಒಂದು ಪ್ರತಿಧ್ವನಿ ಇದೆ. ಈ ದನಿಯ ಆಧಾರದಲ್ಲೇ ಇಡೀ ಸಂವಿಧಾನ ರಚನೆಯಾಗಿದೆ. ಕೇವಲ ಒಂದು ಬಾರಿ ಮಾತ್ರ  ಜಾತ್ಯತೀತ ಪದ ಬಳಕೆಯಾಗಿದೆ ಎಂದ ಮಾತ್ರಕ್ಕೆ ಸಂವಿಧಾನವು ಜಾತ್ಯತೀತತೆಯ ಪರವಾಗಿಲ್ಲ ಎಂದು ಹೇಳಲಾಗುವುದೇ... ಸ್ವತಃ ಪೇಜಾವರಶ್ರೀ ಅವರು ಜಾತಿ ವ್ಯವಸ್ಥೆಯ ಇರುವಿಕೆಯನ್ನು ಒಪ್ಪಿ ಸುಧಾರಣೆಗೆಂದು ದಲಿತರ ಕೇರಿಗಲ್ಲಿ ಪಾದಯಾತ್ರೆಯನ್ನು ಪ್ರಾಯಶ್ಚಿತ್ತ ಎಂಬಂತೆ ಮಾಡಿ ಸ್ವತಃ ವೈದಿಕ ಜಾತಿ ಮತಿಗಳಿಗೆ ತಿಳಿ ಹೇಳುವ ಕಾಯಕದಲ್ಲಿ ಮುಂದಾಗಿದ್ದಾರೆ. ಅಂತಹ ಬ್ರಾಹ್ಮಣ್ಯವೇ ಜಾತಿ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವ ಸಲುವಾಗಿ `ಮತಾಂತರ ಬೇಡ, ನಾವೆಲ್ಲ  ಹಿಂದೂ'ಗಳು ಎಂಬ ಹೊಸ ಒಪ್ಪಂದಕ್ಕೆ ಮುಂದಾಗುತ್ತಿದೆ. ಭಕ್ತಿಪಂಥದ ಕವಿಗಳು, ತತ್ವಪದಕಾರರು, ಮೌಖಿಕ ಪರಂಪರೆಯ ಅದೆಷ್ಟೋ ಅನಾಮಿಕ ನಿರೂಪಕರು ಜಾತಿ ವ್ಯವಸ್ಥೆಯ ವಿರುದ್ಧವಾಗಿಯೇ ಧ್ವನಿತಾರ್ಥದಲ್ಲಿ ದಂಗೆಯ ಸೊಲ್ಲೆತ್ತಿದವರು. ಆ ಸಲುವಾಗಿಯೇ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ತತ್ವ ದರ್ಶನಗಳು ಜಾತ್ಯತೀತವಾದ ವಿರಾಟ್ ಅಭಿವ್ಯಕ್ತಿಗಳನ್ನು ಮಾಡಿದ್ದುದು. ಈ ಬಗೆಯನ್ನು ಅರಿಯದವರು ಮನುವಾದಿಗಳಿಗಿಂತಲೂ ಅಪಾಯಕಾರಿಯಾದವರು. ಅವರ ಈ ರೀತಿಯು ಬೌದ್ಧಿಕ ಅಸ್ಪೃಶ್ಯತೆಯನ್ನು ಪ್ರತಿಪಾದಿಸುವ ಪರೋಕ್ಷ ಜಾಣ್ಮೆಯ ವಿಧಾನವಾಗಿದೆ.

`ತಾಯ ಮೊಲೆಹಾಲೆ ನಂಜಾಗಿ ಕೊಲುವೊಡೆ ಇನ್ನಾರ ದೂರುವೆಯೊ ತಂದೇ' ಎಂಬ ಆರ್ತದನಿ ಆಗಲೂ ಇಂತವರ ನಡುವಿನಿಂದಲೇ ಹುಟ್ಟಿಬಂದಿರಬೇಕು. ಜ್ಞಾನಿಗಳು, ಸಂಶೋಧಕರು ವರ್ತಮಾನದ ಕುರುಡನ್ನು ಸರಿಪಡಿಸಿ ಬೆಳಕಿನತ್ತ ಮುನ್ನಡೆಸುವರು ಎಂಬುದು ಒಂದು ಆದರ್ಶ. ಆದರೆ ಇಂತಹ ಚಿಂತಕರು ಕಗ್ಗತ್ತಲ ಕ್ರೌರ್ಯದ ಹೆಪ್ಪುಗಟ್ಟಿದ ಜಾತಿ ನೆತ್ತರ ಹತ್ಯೆಯನ್ನೇ `ಇಲ್ಲ ಇಲ್ಲಾ... ಇದೆಲ್ಲ ಕಗ್ಗೊಲೆಯ ಜಾತಿ ಕ್ರೌರ್ಯ ಅಲ್ಲ' ಎಂದು ಹೇಳಿದರೆ; ಆ ಕಗ್ಗೊಲೆಯಿಂದ ನೆಲಕಚ್ಚಿ ಬೆಳಕಿಗಾಗಿ ದಾಹದಲಿ ತವಕಿಸುವವರ ಎದೆಯ ನಡುಕ ಹೇಗಿರಬಹುದು... ದಮನಿತರ ದನಿಯ ಎದೆಗೂ, ಕೊರಳಿಗೂ ಬರ್ಜಿಯ ತಿವಿಯಲು ಮುಂದಾಗುವ ಬೌದ್ಧಿಕತೆಯ ಧೀಮಂತಿಕೆಗೂ ಏನೆಂದು ಹೇಳುವುದೂ... ಇಷ್ಟು ಸಾವಿರ ವರ್ಷಗಳ ಅಸ್ಪೃಶ್ಯತೆ, ಜಾತೀಯತೆ, ಮತೀಯತೆಯ ಬೇಟೆಗಳಿಂದಲೂ ನಾವಿನ್ನೂ ಬದುಕಿರುವುದು ಇಂತವರಿಗೆ ಮುಳ್ಳಾಗಿದೆಯೆ... ಹೋಗಲಿ... ಈ ವಿದ್ವಾಂಸರು, ವರ್ತಮಾನದ ಹೊಸ ಹೊಸ ಜಾತಿ ರೂಪಗಳ ಬಗ್ಗೆ ಕುರುಡಾಗಿರುವರೇ... ಬೌದ್ಧಿಕವಾದ ತಾಯ್ತನದ ಸಾಮಾಜಿಕ ಅರಿವೂ ಕೂಡ ಇಂತಹವರಿಗೆ ಜಾಗತಿಕ ಮಾರಾಟದ ಯೋಜನೆಗಳ ಸರಕೇ... ಇಂತಹ ಅಧ್ಯಯನ ಕೂಡ ಜಾತಿವಾದವನ್ನು ಹಿಂದುತ್ವದ ಹಂಗಿನಲ್ಲಿ ಪರೋಕ್ಷವಾಗಿ ಮಂಡಿಸುವ ಚಮತ್ಕಾರವಾಗಿದೆ. ಈ ಚಮತ್ಕಾರವನ್ನು ಹೇಗೆ ಅರ್ಥೈಸುವುದು... .. ದಲಿತರ ಪರವಾದ ವಚನ ಚಳವಳಿಯನ್ನೇ ಅಪವ್ಯಾಖ್ಯಾನಗೊಳಿಸಿ ಬಿಟ್ಟರೆ ತಮ್ಮ ವೈದಿಕ ಹಾದಿಗೆ ಪಯಣ ಸುಲಭ ಎಂದು ಇಂತವರು ತಿಳಿದಿರಬಹುದು... ಸಾಧ್ಯವಿಲ್ಲ, ಈ ಬಗೆಯ ವಿದ್ವಾಂಸರನ್ನು ಕಂಡು ಅಯ್ಯೋ ಎನಿಸುವುದು.

21 March 2013

* ಪ್ರೊ.ಎಸ್‌.ಜಿ ಸಿದ್ದರಾಮಯ್ಯ

ಬೌದ್ಧಿಕ ವಿಶ್ಲೇಷಣೆಯ ಪೋಸಿನಲ್ಲಿ `ನಂಬಿಕೆ'ಯನ್ನು ವಿವರಿಸುವ ನೆಪ ಮಾಡಿಕೊಂಡು ಮಡೆಸ್ನಾನದಂಥ ಅಮಾನವೀಯ ಆಚರಣೆಯನ್ನು ಸಂಸ್ಕೃತಿಯ ಭಾಗವಾಗಿ ಸಮರ್ಥಿಸುವ ಹುನ್ನಾರದ ವಿವಾದ ಇನ್ನೂ ಜನಮನದಲ್ಲಿ ಹಸಿಹಸಿಯಾಗಿದೆ.

ಈಗ ಮರು ಓದಿನ ನೆಪದಲ್ಲಿ `ವಚನಗಳು ಜಾತಿ ಪದ್ಧತಿ, ಬ್ರಾಹ್ಮಣವಿರೋಧಿ ಚಳವಳಿಯ ಅಭಿವ್ಯಕ್ತಿಗಳೆಂದು ಹೇಳಲು, ವಚನಗಳಲ್ಲಿಯೇ ಆಧಾರವಿಲ್ಲ' ಎಂಬ ಅಪಕ್ವ ಓದಿನ ತೇಲಿಕೆಯ ಮಾತುಗಳನ್ನು ವಿವಾದದ ರೂಪದಲ್ಲಿ ಎಸೆಯಲಾಗಿದೆ. ಇಂಥ ವಿವಾದಗಳು ಕನ್ನಡ ನೆಲದಲ್ಲಿ ಬಹಳ ಹಿಂದಿನಿಂದಲೂ ಎರಡು ಬಗೆಯಲ್ಲಿ ಹರಿದುಬಂದಿವೆ.

ನೇರವಾಗಿ ವಿರೋಧಿಸಿ ಮಾತನಾಡುವ ಮೂಲಭೂತವಾದಿ ಬಲಪಂಥೀಯರ ಬಗೆ ಒಂದನೆಯದು. ಇದರ ಅಪಾಯ ಮೂರ್ತರೂಪದ್ದು. ಆದರೆ ತಾವು ಪ್ರಗತಿಪರರು, ವಿಚಾರವಾದಿಗಳು ಎಂಬ ಮುಖವಾಡ ತೊಟ್ಟು ಬೌದ್ಧಿಕತೆಯ ಪೋಸಿನಲ್ಲಿ ಮೂಲಭೂತವಾದಿ ವಿಚಾರಗಳನ್ನು ಬಿತ್ತುವ ಹುಸಿ ಬುದ್ಧಿಜೀವಿಗಳ ಪಡೆಯೊಂದಿದೆ; ಮೊದಲನೆಯ ಪಡೆಗಿಂತ ಈ ಗುಂಪು ಹೆಚ್ಚು ಅಪಾಯಕಾರಿ.

ಹೊಸ ಸಂಶೋಧನೆ - ಬೌದ್ಧಿಕ ವಿಚಾರಗಳ ಹೆಸರಿನಲ್ಲಿ ಸುಳ್ಳುಗಳನ್ನು ಅಪಕ್ವ ಹೇಳಿಕೆಗಳನ್ನು ಮಂಡಿಸಲು ಇವರಿಗಿರುವ ಒಂದೇ ಒಂದು ಶಕ್ತಿ ಎಂದರೆ ಆಧುನಿಕ ವಿಮರ್ಶಾಪರಿಭಾಷೆಗಳನ್ನು ಬಳಸುತ್ತಾ ಸಂಕೀರ್ಣವೂ ಗಹನವೂ ಆದ ವಿಚಾರ ಎಂಬಂತೆ ನಂಬಿಸುವ ನಾಜೂಕಿನ ವಿಧಾನ.

ವಚನಗಳು ಶರಣ ಚಳವಳಿಯ ಉಪ ಉತ್ಪನ್ನಗಳು. ಚಳವಳಿಯ ಸ್ವರೂಪವನ್ನು ಅರಿಯಲು ಬೇರೆ ಪ್ರಮಾಣಗಳ ಅಗತ್ಯವಿಲ್ಲ. ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಚಳವಳಿಯ ನಿಜಾಂಶ ಅರಿವಿಗೆ ಬರುತ್ತದೆ.

ಡಂಕಿನ್ ಝಳಕಿ ಮತ್ತು ಬಾಲಗಂಗಾಧರ ಎಂಬುವವರು ವಚನಗಳನ್ನು ಅನುಭವಗಳ ಅಂತರಂಗ ಪ್ರಮಾಣವಾಗಿ ಗ್ರಹಿಸುವ ಗೋಜಿಗೇ ಹೋಗದೆ ಜಾತಿಗೆ ಸಂಬಂಧಿಸಿದ ಪದಗಳ ಪ್ರಯೋಗ ಮತ್ತು ಪದಾರ್ಥಗಳ ಲೆಕ್ಕಾಚಾರದಲ್ಲಿ ಗುಣಿಸಿ ಭಾಗಿಸಿ ಸತ್ಯವನ್ನು ಶೋಧಿಸಿ  ತೆಗೆದಿದ್ದಾರೆ. ಇವರ ವಾದದ ಅಪಕ್ವತೆಯನ್ನು ಮನಗಾಣಿಸುವುದಕ್ಕೆ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ.

ವರ್ಣವ್ಯವಸ್ಥೆಯ ಸಮಾಜದಲ್ಲಿ ಮೂರು ನೆಲೆಗಳಿಗೆ ಸೇರಿದ ಮೂರು ಜನ ವಚನಕಾರರ ನಿಲುವುಗಳನ್ನು ಇಲ್ಲಿ ಪ್ರಾತಿನಿಧಿಕವಾಗಿ ಉದಾಹರಣೆಗೆ ಎತ್ತಿಕೊಳ್ಳಬಹುದು:

ವರ್ಣ ವ್ಯವಸ್ಥೆಯಲ್ಲಿ ಶ್ರೇಷ್ಠವೆಂದು ಭ್ರಮಿಸಲ್ಪಟ್ಟಿರುವ ಬ್ರಾಹ್ಮಣ ಮೂಲದಿಂದ ಬಂದ ಬಸವಣ್ಣನಿಗೆ ತನ್ನ ಹುಟ್ಟಿನ ಮೂಲ ಕಷ್ಟದ ಹೊರೆಯಾಗಿ ಕಂಡಿದೆ.  `ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟದ ಹೊರೆಯ ಹೊರಿಸದಿರಯ್ಯೊ'ಎನ್ನುತ್ತಾರೆ ಬಸವಣ್ಣ.

ಸಹಸ್ರಾರು ವರ್ಷಗಳಿಂದಲೂ ಶೋಷಣೆಯನ್ನು ಉದರಂಭರಣದ ದಾರಿಯಾಗಿಸಿಕೊಂಡು ಬಂದ ಪುರೋಹಿತ ವರ್ಣದ ಪಾಪಕಲುಷಿತ ಮೂಲದವನು ತಾನು ಎಂಬ ಅರಿವು ಬಸವಣ್ಣನಿಗೆ ಭರಿಸಲಾಗದ ಪಾಪಪ್ರಜ್ಞೆಯಾಗಿ ಕಾಡಿದೆ.

ವರ್ಣಮೂಲದ ಸಾಮೂಹಿಕ ಪಾಪವನ್ನು ವೈಯಕ್ತಿಕ ನೆಲೆಯಲ್ಲಿ ಭರಿಸಿದಂತೆ ಪಾಪಪ್ರಜ್ಞೆಯಲ್ಲಿ ನರಳಿ ತನ್ನನ್ನು ಅದರಿಂದ ಬಿಡುಗಡೆಗೊಳಿಸಿಕೊಳ್ಳಲು ಬಸವಣ್ಣ ತುಳಿದ ದಾರಿ ಅಪವರ್ಣೀಕರಣ. ಇದುವರೆಗೂ ಯಾವುದನ್ನು ನೀಚವೆಂದು ಕನಿಷ್ಠವೆಂದು ಕರೆಯಲ್ಪಟ್ಟಿತ್ತೋ ಅಂಥ ಮೂಲವನ್ನು ಪವಿತ್ರವೆಂದು ಪರಿಗಣಿಸಿದ್ದು, ಆ ಮೂಲದಲ್ಲಿ ತನ್ನ ಹುಟ್ಟನ್ನು ಗುರುತಿಸಿಕೊಂಡಿದ್ದು ಬಸವಣ್ಣನ ಬಹುದೊಡ್ಡ ನಡೆಯಾಗಿದೆ. ಶರಣ ಚಳವಳಿಯ ಚಲನೆಯನ್ನು ನಿರ್ದೇಶಿಸುವ ದಾರಿದೀಪವಾಗಿದೆ.

ಚನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ
ಗಂಡು ಹೆಣ್ಣುಗಳ ಸಂಬಂಧವನ್ನು ಜಡ ವರ್ಣ ವ್ಯವಸ್ಥೆ ಅರ್ಥೈಸುವ ಕ್ರಮವನ್ನು ತಿರಸ್ಕರಿಸಿದ, ಸಮಾಜದ ರೂಢಿಗತ ಕಟ್ಟುಪಾಡುಗಳನ್ನು ಧಿಕ್ಕರಿಸಿದ ಈ ನಡೆ ವಿಶ್ವಮಾನ್ಯ ಗೌರವಕ್ಕೆ ಭಾಜನವಾದ ಪರಿಕ್ರಮವಾಗಿದೆ.

ವಿಶೇಷವೆಂದರೆ, ಕೀಳರಿಮೆಯಲ್ಲಿ ಬಳಲುವ ವರ್ಣಮೂಲದವರ ಆತ್ಮಗೌರವವನ್ನು ಮನ್ನಿಸಿದ ನಡೆಯಾಗಿದೆ. ನೈತಿಕತೆ, ಚಾರಿತ್ರ್ಯ, ಇಂಥ ಪರಿಕಲ್ಪನೆಗಳಿಗೆ ಪುರೋಹಿತಶಾಹಿಯು ಕೊಟ್ಟಿದ್ದ ತಿರೋಗಾಮಿ ಅರ್ಥವನ್ನು ಧಿಕ್ಕರಿಸಿ ಹೊಸ ಬಗೆಯ ಅರ್ಥತೇಜಸ್ಸನ್ನು ನೀಡಿದ ಪುರೋಗಾಮಿ ಬೆಳವಣಿಗೆಯಾಗಿದೆ. ಇಲ್ಲಿ ಪಾಪಪ್ರಜ್ಞೆಯನ್ನು ನೀಗಿಕೊಳ್ಳುವ ಹಾಗೂ ಪಶ್ಚಾತ್ತಾಪದಲ್ಲಿ ಪವಿತ್ರೀಕರಿಸಿಕೊಳ್ಳುವ ಪರಸ್ಪರಾವಲಂಬಿ ಗುಣವಿದೆ. ಇದು ಆತ್ಮವಿಮರ್ಶೆಯ ಮಾರ್ಗ.

ಆತ್ಮವಿಮರ್ಶೆಯೆಂಬುದು ವ್ಯಕ್ತಿನಿಷ್ಠ ನೆಲೆಯಲ್ಲಿ ಮೂಡಿದ್ದಾದರೂ ಸಮುದಾಯ ವ್ಯಾಪ್ತಿಯ ಪಾಪಪ್ರಜ್ಞೆಯಲ್ಲಿ ನರಳಿದ್ದು. ಜಾತಿಯ ಶ್ರೇಣೀಕರಣದಲ್ಲಿ ಶ್ರೇಷ್ಠತೆಯ ಭ್ರಾಮಕತೆಯಲ್ಲಿ ಬೀಗುತ್ತಿರುವ ಎಲ್ಲ ಮೇಲುಜಾತಿಯ ಮನಸ್ಸುಗಳೂ ಈ ಬಗೆ ಬಸವಪ್ರಜ್ಞೆಯಲ್ಲಿ ನಡೆದುಕೊಳ್ಳಬೇಕಾದ ಅಗತ್ಯವಿದೆ.

ಬಸವಣ್ಣನವರು ಮುಂದುವರಿದು ಈ ಅಪವರ್ಣೀಕರಣವನ್ನು ಬಳಗ ಪ್ರಜ್ಞೆಯ ಭಾವದಲ್ಲಿ ವಿಸ್ತರಿಸುತ್ತಾರೆ :

ಹರನು ಮೂಲಿಗನಾಗಿ, ಪುರಾತರೊಳಗಾಗಿ
ಬಳಿಬಳಿಯಲು ಬಂದ ಮಾದಾರನ ಮಗ ನಾನಯ್ಯ
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂಚಕ
ಮಾದಾರನ ಮಗ ನಾನಯ್ಯ
ಪನ್ನಗಭೂಷಣ ಕೂಡಲಸಂಗಯ್ಯ
- ಹೀಗೆ ಅಸ್ಪೃಶ್ಯ ಮೂಲದ ಶರಣರ ಬಳಗ ಸಾಲಿನಲ್ಲಿ ತನ್ನ ಬಂಧುತ್ವವನ್ನು ಗುರುತಿಸಿಕೊಳ್ಳುವ ಮೂಲಕ ಪವಿತ್ರೀಕರಿಸಿಕೊಳ್ಳುವ ಬಸವಣ್ಣನವರ ಈ ನಡೆ ಜಾತಿ ವ್ಯವಸ್ಥೆಯ ಶಾಪಗ್ರಸ್ತ ಸಮಾಜದಲ್ಲಿ ಶ್ರೇಷ್ಠತೆಯ ಮೂಲದ ಎಲ್ಲಾ ಮನಸ್ಸುಗಳೂ ಅನುಸರಿಸಬೇಕಾದ ಮಾದರಿ ನಡೆ.

ಬ್ರಾಹ್ಮಣ್ಯದ ಮರೆಮೋಸ ಕುರಿತಂತೆ ನೇರವಾಗಿ ಬಸವಣ್ಣ
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮಮುನಿಗೆ ಗೋವೇಧೆಯಾಯಿತ್ತು
ಬಲಿಗೆ ಬಂಧನವಾಯಿತ್ತು, ಕರ್ಣನ ಕವಚ ಹೋಯಿತ್ತು.
ದಕ್ಷಂಗೆ ಕುರಿದಲೆಯಾಯಿತ್ತು. ನಾಗಾರ್ಜುನನ ತಲೆ ಹೋಯಿತ್ತು
ಎಂದು ಬ್ರಾಹ್ಮಣನನ್ನು ದೈವವೆಂದು ನಂಬಿದವರಿಗೆ ಆದ ಗತಿವಿವರಗಳ ಪಟ್ಟಿ ಮಾಡಿದ್ದಾನೆ.

`ಏನಯ್ಯ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯೊ?' ಎಂದು ಪ್ರಶ್ನಿಸಿದ್ದಾನೆ. ಇಷ್ಟು ಢಾಳಾಗಿ ಬಸವಣ್ಣನವರ ವಚನಗಳು ವೈದಿಕ ವಿರೋಧಿ ನಿಲುವನ್ನು ಸಾರುತ್ತಿರುವಾಗ ಝಳಕಿ ಮತ್ತು ಬಾಲಗಂಗಾಧರರಿಗೆ ಇದು ಅರ್ಥವಾಗದೇ ಹೋದದ್ದು ಜಾಣಕುರುಡಿರಬಹುದೇ?
ಕಾಳವ್ವೆ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ. ದಲಿತ ವಚನಕಾರ್ತಿ. ಅವಳ ಒಂದು ವಚನ ಹೀಗಿದೆ;

ಕುರಿಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತ ಕರೆವ ಪಶುವತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಆದೆಂತೆಂದಡೆ:ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯೊ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ

- ಈ ವಚನ ಹಲವು ಪ್ರಶ್ನೆಗಳನ್ನೆತ್ತುತ್ತದೆ. ಆಹಾರ ಪದ್ಧತಿಯಲ್ಲಿ `ಶ್ರೇಷ್ಠ,ಕನಿಷ್ಠ'  ಎಂಬ ತಾರತಮ್ಯ ನೀತಿಯನ್ನು ವರ್ಣ ವ್ಯವಸ್ಥೆಯು ಹುಟ್ಟುಹಾಕಿದೆ. ಗೋವನ್ನು ದೇವತೆಗಳ ಆವಾಸಸ್ಥಾನವಾಗಿ ಕಲ್ಪಿಸಿ ಅದನ್ನು ಮಾತೆಯಾಗಿ ಪೂಜಿಸುತ್ತ ಆ ನಂಬಿಕೆಯನ್ನು ಬಂಡವಾಳವನ್ನಾಗಿಸಿಕೊಂಡಿರುವ ವೈದಿಕಶಾಹಿ ಇಂದಿಗೂ ಈ ನಂಬಿಕೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಕೋಮುದ್ವೇಷವನ್ನು ಬಿತ್ತಿ ಬೆಳೆಯುತ್ತಿದೆ.

ಆಹಾರ ಪದ್ಧತಿಯಲ್ಲಿ ಧರ್ಮಕಾರಣವನ್ನು ಬೆರೆಸಿ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡುತ್ತಿದೆ. ಆಹಾರ ಪದ್ಧತಿ ತಿನ್ನುವವರ ಇಚ್ಛೆಗೆ ಬಿಟ್ಟ ವಿಚಾರ. ವರ್ಣ ನೀತಿ ಎಷ್ಟು ಅವೈಚಾರಿಕವಾದುದು ಎಂಬುದನ್ನು ಕಾಳವ್ವೆಯ ವಚನ ತರ್ಕಬದ್ಧವಾಗಿ ಹೇಳುತ್ತಿದೆ. ಧಾರ್ಮಿಕ ಸಾಂಸ್ಕೃತಿಕ ಮೂಲದ ನೈತಿಕ ವಿಚಾರಗಳನ್ನು ಪರಿಶೀಲನೆಗೆ ಒಳಗುಮಾಡುತ್ತಾ ಸಾಮಾಜಿಕ ನ್ಯಾಯಕ್ಕಾಗಿ ದನಿಯೆತ್ತಿರುವ ಈ ವಚನ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಹತ್ವದ ವಚನವಾಗಿದೆ.

ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಹೇಸುವ ಮನಸ್ಸುಗಳ ಹೀನತನವನ್ನು ತರ್ಕಬದ್ಧವಾಗಿ ಪ್ರಶ್ನಿಸಿದೆ. ಇದೇ ಭಾವದ ವಚನಗಳು ಹಲವು ಜನ ವಚನಕಾರರಲ್ಲಿ ಬಂದಿವೆ. ಭಾಷಾ ಪ್ರಯೋಗದಲ್ಲಿ ಕೆಲವು ವ್ಯತ್ಯಾಸಗಳನ್ನು ಬಿಟ್ಟರೆ ಒಡ್ಡುವ ತರ್ಕಗಳು ಮುಂದೊಡ್ಡುವ ಪ್ರಶ್ನೆಗಳು ಒಂದೇ ನೆಲೆಯಲ್ಲಿ ಹರಿದಿವೆ. ಇದಕ್ಕೆ ಉದಾಹರಣೆಯಾಗಿ ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವರ ಇನ್ನು ಮುಂತಾದವರ ವಚನಗಳನ್ನು ಗಮನಿಸಬಹುದು.

ಎಂಜಲು ತಿಂಬ ಜಡದೊಳಗೆ ಹದಿನೆಂಟುಜಾತಿಯ
ಎಂಜಲು ಭಂಜಿಸಿ, ಉತ್ತಮರೆನಿಸಿಕೊಂಬ ಭವಜೀವಿಗಳು ಕೇಳಿರೊ.
ಕುಂಜರನಾಗಿ ನಡೆದು ಸುಜಾತರೆನಿಸಿಕೊಂಬಿರಿ.
ಅಜವಧೆ ಗೋವಧೆ ಮಾಡುವ ಅನಾಚಾರಿಗಳು ನೀವು ಕೇಳಿರೊ.
ಬ್ರಾಹ್ಮಣ ವಾಕ್ಯವ ಕಲಿತು ಬ್ರಾಹ್ಮಣರೆನಿಸಿಕೊಂಬಿರಿ.
ಮರ್ಮವಿಡಿದು ನೋಡಹೋದಡೆ ನಿಮ್ಮಿಂದ ಕರ್ಮಿಗಳಿಲ್ಲ.

ಹದಿನೆಂಟು ಜಾತಿಗೆ ಅಧಿಕವೆನಿಸಿಕೊಂಬಿರಿ
ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕವೆಂದ ಕಲಿದೇವರ ದೇವಯ್ಯ.
ಮುಟ್ಟಿಯೂ ಮುಟ್ಟದಿಹೆ : ಸ್ಪೃಶ್ಯ ಮುಟ್ಟಿಸಿಕೊಳ್ಳುವವನಾದರೆ ಅಸ್ಪೃಶ್ಯ ಮುಟ್ಟಬಾರದವನು. ಇವನನ್ನು ಶ್ವಪಚ, ಚಂಡಾಲ, ಹೊಲೆಯ, ಮಾದಿಗ ಇತ್ಯಾದಿ ಶಬ್ದಗಳಲ್ಲಿ ಗುರುತಿಸಿ ಅವಮಾನಿಸಲಾಗಿದೆ.

ಮುಟ್ಟುವುದು ಆಪ್ತತೆಯ, ಆರ್ದ್ರತೆಯ ಭಾವ ಸಂಪನ್ನಕ್ರಿಯೆ. ಹಿಂದೂ ಸಂಸ್ಕೃತಿ ಎಂದೂ ಒಳಗೊಳ್ಳುವ ಸಂಸ್ಕೃತಿಯಲ್ಲ; ಮುಟ್ಟಬೇಡ ಎನ್ನುವ ನಡೆಯದು. ಹೊರಗಿನವರು ಒಳಗಿನವರು ಮುಟ್ಟಬಹುದಾದವರು, ಮುಟ್ಟಬಾರದವರು ಎಂಬ ನೆಲೆಗಳಲ್ಲಿ ಮನುಷ್ಯರ ಬಗೆಗಿನ ತನ್ನ ಸಣ್ಣತನವನ್ನು ಭಿನ್ನಭೇದವನ್ನು ಉದ್ದಕ್ಕೂ ಉಳಿಸಿಕೊಂಡೇ ಬಂದಿದೆ. ಡೋಹರ ಕಕ್ಕಯ್ಯನ ವಚನಗಳಲ್ಲಿ ಈ ಮುಟ್ಟುವ ಸಂಗತಿ ಮುಟ್ಟುವ   ಮುಟ್ಟದಿರುವ ಎರಡೂ ನೆಲೆಗಳಲ್ಲೂ ಅನುಭವದ್ರವ್ಯವಾಗಿ ಮಾತಾಡಿದೆ.

ಎನ್ನ ಕಷ್ಟಕುಲದಲ್ಲಿ ಹುಟ್ಟಿದವನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯ ಎನ್ನ ಕರಸ್ಥಲಕ್ಕೆ ಲಿಂಗವ
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯ
ಸಂಗನ ಬಸವಣ್ಣನ ಕರುಣದಿಂದ
-ಮುಟ್ಟಿನ ಅವಮಾನದಲ್ಲಿ ಬಂಧಿತನಾಗಿದ್ದ ಕಕ್ಕಯ್ಯನನ್ನು ಅದರಿಂದ ಬಿಡುಗಡೆಗೊಳಿಸಿದ್ದು ಇಷ್ಟಲಿಂಗದ ಸೋಂಕು. ಅದು ಲಿಂಗದೀಕ್ಷೆಯಲ್ಲ. ಸೋಂಕಿನ ಸಂಗದ ಕರುಣೆ. ಅಸ್ಪೃಶ್ಯತೆಯ ಅವಮಾನದಿಂದ ಪಾರಾಗಿರುವ ಈ ಬಗೆ ಅಪರೂಪವಾದುದು.

ಹೀಗೆ ಕೆಳಸ್ತರದಿಂದ ಹಿಡಿದು ಮೇಲಿನವರೆಗಿನ ಎಲ್ಲ ವಚನಕಾರರಲ್ಲೂ ವರ್ಣವ್ಯವಸ್ಥೆಯ ವಿರುದ್ಧವಾದ ದನಿ ಕೇಳಿಬರುತ್ತದೆ. ಕೆಲವರ ದನಿ ಮುಖಕ್ಕೆ ಹೊಡೆದಂತೆ  ನೇರವಾಗಿದ್ದರೆ ಇನ್ನು ಹಲವರ ದನಿ ಆರ್ದ್ರತೆಯಲ್ಲಿ ಅನುಭವವಾಗಿ ಹರಿದ ಪಿಸುದನಿಯಾಗಿದೆ. ವಚನಗಳನ್ನು ನಮ್ಮ ಸಾಮಾಜಿಕ ಮನಶ್ಶಾಸ್ತ್ರೀಯ ಹಿನ್ನೆಲೆಯಲ್ಲಿ ವಿವೇಚಿಸಿ ವಿಶ್ಲೇಷಿಸುವ ಅಗತ್ಯವಿದೆ.

ಮೇಲುಜಾತಿಯ ಮನಸ್ಸುಗಳ ಆತ್ಮವಿಮರ್ಶಾ ಪ್ರಜ್ಞೆ, ಮಧ್ಯಮ ಜಾತಿಯ ಮನಸ್ಸುಗಳ ಆಚಾರ-ವಿಚಾರನಿಷ್ಠ ನೈತಿಕಪ್ರಜ್ಞೆ ಹಾಗೂ ಅಸ್ಪೃಶ್ಯಮೂಲದ ಮನಸ್ಸುಗಳ ಆತ್ಮಪ್ರತ್ಯಯ ಪ್ರಜ್ಞೆ ವಚನ ಸಾಹಿತ್ಯದ ಬಯಲಿನಲ್ಲಿ ಸಂಘರ್ಷಾತ್ಮಕವಾಗಿ ಚಲಿಸಿವೆ.

ಅವುಗಳ ವೈದಿಕ ವಿರೋಧಿ ನಿಲುವು ಸ್ಪಷ್ಟವೂ ನಿಷ್ಠುರವೂ ಆಗಿದೆ. ಹಾಗೆಯೇ ಜಾತಿ ನಿರಸನ ಪ್ರಜ್ಞೆ ಪಾರದರ್ಶಕತ್ವವನ್ನು ಅವುಗಳಲ್ಲಿ ಕಾಣಬಹುದಾಗಿದೆ. ಈ ಅಂತರಂಗವನ್ನು ಅರಿತಾಗ ವಚನಗಳ ಓದಿನಲ್ಲಿ ಚಳವಳಿಯ ಆತ್ಮದರ್ಶನವಾಗುತ್ತದೆ.

20 March 2013

* ಟಿ.ಆರ್.ಚಂದ್ರಶೇಖರ

ಕಾರ್ಲ್ ಮಾರ್ಕ್ಸ್ (1853) ಸರಿಯಾಗಿ ನುಡಿದಿರುವಂತೆ ಭಾರತದಲ್ಲಿ ವಸಾಹತುಶಾಹಿಯು ಎರಡು ಬಗೆಯ ಕೆಲಸವನ್ನು ಮಾಡಿತು. ಮೊದಲನೆಯದು ವಿನಾಶಾತ್ಮಕವಾದುದಾಗಿದ್ದರೆ ಎರಡನೆಯದು ವಿಧಾಯಕ ಸ್ವರೂಪದ್ದಾಗಿತ್ತು.

ನಮ್ಮ ದೇಶದ ದಲಿತ ಮತ್ತು ಶೂದ್ರ ಜಾತಿ/ವರ್ಗಗಳ ವಿಮೋಚನೆಗೆ ಅನುವು ಮಾಡಿಕೊಟ್ಟಿದ್ದು ವಸಾಹತುಶಾಹಿಯ ಬಹು ದೊಡ್ಡ ವಿಧಾಯಕ ಕಾರ್ಯವಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಅದರ ಈ ಕೊಡುಗೆಯನ್ನು ವಿಕೃತಗೊಳಿಸುವ - ಮತ್ತು ತಳ್ಳಿ ಹಾಕುವ ಒಂದು ಶೈಕ್ಷಣಿಕ ಪ್ರಯತ್ನ ಇಂದು ಭಾರತದಲ್ಲಿ ನಡೆಯುತ್ತಿದೆ.

ಅದರ ಒಂದು ಭಾಗವಾಗಿ ಡಂಕಿನ್ ಝಳಕಿ ಮತ್ತು ಎಸ್.ಎನ್.ಬಾಲಗಂಗಾಧರ ಅವರು ವಚನ ಸಂಸ್ಕೃತಿಯನ್ನು ಕುರಿತಂತೆ ನಡೆಸಿರುವ ಸಂಶೋಧನೆಯನ್ನು ಪರಿಭಾವಿಸಿಕೊಳ್ಳುವ ಅಗತ್ಯವಿದೆ. ಎಚ್.ಎಸ್. ಶಿವಪ್ರಕಾಶ ಅವರು ಗುರುತಿಸಿರುವಂತೆ (ಪ್ರಜಾವಾಣಿ,ಮಾ.15) ವಚನ ಸಂವಿಧಾನದಲ್ಲಿ ಮಂಡಿತವಾಗಿರುವ ಜಾತಿ ವಿರೋಧಿ ಪ್ರಣಾಳಿಕೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ವಸಾಹತುಶಾಹಿ ಪೂರ್ವದಲ್ಲೂ ಚರ್ಚೆಗಳು ಕನ್ನಡದಲ್ಲಿ ನಡೆದಿವೆ. ವಚನ ಸಂಸ್ಕೃತಿಯ ಜಾತಿ ವಿರೋಧಿ ಪ್ರಣಾಳಿಕೆಯು ವಸಾಹತುಶಾಹಿಯು ಹುಟ್ಟು ಹಾಕಿರುವ ವಿಕಾರ ಎನ್ನುವ ಈ ಸಂಶೋಧಕರ ವಾದವನ್ನು ಒಪ್ಪುವುದು ಕಷ್ಟ.

ಈ ಸಂಶೋಧನೆಗೆ ಸಂಬಂಧಿಸಿದಂತೆ ಎರಡು ಸಮಸ್ಯೆಗಳಿವೆ. ಮೊದಲನೆಯದು ಅವರು ಅಳವಡಿಸಿಕೊಂಡಿರುವ ಅಧ್ಯಯನ ವಿಧಾನ. ಎರಡನೆಯದು ವಚನ ಸಂಸ್ಕೃತಿಯನ್ನು ಅವರು ಗ್ರಹಿಸಿರುವ ಬಗೆ. ಈ ಸಂಶೋಧನೆಯಲ್ಲಿ ಜಾತಿ ವಿರೋಧಿ ಧೋರಣೆಯು ವಚನಗಳಲ್ಲಿ ಎಷ್ಟು ಬಾರಿ ಮಂಡಿತವಾಗಿದೆ ಎಂಬುದನ್ನು ಸಂಖ್ಯೆಗಳ ಮೂಲಕ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಸಮಾಜವಿಜ್ಞಾನಗಳಲ್ಲಿ ಪ್ರಚಲಿತದಲ್ಲಿರುವ `ಪಾಸಿಟಿವಿಸ್ಟ್ ಅಧ್ಯಯನ ವಿಧಾನ'ದ ಒಂದು ಮಾದರಿ. ಅಲ್ಲಿ ಪುರಾವೆಗಳಿಗೆ ಮನ್ನಣೆ ಇರುತ್ತದೆ ವಿನಾ ಅನುಭವವನ್ನು ಆಧಾರವನ್ನಾಗಿ ಬಳಸುವುದಿಲ್ಲ. ಅದನ್ನು ರಾಗದ್ವೇಷದಿಂದ ಕೂಡಿದ ಸಂಗತಿಯೆಂದು ತಳ್ಳಿಹಾಕಲಾಗುತ್ತದೆ.

ಅನುಭವನ್ನು ಆಧರಿಸಿದ ಅಧ್ಯಯನಗಳಲ್ಲಿ ವಸ್ತುನಿಷ್ಠತೆಯು ಸಾಧ್ಯವಿಲ್ಲ ಎಂಬುದು ಸದರಿ ವಿಧಾನದ ನಂಬಿಕೆ. ಈ ವಿಧಾನದ ಇತಿಮಿತಿಗಳ ಬಗ್ಗೆ ಕಳೆದ ಹತ್ತಾರು ದಶಕಗಳಿಂದ ಚರ್ಚೆಗಳು ನಡೆಯುತ್ತಿವೆ. ಈ ವಿಧಾನಕ್ಕೆ ಪ್ರತಿಯಾಗಿ ಅರ್ಥಗ್ರಹಣ ಪದ್ದತಿ, ಕ್ರಿಟಿಕಲ್ ಸಿದ್ಧಾಂತ, ಖಚಿತ ನಿಲುವಿನ ವಿಧಾನ ಮುಂತಾದವು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಈ ಸಂಶೋಧಕರ ಪ್ರಕಾರ ವಚನಗಳಲ್ಲಿ `ಜಾತಿ ವಿರೋಧಿ' ನಿಲುವು ಖಚಿತವಾಗಿ ಮತ್ತು ಶೇಕಡವಾರು ಹೆಚ್ಚಾಗಿ ಪ್ರಟವಾಗಿಲ್ಲ ಎಂಬ ಪ್ರಮೇಯದ ಮೇಲೆ ತಮ್ಮ `ವಚನಗಳು ಜಾತಿ ವ್ಯವಸ್ಥೆಯ ವಿರುದ್ಧ ಮಾತನಾಡುವುದಿಲ್ಲ' ಎಂಬ ನಿರ್ಣಯವನ್ನು ಕಟ್ಟಿದ್ದಾರೆ. ಹಾಗಾದರೆ ವಚನಗಳಲ್ಲಿ ಎಷ್ಟು ಬಾರಿ ಜಾತಿ ಅನ್ನುವ ನುಡಿ ಬಂದಿದ್ದರೆ ಅದು ಜಾತಿ ವಿರೋಧಿ ಪ್ರಣಾಳಿಕೆಯಾಗುತ್ತಿತ್ತು?

ಒಂದು ಚಾರಿತ್ರಿಕ ದಾಖಲೆಯನ್ನು ಅಧ್ಯಯನಕ್ಕೆ ಅಳವಡಿಸಿಕೊಳ್ಳುವ ಕ್ರಮ ಇದಲ್ಲ. ಒಂದು ಕೃತಿ ಹುಟ್ಟಿಕೊಳ್ಳಲು ಚಾರಿತ್ರಿಕ ಸಂದರ್ಭ ಎನ್ನುವುದಿರುತ್ತದೆ. ಯಾವ ಬಗೆಯ ಸಾಮಾಜಿಕ ಸಂಬಂಧಗಳು ಅಲ್ಲಿದ್ದವು ಎಂಬುದು ಮುಖ್ಯವಾಗುತ್ತದೆ. ಅಲ್ಲಿ ಬಳಸಿರುವ ನುಡಿಗಳು ತೆರೆದ ರೀತಿಯಲ್ಲಿ ಹೇಳುತ್ತಿರುವುದಕ್ಕಿಂತ ಪ್ರಚ್ಛನ್ನವಾಗಿ ಹೇಳದಿರುವ, ಹೇಳುತ್ತಿರುವುದಕ್ಕಿಂತ ಮತ್ತೇನನ್ನೋ ಅವು ಸೂಚಿಸುತ್ತಿರುವ ಅನೇಕ ಸಂಗತಿಗಳಿರುತ್ತವೆ.

ವಚನಗಳಲ್ಲಿರುವ ಜಾತಿ ವಿರೋಧಿ ಪ್ರಣಾಳಿಕೆಯನ್ನು ಗುರುತಿಸಲು ಅವುಗಳಲ್ಲಿ ಜಾತಿ ಎಂಬ ನುಡಿ ಎಷ್ಟು ಸಾರಿ ಬಂದಿದೆ ಎಂಬುದನ್ನು ಆಧಾರವಾಗಿಟ್ಟುಕೊಳ್ಳುವುದು ಸೀಮಿತ ದೃಷ್ಟಿಕೋನವಾಗುತ್ತದೆ. ವಚನಗಳಲ್ಲಿ ಅನೇಕ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು, ಅದು ಹುಟ್ಟು ಹಾಕಿದ್ದ ಅಸಮಾನತೆಗಳನ್ನು (ಅದು ಕೇವಲ ವರಮಾನದಲ್ಲಿನ ಅಸಮಾನತೆಯಲ್ಲ), ಅಂದು ದಲಿತರು ಮತ್ತು ಶೂದ್ರರು ಅನುಭವಿಸುತ್ತಿದ್ದ ಶೋಷಣೆಯ ಸ್ವರೂಪವನ್ನು ವಿವಿಧ ಬಗೆಗಳಲ್ಲಿ ಚರ್ಚಿಸಿದ್ದಾರೆ.

`ಕೂಡಲಸಂಗಮದೇವರು ಮಾದಾರ ಚನ್ನಯ್ಯನ ಮನೆಯಲುಂಡ ಕಾರಣ ವೇದ ನಡುನಡುಗಿತ್ತು'  ಎಂಬ ಬಸವಣ್ಣನ ಮಾತಿನಲ್ಲಿ ಜಾತಿ ನುಡಿಯಿಲ್ಲ. ಆದರೆ ಇದು ಜಾತಿ ವಿರೋಧಿ ಪ್ರಸ್ಥಾನವಲ್ಲವೆಂದು ಹೇಗೆ ಹೇಳುವುದು? `ಬ್ರಾಹ್ಮಣ ಬಯಲು ಮತ್ತು ಹೊಲೆ ಬಯಲು'ಗಳ ನಡುವಿನ ಭಿನ್ನತೆಯು ಸಾಮಾಜಿಕವಾಗಿ ಕಟ್ಟಿಕೊಂಡಿದ್ದೇ ವಿನಾ ಅದು ಜೈವಿಕವಾದುದಲ್ಲ ಎಂಬ ಬೊಂತಾದೇವಿಯ ಸಿದ್ಧಾಂತವನ್ನು ಅಲ್ಲಿ `ಜಾತಿ'ಯ ಬಗ್ಗೆ ಉಲ್ಲೇಖವಿಲ್ಲವೆಂದು ತಿಳಿದು ಅದನ್ನು ತಳ್ಳಿಹಾಕಲು ಬರುತ್ತದೆಯೇ? `ಎನ್ನ ಕಷ್ಟಕುಲದಲ್ಲಿ ಹುಟ್ಟುಸಿದೆಯಯ್ಯೊ, ಎಲೆ ಲಿಂಗ ತಂದೆ, ಕೆಟ್ಟೆನಯ್ಯೊ, ನಿಮ್ಮ ಮುಟ್ಟಿಯೂ ಮುಟ್ಟದಿಹನೆಂದು, ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ' ಎನ್ನುವ  ಡೋಹರ ಕಕ್ಕಯ್ಯನ ವಚನದಲ್ಲಿನ ಜಾತಿ ವ್ಯವಸ್ಥೆಯ ಬಗೆಗಿನ ಕಕ್ಕಯ್ಯ ಮೀಮಾಂಸೆಯನ್ನು ಜಾತಿ ವಿರೋಧವಲ್ಲವೆಂದು ಪರಿಭಾವಿಸಿಕೊಳ್ಳುವುದು ಸಾಧ್ಯವೇ?

ವಚನ ಸಂಸ್ಕೃತಿಯ ಬಗ್ಗೆ ವಸಾಹತುಶಾಹಿಯು ಕಟ್ಟಿದ್ದ ಮೀಮಾಂಸೆಯನ್ನು ನಮ್ಮ ವಿದ್ವಾಂಸರು ಮತ್ತು ಅಧ್ಯಯನಕಾರರು ಒಪ್ಪಿಕೊಂಡು ಕುರುಡು ಕುರುಡಾಗಿ ಅದನ್ನು ಅನುಸರಿಸುತ್ತಿದ್ದಾರೆಂಬ ಝಳಕಿ ಮತ್ತು ಬಾಲಗಂಗಾಧರ ಅವರ ಸಂಶೋಧನೆಯನ್ನು ಪೂರ್ವಗ್ರಹ ಪೀಡಿತವಾದುದೆಂದು ಹೇಳದೆ ವಿಧಿಯಿಲ್ಲ. ಏಕೆಂದರೆ ಈ ಸ್ಕೂಲಿನ ಮೂಲ ಪ್ರಣಾಳಿಕೆಯಾದ `ಜಾತಿ' ಎಂಬುದು ಭಾರತದಲ್ಲಿ ಇಲ್ಲ, ಅದು ವಸಾಹತುಶಾಹಿಯು ಕಟ್ಟಿರುವ ಒಂದು ಭ್ರಮಾಧೀನ ಪ್ರಮೇಯ. ಅದನ್ನು ಭಾರತದಲ್ಲಿ ವಿದ್ವಾಂಸರು ಒಪ್ಪಿಕೊಂಡು ಅನುಸರಿಸುತ್ತಿದ್ದಾರೆ ಎಂಬ ಸಂಗತಿಗಳನ್ನು ಸಾಧಿಸಲು ಹಮ್ಮಿಕೊಂಡಿರುವ ಬೃಹತ್ ಅಧ್ಯಯನ ಯೋಜನೆಯೊಂದರ ಭಾಗವಾಗಿ ಅವರು ವಚನ ಸಂಸ್ಕೃತಿಯನ್ನು ಕುರಿತ ತಮ್ಮ ಅಧ್ಯಯನವನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ.

ವಸಾಹತುಶಾಹಿಯು ಭಾರತದ ತಳ ಸಮುದಾಯಗಳಿಗೆ ನೀಡಿದ ಬಿಡುಗಡೆಯ ಕೊಡುಗೆಯನ್ನು ಅಲ್ಲಗಳೆಯುವುದು ಪ್ರಸ್ತುತ ಸ್ಕೂಲಿನ ಅಜೆಂಡವಾಗಿದೆ. ಆ ಮೂಲಕ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಮರುಪ್ರತಿಷ್ಠಾಪಿಸುವ ಕಾರ್ಯದಲ್ಲಿ ಸದರಿ ಸ್ಕೂಲು ನಿರತವಾಗಿದೆ. ಅವರ ಈ ಬೃಹತ್ ಅಜೆಂಡದ ಭಾಗವಾಗಿ ವಚನ ಸಂಸ್ಕೃತಿಯ ಬಗೆಗಿನ ಅವರ ಟೀಕೆಯನ್ನು ನಾವು ಪರಿಶೀಲಿಸಬೇಕಾಗಿದೆ.

ವಸಾಹತುಶಾಹಿಯ ಹಿಡಿತಕ್ಕೆ ಭಾರತವು 17-18ನೆಯ ಶತಮಾನಗಳಲ್ಲಿ ಸಿಲುಕಿಕೊಳ್ಳದೇ ಹೋಗಿದ್ದರೆ, ಈ ನಾಡಿನ ದಲಿತರ ಮತ್ತು ಶೂದ್ರರ ಸಾಮಾಜಿಕ ವಿಮೋಚನೆಯು- ಅದೆಷ್ಟೇ ಸೀಮಿತವಾದುದಾಗಿರಲಿ- ದೊರೆಯದೆ ಹೋಗಿದ್ದರೆ ಅದು ಇನ್ನೂ ನೂರಾರು ವರ್ಷ ಮುಂದೆ ಹೋಗುತ್ತಿತ್ತು ಎಂಬುದನ್ನು ಈ ಸಂಶೋಧಕರು ತಿಳಿದುಕೊಳ್ಳಬೇಕು. ಈ ಸ್ಕೂಲಿನ ವಿದ್ವಾಂಸರು ಭಾರತದಲ್ಲಿನ ಬ್ರಾಹ್ಮಣೇತರ ಚಳವಳಿಗಳೆಲ್ಲವನ್ನೂ ಹೇಗೆ ಅಪಮೌಲ್ಯಗೊಳಿಸುತ್ತಾ ಹೋಗುತ್ತಿದ್ದಾರೆ ಎಂಬುದರ ಒಂದು ನಮೂನೆ ವಚನ ಸಂಸ್ಕೃತಿಯ ಬಗೆಗಿನ ಪ್ರಸ್ತುತ ಪೂರ್ವಗ್ರಹ ಪೀಡಿತ ಅಧ್ಯಯನ.

ಈ ಸ್ಕೂಲು ಉತ್ಪಾದಿಸುತ್ತಿರುವ ಅಧ್ಯಯನ ವರದಿಗಳನ್ನು, ಅದು ಮಂಡಿಸುತ್ತಿರುವ ಪ್ರಮೇಯಗಳನ್ನು, ಅದು ರೂಪಿಸುತ್ತಿರುವ ಸೈದ್ಧಾಂತಿಕ ನಿರ್ಣಯಗಳನ್ನು ಕರ್ನಾಟಕಸ್ಥರು ಗಂಭಿರವಾಗಿ ಪರಿಗಣಿಸುತ್ತಿಲ್ಲ. ಅವರ ಸಂಶೋಧನೆಗಳ ಕುರಿತಂತೆ ಅನುಸಂಧಾನವನ್ನು ನಾಡಿನ ಚಿಂತಕರು ನಡೆಸುತ್ತಿಲ್ಲ. ಇದರಿಂದ ಬೇಸತ್ತ ಪ್ರಸ್ತುತ ಸ್ಕೂಲಿನ ವಿದ್ವಾಂಸರು ಪ್ರಚೋದನಾತ್ಮಕ ಸಂಗತಿಗಳನ್ನು ಈಗ ಹುಟ್ಟು ಹಾಕುತ್ತಿದ್ದಾರೆ. ವಚನ ಸಂಸ್ಕೃತಿಯ ಬಗೆಗಿನ ಅವರ ಅಧ್ಯಯನವು ಅಂತಹ ಕ್ರಮದ ಒಂದು ಉದಾಹರಣೆಯಾಗಿದೆ. ಈ ಸ್ಕೂಲು ಯಾವುದನ್ನು ಭಾರತೀಯವೆಂದು ಪರಿಭಾವಿಸಿಕೊಳ್ಳುತ್ತಿದೆಯೋ ಅದರಲ್ಲಿ ಸ್ಥಳೀಯವಾದ ವೈಚಾರಿಕ ಧಾರೆಗಳಿಗೆ ಅವಕಾಶವಿಲ್ಲ. ಇದನ್ನು ಗಟ್ಟಿಗೊಳಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ.

ಅಕ್ಕಮಹಾದೇವಿಯು ಭಾರತೀಯ ಸಂಸ್ಕೃತಿಯು ಕಟ್ಟಿದ್ದ ಸೂತಕದ ಆಚರಣೆಯನ್ನು ತಿರಸ್ಕರಿಸುತ್ತಾ  `ಎನ್ನ ದೇವ ಚನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ'  ಎಂದರೆ ಸಿದ್ದರಾಮಣ್ಣನು `ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ದಮಲ್ಲಿಕಾರ್ಜುನ ನೋಡಾ' ಎನ್ನುತ್ತಾನೆ. `ಹೆಣ್ಣು ರಾಕ್ಷಸಿ' ಎಂದು ಯಾವ ಸಂಸ್ಕೃತಿ ಪರಿಭಾವಿಸಿಕೊಂಡಿತ್ತು ಎಂಬುದನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಇಲ್ಲಿ ಜಾತಿಯ ಬಗ್ಗೆ ಯಾವುದೇ ಸೂಚನೆಯಿಲ್ಲ.


ಆದರೆ ವಚನಕಾರರು ಯಾವ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದರೋ ಅದರ ಅವಿಭಾಜ್ಯ ಅಂಗವಾಗಿದ್ದ ಸೂತಕವನ್ನು ತಿರಸ್ಕರಿಸುತ್ತಾ ಇಬ್ಬರೂ ಹೆಣ್ಣನ್ನು ಜಗತ್ತಿಗೆ, ಮಲ್ಲಿಕಾರ್ಜುನನಿಗೆ ಸಂವಾದಿಯನ್ನಾಗಿ ಮಾಡಿ ಅಂತಹ ಆಚರಣೆಯನ್ನು ಅಪ್ರಸ್ತುತಗೊಳಿಸುತ್ತಿದ್ದಾರೆ. ಇದು ಜಾತಿ ವ್ಯವಸ್ಥೆಯ ಬಗೆಗಿನ ಕಾಮೆಂಟಲ್ಲದಿದ್ದರೆ ಮತ್ತಾವುದು?

ಈ ವೈಚಾರಿಕ ಪ್ರಣಾಳಿಕೆಯ ಬಹು ದೊಡ್ಡ ಸಮಸ್ಯೆಯೆಂದರೆ ಅವರು ನಮ್ಮ ದೇಶದಲ್ಲಿ ಕಳೆದ ನೂರಾರು ವರ್ಷಗಳಿಂದ `ಅಖಿಲ ಭಾರತೀಯ' ಎನ್ನಬಹುದಾದ ಸಂಸ್ಕೃತಿಗೆ ಧಕ್ಕೆಯುಂಟು ಮಾಡುವಂತೆ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹುಟ್ಟಿಕೊಂಡ ಸ್ಥಳೀಯ/ಪ್ರಾದೇಶಿಕ ಎನ್ನಬಹುದಾದ ಪ್ರತಿ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಿದ ಕ್ರಮಗಳ ಬಗ್ಗೆ ಗೌರವವಿಲ್ಲದಿರುವುದು. ಈ ಸ್ಥಳೀಯ/ಪ್ರಾದೇಶಿಕ ಎನ್ನಬಹುದಾದ ಪ್ರತಿ ಸಂಸ್ಕೃತಿ ಚಳವಳಿಗಳು ವಸಾಹತುಶಾಹಿಯಿಂದ ಪ್ರೇರಣೆ ಮತ್ತು ಪ್ರೋತ್ಸಾಹ ಪಡೆದುಕೊಂಡವು.

ಏನಿ ಬಂದಿರಿ ಹದುಳವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?
ಒಡನೆ ನುಡಿದರೆ ಸಿರ, ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದೊಡೆ
ಮೂಗ ಕೊಯ್ವುದ ಮಾಣ್ಬನೆ ಕೂಡಲಸಂಗಮದೇವಾ,
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯ?
ನಗುವುದು, ನುಡಿವುದು ಶಿವಭಕ್ತರೊಡನೆ
ಸುಮ್ಮೋನ, ಹಮ್ಮು ಬಿಮ್ಮೋಗಿರಲೇಕಯ್ಯ?
ನಮ್ಮ ಕೂಡಲಸಂಗನ ಶರಣರೊಡನೆ ಮನದೆರೆದು ಮಾತನಾಡೂದಯ್ಯ

ಇವೆರಡೂ ವಚನಗಳಲ್ಲಿ ಬಸವಣ್ಣ ಎಲ್ಲರನ್ನೂ ಒಳಗೊಳ್ಳುವ ಕ್ರಮದ ಬಗ್ಗೆ ಮಾತನಾಡುತ್ತಿದ್ದಾನೆ. ಈ ಮಾತುಗಳನ್ನು ಆಡುವ ಪ್ರಮೇಯ ಬಸವಣ್ಣನಿಗೆ ಯಾಕೆ ಬಂತು? ಜನರನ್ನು ಯಾವ ಉಪಾಧಿಗಳಿಲ್ಲದೆ ಮಾತನಾಡಿಸುವುದು ಅಂದು ರೂಢಿಯಲ್ಲಿರಲಿಲ್ಲವೆ?

`ಹದುಳವಿದ್ದಿರೆ'  ಎನ್ನಲು, `ಕುಳಿತುಕೊಳ್ಳಿರಿ'  ಎನ್ನಲು ಇದ್ದ ಕಂಟಕಗಳಾದರೂ ಏನು? ಇಲ್ಲಿ ಜಾತಿಯ ಬಗ್ಗೆ ರವಷ್ಟೂ ಸೂಚನೆಯಿಲ್ಲ ಎಂದು ಭಾವಿಸಬಹುದು. ಆದರೆ ಸಂಸ್ಕೃತಿಯ ವಿದ್ಯಾರ್ಥಿಗಳಿಗೆ ಇಲ್ಲಿನ ವಚನಗಳಲ್ಲಿನ ಮಾತುಗಳು ಹೇಳದಿರುವ ಸಂಗತಿಗಳನ್ನು ಸಾಂದರ್ಭಿಕ ಚೌಕಟ್ಟಿನಲ್ಲಿ ಕಂಡುಕೊಳ್ಳುವುದು ಕಷ್ಟವಾಗಬಾರದು. ಮನುಷ್ಯರು-ಮನುಷ್ಯರುಗಳ ನಡುವೆ ಇದ್ದ ಅಂತರದ ಬಗ್ಗೆ, ಮುಟ್ಟಿಸಿಕೊಳ್ಳುವ - ಮುಟ್ಟಿಸಿಕೊಳ್ಳದಿರುವ ಸಂಗತಿಗಳ ಬಗ್ಗೆ ಇವು ಬೆಳಕು ಚೆಲ್ಲುತ್ತಿವೆ. ಇವೆಲ್ಲ ವಿಸ್ತೃತ ನೆಲೆಯಲ್ಲಿ ಜಾತಿಯ ಬಗೆಗಿನ ಟೀಕೆಗಳಾಗಿವೆ.

ವಸಾಹತುಶಾಹಿಯು ಭಾರತೀಯ ಸಮಾಜವನ್ನು `ಸಾಮಾಜಿಕ ಕೆಡುಕುಗಳ ಆಗರ'  ಎನ್ನುವಂತೆ ಪರಿಭಾವಿಸಿಕೊಂಡಿತ್ತು ಎಂಬುದು ಇವರ ಮತ್ತೊಂದು ನಿಲವು. ಇದು ಭಾರತೀಯ ಸಂಸ್ಕೃತಿಯನ್ನು ಅಖಂಡವಾದುದು ಎಂದು ಭಾವಿಸಿರುವುದರ ಪರಿಣಾಮ. ವಸಾಹತುಶಾಹಿಯು ಸ್ಥಳೀಯ/ಪ್ರಾದೇಶಿಕ ಎನ್ನಬಹುದಾದ ಸಂಸ್ಕೃತಿಗಳ ಬಗ್ಗೆ ಗೌರವ ಇಟ್ಟುಕೊಂಡಿತ್ತು. ಅವುಗಳ ವಿಮೋಚನೆಗೆ ಅದು ಪ್ರಯತ್ನ ನಡೆಸಿತ್ತು ಎಂಬ ಸತ್ಯವೂ ನಮ್ಮ ಮುಂದಿದೆ. ಇದರ ಬಗ್ಗೆ ನಾವು ಕುರುಡಾಗಬಾರದು.

ಈ ಎಲ್ಲ ಚರ್ಚೆಯ ಹಿನ್ನೆಲೆಯಲ್ಲಿ ಝಳಕಿ ಮತ್ತು ಬಾಲಗಂಗಾಧರ ಅವರು ವಚನ ಸಂಸ್ಕೃತಿಯ ಬಗ್ಗೆ ಪ್ರತಿಪಾದಿಸುತ್ತಿರುವ ನಿರ್ಣಯಗಳನ್ನು ಒಪ್ಪಲು ಸಾಧ್ಯವಿಲ್ಲ ಮತ್ತು ಅವು ಪೂರ್ವಗ್ರಹ ಪೀಡಿತವಾಗಿವೆ ಹಾಗೂ ಅವರ ಬೃಹತ್ ಯೋಜನೆಯಾದ `ಜಾತಿಯು ಭಾರತೀಯ ಸಂಸ್ಕೃತಿಯ ವಿಶಿಷ್ಟ ಲಕ್ಷಣವಲ್ಲ' ಎಂಬ ಪ್ರಣಾಳಿಕೆಯನ್ನು ಗಟ್ಟಿಗೊಳಿಸಲು ವಚನ ಸಂಸ್ಕೃತಿಯ ಬಗ್ಗೆ ಅವರು ತಪ್ಪು ತಪ್ಪೇ ಮಾತನಾಡುತ್ತಿದ್ದಾರೆ.
* ಡಾ ರಾಜಾರಾಮ ಹೆಗಡೆ

ಎಂ. ಎಂ. ಕಲಬುರ್ಗಿಯವರು ತಮ್ಮ ಪ್ರತಿಕ್ರಿಯೆಯಲ್ಲಿ ಭಾರತೀಯ ಇತಿಹಾಸವನ್ನು ಆಧಾರವಾಗಿ ತೋರಿಸಿ ವಚನ ಚಳವಳಿಗಳ ಸಿದ್ಧಾಂತವು ಜಾತಿವಿನಾಶವೇ ಆಗಿದೆ ಎನ್ನುತ್ತಾರೆ. ಅವರ ಪ್ರಕಾರ ಬಾಲಗಂಗಾಧರ ಹಾಗೂ ನಾವು ಇದನ್ನು ಅಲ್ಲಗಳೆಯುತ್ತಿರುವುದು ಕನ್ನಡ ಸಂಸ್ಕೃತಿಗೆ ಒಳ್ಳೆಯದಲ್ಲ.

ಕಲಬುರ್ಗಿಯವರ ಪ್ರಕಾರ ವಚನಗಳು ಜಾತಿವಿರೋಧಿ ಎಂದರೇನೇ ಕನ್ನಡ ಸಂಸ್ಕೃತಿಗೆ ಒಳ್ಳೆಯ ಹೆಸರು ಬರುತ್ತದೆ. ಆದರೆ ನಮ್ಮ ಪ್ರಕಾರ ಕನ್ನಡಿಗರು ಒಂದು  ಒಳ್ಳೆಯ ಸಂಶೋಧನೆಯನ್ನು ಮಾಡುವುದರಿಂದ ಹಾಗೂ ಅದನ್ನು ಕನ್ನಡದಲ್ಲಿ ಬರೆಯುವುದರಿಂದ ಕನ್ನಡದ ಸ್ಥಾನಮಾನವು ಜಾಗತಿಕ ಮಟ್ಟದಲ್ಲಿ ನಿಜವಾಗಿಯೂ ಹೆಚ್ಚುತ್ತದೆಯೇ ಹೊರತು ಯಾವುದಾದರೂ ಐಡಿಯಾಲಜಿಯನ್ನು ಸಮರ್ಥಿಸುವುದರಿಂದಲ್ಲ.

 ಒಂದು ಕಾಲದ ಇತಿಹಾಸವನ್ನು ತಿಳಿದುಕೊಳ್ಳದಿದ್ದರೆ ಆ ಕಾಲದ ಸಾಹಿತ್ಯವು ಅರ್ಥವಾಗುವುದಿಲ್ಲವೆಂಬುದು ಎಷ್ಟು ನಿಜವೊ, ಅಷ್ಟೇ ನಿಜ, ಸಾಹಿತ್ಯವನ್ನು ಸರಿಯಾಗಿ ಓದದಿದ್ದರೆ ಅದೇ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲೂ ಸಾಧ್ಯವಿಲ್ಲ ಎಂಬುದು. ಏಕೆಂದರೆ ಇತಿಹಾಸ ರಚನೆಗೆ ಸಾಹಿತ್ಯವು ಆಧಾರವಲ್ಲವೆ? ಕಲಬುರ್ಗಿಯವರ ಪ್ರತಿಕ್ರಿಯೆಯಲ್ಲಿ ಏನಾಗಿದೆಯೆಂದರೆ ವಸಾಹತು ಕಾಲದಲ್ಲಿ ಭಾರತದಲ್ಲಿ ರಿಲಿಜನ್ನುಗಳಿವೆ ಎಂಬ ತಪ್ಪು ತಿಳಿವಳಿಕೆಯಿಂದ ಬರೆದ ಇತಿಹಾಸವನ್ನೇ ಅವರು ನಮಗೆ ತಿಳಿಸುತ್ತಾರೆ.

ಅದೇ ಇತಿಹಾಸವು ವಚನ ಚಳವಳಿಯು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಎನ್ನುತ್ತದೆ. ಅದು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಕಂಡುಕೊಂಡ ಸತ್ಯವಲ್ಲ, ಬದಲಾಗಿ ಪ್ರೊಟೆಸ್ಟಾಂಟ್ ಪೂರ್ವಗ್ರಹಗಳಿಂದ ಹುಟ್ಟಿಕೊಂಡ ಇತಿಹಾಸ ಹಾಗೂ ಪಾಶ್ಚಾತ್ಯರು ಭಾರತಕ್ಕೆ ಬಂದು ವಚನಗಳನ್ನು ಓದುವುದಕ್ಕೆ ಮೊದಲೇ ಹುಟ್ಟಿಕೊಂಡ ಇತಿಹಾಸ ಎಂಬುದನ್ನು ಡಂಕಿನ್ ಸ್ಪಷ್ಟವಾಗಿ ತೋರಿಸಿದ್ದಾರೆ. ಆ ಇತಿಹಾಸವನ್ನು ಇಟ್ಟುಕೊಂಡೇ ವಚನ ಸಾಹಿತ್ಯವನ್ನು ನಾವು ಓದತೊಡಗಿದೆವು.
ಈಗ ವಚನ ಸಾಹಿತ್ಯವನ್ನು ಮರು ಓದಿಗೆ ಒಳಪಡಿಸಿ ಸರಿಯಾದ ಇತಿಹಾಸದ ರಚನೆಗೆ ಬುನಾದಿಯನ್ನು ಹಾಕಬೇಕೆಂಬುದು ನಮ್ಮ ಒತ್ತಾಸೆ. ಹಾಗಾಗಿ ಕಲಬುರ್ಗಿಯವರು ನೀಡುವ ಇತಿಹಾಸ ನಮಗೆ ಪ್ರಸ್ತುತವಲ್ಲ.

ಜಾತಿ ವಿನಾಶವೇ ವಚನ ಚಳವಳಿಗಳ ಸೈದ್ಧಾಂತಿಕ ಹಿನ್ನೆಲೆ ಎಂಬ ವಾದವನ್ನು ಸಮರ್ಥಿಸಬೇಕಾದರೆ ಈ ಮುಂದಿನ ವಾಕ್ಯಗಳು ಅನಿವಾರ್ಯ ಎಂಬುದನ್ನು ಈ ಕುರಿತ ಚರ್ಚೆಗಳು ತೋರಿಸಿಕೊಟ್ಟಿವೆ.   `ನಮಗೆ ಸಿಗದಿರುವ ಇನ್ನೂ ಎಷ್ಟೋ ವಚನಗಳಿರಬಹುದು' ,  `ವಚನಗಳಲ್ಲಿ ಶಬ್ದಗಳು ಇಲ್ಲದಿದ್ದರೂ ಅವುಗಳ ಧ್ವನಿ ಹಾಗಿದೆ' ,  `0.3% ವಚನಗಳಲ್ಲಿ ಇರುವ ವಿಚಾರವನ್ನೇ ಅವರೇಕೆ ಪ್ರತಿಪಾದಿಸಿರಬಾರದು? ಇದನ್ನೆಲ್ಲ ಅಂಕಿ ಅಂಶದಿಂದ ಹೇಳಲು ಸಾಧ್ಯವಿಲ್ಲ' , ಇತ್ಯಾದಿ.
ಅಂದರೆ ಅವರೆಲ್ಲರೂ ತಮ್ಮ ಜಾತಿ ವಿನಾಶದ ಸಿದ್ಧಾಂತವು ಲಭ್ಯವಿರುವ ವಚನಗಳನ್ನಾಧರಿಸಿಲ್ಲ ಹಾಗೂ ಆಧರಿಸಬಾರದು ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ 0.3% ವಚನಗಳಲ್ಲಿ ಬರುವ ಬ್ರಾಹ್ಮಣರ ಆಚರಣೆಗಳ ಹಾಗೂ ಗ್ರಂಥಗಳ ಟೀಕೆ, ಜಾತಿ ಮದ, ಭೇದಗಳ ಟೀಕೆ, ಇತ್ಯಾದಿಗಳೇ ಈ ವಾದಕ್ಕೆ ಬುನಾದಿ ಎಂಬುದೂ ಧೃಡಪಡುತ್ತದೆ. ಇಂಥ ಸಾಲುಗಳಿಗೆಲ್ಲ ಜಾತಿ ವಿನಾಶಕ್ಕಿಂತಲೂ ಸೂಕ್ತವಾದ ವಿವರಣೆಯನ್ನು ನೀಡಿದಲ್ಲಿ ಈ ಮೇಲಿನ ಅಂತೆ ಕಂತೆಗಳ ಸಂತೆ ಮಾಯವಾಗುವುದರಲ್ಲಿ ಸಂದೇಹವೇ ಇಲ್ಲ.

ಬಾಲಗಂಗಾಧರರು ಅಂಥದ್ದೊಂದು ವಾದವನ್ನು ಇಡುತ್ತಾರೆ. ವಚನಗಳ ಸಿದ್ಧಾಂತವನ್ನು ಜಾತಿ ವಿರೋಧದ ನೆಲೆಯಿಂದ ತೆಗೆದು ಆಧ್ಯಾತ್ಮಿತೆಯ ನೆಲೆಯಲ್ಲಿ ಇಡಿರಿ. ಈ ಮೇಲಿನ ಸಮಸ್ಯೆಗಳೆಲ್ಲ ಪರಿಹಾರವಾಗಿ ಬಿಡುತ್ತವೆ. ನಮ್ಮ ಆಧ್ಯಾತ್ಮಿಕ ಮಾರ್ಗಗಳನ್ನೆಲ್ಲ ನಾವು ಸಾಮಾಜಿಕ ಚಳವಳಿಗಳನ್ನಾಗಿ ಮಾಡಿಟ್ಟಿದ್ದು ನಮ್ಮ ಸಾಂಸ್ಕೃತಿಕ ವಿಸ್ಮತಿಗಳಲ್ಲೊಂದು. ಅದು ಪ್ರೊಟೆಸ್ಟಾಂಟ್ ಲೋಕದೃಷ್ಟಿಯ ಕೊಡುಗೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಉಪನಿಷತ್ತುಗಳ ಕಾಲದಿಂದಲೂ ಜಾತಿ, ಅಂತಸ್ತು, ಐಶ್ವರ್ಯ ಇತ್ಯಾದಿಗಳು ಅಹಂಕಾರರೂಪದಲ್ಲಿ ಆತ್ಮಜ್ಞಾನಕ್ಕೆ ಅಡ್ಡಿಯಾಗಿವೆ ಎಂಬುದಾಗಿಯೇ ಪ್ರತಿಪಾದಿಸಲಾಗಿದೆ.
ಆತ್ಮಜ್ಞಾನಿಗೆ ಇದಾವುದೂ ಇರುವುದಿಲ್ಲ. ಅದು ಪರಮಾನಂದದ ಸ್ಥಿತಿ. ಹಾಗಾಗುವುದೆಂದರೆ ಜನನ ಮರಣಗಳ ಚಕ್ರದಿಂದ ಮುಕ್ತಿ ಹೊಂದಿದಂತೆಯೇ. ಅದನ್ನೇ ಅವರು ಮೋಕ್ಷ ಎನ್ನುತ್ತಾರೆ. ವರ್ಣಧರ್ಮದಲ್ಲಿ ಶ್ರದ್ಧೆ ಇಟ್ಟವರು, ಪ್ರಾಪಂಚಿಕ ಅರ್ಥ ಸಿದ್ಧಿಗಾಗಿ ದೇವತೆಗಳು ಹಾಗೂ ಪೂಜೆಯಲ್ಲಿ ಶ್ರದ್ಧೆ ಇಟ್ಟವರು ಮುಕ್ತಿಯನ್ನು ಪಡೆಯುವುದರ ಬದಲಾಗಿ ಈ ಸಂಸಾರಚಕ್ರದಲ್ಲೇ ಸುತ್ತುತ್ತಿರುತ್ತಾರೆ ಎಂಬುದಾಗಿ ಉಪನಿಷತ್ತುಗಳೂ, ಅವುಗಳ ಭಾಷ್ಯಕಾರರೂ ಒತ್ತಿ ಹೇಳಿದ್ದಾರೆ.

ಸಾಂಸಾರಿಕ ಉಪಾಧಿಗಳಿಂದ ಬಿಡುಗಡೆ ಪಡೆಯುವುದಕ್ಕಾಗಿ ಭಾರತೀಯ ಆಧ್ಯಾತ್ಮಿಕ ಪರಂಪರೆಯು ಸನ್ಯಾಸ, ಶ್ರಮಣ  ಇತ್ಯಾದಿ ವೈವಿಧ್ಯಪೂರ್ಣವಾದ ವಿರಕ್ತ ಮಾರ್ಗಗಳನ್ನು ಬೆಳೆಸಿತು. ಈ ವಿರಕ್ತ ಪರಂಪರೆಯೇ ಬೌದ್ಧ, ಜೈನರಲ್ಲೂ ಇರುವುದರಿಂದ ಸಂಸಾರ ಚಕ್ರದಿಂದ ಬಿಡುಗಡೆಯನ್ನು ಹೊಂದುವುದೇ ನಿಜವಾದ ಮೋಕ್ಷ ಎಂಬುದಾಗಿ ಅವರೂ ಪ್ರತಿಪಾದಿಸುತ್ತಾರೆ. ಸಂಸಾರಸ್ಥರು ಮುಖ್ಯ  ಎಂಬುದಾಗಿ ಭಾವಿಸಿಕೊಂಡ ಅನೇಕ ಪದ್ಧತಿಗಳನ್ನು ಹಾಗೂ ಆಚರಣೆಗಳನ್ನು ಆಧ್ಯಾತ್ಮ ಜ್ಞಾನಕ್ಕೆ ಅಡ್ಡಿಗಳೆಂಬುದಾಗಿ ಅವರು ಭಾವಿಸಿದರು.

ವರ್ಣ,  ಜಾತಿಭೇದ ಅದರಲ್ಲಿ ಮುಖ್ಯವಾದುದು. ಬ್ರಾಹ್ಮಣರು ಸನ್ಯಾಸ ಸ್ವೀಕರಿಸಬೇಕಾದರೆ ವರ್ಣದ ಸಂಕೇತವಾದ ಜನಿವಾರವನ್ನೂ, ಕರ್ಮಗಳನ್ನೂ ತ್ಯಜಿಸಿ ತಮ್ಮ ಶ್ರಾದ್ಧವನ್ನೂ ಮಾಡಿಕೊಳ್ಳವುದು ಇವತ್ತಿಗೂ ಪ್ರಚಲಿತದಲ್ಲಿರುವ ಆಚರಣೆ.  ಶಿವ ಶರಣರು ಶಿವಭಕ್ತಿಯನ್ನು ಆಧ್ಯಾತ್ಮಿಕ ಮಾರ್ಗವನ್ನಾಗಿ  ಭಾವಿಸಿದವರು. ಇಲ್ಲಿ ಮುಕ್ತಿ ಎಂಬುದು ಈಶ್ವರ ಸಾಯುಜ್ಯದ ರೂಪದಲ್ಲಿ ಇದೆ. ಹಾಗಾಗಿ ಬ್ರಾಹ್ಮಣ ಜಾತಿಯನ್ನು ವಿರೋಧಿಸಲಿಕ್ಕೆ ಬಸವಣ್ಣನು ಜನಿವಾರವನ್ನು ಕಿತ್ತು ಹಾಕಿದ ಎಂಬುದೇ  ಪ್ರೊಟೆಸ್ಟಾಂಟ್ ವಿವರಣೆ.

ಇವರೆಲ್ಲ ತಮ್ಮ ಮಾರ್ಗವನ್ನು ತುಳಿಯುವವರಿಗೆ ಮಾತ್ರವೇ ಅಂಥ ಜೀವನವನ್ನು ವಿಧಿಸಿದ್ದರು ಎಂಬುದನ್ನು ಮರೆಯಬಾರದು. ಸಂಸಾರವೆಂದರೆ ಈ ಭೇದಗಳೆಲ್ಲ ಇರುವವೇ, ಆದರೆ ಅದರಿಂದ ಮುಕ್ತಿಯನ್ನು ಪಡೆಯಲು ಬಯಸುವವರು ಈ ಭೇದಗಳನ್ನು ಮರೆಯಬೇಕು. ವಚನಗಳು ಕೂಡ ಶಿವ ಶರಣರಲ್ಲಿ ಜಾತಿ ಭೇದ ಎಣಿಸಬಾರದು ಎಂದು ನಿರ್ದಿಷ್ಟವಾಗಿ ಹೇಳುತ್ತಿವೆ ಎಂಬುದನ್ನು ತರ್ಕಬದ್ಧವಾಗಿ ತೋರಿಸಬಹುದು.

ಅವರು ಜಾತಿಗಳೇ ಹೋಗಬೇಕು ಎಂಬುದಾಗಿಯೂ ಹೇಳುತ್ತಿರಲಿಲ್ಲ ಅಥವಾ ಇಲ್ಲದ ಜಾತಿ ವ್ಯವಸ್ಥೆಯ ಕುರಿತೂ ಹೇಳುತ್ತಿರಲಿಲ್ಲ. ಜಾತಿವಿನಾಶ ಚಳವಳಿಯನ್ನು ಮಾಡುತ್ತಿರುವ ಆಧುನಿಕರು ತಾವು ಇಂಥವರ ಜೊತೆಗೆ ಎಲ್ಲಿಯವರೆಗೆ ನಿಲ್ಲುತ್ತೇವೆಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕು. ನೀವು ಜಾತಿಯನ್ನು ತಲೆಯೊಳಗಿಟ್ಟುಕೊಂಡಿರೆಂದರೆ ಅವರ ಲೋಕವನ್ನು ತ್ಯಜಿಸಿದಂತೆಯೇ. ` ಪರಚಿಂತೆ ಎನಗೇಕಯ್ಯ' ,  `ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ'  ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ.

 ಆಧ್ಯಾತ್ಮ ಸಂಪ್ರದಾಯಗಳು, ಬ್ರಾಹ್ಮಣ ಆಚರಣೆಗಳು, ಯಜ್ಞಯಾಗಾದಿಗಳು, ಮಂತ್ರ ತಂತ್ರಗಳು, ದೇವಾಲಯ, ಪೂಜೆ ಇತ್ಯಾದಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಟೀಕೆಗಳನ್ನು ಮಾಡಲೂ ಒಂದು ಕಾರಣವಿದೆ. ಇವೂ ಕೂಡ ಆಧ್ಯಾತ್ಮ ಮಾರ್ಗಗಳೇ. ಆದರೆ ಈ ಆಚರಣೆಗಳಿಂದ ಹುಟ್ಟಿದ ಅಹಂಕಾರ, ಮೋಹ, ಇತ್ಯಾದಿಗಳೇ ಆತ್ಮಜ್ಞಾನಕ್ಕೆ ಅಡ್ಡಿಯಾಗುತ್ತವೆ ಎಂಬುದನ್ನು ಈ ಟೀಕೆಗಳು ತಿಳಿಸುತ್ತಿವೆ.

ಅಂದರೆ ಹೆಚ್ಚೆಂದರೆ ಒಂದು ರೀತಿಯಲ್ಲಿ ಆಧ್ಯಾತ್ಮ ಮಾರ್ಗವನ್ನಿಟ್ಟುಕೊಂಡು ದಾರಿ ತಪ್ಪಿಸುವವರ ಖಂಡನೆ ಎಂಬುದಾಗಿ ಇಂಥ ಟೀಕೆಗಳನ್ನು ಪರಿಗಣಿಸಬಹುದು. ಇಂಥ ಟೀಕೆಗಳು ಆಯಾ ಸಂಪ್ರದಾಯಗಳಿಗೆ ಆಂತರಿಕವಾದವುಗಳು ಎಂಬುದನ್ನೂ ಗಮನಿಸಬೇಕು. ಉದಾಹರಣೆಗೆ ಇಡೀ ವಚನ ಸಾಹಿತ್ಯದಲ್ಲಿ ಯಾವುದನ್ನು ಕ್ರಾಂತಿಕಾರಕ ವಿಷಯ ಎನ್ನುತ್ತಾರೋ ಅವೆಲ್ಲವೂ ಸಂಸ್ಕೃತ ಆಗಮಗಳಲ್ಲಿ ಬಂದಿರುವ ವಿಚಾರಗಳ ಕನ್ನಡ ರೂಪಗಳೇ ಆಗಿವೆ ಎಂಬುದು ಸ್ಪಷ್ಟ.

ಶಿವಶರಣರ ಮಾರ್ಗವನ್ನು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಖಂಡತೆಯಲ್ಲಿ ಇಟ್ಟರೆ ಮಾತ್ರವೇ ಅಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಬೇಕು, ಉತ್ತರವನ್ನು ಹೇಗೆ ಪಡೆಯಬೇಕು ಎಂಬುದಕ್ಕೆ ವಿಧಾನಗಳು ಸಿಗುತ್ತವೆ. ಬದಲಾಗಿ ಈ ಜಾತಿವಿರೋಧದ ಸಿದ್ಧಾಂತವು ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಬ್ರಾಹ್ಮಣ, ಬ್ರಾಹ್ಮಣೇತರ ಎಂಬುದಾಗಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ವಿಭಾಗಿಸುವುದರ ಮೂಲಕ ಅದನ್ನು ತಿಳಿವಳಿಕೆಗೆ ದಕ್ಕದಂತೆ ಮಾಡುತ್ತದೆ. ವಚನ ಚಳವಳಿ ಇದಕ್ಕೊಂದು ಜ್ವಲಂತ ಉದಾಹರಣೆ.
ವಚನಕಾರರು ಜಾತಿವಿರೋಧಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು ಎಂದು ವಾದಿಸುವವರು ಈ ಮುಂದಿನ ಕೆಲಸವನ್ನು ಮಾಡಲೇಬೇಕು:

1) 0.3% ವಚನಗಳಲ್ಲಿ ಏನು ಹೇಳುತ್ತಾರೊ ಅವು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಸಾಮಾನ್ಯವಾಗಿ ಕಾಣಿಸುವಂಥ ಪ್ರತಿಪಾದನೆಗಳಲ್ಲ ಎಂಬುದನ್ನು ತೋರಿಸಬೇಕು.

2) ಅಷ್ಟರ ನಂತರ ಅದು ಜಾತಿ ವಿರೋಧ ಹಾಗೂ ಜಾತಿ ವ್ಯವಸ್ಥೆಯ ವಿರೋಧ ಹೇಗಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ತೋರಿಸಬೇಕು. ಈ ಎರಡು ಹೆಜ್ಜೆಗಳನ್ನು ಇಡದೇ ಹೇಳಿದ ಮಾತುಗಳೆಲ್ಲ  ಪ್ರೊಟೆಸ್ಟಾಂಟ್ ಪೂರ್ವಗ್ರಹಗಳೇ ಹೊರತೂ ಬೇರೇನೂ ಆಗಲು ಸಾಧ್ಯವಿಲ್ಲ.

19 March 2013

* ಡಂಕಿನ್ ಝಳಕಿ

ನಮ್ಮ ವಚನ ಸಂಶೋಧನೆ ಕುರಿತು ಡಾ.ಮೀನಾಕ್ಷಿ ಬಾಳಿಯವರು ಪ್ರಜಾವಾಣಿಯ ೧೮/ಮಾರ್ಚ್/೨೦೧೩ರ ಸಂಚಿಕೆಯಲ್ಲಿ ಬರೆದ “ಆಧುನಿಕೋತ್ತರ ವಾದದ ಅಪಸವ್ಯ” ಎಂಬ ಬರಿಯ ಬೈಗುಳಗಳಿಂದಲೇ ತುಂಬಿರುವ ಇವರ ಬರಹಕ್ಕೆ ಇದು ನನ್ನ ಪ್ರತಿಕ್ರಿಯೆ.

(೧) ಅವರ ಟೀಕಾ ಪ್ರಹಾರ ಆರಂಭವಾಗುವುದೇ ನಮ್ಮ ವಾದದಲ್ಲಿ “ಯಾವುದೇ ಹೊಸ ಚಿಂತನೆಯಾಗಲಿ ಅಥವ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲ” ಎಂದು ಸಾರುತ್ತಾ, ನಮ್ಮ ಸಂಶೋಧನೆಯು ಪೂರ್ವಗ್ರಹ ಪೀಡಿತವಾಗಿದೆ ಮತ್ತು “ಈ ನಿಲುವಿಗೆ ಬರಲು ಬಳಸಿಕೊಂಡ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ” ಎನ್ನುವ ಮೂಲಕ. ನಮ್ಮ ವಾದದಲ್ಲಿ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲದ ಮೇಲೆ ಬಾಳಿಯವರು ಈ ಲೇಖನವನ್ನು ಬರೆದದ್ದಾದರೂ ಹೇಗೆ, ಪ್ರಜಾವಾಣಿ ನಮ್ಮ ವಿರುದ್ಧ ಅಷ್ಟೊಂದು ಲೇಖನಗಳನ್ನು ಪ್ರಕಟಿಸಿದ್ದು  ಹೇಗೆ? ಈ ಪ್ರಶ್ನೆಗಳು ಹಾಗಿರಲಿ, ಮುಖ್ಯವಾದ ವಿಷಯಕ್ಕೆ ಬರೋಣ. ನಮ್ಮ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ ಎಂದು ಇವರು ಹೇಳುವುದು ನಾವು ಕೇವಲ ವಚನಗಳಲ್ಲಿನ ಶಬ್ದ ಬಳಕೆಯ ಲೆಕ್ಕ ಮಾತ್ರ ಮಾಡುತ್ತೇವೆ, ಒಟ್ಟು ವಚನಗಳ ಜೀವಧ್ವನಿ, ಅವರ ಬದುಕಿನ ಸಂಘರ್ಷ ಮುಂತಾದವುಗಳನ್ನು, ವಚನಕಾರರ ನಂತರ ಅವರ ಬದುಕು ಕುರಿತು ರಚನೆಯಾದ ಕಾವ್ಯ ಪುರಾಣಗಳು ಶಾಸನಗಳು ಜಾನಪದ ಸಾಹಿತ್ಯರಾಶಿ ಇತ್ಯಾದಿಗಳನ್ನು ನಾವು ಗುರುತಿಸುವುದಿಲ್ಲವಂತೆ. ಇಂತಹ ಹೇಳಿಕೆಗಳನ್ನು ಮಾಡುವ ಮೊದಲು ನಾವು ಬರೆದ ಲೇಖನ, ಪುಸ್ತಕಗಳನ್ನು ಇವರು ಓದಬೇಕಿತ್ತು. ಅವರು ಉಲ್ಲೇಖಿಸುವುದು ನಮ್ಮೆಲ್ಲ ವಚನ ಸಂಶೋಧನೆಯ ಸಾರಾಂಶವನ್ನು ಕೊಟ್ಟಿರುವ, ನಾನು ಸಂಪಾದಿಸಿದ ಭಾರದಲ್ಲಿ ಜಾತಿವ್ಯವಸ್ಥೆ ಇದೆಯೇ? ಕೃತಿಯಲ್ಲಿನ ಎರಡು ಪುಟಗಳ ಲೇಖನವನ್ನಷ್ಟೇ. ಇದನ್ನು ಏನೆಂದು ಕರೆಯೋಣ: ಬಾಳಿಯವರ ವಿದ್ವತ್ತಿನಲ್ಲಿನ ಕೊರತೆ ಎಂದೋ ಅಥವಾ ಸೋಮಾರಿತಂವೆಂದೋ?

ಬಾಳಿಯವರು “ವಚನಗಳ ಜೀವಧ್ವನಿಯನ್ನು” ಹೇಗೆ ಗುರಿತಿಸುವುದು? ಎಂದು ತೋರಿಸಿಕೊಡದ ಹೊರತು ಅವರ ಆಕ್ಷೇಪಣೆಗೆ ಮಹತ್ವ ಬರುವುದೇ ಇಲ್ಲ. ವಚನಗಳು ಜಾತಿವಿರೋಧಿ ಎಂದು ಪರಿಗಣಿಸುವುದೇ “ವಚನಗಳ ಜೀವಧ್ವನಿ”ಯನ್ನು ಗುರುತಿಸುವುದು  ಎಂದು ಅವರು ಅಂದುಕೊಂಡಿದ್ದರೆ ಅದು ತಪ್ಪು. ೧೮-೧೯ನೆ ಶತಮಾನದಲ್ಲಿ ಆರಂಭವಾದ ಈ ಓದು ವಚನಗಳ ಜೀವಧ್ವನಿಯಲ್ಲ ಬದಲಿಗೆ ವಸಾಹತಶಾಹಿಯ ಧ್ವನಿ. ವಸಾಹತು ಬರಹಗಾರರು ಲಿಂಗಾಯತ ಸಂಪ್ರದಾಯದ ಕುರಿತು ಅದು ಜಾತಿ ವಿರೋಧಿ ಮತ್ತು ಆದ್ದರಿಂದ ಅದು ಪ್ರಗತಿಪರವಾದದ್ದು ಎಂದು ತೋರಿಸುವ ತನಕ ಬಸವನನ್ನು, ಅಲ್ಲಮನನ್ನು (ಹರಿಹರ, ಚಾಮರಸ ಮುಂತಾದ) ಭಾರತೀಯ ಚಿಂತಕರು ನೋಡಿದ್ದು ಕೇವಲ ಭಕ್ತ, ಆಧ್ಯಾತ್ಮ ಚಿಂತಕ ಎಂದು. ಇನ್ನು ನನ್ನ ಮಹಾಪ್ರಬಂಧದಲ್ಲಿ ಕಾವ್ಯ, ಪುರಾಣ, ಜಾನಪದ ಸಾಹಿತ್ಯರಾಶಿ ಎಲ್ಲವನೂ ಪರಾಮರ್ಶೆಗೆ ಒಳಪಡಿಸಿ, ಅಲ್ಲೆಲ್ಲೂ ವಚನಗಳನ್ನಾಗಲಿ, ಅವುಗಳ ಕರ್ತೃಗಳನ್ನಾಗಲಿ ಆಗಿನ ಚಿಂತಕರು ‘ಸಮಾಜ ಸುಧಾರಕರು’ ಎಂಬ ದೃಷ್ಟಿಯಿಂದ ನೋಡಿದ್ದೇ ಇಲ್ಲವೆಂದು ತೋರಿಸಿದ್ದೇನೆ. ಇದನ್ನು ಓದದೆ ಬಾಳಿಯವರು ಮಾಡುವ ಆಪಾದನೆ ಒಂದು ಬಾಲಿಶ ಪ್ರತಿಕ್ರಿಯೆ.

೨) ಹನ್ನೆರಡನೆ ಶತಮಾನದ ವಚನಕಾರರ ಎಲ್ಲ ವಚನಗಳು ಲಭ್ಯವಾಗಿಲ್ಲ  ಆದರಿಂದ ಸಿಕ್ಕಿರದ ಆ ವಚನಗಳು ಜಾತಿವಿರೋಧಿಯಾಗಿರಬಹುದಲ್ಲ? ಇದು ಬಾಳಿಯವರ ಮತ್ತೊಂದು ಆಕ್ಷೇಪಣೆ. ಇದೊಂದು ಹಾಸ್ಯಾಸ್ಪದವಾದ ಮಾತು. ಇದನ್ನು ಗಂಭೀರವಾಗಿ ಪರಿಗಣಿಸಿದರೆ, ನಾವು ಯಾವಾಗಲೂ ಸಿಕ್ಕಿರದ ಸಾಹಿತ್ಯದ ಹಿಂದೆ ಓಡುತ್ತಿರ ಬೇಕಾಗುತ್ತದೆಯೇ ಹೊರತು ಅಧ್ಯಯನದಲ್ಲಿ ತೊಡಗುವಂತಿಲ್ಲ. ನಮ್ಮ ಸಂಶೋಧನಾ ತಂಡದ ಶಿವ ಕುಮಾರರು ಈ ಆಕ್ಷೇಪಣೆಗೆ ಹೀಗೆ ಪ್ರತಿಕ್ರಿಯಿಸಿದ್ದರು: “ವಚನಗಳು ಕಳೆದು ಹೋಗಿವೆ ಇನ್ನೂ ಸಿಕ್ಕಿಲ್ಲ ಎನ್ನುವಾಗ ವಚನಗಳು ಜಾತಿ ವಿರೋಧಿ ಎನ್ನುತ್ತಿರುವುದು ಇರುವ ವಚನಗಳನ್ನು ಆಧರಿಸಿಯೇ ಅಲ್ಲವೇ? ಹಾಗೊಂದುವೇಳೆ ವಚನಗಳು ಸಿಕ್ಕಮೇಲೆ ವಾದವನ್ನು ಮಂಡಿಸಬೇಕು ಎನ್ನುವುದಾದರೆ! ವಚನಗಳು ಜಾತಿವಿರೋಧಿ ಎನ್ನುವವರಿಗೆ ಈ ನಿಲುವು ತಳೆಯಲು ಸಾಧ್ಯವೇ ಇಲ್ಲ. ನಾಳೆ ಯಾರಾದರೊಬ್ಬರು ಈ ಕೆಳಗಿನಂತೆ ಹೇಳಬಹದು: ಮುಂದಿನ ಶತಮಾನಗಳಲ್ಲಿ ಅಥವಾ ಇನ್ನೂ ಹಲವು ಶತಮಾನಗಳ ನಂತರ ವಚನಗಳ ಸೃಷ್ಟಿ ಆಗಬಹುದೇನೋ! ಬಾಳಿಯವರು ಹೇಳುವಂತೆ ಕಳೆದು ಹೋದ ವಚನಗಳ ಬಗ್ಗೆ ಕಾಳಜಿ ಬೇಕು ಎನ್ನುವುದಾದರೆ, ಮುಂದಿನ ಶತಮಾನದಲ್ಲಿ ಹುಟ್ಟುವ ವಚನಗಳ ಬಗೆಗೂ ಕಾಳಜಿ ಬೇಕೆ ಬೇಕು. ಅಲ್ಲವೇ!! ಅದಕ್ಕೇನು ಮಾಡುವುದು ಎಂದರೆ, ಅಲ್ಲಿಯವರೆಗೂ… ಸುಮ್ಮನೇ ಇರಬೇಕು. ಬಹುಶಃ ಇದನ್ನು ಸ್ವತಃ ಬಾಳಿಯವರು ಒಪ್ಪುವುದಿಲ್ಲವೇನೋ!”

೩) “ಆಧುನಿಕೋತ್ತರ ಚಿಂತಕರ ಕಣ್ಣೋಟದ ಮೂಲಕ ವಚನಗಳ ಪ್ರವೇಶ ಮಾಡಿದುದರ ಫಲವಾಗಿ” ನನ್ನಂಥವರು “ಇಂಥ ಅಪಸವ್ಯಗಳನ್ನು ಹುಟ್ಟು ಹಾಕುತ್ತಿದ್ದಾರೆ” ಎಂಬುದು ಬಾಳಿಯವರ ಮತ್ತೊಂದು ತಕರಾರು. ಇಲ್ಲಿ ‘ಆಧುನಿಕೋತ್ತರ’ ಚಿಂತನೆ ಎಂದು ಇವರು ಕರೆಯುತ್ತಿರುವುದು “ಭಾರತದಲ್ಲಿ ಜಾತಿವ್ಯವಸ್ಥೆಯು ಇರಲೇ ಇಲ್ಲ. [ಅದು] ವಸಾಹತುಶಾಹಿ ಚಿಂತಕರು ಈ ದೇಶವನ್ನು ಒಡೆದು ಆಳಲೆಂದೇ ಉತ್ಪಾದಿಸಲಾದ ಸಂಗತಿಯಾಗಿದೆ ಎಂಬ ವಾದವನ್ನು”. ಈ ಕುರಿತು ಹಲವು ವಿವರಣೆಗಳ ಅವಶ್ಯಕತೆ ಇದೆ. ಮೊದಲಿಗೆ, ಜಾತಿವ್ಯವಸ್ಥೆಯ ಕುರಿತು ನಮ್ಮ ತಂಡದವರಾರೂ ಈ ವಾದವನ್ನು ಎಂದೂ ಮಾಡಿಲ್ಲ. ಇದು post-structuralism ಚಿಂತನೆಯಿಂದ ಪ್ರೇರಿತರಾದ Nicholas Dirks, Bernard Chon ಮುಂತಾದ post-colonial ಚಿಂತಕರ ವಾದ. (ಬಾಳಿಯವರಿಗೆ ತಿಳಿದಿರಲಿಕ್ಕಿಲ್ಲ, ‘ಆಧುನಿಕೋತ್ತರ’ ಎಂಬ ಪದವನ್ನು ಕನ್ನಡದಲ್ಲಿ post-modern ಎಂಬ ಅಂಗ್ಲ ಪದದ ತರ್ಜುಮೆಯಾಗಿ ತೆಗೆದುಕೊಳ್ಳುವುದು ವಾಡಿಕೆ, post-structuralism ಪದದ ತರ್ಜುಮೆಯಾಗಿ ಅಲ್ಲ,) ಎರಡನೆಯದಾಗಿ, ಜಾತಿವ್ಯವಸ್ಥೆ ಕುರಿತ ನಮ್ಮ ವಾದದ ಪ್ರಕಾರ ಜಾತಿವ್ಯವಸ್ಥೆ ಎನ್ನುವುದು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಇನ್ನು ನಮ್ಮ ಈ ವಾದದ ಮೂಲಕ ವಚನಗಳನ್ನು ನೋಡಿದರೆ, ಅವು ಜಾತಿವ್ಯವಸ್ಥೆಯ ಕುರಿತು ಮಾತನಾಡುವುದಿಲ್ಲ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ ನಿಜ. ಆದರೆ ಇದು ಒಂದು ಸಂಶೋಧನೆಯ ನಿರ್ಣಯ. ಇದು ‘ಅಪಸವ್ಯ’  ಏಕೆ? ಹಾಗೆಂದರೇನು? ಮುಂತಾದ ಪ್ರಶ್ನೆಗಳಿಗೆ ಇವರು ಉತ್ತರ ಕೊಡದ ಹೊರತು, ಇದು ಕೇವಲ ಒಂದು ಬೈಗುಳವಾಗಿ ಉಳಿಯುತ್ತದೆ.

೪) ಬಾಳಿಯವರ ಮುಂದಿನ ಎರಡು ಹೇಳಿಕೆಗಳು ನನಗಿನ್ನು ಸರಿಯಾಗಿ ಅರ್ಥವಾಗಿಲ್ಲ. (a) “ಆಧುನಿಕ ಕಾಲಘಟ್ಟದ ವೀರಶೈವರೆಂಬ ಉಗ್ರ ಬಸವವಾದಿಗಳ ವಿದ್ಯಮಾನಗಳನ್ನು ಗಮನಿಸಿ ವಚನಕಾರರನ್ನು ಗ್ರಹಿಸುವ ಒತ್ತಡಕ್ಕೆ ಒಳಗಾಗಿಯೂ ಡಂಕಿನನಂಥವರು ಇಂಥ ನಿಲುವಿಗೆ ಬಂದಂತಿದೆ.” (b) “ಜೇಡರ ದಾಸಿಮಯ್ಯನಿಂದ ಹಿಡಿದು 19ನೇ ಶತಮಾನದ ಒಟ್ಟು ವಚನಕಾರರನ್ನು ಒಂದೇ ಮಾನದಂಡದಡಿಯಲ್ಲಿ ಗ್ರಹಿಸಿ ವಚನಕಾರರು ಜಾತಿವ್ಯವಸ್ಥೆಯ ವಿರೋಧಿಗಳಾಗಿರಲಿಲ್ಲ ಎಂಬ ತೀರ ಬಾಲಿಶವೆನಿಸಬಹುದಾದ ಅಭಿಪ್ರಾಯಕ್ಕೆ ಬಂದಂತಾಗಿದೆ. ಯಾವ ಕಾಲಕ್ಕಾದರೂ ಸಾಂಸ್ಕೃತಿಕ ರಾಜಕಾರಣದ ಉಪಕರಣದಂತಿರುವ ಸಾಹಿತ್ಯವನ್ನು ಅದು ನಿರ್ದಿಷ್ಟ ಹೋರಾಟದ ಫಲವಾಗಿ ಮೂಡಿ ಬಂದ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದ ಮಾದರಿ ತುಂಬಾ ಸಂಕೀರ್ಣವೂ ಮತ್ತು ಬಹುಮುಖಿ ನೆಲೆಯದ್ದೂ ಆಗಿರಬೇಕಾಗುತ್ತದೆ.” ಆಧುನಿಕ ಕಾಲಘಟ್ಟದ ವೀರಶೈವರೆಂಬ ಉಗ್ರ ಬಸವವಾದಿಗಳು ಎಂದರೆ ಯಾರು? ನಮ್ಮ ವಿರುದ್ಧ, ನಮ್ಮ ಲೇಖನವನ್ನೂ ಓದದೆ, ಟೀಕಾ ಪ್ರಹಾರ ಮಾಡಿರುವ ಬಾಳಿ, ಕಲ್ಬುರ್ಗಿ ಮುಂತಾದ ಬರಹಗಾರರನ್ನೇ ಇವರು ಹೀಗೆ ಕರೆದಿರಬಹುದೇ? ಬಾಳಿಯವರು ಹೇಳುವ ಅವರ ವಿದ್ಯಮಾನಗಳು ಯಾವುವು? ಅವುಗಳನ್ನು “ಗಮನಿಸಿ ವಚನಕಾರರನ್ನು ಗ್ರಹಿಸುವ ಒತ್ತಡಕ್ಕೆ ಒಳಗಾದರೆ” ನನ್ನ ನಿಲುವಿಗೆ ಹೇಗೆ ಬರಬಹುದು?

೫) “ಸಾಹಿತ್ಯದ ಸಂಶೋಧನೆ ಸಾಮ್ರೋಜ್ಯಶಾಹಿ ಬಿಂಬಿತ ಉತ್ಪಾದಿತ ಅಭಿಪ್ರಾಯಗಳ ಲೆಕ್ಕಾಚಾರದಂತಲ್ಲ” ಎನ್ನುತ್ತಾರೆ ಬಾಳಿಯವರು. ಮುಂದುವರೆದು “ಹೀಗಾಗಿಯೇ ವಚನಕಾರರನ್ನು ಕುರಿತು ಡಂಕಿನ್ ಅವರು ತೀರ ಅಸಂಬದ್ಧ ನಿಲುವಿಗೆ ಬರುವುದರ ಮೂಲಕ ಅನಾರೋಗ್ಯಕರ ಮತ್ತು ಅನರ್ಥಕಾರಿ ವಿವಾದಗಳಿಗೆ ಎಡೆ ಮಾಡಿಕೊಟ್ಟಿರುತ್ತಾರೆ. ಹೀಗೆಂದು ವಚನಕಾರರು ಪ್ರಶ್ನಾತೀತರಂತಲ್ಲ. ಅವರು ಸಾರ್ವಕಾಲಿಕ ಬದುಕಿನ ಸಮಗ್ರ ಆಯಾಮಗಳನ್ನು ಕುರಿತು ಮಾತನಾಡಿದ್ದಾರೆ ಎಂದೂ ಅಲ್ಲ. ಜಾತಿವ್ಯವಸ್ಥೆಯ ಉತ್ಪಾದಿತ ಶೋಷಣೆ ಕುರಿತು ವಚನಕಾರರ ಪೂರ್ವದಲ್ಲಿ ಯಾರೂ ಪ್ರತಿಭಟಿಸಿರಲಿಲ್ಲ ಎಂದೂ ಅಲ್ಲ. ಹಾಗೆ ನೋಡಿದರೆ ಲೋಕಾಯತ ಬೌದ್ಧ ಜೈನ ಮುಂತಾದ ದಾರ್ಶನಿಕ ಧಾರೆಗಳು ವೈದಿಕ ವರ್ಣಾಶ್ರಮ ಜಾತಿವ್ಯವಸ್ಥೆ ಕುರಿತು ತಾತ್ವಿಕ ಸಂಘರ್ಷಕ್ಕೆ ಇಳಿದದ್ದು ಇದೆ. ಆದ್ದರಿಂದಲೇ ವಚನಕಾರರನ್ನು ಕುರಿತು ಈ ಹೊತ್ತು ಬಹುಮುಖಿ ನೆಲೆಯಲ್ಲಿ ಅಧ್ಯಯನಿಸಬೇಕಾದ ಜರೂರಿ ಇದ್ದೇ ಇದೆ. ನಮ್ಮ ಕಾಲದ ವಾಗ್ವಾದಗಳೊಂದಿಗೆ ವಚನಕಾರರನ್ನು ಮುಖಾಮುಖಿಯಾಗಿಸಬೇಕಾದ ತುರ್ತು ಇದೆ. ಎಲ್ಲ ಬಗೆಯ ವಾಗ್ವಾದ ನಡೆಸಬಹುದಾದ ಬಹುದೊಡ್ಡ ಸ್ಪೇಸ್ ಅವಕಾಶ ವಚನಗಳಲ್ಲಿದೆ. ಜಾತಿ ವ್ಯವಸ್ಥೆಯನ್ನು ಕುರಿತು ಮೇಲ್ವರ್ಗದ ವಚನಕಾರರ ಗ್ರಹಿಕೆಗೂ ಕೆಳವರ್ಗದಿಂದ ಬಂದ ವಚನಕಾರರ ಗ್ರಹಿಕೆಗೂ ಸಕಾರಣವಾಗಿಯೇ ಭಿನ್ನತೆ ಇದೆ. ಅಂತೆಯೇ ಒಟ್ಟು ವಚನಕಾರರ ಆಶಯ, ಉದ್ದೇಶ, ದೃಷ್ಟಿ, ಧೋರಣೆ ದರ್ದುಗಳಲ್ಲಿ ಬಸವಯುಗದ ವಚನಕಾರರಿಗೂ ಬಸವೋತ್ತರ ಯುಗದ ವಚನಕಾರರಿಗೂ ತೀವ್ರ ಸೈದ್ಧಾಂತಿಕ ಭಿನ್ನತೆಗಳಿವೆ.” ಇಷ್ಟು ಉದ್ದದ ಈ ಮಾತಿನ ಸರಮಾಲೆಯಲ್ಲಿ ಬಾಳಿಯವರು ಪ್ರತಿಕ್ರಿಯೆ ನೀಡಬಲ್ಲ ಒಂದು ವಿಚಾರವನ್ನೂ ಹೇಳುವುದಿಲ್ಲ. ಇದಕ್ಕೆ ಮರಳಿ ಬಯ್ಯುವುದನ್ನು ಬಿಟ್ಟು ಹೇಗೆ ಪ್ರತಿಕ್ರಿಯಿಸುವುದು?

೬) “ಒಟ್ಟು ವಚನಕಾರರನ್ನು ಒಂದೇ ಮಾನದಂಡಗಳಡಿಯಲ್ಲಿ ಅಳೆಯ ಹೊರಟಿರುವುದು ತುಂಬ ಅಪಾಯಕಾರಿ ನಿಲುವು” ಎನ್ನುತ್ತಾ ಬಾಳಿಯವರು ಹೇಳುತ್ತಾರೆ “ಬಸವಯುಗದ ವಚನಕಾರರ ನಿಲುವಿಗೂ ಬಸವೋತ್ತರ ವಚನಕಾರರ ನಿಲುವಿಗೂ ಅಜಗಜಾಂತರ ವ್ಯವತ್ಯಾಸವಿದೆ ಎಂಬ ಕನಿಷ್ಠ ಪ್ರಜ್ಞೆಯೂ ಇವರಿಗಿದ್ದಂತಿಲ್ಲ.” ಆಶ್ಚರ್ಯವೆಂದರೆ ಇಂದಿನ ವಚನ ಚಿಂತಕರು ‘ವಚನಗಳು ಜಾತಿ ವಿರೋಧಿ ಸಾಹಿತ್ಯ’ ಎಂದು ಘೋಷಿಸುವಾಗ ವಚನಗಳನ್ನು ಬಸವ ಪೂರ್ವ, ಬಸವಕಾಲದ, ಬಸವೋತ್ತರ ಎಂದು ವಿಂಗಡಿಸಿಕೊಂಡು ಮಾತನಾಡುವುದಿಲ್ಲ ಎಂಬುದು ಬಾಳಿಯವರು ಮರೆತಿದ್ದಾರೆ. ಉದಾಹರಣೆಗೆ, ಡಿ.ಆರ್. ನಾಗರಾಜರು, ತಮ್ಮ ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ (1999: 181) ಕೃತಿಯಲ್ಲಿ “ಜಾತಿವಿರೋಧಿ ತಾತ್ವಿಕತೆಯೆನ್ನುವುದು ವಚನ ಚಳುವಳಿಯ ಮೂಲ ನಿಲುವು” ಎಂದು ಹೇಳುವಾಗ ಅಥವಾ ಕಲಬುರ್ಗಿಯವರ ಹೇಳುವ ಈ ಮಾತುಗಳ ಹಿಂದೆ (ಉದಾ: ಶರಣರು ಸಾಹಿತ್ಯವನ್ನು ಈ ವರ್ಣಬೇಧದ ನಿರ್ಮೂಲನೆಗೆ ಮಾಧ್ಯಮವಾಗಿ ಬಳಸಿಕೊಂಡರು. ಇದರ ಫಲವಾಗಿ ಸೃಷ್ಟಿಯಾದ ವಚನ ಸಾಹಿತ್ಯದ ಮೂಲಕ ‘ವರ್ಣಬೇಧ ನಿರ್ಮೂಲನ ಆಂದೋಲನ’ ತುಂಬಾ ಪ್ರಚಾರ ಪಡೆಯಿತು [ಮಾರ್ಗ 1 1988: 283]) ಬಾಳಿಯವರು ಹೇಳುವ ರೀತಿಯ ವಚನಗಳ ವಿಂಗಡಣೆ ಇದೆಯೇ? ಇಲ್ಲ. ಅಂದಮೇಲೆ, ಅವರ ಈ ಹೇಳಿಕೆಗಳನ್ನು ವಿಮರ್ಶಿಸುತ್ತಾ ನಾವು ಮಂಡಿಸುವ ವಿಚಾರಗಳು ಮಾತ್ರ ಬಸವಯುಗ-ಬಸವೋತ್ತರ ಯುಗ ಎಂಬ ವ್ಯವತ್ಯಾಸವನ್ನು ಏಕೆ ಪರಿಗಣಿಸಬೇಕು? ಇದು ಬಾಳಿಯವರ ಜಾಣ ಕುರುಡೋ ಅಥವಾ ಅಜ್ಞಾನವೋ?

೭) “ಬಸವಾದಿ ಶರಣರ ಕಾಲಘಟ್ಟವು ತನ್ನ ಜಾತಿವಿರೋಧಿ ನಿಲುವಿನಿಂದಾಗಿಯೇ ಗಮನ ಸೆಳೆಯುತ್ತದೆ. …  ಜಾತಿವ್ಯವಸ್ಥೆಯ ತಾಯಿ ಬೇರಾದ ಕರ್ಮಸಿದ್ಧಾಂತದ ವಿರುದ್ಧ ತಾತ್ವಿಕ ಸಂಘರ್ಷಕ್ಕಿಳಿದದ್ದು ಸಾವಿರಾರು ವಚನಗಳಲ್ಲಿ ನಿಚ್ಚಳವಾಗಿ ಕಾಣಿಸಿಕೊಂಡಿದೆ.” ಪ್ರಚಲಿತದಲ್ಲಿರುವ ಈ ಅಭಿಪ್ರಾಯಗಳನ್ನೇ ನಾವು ನಮ್ಮ ಸಂಶೋಧನೆಯಲ್ಲಿ ಪ್ರಶ್ನಿಸಿರುವುದು. ಅಂದಮೇಲೆ ನಮ್ಮ ವಾದಗಳನ್ನು ನಿರಾಕರಿಸಲು ಹೊರಟವರು ತಮ್ಮ ಅದೇ ಹಳೆಯ ವಿಚಾರಗಳನ್ನು ಮರಳಿ ಮಂಡಿಸಲು ಆಗುವುದಿಲ್ಲ. ಹಾಗೆ ಮಾಡಿದರೆ ಚರ್ಚೆ ಮುಂದೆ ಹೋಗುವುದೇ ಇಲ್ಲ. ಬಾಳಿಯವರು ನಮ್ಮ ವಾದಕ್ಕೆ ಉತ್ತರ ಕೊಡಬೇಕಾದರೆ ಯಾವ ಮತ್ತು ಎಷ್ಟು ವಚನಗಳಲ್ಲಿ ಜಾತಿವಿರೋಧಿ ವಿಚಾರ ಬರುತ್ತದೆ ಎಂದು ತೋರಿಸಬೇಕಾಗುತ್ತದೆ. ಅದನ್ನು ಬಿಟ್ಟು ಅವರು, “ನೇರವಾಗಿ ಜಾತಿ ವಿರೋಧಿ ನಿಲುವು ಸಂಖ್ಯಾತ್ಮಕವಾಗಿ ಎಷ್ಟು ವಚನಗಳಲ್ಲಿ ಹೇಳಲ್ಪಟ್ಟಿದೆ ಎಂಬುದು ಮುಖ್ಯವಲ್ಲ. ಎಷ್ಟು ಪ್ರಖರವಾಗಿ ಈ ವಿಷಯ ಪ್ರಸ್ತಾಪಿಸಲ್ಪಟ್ಟಿದೆ ಎಂಬುದೇ ಮುಖ್ಯ” ಎಂದು ಹೇಳಿ ಜಾರಿಕೊಳ್ಳುತ್ತಾರೆ. ಹೀಗೆ ಜಾರಿಕೊಳ್ಳಲು ಅವರು ಬಳಸುವ ಮತ್ತೊಂದು ಮಾರ್ಗವೆಂದರೆ “ಜಾತಿ ಎಂಬ ಶಬ್ದ ಬಳಸದೆಯೂ ಜಾತಿ ವ್ಯವಸ್ಥೆಯನ್ನು” ವಚನಕಾರರು ಖಂಡಿಸಿದ್ದಾರೆ ಎನ್ನುವ ಮೂಲಕ. ಪದಗಳಲ್ಲೇ ಬರದ ಈ ಜಾತಿವಿರೋಧಿ ವಿಚಾರವನ್ನು ನಾವು ತಿಳಿದುಕೊಳ್ಳುವುದು ಹೇಗೆ? ಹಾಗೆ ತಿಳಿದುಕೊಂಡದ್ದನ್ನು ಸರಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ ನೋಡುವುದು ಹೇಗೆ? ಇಲ್ಲಿ ಮುಖ್ಯವಿಚಾರವೆಂದರೆ ವಚನಗಳಲ್ಲಿ ನೆರವಾಗಿ ಜಾತಿವಿಚಾರ ಬರುವುದಿಲ್ಲ ಎಂದು ಬಾಳಿಯವರೇ ಒಪ್ಪಿಕೊಳ್ಳುತ್ತಾರೆ.

* ಡಾ.ಎಂ.ಎಂ ಕಲ್ಬುರ್ಗಿ


ಇತ್ತೀಚೆಗೆ, ಸಾಹಿತ್ಯದ `ಮರು ಓದು' ಹವ್ಯಾಸ ವಿದ್ವಾಂಸರಲ್ಲಿ ಬೆಳೆಯುತ್ತಲಿದೆ. ಇದು ಸ್ವಾಗತಾರ್ಹವಾದರೂ, ಈ ವರೆಗೆ ವಿದ್ವಾಂಸರು ಮಂಡಿಸಿರುವ ನಿಜನಿರ್ಣಯಗಳನ್ನು ಪ್ರಶ್ನಿಸುವ ವಿತಂಡವಾದಗಳು ಕೆಲವರಿಂದ ಆಗಾಗ ವ್ಯಕ್ತವಾಗುತ್ತಲಿವೆ. ಇವುಗಳಲ್ಲಿ ಬಾಲಗಂಗಾಧರ, ಡಂಕಿನ್ ಝಳಕಿ ಮತ್ತು ರಾಜಾರಾಮ್ ಹೆಗಡೆಯವರು ಮಂಡಿಸಿದ, ವಚನಸಾಹಿತ್ಯ ವೈದಿಕ ವಿರೋಧಿ ಅಲ್ಲ; ವಚನ ಸಾಹಿತ್ಯದಲ್ಲಿ ಜಾತಿ ವಿರೋಧಿ ನಿಲುವು ಕಂಡುಬರುವುದಿಲ್ಲ -ಎಂಬ ಎರಡು ಪ್ರಶ್ನೆಗಳು ಮುಖ್ಯವಾಗಿವೆ. ಇದು ಶರಣ ಚಳವಳಿಯ ಮೂಲ ಉದ್ದೇಶವನ್ನೇ  ಸ್ಫೋಟಿಸುವ ತಂತ್ರದ ಹಾಗೆ ಕಾಣುತ್ತದೆ.

ಇವರು ಹೀಗೆ ಹೇಳಲು ಎರಡು ಕಾರಣಗಳಿರಬಹುದು. ಒಂದು ವಚನಸಾಹಿತ್ಯದ ಸರಿಯಾದ ಸಿದ್ಧಾಂತ ಗೊತ್ತಿಲ್ಲದಿರುವುದು. ಎರಡು: ಗೊತ್ತಿದ್ದೂ ಯಾವುದೋ ಪೂರ್ವಗ್ರಹ ಪೀಡಿತರಾಗಿರುವುದು. ಬಹುಶಃ ಇವರಲ್ಲಿ ಈ ಎರಡೂ ಇರುವಂತೆ ತೋರುತ್ತದೆ.

18 March 2013

ಆಧುನಿಕೋತ್ತರ ವಾದದ ಅಪಸವ್ಯ

* ಡಾ.ಮೀನಾಕ್ಷಿ ಬಾಳಿ 

ಎಚ್. ಎಸ್. ಶಿವಪ್ರಕಾಶ ಅವರು `ಪ್ರಜಾವಾಣಿ'(ಮಾ.15)ಯಲ್ಲಿ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ವಿದ್ವಾಂಸರು ಇತ್ತೀಚೆಗೆ `ವಚನಕಾರರ ಜಾತಿ ವಿರೋಧಿ ನಿಲುವು' ಕುರಿತು ಬರೆದ ಲೇಖನಕ್ಕೆ ಸ್ಪಂದಿಸಿದ್ದು ಸಕಾಲಿಕ ಮತ್ತು ಸ್ವಾಗತಾರ್ಹ. ಉಭಯರು ವಚನಕಾರರ ಕುರಿತು ವ್ಯಕ್ತಪಡಿಸಿದ ಅನುಮಾನಗಳಿಗೆ ಮತ್ತು ಅವರು ತಲುಪಿದ ಹಸಿ ಹಸಿ ನಿರ್ಣಯಗಳಿಗೆ ಶಿವಪ್ರಕಾಶರು ಸೂಕ್ತವಾದ ತಾತ್ವಿಕ ಉತ್ತರ ನೀಡಿದ್ದಾರೆ. ಕೊನೆಯಲ್ಲಿ ಮಾತ್ರ ಡಂಕಿನ ಮತ್ತು ಅವರ ಸಂಶೋಧನಾ ತಂಡವು ವಚನಕಾರರ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಷರಾ ಬರೆದಿರುವುದು ಅಷ್ಟೇನು ಸಮಂಜಸವಲ್ಲ.

ಡಂಕಿನ್ ಅವರ ವಾದದಲ್ಲಿ ಯಾವುದೇ ಹೊಸ ಚಿಂತನೆಯಾಗಲಿ ಅಥವ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲ. ಏಕೆಂದರೆ ಡಂಕಿನ್ ಅವರು ಪೂರ್ವಗ್ರಹ ಪೀಡಿತ ನಿಲುವಿನೊಂದಿಗೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಅಸಂಬದ್ಧ ತರ್ಕವಾಗಿದೆ (ಕೃತಿ ಭಾರದಲ್ಲಿ ಜಾತಿವ್ಯವಸ್ಥೆ ಇದೆಯೇ ಪುಟ 103) ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಈ ನಿಲುವಿಗೆ ಬರಲು ಬಳಸಿಕೊಂಡ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ.

ಈವರೆಗೆ ಪ್ರಕಟವಾದ ಒಟ್ಟು 21788 ವಚನಗಳಲ್ಲಿ ಜಾತಿ ಅಥವಾ ಕುಲವೆಂಬ ಶಬ್ದ ಬಳಕೆಯಾದ ವಚನಗಳ ಸಂಖ್ಯೆ ಕೇವಲ 72 ಮಾತ್ರ. ಇದು ಶೇಕಡಾವಾರು 0.35ರಷ್ಟಾಗುತ್ತದೆ. ಆದ್ದರಿಂದ ಈ ವಿರಳ ಶಬ್ದ ಪ್ರಯೋಗವೇ ವಚನಕಾರರು ಜಾತಿ ವಿರೋಧಿ ಹೋರಾಟಗಾರರಾಗಿರಲಿಲ್ಲ. ಅಷ್ಟಕ್ಕೂ ವಚನಕಾರರು `ಜಾತಿವಿರೋಧಿ'ಗಳಾಗಿದ್ದರು ಎಂಬ ಅಭಿಪ್ರಾಯವು ಆಧುನಿಕ ಸಂದರ್ಭದಲ್ಲಿ ವೀರಶೈವರು ವಸಾಹತುಶಾಹಿ ಪಾಶ್ಚಾತ್ಯ ಚಿಂತಕರ ಪ್ರಭಾವದಿಂದಾಗಿ ಕಟ್ಟಿಕೊಂಡ ಪ್ರಮೇಯವಾಗಿದೆ ಎಂದು ವಾದಿಸುತ್ತಾರೆ.

ಶಬ್ದ ಬಳಕೆಯ ಲೆಕ್ಕ ಗಣಿಸುವುದನ್ನು ಬಿಟ್ಟರೆ ಡಂಕಿನ್ ಅವರು ಒಟ್ಟು ವಚನಗಳ ಜೀವಧ್ವನಿಯನ್ನಾಗಲಿ ವಚನಕಾರರ ಬದುಕಿನ ಸಂಘರ್ಷವನ್ನಾಗಲಿ ವಚನಕಾರರ ನಂತರ ಅವರ ಬದುಕು ಕುರಿತು ರಚನೆಯಾದ ಕಾವ್ಯ ಪುರಾಣಗಳು ಶಾಸನಗಳು ಜಾನಪದ ಸಾಹಿತ್ಯರಾಶಿ ಅನುಭಾವ ಪರಂಪರೆಯ ವೈವಿಧ್ಯಮಯ ಚಿಂತನಾ ಧಾರೆಯನ್ನಾಗಲಿ ಕೆಳ ಜಾತಿ ಕೆಳವರ್ಗದ ಸಾಂಸ್ಕೃತಿಕ ನಾಯಕರು ತಮ್ಮನ್ನು ವಚನಕಾರರೊಂದಿಗೆ ಸಮೀಕರಿಸಿಕೊಂಡು ಬರುತ್ತಿರುವ ಸಂಗತಿಯನ್ನಾಗಲಿ ಪರಾಮರ್ಶೆಗೆ ಒಳಪಡಿಸದೆ ದಿಢೀರ್ ನಿರ್ಣಯಕ್ಕೆ ಬರುತ್ತಾರೆ. ಇದು ಬಹುಮುಖಿ ನೆಲೆಯ ಸಂಶೋಧನಾ ಅಧ್ಯಯನದ ಶಿಸ್ತಿಗೆ ಅಪಚಾರ ಮಾಡಿದಂತಾಗಿದೆ.

ವಚನಗಳು ವಚನಕಾರರ ಬದುಕಿನ ಬಗೆಗಿನ ಮೂಲ ಸಾಮಗ್ರಿಯೇನೋ ಹೌದು. ಆದರೆ ಹನ್ನೆರಡನೆ ಶತಮಾನದ ವಚನಕಾರರ ಎಲ್ಲ ವಚನಗಳು ಲಭ್ಯವಾಗಿವೆಯಂತೇನೂ ಇಲ್ಲ. ಕೆಲವೊಂದು ವಚನಕಾರರ ಒಂದೊಂದು ವಚನಗಳು ಮಾತ್ರ ದೊರೆತಿರುವಲ್ಲಿಯೇ ಅವರ ಕಳೆದುಹೋಗಿರಬಹುದಾದ ವಚನಗಳತ್ತಲೂ ಕುತೂಹಲ ಮೂಡದೇ ಇರದು. ಹೀಗಾಗಿ ಮುಖ್ಯ ಪಠ್ಯಗಳೊಂದಿಗೆ ಪೂರಕ ಸಾಮಗ್ರಿಗಳು ಕೂಡ ಯಾವುದೇ ಒಂದು ನಿಲುವಿಗೆ ಬರಲು ಅಷ್ಟೇ ಮುಖ್ಯವಾಗುತ್ತವೆ. ಸಂಶೋಧನಾಧ್ಯಯನವು ಬಹುಮುಖಿ ನೆಲೆಯಲ್ಲಿ ವಿಸ್ತೃತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಯಾವುದೇ ಒಂದು ಮೂಲಸಾಮಗ್ರಿಯನ್ನಿಟ್ಟುಕೊಂಡು ನಿರ್ಣಯಕ್ಕೆ ಬರುವುದು ಸಲ್ಲ.

ಬಹಳ ಮುಖ್ಯವಾದ ಸಂಗತಿಯೆಂದರೆ ಭಾರತದಲ್ಲಿ ಜಾತಿವ್ಯವಸ್ಥೆಯು ಇರಲೇ ಇಲ್ಲ. ವಸಾಹತುಶಾಹಿ ಚಿಂತಕರು ಈ ದೇಶವನ್ನು ಒಡೆದು ಆಳಲೆಂದೇ ಉತ್ಪಾದಿಸಲಾದ ಸಂಗತಿಯಾಗಿದೆ ಎಂಬ ವಾದವನ್ನು ಹುಟ್ಟು ಹಾಕುತ್ತಿರುವ ಆಧುನಿಕೋತ್ತರ ಚಿಂತಕರ ಕಣ್ಣೋಟದ ಮೂಲಕ ವಚನಗಳ ಪ್ರವೇಶ ಮಾಡಿದುದರ ಫಲವಾಗಿ ಡಂಕಿನ್ ಅಂಥವರು ಇಂಥ ಅಪಸವ್ಯಗಳನ್ನು ಹುಟ್ಟು ಹಾಕುತ್ತಿದ್ದಾರೆ.

ಎರಡನೆಯದಾಗಿ ಆಧುನಿಕ ಕಾಲಘಟ್ಟದ ವೀರಶೈವರೆಂಬ ಉಗ್ರ ಬಸವವಾದಿಗಳ ವಿದ್ಯಮಾನಗಳನ್ನು ಗಮನಿಸಿ ವಚನಕಾರರನ್ನು ಗ್ರಹಿಸುವ ಒತ್ತಡಕ್ಕೆ ಒಳಗಾಗಿಯೂ ಡಂಕಿನನಂಥವರು ಇಂಥ ನಿಲುವಿಗೆ ಬಂದಂತಿದೆ. ಮೂರನೆಯದಾಗಿ ಜೇಡರ ದಾಸಿಮಯ್ಯನಿಂದ ಹಿಡಿದು 19ನೇ ಶತಮಾನದ ಒಟ್ಟು ವಚನಕಾರರನ್ನು ಒಂದೇ ಮಾನದಂಡದಡಿಯಲ್ಲಿ ಗ್ರಹಿಸಿ ವಚನಕಾರರು ಜಾತಿವ್ಯವಸ್ಥೆಯ ವಿರೋಧಿಗಳಾಗಿರಲಿಲ್ಲ ಎಂಬ ತೀರ ಬಾಲಿಶವೆನಿಸಬಹುದಾದ ಅಭಿಪ್ರಾಯಕ್ಕೆ ಬಂದಂತಾಗಿದೆ. ಯಾವ ಕಾಲಕ್ಕಾದರೂ ಸಾಂಸ್ಕೃತಿಕ ರಾಜಕಾರಣದ ಉಪಕರಣದಂತಿರುವ ಸಾಹಿತ್ಯವನ್ನು ಅದು ನಿರ್ದಿಷ್ಟ ಹೋರಾಟದ ಫಲವಾಗಿ ಮೂಡಿ ಬಂದ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದ ಮಾದರಿ ತುಂಬಾ ಸಂಕೀರ್ಣವೂ ಮತ್ತು ಬಹುಮುಖಿ ನೆಲೆಯದ್ದೂ ಆಗಿರಬೇಕಾಗುತ್ತದೆ.

ಸಾಹಿತ್ಯದ ಸಂಶೋಧನೆ ಸಾಮ್ರೋಜ್ಯಶಾಹಿ ಬಿಂಬಿತ ಉತ್ಪಾದಿತ ಅಭಿಪ್ರಾಯಗಳ ಲೆಕ್ಕಾಚಾರದಂತಲ್ಲ. ಹೀಗಾಗಿಯೇ ವಚನಕಾರರನ್ನು ಕುರಿತು ಡಂಕಿನ್ ಅವರು ತೀರ ಅಸಂಬದ್ಧ ನಿಲುವಿಗೆ ಬರುವುದರ ಮೂಲಕ ಅನಾರೋಗ್ಯಕರ ಮತ್ತು ಅನರ್ಥಕಾರಿ ವಿವಾದಗಳಿಗೆ ಎಡೆ ಮಾಡಿಕೊಟ್ಟಿರುತ್ತಾರೆ. ಹೀಗೆಂದು ವಚನಕಾರರು ಪ್ರಶ್ನಾತೀತರಂತಲ್ಲ. ಅವರು ಸಾರ್ವಕಾಲಿಕ ಬದುಕಿನ ಸಮಗ್ರ ಆಯಾಮಗಳನ್ನು ಕುರಿತು ಮಾತನಾಡಿದ್ದಾರೆ ಎಂದೂ ಅಲ್ಲ. ಜಾತಿವ್ಯವಸ್ಥೆಯ ಉತ್ಪಾದಿತ ಶೋಷಣೆ ಕುರಿತು ವಚನಕಾರರ ಪೂರ್ವದಲ್ಲಿ ಯಾರೂ ಪ್ರತಿಭಟಿಸಿರಲಿಲ್ಲ ಎಂದೂ ಅಲ್ಲ. ಹಾಗೆ ನೋಡಿದರೆ ಲೋಕಾಯತ ಬೌದ್ಧ ಜೈನ ಮುಂತಾದ ದಾರ್ಶನಿಕ ಧಾರೆಗಳು ವೈದಿಕ ವರ್ಣಾಶ್ರಮ ಜಾತಿವ್ಯವಸ್ಥೆ ಕುರಿತು ತಾತ್ವಿಕ ಸಂಘರ್ಷಕ್ಕೆ ಇಳಿದದ್ದು ಇದೆ. ಆದ್ದರಿಂದಲೇ ವಚನಕಾರರನ್ನು ಕುರಿತು ಈ ಹೊತ್ತು ಬಹುಮುಖಿ ನೆಲೆಯಲ್ಲಿ ಅಧ್ಯಯನಿಸಬೇಕಾದ ಜರೂರಿ ಇದ್ದೇ ಇದೆ.

ನಮ್ಮ ಕಾಲದ ವಾಗ್ವಾದಗಳೊಂದಿಗೆ ವಚನಕಾರರನ್ನು ಮುಖಾಮುಖಿಯಾಗಿಸಬೇಕಾದ ತುರ್ತು ಇದೆ. ಎಲ್ಲ ಬಗೆಯ ವಾಗ್ವಾದ ನಡೆಸಬಹುದಾದ ಬಹುದೊಡ್ಡ ಸ್ಪೇಸ್ ಅವಕಾಶ ವಚನಗಳಲ್ಲಿದೆ. ಜಾತಿ ವ್ಯವಸ್ಥೆಯನ್ನು ಕುರಿತು ಮೇಲ್ವರ್ಗದ ವಚನಕಾರರ ಗ್ರಹಿಕೆಗೂ ಕೆಳವರ್ಗದಿಂದ ಬಂದ ವಚನಕಾರರ ಗ್ರಹಿಕೆಗೂ ಸಕಾರಣವಾಗಿಯೇ ಭಿನ್ನತೆ ಇದೆ. ಅಂತೆಯೇ ಒಟ್ಟು ವಚನಕಾರರ ಆಶಯ, ಉದ್ದೇಶ, ದೃಷ್ಟಿ, ಧೋರಣೆ ದರ್ದುಗಳಲ್ಲಿ ಬಸವಯುಗದ ವಚನಕಾರರಿಗೂ ಬಸವೋತ್ತರ ಯುಗದ ವಚನಕಾರರಿಗೂ ತೀವ್ರ ಸೈದ್ಧಾಂತಿಕ ಭಿನ್ನತೆಗಳಿವೆ.

ಆಯಾ ಕಾಲಘಟ್ಟದ ಒತ್ತಡಗಳಿಗೆ ಈ ಯಾವುದನ್ನೂ ಪರಾಮರ್ಶಿಸದ ಡಂಕಿನ ಅವರು ಒಟ್ಟು ವಚನಕಾರರನ್ನು ಒಂದೇ ಮಾನದಂಡಗಳಡಿಯಲ್ಲಿ ಅಳೆಯ ಹೊರಟಿರುವುದು ತುಂಬ ಅಪಾಯಕಾರಿ ನಿಲುವು ಆಗಿದೆ. ಅವರು ನೀಡಿದ ವಚನಗಳ ಒಟ್ಟು ಸಂಖ್ಯೆಯಲ್ಲಿ ಸುಮಾರು ಏಳು ಸಾವಿರದಷ್ಟು ವಚನಗಳು ಬಸವೋತ್ತರ ವಚನಕಾರರಿಂದ ವಚಿಸಲ್ಪಟ್ಟಿವೆ.

ಬಸವಯುಗದ ವಚನಕಾರರ ನಿಲುವಿಗೂ ಬಸವೋತ್ತರ ವಚನಕಾರರ ನಿಲುವಿಗೂ ಅಜಗಜಾಂತರ ವ್ಯವತ್ಯಾಸವಿದೆ ಎಂಬ ಕನಿಷ್ಠ ಪ್ರಜ್ಞೆಯೂ ಇವರಿಗಿದ್ದಂತಿಲ್ಲ. ಹಾಗೆ ನೋಡಿದರೆ ವಚನ ಚಳವಳಿಯು ನಿರ್ದಿಷ್ಟ ಕಾಲಘಟ್ಟಲ್ಲಿ ಸಂಭವಿಸಿದ ಘಟನೆ ಮಾತ್ರವಲ್ಲ. ಅದು ಜೇಡರ ದಾಸಿಮಯ್ಯಗಳ ಹಿಡಿದು ಬಸವಯುಗ, ಬಸವೋತ್ತರ ಯುಗ ಮತ್ತು ಈ ಕ್ಷಣದವರೆಗೂ ನಡೆದುಕೊಂಡು ಬರುತ್ತಿರುವ ಪ್ರಕ್ರಿಯಾತ್ಮಕ ಪರಂಪರೆಯಾಗಿದೆ.

ಈ ಪರಂಪರೆಯಲ್ಲಿ ಬಸವಾದಿ ಶರಣರ ಕಾಲಘಟ್ಟವು ತನ್ನ ಜಾತಿವಿರೋಧಿ ನಿಲುವಿನಿಂದಾಗಿಯೇ ಗಮನ ಸೆಳೆಯುತ್ತದೆ. ಇಲ್ಲಿ ಬಸವ ಅಕ್ಕಮಹಾದೇವಿ, ಚನ್ನಬಸವಣ್ಣರಂಥ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಅಲಕ್ಷಿತ ತಳಸಮುದಾಯದ ಕಾಯಕಜೀವಿಗಳಾಗಿದ್ದರು. ಇವರು ತಮ್ಮ ಸೀಮಿತ ನೆಲೆಯಲ್ಲಿಯೇ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದಲ್ಲದೆ ಜಾತಿವ್ಯವಸ್ಥೆಯ ತಾಯಿ ಬೇರಾದ ಕರ್ಮಸಿದ್ಧಾಂತದ ವಿರುದ್ಧ ತಾತ್ವಿಕ ಸಂಘರ್ಷಕ್ಕಿಳಿದದ್ದು ಸಾವಿರಾರು ವಚನಗಳಲ್ಲಿ ನಿಚ್ಚಳವಾಗಿ ಕಾಣಿಸಿಕೊಂಡಿದೆ. ನೇರವಾಗಿ ಜಾತಿ ವಿರೋಧಿ ನಿಲುವು ಸಂಖ್ಯಾತ್ಮಕವಾಗಿ ಎಷ್ಟು ವಚನಗಳಲ್ಲಿ ಹೇಳಲ್ಪಟ್ಟಿದೆ ಎಂಬುದು ಮುಖ್ಯವಲ್ಲ. ಎಷ್ಟು ಪ್ರಖರವಾಗಿ ಈ ವಿಷಯ ಪ್ರಸ್ತಾಪಿಸಲ್ಪಟ್ಟಿದೆ ಎಂಬುದೇ ಮುಖ್ಯ.

ಭಾರತದಲ್ಲಿ ಜಾತಿವ್ಯವಸ್ಥೆ ಒಂದು ಸಂಪ್ರದಾಯ ಮಾತ್ರವಲ್ಲ. ಅದು ವೈದಿಕ ಧರ್ಮ ಬಿಂಬಿಸಿದ ತತ್ವಶಾಸ್ತ್ರವಾಗಿದೆ. ಈ ತತ್ವವನ್ನು ಸ್ಥಾಯಿಗೊಳಿಸಲೆಂದೇ ದೇವರು ಧರ್ಮ, ಪಾಪ-ಪುಣ್ಯ, ಸ್ವರ್ಗ-ನರಕ, ಪುನರ್ಜನ್ಮ, ಮುಂತಾದ ಪರಿಕಲ್ಪನೆಗಳನ್ನು ಹುಟ್ಟು ಹಾಕಲಾಗಿತ್ತು. ಈ ವ್ಯವಸ್ಥೆಯು ದೈವೀಕೃತವೆಂದು ನಂಬಿಸಲಿಕ್ಕಾಗಿಯೇ ವಿವಿಧ ಸಂಪ್ರದಾಯ ಆಚರಣೆ, ಆಹಾರ ಪದ್ಧತಿ, ಬಹುದೇವೋಪಾಸನೆ, ಜ್ಯೋತಿಷ, ಪಂಚಾಂಗ ವಿಧಿ ಲಿಖಿತ ಮೌಢ್ಯ ಕಂದಾಚಾರ ಇತ್ಯಾದಿ ಭಾವನಿಷ್ಠ ಪಲಕುಗಳನ್ನು ಗಟ್ಟಿಯಾಗಿಸಲಾಗಿತ್ತು. ಈ ಜಾತಿ ವ್ಯವಸ್ಥೆಯೊಂದಿಗೆ ವರ್ಗ,ವರ್ಣ,ಲಿಂಗ ತಾರತಮ್ಯಗಳು ತಳುಕು ಹಾಕಿಕೊಂಡಿವೆ. ಆದ್ದರಿಂದ ಈ ಎಲ್ಲವುಗಳ ವಿರುದ್ಧ ಮಾತಾಡುವುದು ಕೂಡ ಹನ್ನೆರಡನೆ ಶತಮಾನದ ವಚನಕಾರರಿಗೆ ಬಹುಮುಖ್ಯವಾಗಿತ್ತು.

ಜಾತಿ ವ್ಯವಸ್ಥೆಯು ಡಂಕಿನ್ ಅವರು ಗ್ರಹಿಸಿದಂತೆ ಕೇವಲ ನಂಬಿಕೆಯಾಗಿರಲಿಲ್ಲ. ಆ ವ್ಯವಸ್ಥೆಯಲ್ಲಿ ಸಿಕ್ಕು ಒದ್ದಾಡುತ್ತಿರುವವರ ವಾಸ್ತವಿಕ ಬದುಕಾಗಿತ್ತು. (ಬದುಕಾಗಿದೆ). ಅಂಥ ಬದುಕಿನ ಎಲ್ಲ ಆಯಾಮಗಳನ್ನು ಕುರಿತು ಮಾತಾಡುವುದು ಕೂಡ ಜಾತಿವಿನಾಶದ ಹೆಜ್ಜೆಗಳಾಗಿದ್ದವು. ಅಂತೆಯೇ ಬಸವಣ್ಣನಂಥವರಿಗೆ ತನ್ನನ್ನು ಹಾರುವ ಎಂದು ಗುರುತಿಸಿಕೊಳ್ಳುವುದು ಸಂಕಟದ ಸಂಗತಿಯಾಗಿತ್ತು. ಅಪ್ಪನು ನಮ್ಮ ಮಾದಾರ ಚನ್ನಯ್ಯ ಎಂದು ಕರೆದುಕೊಳ್ಳುವಲ್ಲಿ ಜಾತಿವ್ಯವಸ್ಥೆಯನ್ನು ಒಡೆಯುವ ಛಲವಿತ್ತು. ಅಲ್ಲಮನಾದರೂ ಅಜ್ಞಾನವೆಂಬ ತೊಟ್ಟಿಲೊಳಗೆ ಎಂಬ ವಚನದಲ್ಲಿ ಜಾತಿ ಎಂಬ ಶಬ್ದ ಬಳಸದೆಯೂ ಜಾತಿ ವ್ಯವಸ್ಥೆಯನ್ನು ಪೋಷಿಸಿದ ವೇದಾದಿ ಶಾಸ್ತ್ರಗಳನ್ನು ಭಂಜಿಸುವ ಅನಿವಾರ್ಯತೆ ಇತ್ತು.

ಹೀಗಾಗಿ ಜಾತಿ ಎಂಬ ಶಬ್ದ ಬಳಸದೆಯೂ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ ಕರ್ಮಸಿದ್ಧಾಂತವನ್ನು ಹನ್ನೆರಡನೆಯ ಶತಮಾನದ ವಚನಕಾರರು ಉದ್ದಕ್ಕೂ ಖಂಡಿಸಿದ್ದು ಢಾಳಾಗಿದೆ. `ಸುಖ ಬಂದಡೆ ಪುಣ್ಯದ ಫಲವೆನ್ನೆ', `ದುಃಖ ಬಂದಡೆ ಪಾಪದ ಫಲವೆನ್ನೆ',   `ಕಾಯದ ಕಳವಳಕ್ಕಂಜಿ ಕಾಯಯ'  ಎಂಬ ಬಸವಣ್ಣನವರ ಅನೇಕ ವಚನಗಳು `ಬೇನೆ ಬಂದರೆ ಒರಲು, ಸಾವು ಬಂದರೆ ಸಾಯಿ' ಎಂಬ ಲದ್ದೆ ಸೋಮಣ್ಣನ ವಚನ,  `ಕೋಳಿ ಕಿರಿಮೀನು ತಿಂಬುವವರ ಕುಲಜರೆಂಬುವರು' ದಲಿತ ವಚನಕಾರ್ತಿ ಕಾಳವ್ವೆಯ ವಚನಗಳು, ಸತ್ಯಕ್ಕ ಅಂಬಿಗರ ಚೌಡಯ್ಯ ಮುಂತಾದ ವಚನಕಾರರ ರಚನೆಗಳಲ್ಲಿ ಜಾತಿ ವಿರೋಧಿ ನಿಲುವು ಸ್ಥಾಯಿಯಾಗಿ ಅನುರಣಿಸುತ್ತಿರುವುದು ಶಬ್ದ ಸೋಂಕಿಗರಿಗೆ ಅರ್ಥವಾಗದು.

ಡಂಕಿನ್ ಮತ್ತು ಅವರ ತಂಡ ಸಾಮ್ರೋಜ್ಯಶಾಹಿ ಪರ ಆಧುನಿಕೋತ್ತರವಾದದ ಅಮಲಿನಿಂದ ಹೊರ ಬಂದು ಬಸವಯುಗದ ವಚನಗಳನ್ನು, ಅವರ ಕುರಿತು ರಚನೆಯಾದ ಸಾಮಗ್ರಿಗಳನ್ನು ಮುಕ್ತ ಮನಸಿನಿಂದ ಅಧ್ಯಯನಿಸುವುದಾದರೆ ವಚನಕಾರರ ನಿಲುವು ಸ್ಪಷ್ಟವಾದೀತು.

14 March 2013

* ಎಚ್‌.ಎಸ್‌ ಶಿವಪ್ರಕಾಶ್‌ 


ಇತ್ತೀಚೆಗೆ ಸಂಶೋಧಕ ವಿದ್ವಾಂಸರಾದ ಡಂಕಿನ್ ಝಳಕಿಯವರು ನನಗೆ ಎರಡು ಬರಹಗಳನ್ನು ಇಮೇಲ್ ಮೂಲಕ ಕಳಿಸಿದರು. ಮೊದಲನೆಯದು ಬಾಲಗಂಗಾಧರರ ಜೊತೆಗೆ ಅವರು ಬರೆದ `ವಚನಕಾರರು ಮತ್ತು ಜಾತಿ' ಕುರಿತ ಲೇಖನ. ಈ ವಿಷಯದಲ್ಲಿ  ತಾವು ಒಂದು ಮಹಾಪ್ರಬಂಧವನ್ನು ಬರೆದಿರುವುದಾಗಿಯೂ ನನಗೆ ತಿಳಿಸಿದ್ದರು.

ಅವರು ಕಳುಹಿಸಿದ ಮೊದಲ ಲೇಖನ ನನ್ನ ಆಸಕ್ತಿಯನ್ನು ಕೆರಳಿಸಿದ ಕಾರಣ ಅವರ ಮಹಾಪ್ರಬಂಧವನ್ನೂ ನನಗೆ ಕಳಿಸಬೇಕೆಂದು ಅವರಲ್ಲಿ ಮನವಿ ಮಾಡಿಕೊಂಡೆ. ಆ ಪ್ರಕಾರವಾಗಿ ಅವರು ನನಗದನ್ನು ಕಳಿಸಿ ಉಪಕಾರ ಮಾಡಿದ್ದಾರೆ. ಯಾಕೆಂದರೆ ಈ ಎರಡು ಬರಹಗಳು ನನ್ನನ್ನು ವಚನಕಾರರ ಬಗೆಗಿನ ತಿಳಿವಳಿಕೆಯ ಬಗ್ಗೆ ಮರುಚಿಂತನೆಗೆ ಪ್ರೇರೇಪಿಸಿವೆ.

ನಿಂತ ನೀರಾಗಿರುವ ಕನ್ನಡದ ವಿದ್ವತ್ ಪ್ರಪಂಚದಲ್ಲಿ ಪರ, ವಿರೋಧಿ ಹೇಳಿಕೆಗಳು, ಹುನ್ನಾರಗಳು ತಾಂಡವವಾಡುತ್ತಿದ್ದು ಅಸಹನೆಯ ಸಂಸ್ಕೃತಿ ಹರಡುತ್ತಿರುವ ಸನ್ನಿವೇಶದಲ್ಲಿ ಸಂಘರ್ಷಾತ್ಮಕತೆಯನ್ನು ಸಂವಾದಾತ್ಮಕ ಸಂಸ್ಕೃತಿಯನ್ನಾಗಿ ಮಾರ್ಪಡಿಸುವ ಜವಾಬುದಾರಿ ನಮ್ಮೆಲ್ಲರ ಮೇಲಿರುವುದರಿಂದ ವಚನಕಾರರ ಬಗ್ಗೆ ಡಂಕಿನ್‌ರಂಥ ವಿದ್ವಾಂಸರು ನೀಡಿರುವ ಸಿದ್ಧ ಸಂಪ್ರದಾಯ ವಿರೋಧಿ ನಿಲುವುಗಳನ್ನು, ವಿಚಾರಗಳನ್ನು ಮರುಚಿಂತನೆಯ ಪ್ರೇರಣೆಯಾಗಿ ನೋಡಬೇಕಾದ ಅಗತ್ಯವಿದೆ.